ಆವರ್ತನ
ಆವರ್ತನ
ಇಂದು ನನ್ನ ಮಗಳು ತನ್ನ ಗಂಡನ ಮನೆಗೆ ತನ್ನ ಬಲಗಾಲನ್ನಿಟ್ಟು ಹೊರಟಾಗ,ಮಗಳನ್ನು ಬೀಳ್ಕೊಟ್ಟು
ಬಂದು ನನಗೆ ಏಕೋ ಏಕಾಂತ ಬೇಕೆನಿಸಿ ನನ್ನ ರೂಂಗೆ ಹೋಗಿ ಮಂಚದ ಮೇಲೆ ಉರುಳಿದೆ . ಮನಸ್ಸು ಹಿಂದೆ ಹಿಂದಕ್ಕೆ ಓಡಿತು .ಅಂದು ಬಲಗಾಲು ಮುಂದಿಡಿಸಿ ಸೇರಕ್ಕಿಯನ್ನು ತಳ್ಳಿಕೊಂಡು ಗಂಡನ ಮನೆಗೆ ಅಡಿಯಿಟ್ಟ ನನಗೆ ಏನೋ ಒಂದು ರೀತಿಯ ಆತಂಕ. ಇಷ್ಟು ವರ್ಷ ಗಳು ತನ್ನನ್ನು ಕಣ್ಣು ರೆಪ್ಪೆ ಯಂತೆ ಸಾಕಿ ಸಲಹಿದ ನನ್ನ ಹೆತ್ತವರನ್ನೂ ಮತ್ತು ನನ್ನ ಒಡಹುಟ್ಟಿದ ವರನ್ನೂ ಬಿಟ್ಟು ಬಂದು ,ಹೊಸ ಮನೆ ಹೊಸ ಪರಿಸರಕ್ಕೆ ಬಂದಿರುವ ನನಗೆ ಇದೇ ನನ್ನ ಮನೆಯೆಂದು ತಿಳಿದುಕೊಂಡು ಈ ಮನೆಗಾಗಿ ನಾನು ನನ್ನ ಮುಂದಿನ ಜೀವನವನ್ನು ಮುಡುಪಾಗಿಡಬೇಕು. ಎಲ್ಲರೂ ನನ್ನ ಮೇಲೆ ಭರವಸೆಗಳನ್ನೇ ಇಟ್ಟುಕೊಂಡಿದ್ದಾರೆ. ಹೆತ್ತವರಿಗೆ ಮಗಳಿಂದ ಕೆಟ್ಟ ಮಾತುಗಳನ್ನು ಕೇಳುವಂತಾಗಬಾರದು, ನನ್ನನ್ನು ಸೊಸೆಯಾಗಿ ಕರೆದು ತಂದ ಮನೆಯವರಿಗೆ ನಾನು ಜವಾಬ್ದಾರಿ ಯುತವಾಗಿ ನಡೆದುಕೊಳ್ಳಬೇಕು, ಗಂಡನಿಗೆ ನಾನು ಅವನ ಕುಟುಂಬದವರೊಡನೆ ಚೆನ್ನಾಗಿ ಹೊಂದಿಕೊಂಡು ಹೋಗಬೇಕು,. ಅಬ್ಬಾ ಮದುವೆ ಯಾದ ದು ಹೆಣ್ಣು ಮಗಳಿಗೆ ತನ್ನ ಸ್ವಂತಿಕೆಯೊಂದನ್ನು ಬಿಟ್ಟು ಬೇರೆಯವರಿಗೆಲ್ಲಾ ಸರಿಯಾಗಿ ಹೊಂದುಕೊಂಡು ಹೋಗಬೇಕು. ಇನ್ನು ಮುಂದೆ ನನ್ನ ಪಾಡು ಹೇಗೋ? ನವ ವಧುವಿನ ಗೃಹಪ್ರವೇಶ ನಡೆದು ನನಗೆಂದು ತೋರಿಸಿದ ರೂಂ ನಲ್ಲಿ ಏನೂ ತೋಚದೇ ನಿಂತಿದ್ದಾಗ
ನನ್ನ ಕೈಹಿಡಿದು ಸಪ್ತಪದಿ ನಡೆಯಿಸಿದ ನನ್ನ ಗಂಡ ನನ್ನನ್ನು ಹಿಂದಿನಿಂದ ತಬ್ಬಿ ಹಿಡಿದಾಗ,ನನಗೆ ಏನೂ ಮಾಡಲು ತೋಚದೆ ಅವನ ಅಪ್ಪುಗೆ ಯಲ್ಲಿ ನನ್ನ ನಾ ಮರೆತು ಹೋದೆ. ಹೊಸದಾಗಿ ಮದುವೆಯಾದ ದಂಪತಿ ಗಳಿಗೆ ಇದಕ್ಕಿಂತ ಹೆಚ್ಚಿನದೇನು ಬೇಕು?, ಆ ಮನೆಯಲ್ಲಿ ಅತ್ತೆ,ಮಾವ, ಒಬ್ಬ ಮೈದುನ ,ಒಬ್ಬಳು ನಾದಿನಿ ಯರಿದ್ದಿದ್ದರಿಂದ ನಮ್ಮಿಬ್ಬರ ಏಕಾಂತ ಕ್ಕೆ ರಾತ್ರಿ ಹನ್ನೊಂದು ಗಂಟೆ ಯವರೆಗೂ ಕಾಯಬೇಕಾಗಿತ್ತು.
ನಮ್ಮಿಬ್ಬರ ಪ್ರೇಮದಾಟಗಳಿಗೆ ಪರಸ್ಪರ ಒಬ್ಬರನ್ನೊಬ್ಬರು ಅರಿತುಕೊಳ್ಳುವುದಕ್ಕೆ ಪ್ರೈವೆಸಿ ಸಿಗುತ್ತಲೇ ಇರಲಿಲ್ಲ.
ಮದುವೆಯಾದ ತಕ್ಷಣ ಒಂದು ವಾರದ ಹನಿಮೂನ್ ಸಮಯ ಬಿಟ್ಟರೆ ನಾವಿಬ್ಬರೇ ಮನೆಯಲ್ಲಿ ಸ್ವಚ್ಛಂದ ವಾಗಿರಲು ಸಾಧ್ಯವೇ ಆಗಲಿಲ್ಲ. ಮನೆಯ ಹಿರಿಯ ಸೊಸೆಯಾಗಿ ಬಂದಿದ್ದ ನಾನು ಆಗ ಮನೆಯ ಎಲ್ಲರ ಬೇಕು ಬೇಡಗಳನ್ನು ನೋಡಿಕೊಳ್ಳುತ್ತಾ ಹೋಗಬೇಕಾಯಿತು. ಮದುವೆಯಾಗಿ ಬಂದಾಗ ನನಗಿನ್ನೂ ಇಪ್ಪತ್ತೆರಡರ ಹರಯವಾದರೂ ,ಮನೆಯ ಹಿರಿತನದ ಜವಾಬ್ದಾರಿ ಗಳು ನನ್ನ ಹೆಗಲೇರಿದವು. ನಾನು ಆ ಮನೆಗೆ ಹೋದ ಆರೇ ತಿಂಗಳಲ್ಲಿ ಅತ್ತೆ ಅನಾರೋಗ್ಯದಿಂದ ಹಾಸಿಗೆ ಹಿಡಿದರೆ,ಮಾವನವರು ಅಶಕ್ತತರಾಗಿ ಏನೂ ಕೆಲಸ ಮಾಡಲಾಗದೆ , ಎಲ್ಲದಕ್ಕೂ ತಮ್ಮ ಹಿರಿಯ ಮಗನ ಮೇಲೆ ಅವಲಂಬಿತರಾದರು. ಹೀಗಾಗಿ ಮನೆಯ ಜವಾಬ್ದಾರಿ ನಮ್ಮ ಮೇಲೆ ಬಿದ್ದಾಗ ನಮ್ಮಿಬ್ಬರ ಸ್ವಂತ ಸುಖಗಳನ್ನು ತ್ಯಾಗ ಮಾಡುತ್ತಾ ಬಂದೆವು. ಮನೆಯ ಎಲ್ಲಾ ಕೆಲಸಗಳು,ಅತ್ತೆಯ ಆರೈಕೆ, ನಾದಿನಿ ಯ ಮದುವೆ,ಮೈದುನನ ಓದು, ಇವುಗಳ ಜವಾಬ್ದಾರಿ ಯಲ್ಲಿ ನಾವು ನಮ್ಮ ಮಕ್ಕಳ ಬಗ್ಗೆ ಯೋಚಿಸಲೇ ಇಲ್ಲ. ಎಲ್ಲರೂ ನಮ್ಮಿಬ್ಬರನ್ನು ಮಕ್ಕಳ ಬಗ್ಗೆ ಕೇಳುತ್ತಿದ್ದಾಗ ನಮಗೆ ಆ ಕಡೆ ಯೋಚನೆ ಪ್ರಾರಂಭ ವಾಗುವ ವೇಳೆಗೆ ನಮ್ಮ ವಿವಾಹದ ಐದು ವರ್ಷಗಳೇ ಕಳೆದು ಹೋಗಿದ್ದವು.
ನಮ್ಮಿಬ್ಬರ ಏಕಾಂತ ಕ್ಕೆ ಅವಕಾಶಗಳೇ ಇಲ್ಲದಾಗ ಮನಸ್ಸು ಅರಳುವುದಾದರೂ ಹೇಗೆ?ಮನಸ್ಸು ಅರಳದೇ ನಾವಿಬ್ಬರೂ ಒಂದಾದರೂ ಪ್ರಯೋಜನ ವಾಗುತ್ತಿರಲಿಲ್ಲ. ನನ್ನನ್ನು ಪರೀಕ್ಷಿಸಿ ನೋಡಿದ ಡಾಕ್ಟರ್ ಗಳು ಸ್ಟ್ರೆಸ್ ಕಡಿಮೆ ಮಾಡಿಕೊಳ್ಳಲು ಹೇಳುತ್ತಿದ್ದರು. ಆದರೆ ನಮ್ಮ ಜೀವನದಲ್ಲಿ ಏನಾದರೊಂದು ಟೆನ್ಷನ್ ಇದ್ದೇ ಇರುತ್ತಿತ್ತು. ನನ್ನ ಬಂಜೆತನದ ಕಾರಣಕ್ಕೆ ನೂರಾರು ವೈದ್ಯಕೀಯ ಪರಿಕ್ಷೆ ಗಳು ಶುರುವಾಯಿತು. ಇದುವರೆಗೂ ಮನೆಯವರಿಗಾಗಿ ಹಾಸ್ಪಿಟಲ್ ಗೆ ಹೋಗಿ ಬರುತ್ತಿದ್ದ ನಾನು ಈಗ ನನಗಾಗಿ ಹಾಸ್ಪಿಟಲ್ ಗೆ ವಾರಿ ಪಡೆಯಬೇಕಾಯಿತು. ನಾನು ಎಲ್ಲಾ ಪರೀಕ್ಷೆಗಳಲ್ಲಿ ಪಾಸ್ ಆಗುತ್ತಿದ್ದರೂ ಮಕ್ಕಳಾಗುವ ಯಾವ ಸೂಚನೆಗಳೂ ಕಾಣದಿದ್ದಾಗ ವೈದ್ಯರ ಸಲಹೆಯ ಮೇರೆಗೆ ನನ್ನ ಗಂಡನಿಗೂ ತಪಾಸಣೆ ಗಳು ನಡೆದವು. ಯಾಕೋ ನನಗೆ ಜೀವನವೇ ಸಾಕೆನಿಸಿ ಹೋಗುತ್ತಿತ್ತು. ನಮ್ಮಿಬ್ಬರ ವಯಸ್ಸೂ ಏರುತ್ತಿದ್ದು,ಈ ಬಂಜೆತನದ ಚಿಕಿತ್ಸೆ ಗಳು ಫಲಕಾರಿಯಾಗದೆ, ನಾವಿಬ್ಬರೂ ಒಂದು ನಿರ್ಧಾರಕ್ಕೆ ಬಂದೆವು. ಅನಾಥಾಶ್ರಮದಿಂದ ಮಗುವನ್ನು ದತ್ತು ತೆಗೆದುಕೊಳ್ಳಲು ನಿರ್ಧರಿಸಿದೆವು. ಆದರೆ ಇದಕ್ಕೆ ನಮ್ಮ ಮನೆಯಲ್ಲಿ ಅತ್ತೆ ಮಾವನ ವಿರೋಧ ಬಂದಾಗ ಮತ್ತೆ ಕೈ ಚೆಲ್ಲಿ ಕುಳಿತೆವು. ಕಡೆಗೆ ಐ.ವಿ.ಎಫ್.(ಇನ್ವಿಟ್ರೋ ಫರ್ಟಿಲೇಶನ್) ಮೂಲಕ ಮಗುವನ್ನು ಪಡೆಯುವ ಕಡೆಯ ಪ್ರಯತ್ನ ಮಾಡಿದೆವು. ಏನೋ ದೇವರ ದಯೆಯಿಂದ ಈ ಮೆತೆಡ್ ನ ಮೂಲಕ ಮುದ್ದಾದ ಹೆಣ್ಣು ಮಗು ವೊಂದು ಮಡಿಲು ತುಂಬಿ ದಾಗ ನಮಗಾದ ಸಂತೋಷ ಅಷ್ಟಿಷ್ಟಲ್ಲ. ಇಂದು ಅದೇ ಹೆಣ್ಣು ಮಗು ತನ್ನ ಬಲಗಾಲು ಮುಂದೆ ಇಟ್ಟು ಮತ್ತೊಂದು ಮನೆ ಬೆಳಗಲು ಹೋಗುತ್ತಿದೆ. ಅಂದು ನನ್ನ ತರಹ ಕಷ್ಟ ಪಡದೆ ಸುಖವಾಗಿರಲಿ ಎಂಬುದೇ ನನ್ನ ಆಸೆ.
ಮತ್ತದೇ ಆವರ್ತನ. .