ವೈದ್ಯೋ ನಾರಾಯಣೋ ಹರಿ :
ವೈದ್ಯೋ ನಾರಾಯಣೋ ಹರಿ :
ಹಾಸ್ಪಿಟಲ್ ನಿಂದ ತಡರಾತ್ರಿ ಹನ್ನೆರಡು ಗಂಟೆಗೆ ಮನೆಗೆ ಬಂದ ಡಾಕ್ಟರ್ ವರುಣ್ ತುಂಬಾ ಸುಸ್ತಾಗಿ ಹೋಗಿದ್ದ. ಇವನು ಮನೆಗೆ ಬರುವ ವೇಳೆಗೆ ಇವನ ಹೆಂಡತಿ ಡಾ.ವೀಣಾ ನೈಟ್ ಡ್ಯೂಟಿ ಗೆ ಹೊರಟು ಹೋಗಿದ್ದಳು.ಯಾಕೋ ವರುಣ್ ಗೆ ಒಂದು ಕ್ಷಣ ಬೇಸರವೆನಿಸಿತು. ಈ ವೈದ್ಯ ವೃತ್ತಿಯಲ್ಲಿ ವಿಶ್ರಾಂತಿಯೇ ಇರುವುದಿಲ್ಲ. ಅದರಲ್ಲೂ ಗಂಡ ಹೆಂಡತಿ ಇಬ್ಬರೂ ವೈದ್ಯರಾಗಿದ್ದರೆ ಮನೆಯಲ್ಲೂ ಅತೃಪ್ತಿ. ಒಟ್ಟಾರೆ ವೈದ್ಯಕೀಯ ವೃತ್ತಿಯಲ್ಲಿ ವೈಯಕ್ತಿಕ ಬದುಕಿನ ಸುಖ ಸಂತೋಷ ಗಳನ್ನು ತ್ಯಾಗ ಮಾಡಲೇ ಬೇಕು. ಇತ್ತೀಚೆಗೆ ಒಂದು ವರ್ಷದಿಂದ ವೈದ್ಯರ ಪಾಡು ಹೇಳತೀರದು. ಕರೋನಾ ಸಂಕಷ್ಟದಿಂದ ಎಷ್ಟು ಜನ ವೈದ್ಯರಿದ್ದರೂ ಸಾಲದಂತೆ ಆಗಿದೆ. . ಜೊತೆಗೆ ಲೈಫ್ ರಿಸ್ಕ್ ಬೇರೆ. ಒಟ್ಟಿನಲ್ಲಿ ನಮ್ಮಂತಹ ವೈದ್ಯರಿಗೆ ದುಡ್ಡಿಗೆ ಕೊರತೆ ಇಲ್ಲದಿದ್ದರೂ ವೈಯಕ್ತಿಕ ಸುಖ ಮರೀಚಿಕೆಯೇ.
ಸೋಫಾಗೊರಗಿ ಕಾಲು ಚಾಚಿ ಕಣ್ಮುಚ್ಚಿ ಹಾಗೇ ಯೋಚಿಸುತ್ತಾ ಕುಳಿತಿದ್ದ ಡಾ.ವರುಣ್ ,"ಸರ್ ಊಟ ಮಾಡ್ತೀರಾ?"ಎಂಬ ಶಬ್ದ ಕೇಳಿ ಕಣ್ಣು ಬಿಟ್ಟ. ಅಡುಗೆಯ ಸಹಾಯಕ ಗೋಪಿ ಎದುರಿಗೆ ನಿಂತಿದ್ದ.
"ನೀನು ಇನ್ನೂ ಮಲಗಿಲ್ಲವೇನೋ?ಈ ಹೊತ್ತಿನಲ್ಲಿ ಊಟ ಬೇಡ. ಒಂದು ಲೋಟ ಬಿಸಿ ಹಾಲು ಸಾಕು "ಎಂದಾಗ ಗೋಪಿ ಒಳಗೆ ಹೋಗಿ, ಬಿಸಿ ಬಿಸಿ ಬಾದಾಮಿ ಹಾಲು ತಂದುಕೊಟ್ಟ.
ಬಾದಾಮಿ ಹಾಲನ್ನು ಕುಡಿದು, ತನ್ನ ಬೆಡ್ ರೂಂ ಗೆ ಹೋಗಿ ,ಬಟ್ಟೆ ಬದಲಾಯಿಸಿ ಮಲಗಿದ.
ಬೆಳಗಿನ ಜಾವ ಐದುಗಂಟೆಗೆ ಗಂಟೆಗೆ ಹಾಸ್ಪಿಟಲ್ ನಿಂದ ಕರೆ ಬಂದಾಗ, ಬೆಳಗಿನ ಜಾವದ ಸಕ್ಕರೆ ನಿದ್ರೆ ಯಿಂದ ಎಚ್ಚರ ಗೊಂಡು, ವಿಷಯ ತಿಳಿದುಕೊಂಡ ಡಾ.ವರುಣ್,ತನ್ನ ಅಸಿಸ್ಟೆಂಟ್ ಗಳಿಗೆ ಕೆಲವು ಸೂಚನೆಗಳನ್ನು ಕೊಟ್ಟು ಹಿಂದೆಯೇ ತಾನೂ ಸಹ ಹೊರಡಲು ತಯಾರಿ ನಡೆಸಿದ.
ಅಂತೂ ಇಂತೂ ಏಳೂವರೆ ಯ ವೇಳೆಗೆ ಹಾಸ್ಪಿಟಲ್ ಕಡೆ ಅವನು ಹೊರಟಾಗ, ಹೆಂಡತಿ ವೀಣಾ ನೈಟ್ ಡ್ಯೂಟಿ ಮುಗಿಸಿ ಆಗತಾನೇ ಮನೆ ಸೇರಿದ್ದಳು.
"ಗುಡ್ ಮಾರ್ನಿಂಗ್ ಡಿಯರ್',"ಎಂದು ಹೇಳಿ ಅವಳಿಗೊಂದು ಹೂ ಮುತ್ತನ್ನಿತ್ತು ಹೊರಟ.
ಹಾಸ್ಪಿಟಲ್ ಗೆ ಹೋಗುತ್ತಿದ್ದಾಗ, ಇಂದಿನ ಕ್ರಿಟಿಕಲ್ ಆಪರೇಷನ್ ಕಡೆ ಅವನ ಗಮನ ಹೋಯಿತು.
"ಈಗೆರಡು ದಿನಗಳ ಹಿಂದೆ ಅಡ್ಮಿಟ್ ಆಗಿದ್ದ ನಲವತ್ತು ವರ್ಷದ ರೋಗಿಯೊಬ್ಬರಿಗೆ ಹೊಟ್ಟೆ ಯಲ್ಲಿ ಬೆಳೆದಿದ್ದ ಗೆಡ್ಡೆ ತೆಗೆಯಬೇಕಾಗಿತ್ತು. ತಡ ಮಾಡಿದರೆ ಅವರ ಜೀವಕ್ಕೆ ಅಪಾಯ. ಬೇಗ ಮಾಡಿಬಿಡೋಣವೆಂದರೆ ಆ ರೋಗಿಗೆ ಮಲ್ಟಿಪಲ್ ಮೆಡಿಕಲ್ಸ್ ಪ್ರಾಬ್ಲಂಗಳು. ಎರಡು ದಿನಗಳಿಂದಲೂ ಈ ಕೇಸ್ ನ ಇನ್ವೆಸ್ಟಿಗೇಷನ್ ನಡೆಯುತ್ತಲೇ ಇದೆ. ಆ ರೋಗಿಯ ಹರೆಯದ ಹೆಂಡತಿ ಮತ್ತು ಮುದ್ದಾದ ಮಕ್ಕಳನ್ನು ನೋಡಿದಾಗ ಮನ ಕಲಕುತ್ತದೆ. ನಿನ್ನೆಯಂತೂ ಆ ರೋಗಿಯ ತಂದೆ ತಾಯಿ ಕಣ್ಣೀರು ಹಾಕುತ್ತಾ, ನನ್ನ ಕೈಗಳನ್ನು ಹಿಡಿದು ,
"ಡಾಕ್ಟರ್ ನೀವೇ ನಮ್ಮ ಪಾಲಿನ ದೇವರು, ನನ್ನ ಮಗನನ್ನು ಉಳಿಸಿಕೊಡಿ"ಎಂದು ಕೈ ಮುಗಿದು ಕೇಳಿಕೊಂಡಾಗ, ಅವರಿಗೆ ಧೈರ್ಯ ಹೇಳುವುದನ್ನು ಬಿಟ್ಟು ವೈದ್ಯರಾದ ನಮಗೆ ಬೇರೆ ದಾರಿಯಾದರೂ ಏನಿದೆ?.
"ವೈದ್ಯೋ ನಾರಾಯಣೋ ಹರಿ:", ಎಂದು ನಂಬಿರುವ ರೋಗಿಗಳು, ವೈದ್ಯರೂ ಸಹ ಆ ಭವರೋಗವೈದ್ಯನಿಗೆ ಅಧೀನರೆಂಬುದನ್ನು ಮರೆಯುವಂತಿಲ್ಲ .ನಾವು ವೈದ್ಯರು ರೋಗಿಯ ರೋಗದ ತೀವ್ರತೆಯನ್ನಾಧರಿಸಿ ನಮ್ಮ ಕೈಲಾದ ಪ್ರಯತ್ನ ಮಾಡಬಹುದು ಅಷ್ಟೇ."
ಈ ದಿನ ಆಪರೇಷನ್ ಮಾಡಬೇಕಾದ ಕೇಸ್ ಬಗ್ಗೆಯೇ ಯೋಚಿಸುತ್ತಾ ಡಾ.ವರುಣ್ ಹಾಸ್ಪಿಟಲ್ ತಲುಪಿದ್ದ. ಕಾರ್ ಪಾರ್ಕಿಂಗ್ ಮಾಡಿ, ಒಳಕ್ಕೆ ಹೋಗುತ್ತಿದ್ದಂತೆಯೇ , ಅವನಿಗೆ ಐ.ಸಿ.ಯು ವಿನಿಂದ ಕರೆ ಬಂದಾಗ , ನೇರವಾಗಿ ಐ.ಸಿ.ಯು.ನತ್ತ ಹೊರಟ.