ತಾಯ್ತನದ ಧಾರೆ
ತಾಯ್ತನದ ಧಾರೆ
ಬೇರೆಯವರ ಮಕ್ಕಳಿಗೆ ನಮ್ಮ ತಾಯ್ತನದ ಧಾರೆ ಎರೆದರೆ ಆಗುವುದಿಲ್ಲವೇ?
ಹೌದು ನಾನು ಎಲ್ಲರನ್ನು ಕೇಳುವುದು ಒಂದೇ ಪ್ರಶ್ನೆಯನ್ನು. ಏನೆಂದರೆ , ಹೆಣ್ಣು ತನ್ನ ಗರ್ಭ ಸೀಳಿಕೊಂಡು ಹುಟ್ಟಿದ ಮಗುವಿಗೆ ಅಮ್ಮನಾದರೆ ಮಾತ್ರ ತಾಯಿ ಆದಂತೆಯಾ? ಇಲ್ಲವಾದರೆ ಆಕೆ ಬಂಜೆಯಾ? ಇತರ ಮಕ್ಕಳಿಗೆ ತನ್ನ ತಾಯಿ ಪ್ರೀತಿಯನ್ನು ತೋರಿಸಿದರೆ ಅದು ತಾಯಿ ಪ್ರೀತಿ ಅಲ್ಲವಾ? ಹೆರದೆ ಇದ್ದರೆ ಆಕೆ ಹೆಣ್ಣೇ ಅಲ್ಲವಾ? ಯಾಕೆಂದರೆ ವಿಜ್ಞಾನ ತಂತ್ರಜ್ಞಾನ ಎಷ್ಟೇ ಮುಂದುವರೆದಿದ್ದರೂ ಸಹ ನಮ್ಮ ಜನ , ನನ್ನನ್ನೂ ಹಿಡಿದುಕೊಂಡು ಎಲ್ಲರೂ ಸಹ ಮಕ್ಕಳ ವಿಷಯದಲ್ಲಿ ಒಮ್ಮೊಮ್ಮೆ ಮಕ್ಕಳಿರದ ಹೆಣ್ಣಿಗೆ ಎಷ್ಟೊಂದು ನೋವು ಕೊಟ್ಟುಬಿಡುತ್ತೀವಿ ಅಲ್ಲವೇ..
ಮೈಥಿಲಿ ಒಮ್ಮೆಲೇ ಅಳುತ್ತಾ ಬಂದವಳೇ ಕೋಣೆಯ ಬಾಗಿಲನ್ನು ದಡ್ದ್ ಅಂತ ಹಾಕಿಕೊಂಡು ಸುಮಾರು ಹೊತ್ತು ಅಳುತ್ತಾನೆ ಇದ್ದಳು. ರಾಜೇಶ್ ಎಷ್ಟು ಸಲ ಕೂಗಿದರೂ ಆತನ ಕೂಗಿಗೆ ಓಗೊಡದೇ, ದುಃಖಿಸುತ್ತ ಕುಳಿತಿದ್ದಳೆ ಹೊರತು ಬಾಗಿಲು ತೆಗೆಯಲಿಲ್ಲ. ರಾಜೇಶನಿಗೆ ಅನುಮಾನವೊಂದು ಬಂದಿತ್ತು. ಆದರೂ ಕೇಳಲೊ ಬೇಡವೋ ಅಂತ ಗೊಂದಲದಲ್ಲಿದ್ದ. ಸುಮಾರು ಹೊತ್ತಿನ ಮೇಲೆ ಮೈಥಿಲಿ ಬಾಗಿಲು ತೆಗೆದಳು. ಆಗಲೂ ಅಳುತ್ತಲೇ ಇದ್ದಳು. ರಾಜೇಶ್ ಅವಳನ್ನು ಸಮಾಧಾನ ಮಾಡಿ , ಮಗುವಿನಂತೆ ತನ್ನ ತೊಡೆಯ ಮೇಲೆ ಮಲಗಿಕೊಂಡು ಮುದ್ದು ಮಾಡುತ್ತ , ಕಣ್ಣೀರು ವರೆಸುತ್ತ , ಯಾಕೆ ಚಿನ್ನುಮರಿ ,ಏನಾಯ್ತು , ಯಾರಾದರೂ ಏನಾದ್ರೂ ಅಂದ್ರಾ? ಅದೇ ಆ ಬೀದಿಲಿ ಕೊನೆಲಿರೋ ಮನೆ ಅಜ್ಜಿ ಏನಾದ್ರು ಹೇಳಿದ್ರಾ ಅಂತ ಕೇಳಿದನು.
ಮೈಥಿಲಿ: ರಾಜಿ , ಈ ಜನ ತುಂಬಾ ಕೆಟ್ಟೋರು ಕಣೋ, ನಾನು ಹೆಣ್ಣೇ ಅಲ್ವಂತೆ , ಒಂದು ಗುಂಡ್ಕಲ್ಲೂ ಹೆರೋ ಸಾಮರ್ಥ್ಯ ಇಲ್ವಂತೆ , ನಮ್ಮ ವಂಶ ನನ್ನಿಂದಾಗಿ ನಿರ್ವಂಶ ಆಗುತ್ತಂತೆ , ನಮ್ಮ ಮನೆ ದೀಪ ಹಚ್ಹೋಕೆ ನಾನು ಒಂದು ಕುನ್ನಿನೂ ಹೇರಲ್ವಂತೆ , ( ಬಿಕ್ಕಿ ಬಿಕ್ಕಿ ಅಳುತ್ತಿರಲು)
ರಾಜೇಶ್: ನೋಡು ಚಿನ್ನಮರಿ , ಯಾರೋ ಏನೋ ಅಂದ್ರು ಅಂತಾ ನೀನೇನು ತಲೆ ಕೆಡಿಸ್ಕೊಬೇಡ, ಅವರಿಗೇನು ಗೊತ್ತು ಬಂಗಾರಿ ನಿನ್ನ ಬಗ್ಗೆ , ಮಕ್ಕಳಿಲ್ಲ ಅಂದ್ರೇನಾಯ್ತು ,ಈಗಿಲ್ಲ ಅಷ್ಟೇ , ಮುಂದೆ ಆಗಬಹುದಲ್ವಾ , ನಮಗೇನ್ ಮಹಾ ವಯಸ್ಸಾಗಿದೆ , ನಿ ಅಳೋದು ನಿಲ್ಲಿಸು , ನಿ ಅತ್ತರೆ ನನಗೆ ಸಹಿಸೋಕೆ ಆಗಲ್ಲ . ನಮ್ಮನೆ ಲಕ್ಷ್ಮಿ ನೀನು. ಯಾರೇನೇ ಅಂದರು ನನ್ನ ಸೌಭಾಗ್ಯಲಕ್ಷ್ಮೀ ನೀನು .
ಮೈಥಿಲಿ: ರಾಜಿ, ತುಂಬಾ ಅಳು ಬರ್ತಿದೆ ಕಣೋ , ಹೆಣ್ಣಲ್ಲ ಅಂದಾಗ , ಹೆರಲ್ಲ ಅಂದಾಗ ತುಂಬಾ ಕಷ್ಟ ಆಗುತ್ತೆ ಕಣೋ ಕೇಳೋದಕ್ಕೆ , ಅವರು ಕೂಡ ಹೆಣ್ಣು ಅನ್ನೋದನ್ನು ಮರೆತು ಮಾತಾಡ್ತಾರೆ, ನೋಡ್ತಾ ಇರು ನಾನು ಮಗು ಹೆತ್ತು ಅವರಿಗೆಲ್ಲ ನಾನು ಮಗು ಹೆತ್ತಿದಿನಿ , ವಂಶ ಬೆಳಗಿದಿನಿ ಅಂತ ತೋರ್ಸಿಯೇ ತೋರಸ್ತಿನಿ.
(ಇಷ್ಟೆಲ್ಲ ಮಾತಾಡ್ತಾ ಮಾತಾಡ್ತಾ ಮೈಥಿಲಿ ರಾಜೇಶ್ ಎದೆಗೊರಗಿ ಮಲಗಿಯೇ ಬಿಟ್ಟಳು, ಆಗ ರಾಜೇಶ ಹಿಂದಿನ ನೆನಪಿನ ಸುರುಳಿಗೆ ಜಾರಿದ.)
ರಾಜೇಶ್ ,ಮೈಥಿಲಿ ಒಬ್ಬರನ್ನೊಬ್ಬರು ತುಂಬಾ ಇಷ್ಟಪಟ್ಟು ಮನೆಯವರೆಲ್ಲರ ಒಪ್ಪಿಗೆ ಪಡೆದು ಮದುವೆ ಆಗಿದ್ದರು. ಇಬ್ಬರ ಮದ್ಯೆ ತುಂಬಾ ಹೊಂದಾಣಿಕೆ , ತುಂಬಾ ಪ್ರೀತಿ , ಅನ್ಯೋನ್ಯೆತೆ , ಕಾಳಜಿ ಎಲ್ಲವೂ ಇದ್ದಿತು. ಒಂದು ಕ್ಷಣವೂ ಒಬ್ಬರನ್ನು ಬಿಟ್ಟು ಇನ್ನೊಬ್ಬರು ಇರುತ್ತಿರಲಿಲ್ಲ. ಒಬ್ಬರನ್ನು ಬಿಟ್ಟು ಒಬ್ಬರು ಊಟ ತಿಂಡಿ ಕೂಡ ಮಾಡುತ್ತಿರಲಿಲ್ಲ. ರಾಜೇಶನ ತಂದೆ ತಾಯಿಗಳು ಆಕೆಯನ್ನು ಮಗಳಿಗಿಂತ ಹೆಚ್ಚು ನೋಡುತ್ತಿದ್ದರು. ಆಕೆಯೂ ಸಹ ಅಪ್ಪ ಅಮ್ಮ ಅಂತ ತಿಳಿದು ಅಷ್ಟೇ ಪ್ರೀತಿ ಕಾಳಜಿ ಮಾಡುತ್ತಿದ್ದಳು.
ಮಕ್ಕಳೆಂದರೆ ವಿಶೇಷ ಪ್ರೀತಿ ಈ ಮೈಥಿಲಿಗೆ. ಪ್ರತಿವರ್ಷದ ತನ್ನ ಹುಟ್ಟು ಹಬ್ಬವನ್ನು ಅನಾಥ ಮಕ್ಕಳೊಂದಿಗೆ ಆಚರಿಸಿಕೊಳ್ಳುತ್ತಿದ್ದಳು. ಆ ಮಕ್ಕಳಿಗೆ ಬಟ್ಟೆ ಬರೆ ಕೊಡಿಸಿ ಸಂತಸ ಪಡುತ್ತಿದ್ದಳು. ತನ್ನ ಬೀದಿಯ ಮಕ್ಕಳೊಂದಿಗೆ ರವಿವಾರ ಇಡೀ ದಿನವೆಲ್ಲ ಆಡುತ್ತಾ ಕಳೆದು , ಸಾಯಂಕಾಲ ಅವರನ್ನೆಲ್ಲ ಏನಾದರೂ ತಿನಿಸಿಕೊಂಡು ಬರಲು ಹೊರಗೆ ಕರೆದೊಯ್ಯುತ್ತಿದ್ದಳು. ಒಟ್ಟಾರೆ ಆಕೆ ಮಕ್ಕಳೆಂದರೆ ಜೀವ ಬಿಡುತ್ತಿದ್ದಳು.
ಹೀಗಿದ್ದ ಮೈಥಿಲಿಗೆ ಆಕಸ್ಮಿಕವಾಗಿ ಸಣ್ಣದೊಂದು ಅಪಘಾತವಾಗಿ ಅದರಲ್ಲಿ ಅವಳ ಗರ್ಭಾಶಯಕ್ಕೆ ಸ್ವಲ್ಪ ಹೊಡೆತ ಬಿದ್ದು ಅದು ಒಂದು ಆಪರೇಷನ್ ಹಂತಕ್ಕೆ ಬರುತ್ತದೆ. ಆಗ ವೈದ್ಯರು ಎಲ್ಲ ತಪಾಷಣೆ ಮಾಡಿದಾಗ ತಿಳಿಯುತ್ತದೆ ಆಕೆಯ ಗರ್ಭಾಶಯಕ್ಕೆ ಸರಿಯಾಗಿ ಪೆಟ್ಟು ಬಿದ್ದು ಗರ್ಭಾಶಯ ಡ್ಯಾಮೇಜ್ ಆಗಿ , ವೈದ್ಯರು ಅದನ್ನು ತೆಗೆಯಲೇ ಬೇಕೆಂದು ಹೇಳಿದಾಗ , ರಾಜೇಶ ಹಾಗೂ ಮನೆಯವರು ತುಂಬಾ ನೋವಿನಿಂದ ಸರಿ ಎಂದರು. ಅವರಿಗೆ ಮೈಥಿಲಿ ಮುಖ್ಯವಾಗಿದ್ದಳು. ಇಲ್ಲವಾದಲ್ಲಿ ಅವಳನ್ನೇ ಕಳೆದುಕೊಳ್ಳಬೇಕಾಗಿತ್ತು. ಆಗ ಆಯ್ಕೆ ಮೈಥಿಲಿ ಆಗಿದ್ದಳು.ಆದರೆ ಅದು ಮೈಥಿಲಿಗೆ ಎರಡು ವರ್ಷ ಕಳೆದರೂ ಗೊತ್ತೇ ಇರಲಿಲ್ಲ. ಹೀಗಾಗಿ ಮಗು ಆಗುವ ಕನಸಿನಲ್ಲೇ ಇರುತ್ತಿದ್ದಳು.ತನ್ನ ಭಾವನ ಮಕ್ಕಳನ್ನು ಎಂದಿಗೂ ಬಿಟ್ಟಿರುತ್ತಿರಲಿಲ್ಲ, ಊಟ ಮಾಡಿಸುವುದು , ಮಲಗಿಸುವುದು , ಸ್ನಾನ ಮಾಡಿಸುವುದು , ಸುತ್ತಾಡಿಸಿಕೊಂಡು ಬರುವುದು , ಪ್ರತಿಯೊಂದು ತಾನೇ ಮಾಡುತ್ತಿದ್ದಳು. ತಾಯಿಯಂತೆ ಎಲ್ಲವನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದಳು. ಇದೆಲ್ಲವನ್ನು ನೋಡಿ ರಾಜೇಶ ಹಾಗೂ ಆತನ ಅಪ್ಪ ಅಮ್ಮ ತುಂಬಾ ಸಲ ಕಣ್ಣೀರು ಹಾಕಿದ್ದಾರೆ. ದೇವರು ಇಷ್ಟೊಂದು ಒಳ್ಳೆಯ ಮಗುವಿನಂತ ಮನಸ್ಸಿನ ಮಗಳಿಗೆ ಮಕ್ಕಳನ್ನು ಹೆರುವ , ಲಾಲನೆ ಪಾಲನೆ ಮಾಡುವ ಭಾಗ್ಯ ಕೊಡಲಿಲ್ಲವಲ್ಲ ಎಂದು ಕೊರಗಿದ್ದಾರೆ.ಏನು ಮಾಡುವುದು ಅವಳ ಹಣೆಬರಹದಲ್ಲಿ ದೇವರು ಬರೆದಿರುವುದೇ ಅಷ್ಟು ಅಂತ ಅನಿಸುತ್ತೆ.
ತಾಯ್ತನ ಎನ್ನುವುದು ಹೆತ್ತರೆ ಮಾತ್ರ ಬರುತ್ತದೆಯಾ? ಬೇರೆಯವರ ಮಕ್ಕಳಿಗೆ ನಮ್ಮ ತಾಯ್ತನದ ಧಾರೆ ಎರೆದರೆ ಆಗುವುದಿಲ್ಲವೇ?