ತಾಳಿದವನು ಬಾಳಿಯಾನು
ತಾಳಿದವನು ಬಾಳಿಯಾನು
ಒಬ್ಬಳೇ ಮಗಳನ್ನು ಎನ್ .ಆರ್.ಐ.ವರನಿಗೆ ಕೊಟ್ಟು ಲಕ್ಷಗಟ್ಟಲೆ ಖರ್ಚು ಮಾಡಿ ಅತ್ಯಂತ ವೈಭವದಿಂದ ಮದುವೆ ಮಾಡಿ ಕೊಟ್ಟ ತಂದೆ ತಾಯಿಗೆ, ವಿದೇಶಕ್ಕೆ ಗಂಡನ ಜೊತೆ ಹೋದ ಮಗಳು ಕೇವಲ ಎರಡೇ ತಿಂಗಳಲ್ಲಿ ಭಾರತಕ್ಕೆ, ವಾಪಸ್ ಬಂದು , ತನಗೆ ತನ್ನ ಗಂಡನ ಕಿರುಕುಳವನ್ನು ತಾಳಲಾಗುವುದಿಲ್ಲ, ವಿಚ್ಛೇದನ ಕೊಡುತ್ತೇನೆ ಎಂದು ಗೋಳಿಡುತ್ತಾ ಹೇಳಿದಾಗ, ಆ ತಂದೆ ತಾಯಿಯರ ಎದೆಯ ಬಡಿತ ನಿಂತು ಹೋದಂತೆ ಆಯಿತು.
ತಮಗೆ ಗೊತ್ತಿರುವ ಸಂಬಂಧದ ಹುಡುಗನನ್ನು ವಿಚಾರಿಸಿ ಮಾಡಿರುವ ಮದುವೆ ಕೇವಲ ಎರಡೇ ತಿಂಗಳಲ್ಲಿ ಮುರಿದುಕೊಳ್ಳುವ ಪರಿಸ್ಥಿತಿ ಬಂದರೆ
ಆ ತಂದೆ ತಾಯಿಯರ ಮನಸ್ಥಿತಿ ಹೇಗಿರಬೇಡ?,
ಇದ್ದ ಒಬ್ಬಳೇ ಮಗಳಿಗೆ ವಿದೇಶದಲ್ಲಿ ಇರುವ ಗಂಡಿನ ಜೊತೆ ವಿವಾಹ ಮಾಡಿ ನಿಶ್ಚಿಂತೆಯಿಂದ ಇದ್ದ ಅವರಿಗೆ ಮತ್ತೆ ಮಗಳ ಭವಿಷ್ಯದ ಬಗ್ಗೆ ಚಿಂತೆ ಶುರುವಾದರೆ,
ಅವರೇನು ಮಾಡಬೇಕು? ಮದುವೆಯಾಗಿ ಇನ್ನೂ ಸುಧಾರಿಸಿಕೊಳ್ಳುತ್ತಿದ್ದ ತಂದೆ ತಾಯಿಗೆ, ಈ ಶಾಕಿಂಗ್ ನಿಂದ ವಿಚ್ಛೇದನ, ಕೋರ್ಟ್, ಪರಿಹಾರ ಧನಕ್ಕಾಗಿ ಹೊಡೆದಾಟ,ಅಂತ ಓಡಾಡ ಬೇಕಾದ ಪರಿಸ್ಥಿತಿ
ಇನ್ನು ಆ ಹೆಣ್ಣು ಮಗಳ ಪರಿಸ್ಥಿತಿ ಹೇಳಲೇ ಆಗದು.
ಮದುವೆ ಮಾಡಿಕೊಂಡು ನೂರಾರು ಕನಸುಗಳನ್ನು ಹೊತ್ತು ಗಂಡನ ಜೊತೆ ವಿದೇಶಕ್ಕೆ ಹೋದ ಆ ಹೆಣ್ಣು ಮಗಳು ಗಂಡನ ಟಾರ್ಚರ್ ತಾಳಲಾಗದೆ, ಜೀವ ಉಳಿಸಿಕೊಳ್ಳಲು ಹೆಣಗಾಡಿ ಭಾರತಕ್ಕೆ ಬರಬೇಕಾದರೆ ಆ ಹುಡುಗಿಗೆ ಆಗಿರುವ ನೋವು ಹೇಳಲಸಾಧ್ಯ.
ಇದು ಯಾವ ಸೀರಿಯಲ್ ಅಥವಾ ಸಿನಿಮಾ ಕಥೆ ಯಲ್ಲ. ನೈಜ ಘಟನೆ.
ಇಂದಿನ ನಾಗರೀಕ ಪ್ರಪಂಚದಲ್ಲಿ,ವಿಶ್ವ ವಿದ್ಯಾಲಯದ ಪದವಿಗಳು ಹೆಚ್ಚುತ್ತಿದ್ದರೂ, ಇಂತಹ ಅನಾಗರಿಕ ಸಂಸ್ಕೃತಿಯೂ ಬೆಳೆಯುತ್ತಿರುವುದು ವಿಷಾದನೀಯ.
ಹೀಗೇ ಕೆಲವು ಕೇಸ್ ಗಳಿಗೆ ವಿಚ್ಛೇದನವೆಂಬುದು ವರವಾಗುವುದಂತೂ ನಿಜ.
ಒಂದು ನಾಣ್ಯಕ್ಕೆ ಎರಡು ಮುಖಗಳು ಇದ್ದಂತೆ, ಕೆಲವು ಕೇಸ್ ಗಳಲ್ಲಿ ಸಣ್ಣ ಪುಟ್ಟ ವಿಷಯಗಳಿಗೂ ಗಂಡ ಹೆಂಡತಿಯರು ವಿವೇಚನಾ ರಾಹಿತ್ಯದಿಂದ ದುಡುಕಿನಿಂದ ಮತ್ತು ಇಗೋ ಇಂದ ವಿಚ್ಛೇದನ ಪಡೆದು ದೂರವಾಗುತ್ತಿರುವುದು ಇಂದಿನ ಸಾಮಾಜಿಕ ಪಿಡುಗು ಆಗಿದೆ.
ಯಾವುದೇ ಪರಿಸ್ಥಿತಿ ಇದ್ದರೂ ದುಡುಕಿ ದೂರ ವಾಗದೇ ಸ್ವಲ್ಪ ತಾಳ್ಮೆ ಯಿಂದ ಯೋಚನೆ ಮಾಡಿ ನಿರ್ಧಾರ ತೆಗೆದುಕೊಂಡರೆ ಬಾಳು ಹಸನಾಗಬಹುದು.
ವಿಚ್ಛೇದನ ಒಂದೇ ಪರಿಹಾರವಾಗಬಾರದು.
ಹಾಲು ಒಡೆದರೂ ಮೊಸರು ಮಾಡಬಹುದು.