ಸವಿನೆನಪುಗಳು
ಸವಿನೆನಪುಗಳು
ಅಂದು ಗೆಳತಿಯ ಮಗಳ ಮದುವೆಯಲ್ಲಿ ಓಡಾಡುತ್ತಿದ್ದ ಆರೋಹಿಯನ್ನು ಐವತ್ತು ವರ್ಷದ ಆಸುಪಾಸಿನಲ್ಲೂ ಸ್ಮಾರ್ಟ್ ಆಗಿ ಕಾಣುತ್ತಿದ್ದ ಮಾಸ್ಕ್ ಧರಿಸಿದ್ದ ಗಂಡಸು ಹತ್ತಿರ ಬಂದು
"ಹಾಯ್ ಆರೋಹಿ ನನ್ನ ನೆನಪಾಯಿತಾ?" ಎಂದಾಗ ಅವಳಿಗೆ ತಕ್ಷಣ ಅವರು ಯಾರೆಂದು ನೆನಪಾಗಲಿಲ್ಲ. ಆದರೆ ಆ ಕನ್ನಡಕದ ಹಿಂದಿನ ಕಣ್ಣುಗಳನ್ನು ನೋಡಿದಾಗ, ಸ್ವಲ್ಪ ಸ್ವಲ್ಪ ನೆನಪಾದರೂ, ನಿಖರವಾಗಿ ಯಾರೆಂದು ಗೊತ್ತಾಗಲಿಲ್ಲ. ಇತ್ತೀಚೆಗೆ ಕರೋನಾ ಮಾಸ್ಕನಿಂದಾಗಿ ಮನೆಯರವರನ್ನೇ ಗುರುತು ಹಿಡಿಯುವುದು ಕಷ್ಟವಾಗಿರುವಾಗ,ಯಾರೋ ಒಬ್ಬ ವ್ಯಕ್ತಿ ಇದ್ದಕ್ಕಿದ್ದಂತೆ ಹೀಗೆ ಕೇಳಿದರೆ ಯಾರೆಂದು ಪತ್ತೆ ಹಚ್ಚುವುದು? ಆರೋಹಿಗೆ ಯಾರೆಂದು ಗೊತ್ತಾಗದಿದ್ದರೂ, ಆ ಕನ್ನಡಕದ ಹಿಂದಿನ ಕಣ್ಣುಗಳು ಮಾತ್ರ ನೆನಪಾಗುತ್ತಿತ್ತು. ನಂತರ ಆ ವ್ಯಕ್ತಿ ತನ್ನ ಮುಖಗೌಸನ್ನು ತೆಗೆದಾಗ, ಅವಳಿಗೆ ಅವನ ಗುರುತು ಸಿಕ್ಕಿ ಮುಖದಲ್ಲಿ ನಗು ಹಾದು ಹೋಯಿತು.
"ಹೋ ನೀನಾ ನೆನಪಾಯಿತಾ?"
"ಹೂಂ ಎಲ್ಲವೂ ಒಂದೊಂದಾಗಿ ನೆನಪಾಗುತ್ತಿವೆ"
ಆರೋಹಿ ಅವನನ್ನು ನೋಡುತ್ತಾ ಮೂರು ದಶಕಗಳ ಹಿಂದಕ್ಕೆ ಜಾರಿದಳು. ಆ ದಿನದ ಘಟನೆಗಳೆಲ್ಲಾ ಸವಿನೆನಪುಗಳಾಗಿ ಸುಳಿದು ಹೋದವು.
" ಮೂರನೇ ವರ್ಷದ ಬಿ.ಎಸ್ಸಿ.ಪದವಿಯಲ್ಲಿ ಓದುತ್ತಾ ಇದ್ದ ಆರೋಹಿ ಅಂದು ಕಾಲೇಜು ಮುಗಿಸಿ ಮಂಡ್ಯದಿಂದ ಮೈಸೂರಿಗೆ ಬಸ್ ನಲ್ಲಿ ಬರುವಾಗ ,ಹಿಂದಿನ ಸೀಟ್ ನಲ್ಲಿ ಕುಳಿತು ತನ್ನನ್ನೇ ದಿಟ್ಟಿಸಿ ನೋಡುತ್ತಿದ್ದ ಒಬ್ಬ ಸುರಸುಂದರಾಂಗನ ನೋಟವನ್ನು ಎದುರಿಸಲಾರದೇ ನಾಚಿಕೆಯಿಂದ ಅವನ ನೋಟವನ್ನು ತಪ್ಪಿಸಿ ಬೇರೆ ಕಡೆ ನೋಡುತ್ತಿದ್ದದ್ದು, ಕೆಲವೊಮ್ಮೆ ಅಚಾನಕ್ ಆಗಿ ಅವನ ನೋಟದೊಂದಿಗೆ ತನ್ನ ನೋಟ ಬೆರೆತಾಗ ಅವನು ತನ್ನ ಕಡೆಗೆ ನೋಡಿ ಹುಸಿ ನಗೆ ಬೀರುತ್ತಿದ್ದಾಗ ,ತಾನು ಬೆದರಿದ ಹರಿಣಿಯಾಗುತ್ತಿದ್ದುದು, ಕಡೆಗೆ ತಾನು ಮನೆಗೆ ಬಂದ ನಂತರ ಅದೇ ಸ್ಮಾರ್ಟ್ ಹುಡುಗ ತನ್ನ ಮನೆಗೇ ಬಂದಾಗ ತನಗೆ ಅಚ್ಚರಿಯೊಂದಿಗೆ ಖುಷಿ ಆದದ್ದು, ಕಡೆಗೆ ಅವನು ತಂದೆಯ ಸ್ನೇಹಿತನ ಮಗ ಅರ್ಜುನ್ ಎಂದೂ ಮತ್ತು ಅವನು ಮೆಡಿಕಲ್ ಕಾಲೇಜಿನಲ್ಲಿ ಓದುತ್ತಿದ್ದಾನೆಂದು ತಿಳಿದಾಗ, ಅವನ ಬಗ್ಗೆ ಕನಸು ಕಟ್ಟಿದ್ದು, ಕಾರಣಾಂತರಗಳಿಂದ ಅವನೊಂದಿಗೆ ತನ್ನ ಮದುವೆಯ ಕನಸು ಕನಸಾಗಿಯೇ ಉಳಿದಿದ್ದು ,ನಂತರ ತನ್ನ ಮದುವೆ ಒಬ್ಬ ದೊಡ್ಡ ಬಿಸಿನೆಸ್ ಮ್ಯಾನನೊಂದಿಗೆ ಆಗಿದ್ದು ", ಇವೆಲ್ಲವೂ ನಡೆದು ಮೂರು ದಶಕಗಳೇ ಕಳೆದು ಹೋಗಿವೆ. ಅಂದು ಬಸ್ ನಲ್ಲಿ ತನ್ನ ಹೃದಯ ಕದ್ದ ಆ ಮನ್ಮಥ ಮೂರು ದಶಕಗಳ ನಂತರ ಮತ್ತೆ ಕಣ್ಣೆದುರು ನಿಂತಾಗ, ಆ ಸವಿನೆನಪುಗಳು ಮನದ ಪದರದ ಮೇಲೆ ಹಾದು ಹೋಗಿ, ಹಾಗೇ ನಿಂತಾಗ,
"ಹಲೋ ಮೇಡಂ ಎಲ್ಲಿ ಕಳೆದು ಹೋದಿರಿ? ಅಂದಿನ ಬಸ್ ಪ್ರಯಾಣದ ನೆನಪಿನಲ್ಲಾ ?" ಅವನು ನಕ್ಕಾಗ
ಆರೋಹಿಯೂ ಹಳೆಯ ಸವಿನೆನಪುಗಳಿಂದ ಪುಳಕಿತಳಾದಳು. ಐವತ್ತರ ಹರೆಯದಲ್ಲೂ ಅಲ್ಲಿ ಇಲ್ಲಿ ಇಣುಕುತ್ತಿದ್ದ ನೆರೆಗೂದಲಿನ ಹೊರತು ಪಡಿಸಿ ,ಅದೇ ಸ್ಮಾರ್ಟ್ ನೆಸ್ ಉಳಿಸಿಕೊಂಡಿದ್ದ ಡಾ.ಅರ್ಜುನ್..
ಎಂದೋ ಬಹಳ ಹಿಂದೆ ಅಚಾನಕ್ಕಾಗಿ ನಡೆದು ಹೋದ ಆ ಬಸ್ ಪಯಣದ ಸವಿ ನೆನಪುಗಳನ್ನು ಅವರಿಬ್ಬರೂ ಬಹಳ ಸಮಯ ಮೆಲುಕು ಹಾಕುತ್ತಿದ್ದರು.
