ಸನ್ಮಿತ್ರ
ಸನ್ಮಿತ್ರ
ಒಂದು ಸ್ನೇಹದ ಕಥಾನಕ
ಅಂದು ಕ್ಯಾಶ್ ಕೌಂಟರ್ ನಲ್ಲಿದ್ದ ರವೀಂದ್ರ ದಿನದ ಕೊನೆಗೆ ಲೆಕ್ಕ ಮುಗಿಸಿ ಟ್ಯಾಲಿ ಮಾಡುವಾಗ ಅವನಿಗೆ ಐವತ್ತು ಸಾವಿರ ಡಿಫ಼ರೆನ್ಸ್ ಬಂದಾಗ ಶಾಕ್ ಆಯಿತು.ಮತ್ತೊಮ್ಮೆ ಮಗದೊಮ್ಮೆ ಕ್ರೆಡಿಟ್ಸ್ ಮತ್ತು ಡೆಬಿಟ್ಸ್ ಗಳನ್ನು ಚೆಕ್ ಮಾಡಿದರೂ ಐವತ್ತು ಸಾವಿರದ ಕ್ಯಾಶ್ ಎಲ್ಲಿ ಹೋಯಿತೆಂದು ಗೊತ್ತಾಗದೆ, ಪರದಾಡುತ್ತಿದ್ದಾಗ, ಅವನ ಮೇಲಧಿಕಾರಿಗಳೆಲ್ಲಾ ಸೇರಿಕೊಂಡು ಅಕೌಂಟ್ ಅನ್ನು ಚೆಕ್ ಮಾಡಿದಾಗ, ಹೆಚ್ಚುವರಿ ಹಣಪಾವತಿಯಾಗಿರುವ ಕಸ್ಟಮರ್ ಯಾರೆಂದು ತಿಳಿಯಿತು. ಅವರನ್ನು ಸಂಪರ್ಕಿಸಲು ಎಲ್ಲಾ ಪ್ರಯತ್ನಗಳನ್ನು ಮಾಡತೊಡಗಿದರೂ, ಆ ವ್ಯಕ್ತಿ ಸಂಪರ್ಕಕ್ಕೆ ಸಿಗದಿದ್ದುದರಿಂದ , ರವೀಂದ್ರ ಆದಿನದ ಅಕೌಂಟ್ ಕ್ಲೋಸ್ ಮಾಡಬೇಕಾದರೆ ಆ ಹಣವನ್ನು ಹೇಗಾದರೂ ತನ್ನ ಕೈಯಿಂದ ಹಾಕದೆ ವಿಧಿಯಿರಲಿಲ್ಲ. ಒಬ್ಬನ ಸಂಬಳದಲ್ಲಿ,ದಿನನಿತ್ಯದ ಖರ್ಚು ವೆಚ್ಚಗಳನ್ನು ನಿಭಾಯಿಸಿಕೊಂಡು,ಸಂಸಾರವನ್ನು ತೂಗಿಸುತ್ತಾ ಹೋಗುತ್ತಿದ್ದ ರವೀಂದ್ರನಿಗೆ ಆ ಕ್ಷಣಕ್ಕೆ ಅಷ್ಟೊಂದು ಹಣವನ್ನು ಹೊಂದಿಸುವುದಕ್ಕೆ
ಬಹಳ ಕಷ್ಟವೇ ಸರಿ. ಆ ಕಸ್ಟಮರ್ ಸಿಕ್ಕಿದರೂ ಆ ಹಣವನ್ನು ಹಿಂದಿರುಗಿಸುತ್ತಾನೋ ಇಲ್ಲವೋ ಗ್ಯಾರೆಂಟಿ ಇರಲಿಲ್ಲ. ಅವನ ಸೇವಿಂಗ್ಸ್ ಬ್ಯಾಂಕ್ ಅಕೌಂಟ್ ನಲ್ಲಿ ಹತ್ತುಸಾವಿರ ಮಾತ್ರ ಇತ್ತು. ಆ ಹಣವನ್ನು ಅವಳ ಮಗಳ ಫೀಸ್ ಗಾಗಿ ಕೂಡಿಸಿಟ್ಟಿದ್ದ.ಮಗಳ ಫೀಸ್ ತುಂಬಿಸಲು ನಾಳೆಯೇ ಕೊನೆಯ ದಿನ. ಮೊದಲೇ ಇದು ಪ್ರೈವೇಟ್ ಫ಼ೈನಾನ್ಸ್ ಬ್ಯಾಂಕ್, ನೌಕರರ ಪರವಾಗಿ ಯಾರು ನಿಲ್ಲುತ್ತಾರೆ? ಅದೂ ಅಲ್ಲದೆ ಕಳೆದುಕೊಂಡಿರುವ ಹಣದ ಮೊತ್ತ ಯಾರಾದರೂ ಸಹಾಯ ಮಾಡಲು ಸಾಧ್ಯವಿಲ್ಲದಷ್ಟು ದೊಡ್ಡ ಮೊತ್ತ. ರವೀಂದ್ರ ತುಂಬಾ ತಲೆಕೆಡಿಸಿಕೊಂಡ. ಯಾವುದಕ್ಕೂ ಆ ಕಸ್ಟಮರ್ ಅನ್ನು ನೋಡಿ ಮಾತನಾಡಿಸಿ, ಹೆಚ್ಚುವರಿ ಹಣವನ್ನು ಹಿಂತಿರುಗಿಸುವಂತೆ ಕೇಳಿಕೊಳ್ಳಬೇಕು ಅಂತ ನಿರ್ಧರಿಸಿ, ತನ್ನ ಆತ್ಮೀಯ ಗೆಳೆಯ ಮೂರ್ತಿಯನ್ನು ಕರೆದುಕೊಂಡು, ಆ ಕಸ್ಟಮರ್ ಮನೆಗೆ ಹೊರಟ.
ತನ್ನ ಪ್ರಾಣ ಸ್ನೇಹಿತನ ಪರಿಸ್ಥಿತಿಗೆ ಮರುಗಿದ ಮೂರ್ತಿ ಅವನ ಜೊತೆಗೆ ಹೊರಟ್,ಅಷ್ಟೇ ಅಲ್ಲದೆ ,ಅವನ ಸಹಾಯಕ್ಕೂ ಯೋಚಿಸುತ್ತಿದ್ದ.
ಗೆಳೆಯರಿಬ್ಬರೂ ರಾತ್ರಿ ಎಂಟು ಗಂಟೆಗೆ ಕಸ್ಟಮೆರ್ ಮನೆ ತಲುಪಿ, ಇದ್ದ ವಿಷಯವನ್ನು ತಿಳಿಸಿ, ಹೆಚ್ಚುವರಿ ಪಾವತಿಯಾಗಿರುವ ಹಣವನ್ನು ಕೂಡಲೇ ವಾಪಸ್ ಮಾಡುವಂತೆ, ರವೀಂದ್ರ ಮತ್ತು ಮೂರ್ತಿ ಇಬ್ಬರೂ ಕೈ ಮುಗಿದು ಕೇಳಿಕೊಂಡಾಗ, ತನಗೆ ಹೆಚ್ಚು ವರಿ ಐವತ್ತು ಸಾವಿರ ಹಣ ಬಂದಿಲ್ಲ, ನಿಮಗೆ ಅಕೌಂಟ್ ನಲ್ಲಿ ಏನೋ ಗೊಂದಲ ಆಗಿರಬಹುದು,ಎಂದು ಬಿಟ್ಟ ಆ ಕಸ್ಟಮರ್ ನನ್ನು ಎಲ್ಲಾರೀತಿಯಿಂದಲೂ ಕನ್ವಿನ್ಸ್ ಮಾಡುವುದಕ್ಕೆ ಪ್ರಯತ್ನ ಪಟ್ಟರೂ, ಪ್ರಯೋಜನವಾಗದೆ ಹೋದಾಗ, ರವೀಂದ್ರನಿಗೆ ದಿಕ್ಕು ತೋಚದಾಯಿತು.
’ತನ್ನ ಆಪ್ತ ಮಿತ್ರನಿಗೆ ಎಂತಹ ತೊಂದರೆ ಬಂದಿತಲ್ಲ!, ಇದನ್ನು ಬಗೆ ಹರಿಸುವುದು ಹೇಗೆ ?ನನ್ನ ಬಳಿಯೂ ಅಷ್ಟೊಂದು ಹಣ ಇಲ್ಲ, ಏನು ಮಾಡುವುದು? ’ಎಂದು ಯೋಚಿಸುತ್ತಿದ್ದ ಮೂರ್ತಿಗೆ ಆ ಕ್ಷಣದಲ್ಲಿ ಮಿಂಚಿನಂತೆ ಒಂದು ಯೋಚನೆ ಸುಳಿದಾಗ, ರವೀಂದ್ರನಿಗೆ ಧೈರ್ಯ ಹೇಳಿ, ತಾನು ಅವನಿಗೆ ಐವತ್ತು ಸಾವಿರ ಹಣವನ್ನು ನಾಳೆ ಬೆಳಗ್ಗೆ ಆಫೀಸ್ ಗೆ ಬರುವ ವೇಳೆಗೆ ತಂದು ಕೊಡುತ್ತೇನೆಂದು ಪ್ರಾಮಿಸ್ ಮಾಡಿ, ಮನೆ ಕಡೆ ಹೊರಟ.
ಮನೆಗೆ ಹೋದವನೇ ಅವನ ಮದುವೆಗೆಂದು ಅವನ ಅಮ್ಮ ಇಟ್ಟಿದ್ದ, ಎರಡು ಚಿನ್ನದ ಕಡಗಗಳನ್ನುಗಿರವಿ ಅಂಗಡಿಗೆ ತೆಗೆದು ಕೊಂಡು ಹೋಗಿ, ಅದರ ಮೇಲೆ ಐವತ್ತು ಸಾವಿರ ಸಾಲ ಪಡೆದುಕೊಂಡು ಬಂದ. ಮಾರನೇ ದಿವಸ, ರವೀಂದ್ರ ಬರುವ ಮೊದಲೇ ಆಫೀಸ್ ಗೆ ಬಂದಿದ್ದ ಮೂರ್ತಿ, ತಾನು ಸಾಲ ಮಾಡಿ ತಂದಿದ್ದ ಹಣವನ್ನು ರವೀಂದ್ರನಿಗೆ ಕೊಟ್ಟು, ಹಿಂದಿನ ದಿನದ ಅಕೌಂಟ್ ಕ್ಲೋಸ್ ಮಾಡುವಂತೆ ಹೇಳಿದಾಗ, ರವೀಂದ್ರನಿಗೆ ಆಶ್ಚರ್ಯವಾಯಿತು.
’ಒಂದೇ ರಾತ್ರಿಯಲ್ಲಿ ಇಷ್ಟೊಂದು ಹಣವನ್ನು ಹೇಗೆ ಒದಗಿಸಿದೆ?’ ಎಂದು ಗೆಳೆಯನನ್ನು ಕೇಳಿದಾಗ,
’ಅದರ ಬಗ್ಗೆ ಈಗ ತಲೆ ಕೆಡಿಸಿಕೊಳ್ಳಬೇಡ, ಈಗ ನಿನಗೆ ಬಂದಿರುವ ಕಷ್ಟದಿಂದ ಪಾರಾಗು. ಇಲ್ಲವಾದರೆ ನೀನು ಕೆಲಸ ಕಳೆದುಕೊ ಳ್ಳುತ್ತೀಯ. ಇಂತಹ ಕಷ್ಟಗಳಿಗಲ್ಲವೇ ಸ್ನೇಹಿತರು ಆಗಬೇಕಾಗಿರುವುದು.’
ಎಂದು ಹೇಳಿದ ಮೂರ್ತಿ ಮೊದಲು ಐವತ್ತು ಸಾವಿರ ಕ್ಯಾಶ್ ಅನ್ನು ಅಕೌಂಟ್ ಗೆ ಹಾಕಿಸಿ, ಹಿಂದಿನ ದಿನದ ಲೆಕ್ಕವನ್ನು ಸರಿಪಡಿಸಿದ್ದ. ಅಂದು ಅವನು ರವೀಂದ್ರನನ್ನು ಕಾಪಾಡದಿದ್ದಿದ್ದರೆ, ರವೀಂದ್ರನ ಕೆಲಸ ಹೋಗುವುದರ ಜೊತೆಗೆ, ಅವನಿಗೆ ಬೇಡದ ವಿಚಾರಣೆಗಳೂ ನಡೆದು, ಅವನು ಮಾನಸಿಕವಾಗಿ ಕುಗ್ಗುವಂತೆ ಆಗುತ್ತಿತ್ತು.ತನಗಾಗಿ ತನ್ನ ಸ್ನೇಹಿತ ಮದುವೆಗಾಗಿ ಮಾಡಿಸಿಟ್ಟಿದ್ದ ಚಿನ್ನದ ಕಡಗವನ್ನು ಅಡವಿಟ್ಟು ಸಾಲ ತಂದಿರುವ ವಿಷಯ ತಿಳಿದಾಗ, ರವೀಂದ್ರನಿಗೆ ಹೃದಯ ತುಂಬಿ ಬಂದಿತ್ತು. ಮೂರ್ತಿಯನ್ನು ಬಿಗಿಯಾಗಿ ಅಪ್ಪಿಕೊಂಡು,
" ನನ್ನ ಆಪತ್ಕಾಲದಲ್ಲಿ ಸ್ನೇಹಿತನ ಮಾನ ವನ್ನು ಕಾಪಾಡಲು ಎಂತಹ ದೊಡ್ಡ ಉಪಕಾರ ಮಾಡಿರುವ ನೀನು ನಿಜವಾಗಿಯೂ ಸನ್ಮಿತ್ರ. ನಿನ್ನಂತಹ ಪ್ರಾಣಸಖನನ್ನು ಪಡೆದಿರುವ ನಾನೇ ಧನ್ಯ" ಎಂದುಹೇಳಿದಾಗ,ಮೂರ್ತಿ ಅವನ ಬೆನ್ನನ್ನು ನೇವರಿಸುತ್ತಾ,
"ಸ್ನೇಹವೆಂದರೆ,ಕೇವಲ ಸುಖ ಹಂಚಿಕೊಳ್ಳುವುದಲ್ಲ, ಕಷ್ಟಗಳಿಗೂ ಜೊತೆಯಾಗಬೇಕು. ಇದು ಸ್ನೇಹದ ಧರ್ಮ. ನಿನ್ನ ಆಪ್ತಮಿತ್ರನಾಗಿ ನಾನು ನನ್ನ ಕರ್ತವ್ಯ ನಿರ್ವಹಿಸಿದ್ದೇನೆ.ನೀನೇನೂ ಯೊಚಿಸಬೇಡ"
ಎಂದು ಸಮಾಧಾನ ಮಾಡಿದನು. ಇದಲ್ಲವೆ ಸನ್ಮಿತ್ರನ ಲಕ್ಷಣ?