STORYMIRROR

ಶಿವಲೀಲಾ ಹುಣಸಗಿ

Classics Inspirational Others

4  

ಶಿವಲೀಲಾ ಹುಣಸಗಿ

Classics Inspirational Others

ಋತುವಿನಾಚೆ ಬದುಕಿದೆ.

ಋತುವಿನಾಚೆ ಬದುಕಿದೆ.

2 mins
266

ಎತ್ತ ಸಾಗಿದರೂ ಬದುಕಿನಲ್ಲಿ ಬದಲಾಗದ ಕಾಲಚಕ್ರ.ನಾನು ನಾನಾಗಿ ನನಗಾಗಿ ಪರಿವರ್ತನೆ ಹೊಂದುವ ಕಾಲ ಚಿಗುರಿಸಿದ್ದು ಪ್ರಕೃತಿ.ಪುಟ್ಟ ಕಾಲಿಟ್ಟು ಹೆಜ್ಜೆಹಾಕಿ ನಲಿವಾಗೆಲ್ಲ ಎಲ್ಲರೂ ಹಸುಗೂಸು ಎಷ್ಟು ಚೆಂದೈತೆ.ಈ ಕೂಸು ನಮ್ಮ ಮನೆಯ ಅಂಗಳದಲ್ಲಿ ಅಡಿಯಟ್ಟು ಮನೆತುಂಬಿಕೊಳ್ಳುವ ಕಾಲ ಬೇಗ ಕೂಡಿ ಬರಲೆಂದು ಬೇಡಿದ್ದು ಇದೆ.ಎಲ್ಲರ ಕೈತುತ್ತು ತಿಂದು ಬೆಳೆವ ಸುಸಮಯ ಹಂತ ಹಂತವಾಗಿ ಕಡಿಮೆಯಾಗುತ್ತ ಬಂದಿರುವುದು ನನಗೆ ಅರಿವಾಗಲೇ ಇಲ್ಲ. ಅಬ್ಬಾ! ಎಂಥ ವಿಸ್ಮಯವಿದು.ಪುಟ್ಟ ಲಂಗ ತೊಟ್ಟು ಎಲ್ಲರ ಕಣ್ಮನಿಯಾದ ನಾನು ಈಗ ಕನ್ನಡಿಯೇ ನನ್ನ ನೋಡಿ ನಾಚುವಂತೆ ಮುಖದ ನಗೆಯು ಹೊಂಗಿರಣದಂತೆ ಹೊಳೆಯುತ್ತಿತ್ತು.

ದೇಹದ ಮೈಮಾಟ ಕೊಂಚ ಭಿನ್ನವೆನಿಸಿತ್ತು.ಎದೆಯ ಸುತ್ತ ಬಿಗುವಿನ ಅನುಭವ.ಮೈ ಭಾರ, ತಲೆಸುತ್ತು,ವಾಕರಿಕೆ, ಕಿಬ್ಬೊಟ್ಟೆ ನೋವು,ಕೈಕಾಲು ಹರಿತ,ಅಚಾನಕ್ಕಾಗಿ ಎದೆಯೇರಿ ಬಂದಂತಾಗಿ ತತ್ತರಿಸಿದ್ದೆ.ಯಾಕಿದೆಲ್ಲ ಎಂಬ ಪ್ರಶ್ನೆಗೆ ಉತ್ತರ ಕಾಣದೇ ತಲೆಸುತ್ತು ಬಂದು ಬಿದ್ದಂತಾಗಿದ್ದು ಆಶ್ಚರ್ಯ. ಕುತುಎದ್ದವಳ ಹಿಂದೆ ಕೆಂಪುಬಣ್ಣ ಕಂಡು ಹೌಹಾರಿದ್ದೆ.ಅಯ್ಯೋ ನನಗೇನಾಯಿತೆಂದು ಅತ್ತಿದ್ದು ಇದೆ. ಗೆಳತಿಯರಿಗೆ ಅನುಭವ ಇದ್ದುದರಿಂದ ಭಯಪಡಬೇಡ ಏನು ಆಗಲ್ಲ.ನೀನು ಇನ್ನ ಮೇಲೆ ಚಿಕ್ಕವಳಲ್ಲ ದೊಡ್ಡವಳು. ಹುಡುಗಾಟ ಬಿಡು.ಗಂಭೀರವಾಗಿ ಇರು.ಇದು ನಿರಂತರ ತಿಂಗಳಿಗೆ ಐದು, ಏಳು ದಿನ ಇರುತ್ತೆ.ಎಂದೆಲ್ಲ ಹೇಳಿದರೂ ಮನೆಯತ್ತ ಬಂದಿದ್ದೆ ತಡ ಅವ್ವನ ಗಟ್ಟಿಯಾಗಿ ಹಿಡಿದು ಅವ್ವಾ ನನಗೇನಾತು ಅಂದಾಗ ಅವ್ವ ಗಾಭರಿಯಾಗಿದ್ದಳು.

ಸುದ್ದಿ ತಿಳಿದು ಆತಂಕ ಅವಳ ಕಂಗಳಲ್ಲಿ ಮನೆ ಮಾಡಿತ್ತು.ಬಚ್ಚಲು ಮನೆಯಲ್ಲಿ ತಿಕ್ಕಿ ತೀಡಿ ನೀರ ಎರೆದು ಐದು ದಿನ ಪ್ರತ್ಯೇಕ ಉಳಿಯುವ ವ್ಯವಸ್ಥೆ ಮಾಡಿ,ಗಂಗಾಳ,ಲೋಟ ಹಾಸಿಗೆ,ದಿಂಬು ಎಲ್ಲವು ಕಂಡು ನಾನು ಮನೆಯಿಂದ ಉಳಿಯುವಂತ ತಪ್ಪು ಏನು ಮಾಡಿದೆಯವ್ವ ಎಂದು ಕೇಳಿದಾಗ..ನಗುನಗುತ..ಕೊಬ್ಬರಿ ಬೆಲ್ಲ ಕುಟ್ಟಿ ಕಟ್ಟಿದ ಲಾಡು ತಿನಿಸುತ್ತ ಅರಿಷಿಣ ನೀರು ಹೀಗೆ ದಿನಕ್ಕೊಂದು ಶಾಸ್ತ್ರ ಮಾಡುತ್ತ ಬಂದು ಬಳಗ ಐದನೇ ದಿನ ಎಬ್ಬಿಸುವ ಕಾರ್ಯಕ್ರಮ.ಊರಿಗೆಲ್ಲ ಊಟ.ಬಂದವರೆಲ್ಲ ಆರತಿ ಮಾಡಿ ಆಯಾರ ಮಾಡಿ ಹೋಗುವಾಗ ಮುಜುಗರ ಮನದಲ್ಲಿ.

ಸಂಕಟ ಪಟ್ಟು ನರಳುವ ಗಳಿಗೆ ಯಾರಿಗೂ ಈ ನರಕಬೇಡವೆಂದು ಚಾಪೆಯತುಂಬ ಒದ್ದಾಡುವಾಗೆಲ್ಲ ನಿಜವೆನ್ನಿಸದೆ ಇರದು. ಮೈ ಕೈ ತುಂಬಿಕೊಂಡು ಮುಂದಿನ ಜೀವನಕೆ ಹೊಸ ದಾಖಲೆ ಬರೆಯಬೇಕೆಂದರೆ ಅದೊಂದು ಸಾಹಸವೇ ಸರಿ. ಕೆಲವರಿಗೆ ಇದೊಂದು ವರವಾದರೆ,ಇನ್ನೂ ಕೆಲವರಿಗೆ ಮಾರಕವಾಗಿ ಪರಿಣಮಿಸಿದೆ.ಅತ ಹೆಚ್ಚು ರಕ್ತ ಸ್ರಾವದಿಂದ ರಕ್ತ ಹೀನತೆಯಿಂದ ಬಳಲುವ ಸಾಧ್ಯತೆ ಹೆಚ್ಚು.ಅಶಕ್ತತೆ ಬದುಕಿಗೆ‌ ಒಳಿತಲ್ಲವೆಂಬ ಸತ್ಯ ಅರಿವಾಗುವ ಹೊತ್ತಿಗೆ ಇನ್ನೇನೋ ನಡೆದಿರುತ್ತದೆ.

ಋತುಚಕ್ರವಾಗಿದ್ದೆ ತಡ ಮನೆಯವರಿಗೆಲ್ಲ ತಲೆಬಿಸಿ. ಮದುವೆಯ ಚಿಂತೆ,ವಯಸ್ಸು ೧೪ ದಾಟುವುದರೊಳಗೆ ಮದುವೆ ಮಾಡಿ ಕೈ ತೊಳವ ಅನಿಷ್ಟ ಪದ್ಧತಿ ಬಾಲ್ಯವಿವಾಹ ಇನ್ನು ಜೀವಂತವಾಗಿದೆ ಎಂದರೆ ಆಶ್ಚರ್ಯವಿಲ್ಲ.ಹೀಗೆ ವಯಸ್ಸಲ್ಲದ ವಯಸ್ಸಿನಲ್ಲಿ ಮದುವೆ ಮಾಡಿ ಅವರ ಜೀವನ ನರಕ ಮಾಡಿದ ಸಾಕ್ಷಿಗಳು ಕಣ್ಣೆದುರು ಇವೆ.

ಪಿರಿಯೆಡ್ ಅದು ತಿಂಗಳಿಗೊಂದು ಸಲ ಬಂದು ಹೋಗುವ ಸಮಯದಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿದಷ್ಷು ಆರೋಗ್ಯ ಉತ್ತಮವೆಂಬುದನ್ನು ಬಲಪಡಿಸುವ ಮನೋಭಾವ ಬರಬೇಕು.ಋತುಚಕ್ರದ ಪೂರ್ವ ಭಾವಿ ಜಾಡಿನಿಂದ ಹೊರಬಂದು ಬದುಕು ವಿಶಾಲವಿದೆಯೆಂಬುದನ್ನು ತಿಳಿಸುವ ಕೆಲಸವಾದಷ್ಟು ಒಳಿತು.ಇದೊಂದು ಕೊನೆಯಲ್ಲ.ಋತುವಿನಾಚೆ ಬದುಕಿದೆ ಎಂಬುದನ್ನು ಮರೆಯಬಾರದು.

ಏನೇ ಆದ್ರೂ ಮೊದಲಬಾರಿಗೆ ಋತುಮತಿಯಾದಾಗಿನ ನೋವು,ನಲಿವು,ಕಂಡುಕೊಂಡ ತಾಳ್ಮೆಯಿಂದ ದೈಹಿಕ ಮನೋಬಲ ಹಾಗೂ ಸ್ವಾಸ್ಥ್ಯ ಜೀವನ ಕಾಣುವಂತಾಗಿದೆ.ದೇಹ ಸುಸ್ಥಿತಿಯಲ್ಲಿರಲು ಪ್ರಕೃತಿ ನೀಡಿದ ಗೌರವ ಹಾಗೂ ಮಹಿಳೆಯರಿಗೆ ವರವೆಂದರೆ ತಪ್ಪಿಲ್ಲ.



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada story from Classics