ಮದುವೆ ಮುಖ್ಯವೆನಿಸಿಲ್ಲ.
ಮದುವೆ ಮುಖ್ಯವೆನಿಸಿಲ್ಲ.
ಮದುವೆಯೆಂಬ ಜೀವನೋತ್ಸಾಹಕೆ ಬೆಲೆ ಕಟ್ಟಲು ಸಾಧ್ಯವಿಲ್ಲ.ಒಟ್ನಲ್ಲಿ ಮದುವೆಯಾಗಬೇಕು,ಅಂದಾಗ ಹೆಣ್ಣು ಹೆತ್ತವರಿಗೆ ನೆಮ್ಮದಿ. ಹಗಲು ರಾತ್ರಿ ಮಗಳ ಮದುವೆಯ ಚಿಂತೆಯಲ್ಲಿ ಕಾಲ ಕಳೆಯವ ಎಷ್ಟೋ ಪಾಲಕರು ತಮ್ಮ ನೈಜ ಜೀವನದ ಸುಖವನ್ನು ತ್ಯಾಗ ಮಾಡಿ ಬಿಟ್ಟಿರುತ್ತಾರೆ. ರಾಮಪ್ಪನೆನೂ ಹೊಸಬನಲ್ಲ, ಬಡವನಾದರೂ ಅವನಿಗೆ ನಿಯತ್ತು ಮನೆ ಮಾಡಿತ್ತು.ಕಷ್ಟ ಸುಖವನ್ನು ಸಮನಾಗಿ ಮಗಳಿಗೆ ಪರಿಚಯಿಸಿದ್ದ.ಹರಕಲು ಬಟ್ಟೆ,ಟೆಂಟಿನ ಮನೆ ಮನೆಯ ಸುತ್ತ ಧಾರಾಕಾರವಾಗಿ ಸುರಿಯುವ ಮಳೆಯ ನೀರು ಕಂಡಾಗೆಲ್ಲ ನಮ್ಮ ಕಷ್ಟಗಳು ಹೀಗೆ ಕರಗಿಹೋಗಲಿ ಎಂಬ ಮೊರೆ ದಂಪತಿಗಳದು.ಮಗಳು ಕಲಿಯಲು ಆಸಕ್ತಿ ಅಮ್ಮನಿಗೆ ಹೆಚ್ಚು ಕಲಿತರೆ ಕಷ್ಟವೆಂಬ ಆತಂಕ, ಬಡತನವಿದ್ದರೂ ವಿದ್ಯೆಯನ್ನು ಗೌರವಿಸುವ ಕಲೆ ಬಲ್ಲವರಾಗಿದ್ದರು.
ಮಗಳು ಕಸ್ತೂರಿ ಹೆಸರಿಗೆ ತಕ್ಕಂತೆ ಕಪ್ಪು ಬಣ್ಣ, ಶ್ಯಾಮನ ಪ್ರಿಯತಮೆ. ಇಷ್ಟ ಪಟ್ಟವರು ಬಾಯತುಂಬ ಕರೆದರೆ, ವ್ಯಂಗ್ಯನಾಡುವವರು ಕಾಳಿ, ಕಾಗೆಯಂತೆಲ್ಲ ಕರೆವಾಗೆಲ್ಲ ಕೋಪದಿಂದ ರೇಗಿ, ಮನೆತನಕ ಜಗಳ ತಂದವಳು. ಆದರೂ ಅಚ್ಚುಮೆಚ್ಚಿನ ಕಸ್ತೂರಿ ಪರಿಮಳದಂತೆ ಎಲ್ಲರೊಂದಿಗೆ ಬೆರೆಯುತ್ತಿದ್ದಳು.ದಿನಗಳು ಉರುಳಿದಂತೆ ರಾಮಪ್ಪನ ತಲೆಹಣ್ಣಾದಂತೆ ಎದೆಯುದ್ದ ಬೆಳೆದ ಮಗಳ ಮದುವೆ ತಯಾರಿಯತ್ತ ಗಮನಕೇಂದ್ರಿಕರಿಸಿದ್ದ,ಕಸ್ತೂರಿ ಅಮ್ಮ ಸುಬ್ಬಮ್ಮ ಮಗಳಿಗೆ ಮನೆಕೆಲಸ ಕಲಿಸಲು ಹೆಣಗಾಡುತ್ತಿದ್ದರು.ಅಯ್ಯೋ ದೇವರೇ ನಿನ್ನ ಮದವಿ ಮಾಡಿಕೊಟ್ಟ ಮನಿಯವರು ನಮಗ ಸರಿಯಾಗೆ ಮಂಗಳಾರತಿ ಮಾಡತಾರ ಹುಡುಗಿಗೆ ಏನೂ ಕಲಿಸಿಲ್ಲ ಎಂದು ತಲಿಗೆ ಕೈಯಿಂದ ಮಟಕಿ ಕಸಾಮುಸರಿ,ಮನಿ ವಗಾತಿ,ವಯ್ಯಾರ ಹೀಗೆ ಹತ್ತು ಹಲವು ಕ್ಲಾಸ್ ಪ್ರಾರಂಭ.
.ಕಸ್ತೂರಿಗೊಂದು ಗೊಂದಲ ಎಲ್ಲಾ ಕೆಲಸ ಹೆಣ್ಣಮಕ್ಕಳು ಮಾಡೋದಾದ್ರ ಗಂಡು ಮಕ್ಕಳಿಗೂ ಮನಿಕೆಲಸ ಕಲಸ ಬೇಕು.ಅಕಿ ಒಬ್ಬಕಿಯಾಕ ಕಲಿಬೇಕು.ಒರಟಾದ ಮಾತುಗಳು ಹೊಟ್ಟಿತುಂಬಂಗಿಲ್ಲ.ಹೆಣ್ಣುಹೆತ್ತವರು ತಗ್ಗಿ ಬಗ್ಗಿ ನಡಿಬೇಕು ಅದ ಜೀವನದ ನಿಯಮ ಮುಚಗೊಂಡು ಕೆಲಸ ಕಲಿಯೆಂದು ಬಯ್ಯುವಾಗ ಕಸ್ತೂರಿ ಬುಸ್ ಬುಸ್ ಗುಡುವ ನಾಗಪ್ಪನಂತೆ ಗುರಾಯಿಸುತ್ತ ಅರ್ಧದಷ್ಟು ಕೆಲಸ ಒಲ್ಲದ ಮನಸ್ಸಿಂದ ಕಲಿತಿದ್ದಳು.ಕೂಲಿನಾಲಿ ಮಾಡಿ ಬದುಕು ಕಟ್ಟುತ್ತ,ಟೆಂಟಿನಿಂದ ತಗಡಿನ ಮನಿಯತ್ತ ಪ್ರಮೋಶನ್ ಪಡೆದಂತಿತ್ತು.
ಮಗಳ ನೋಡಾಕ ಬರತಾರಂತ ಸುದ್ದಿ ಪತ್ರದ ಮೂಲಕ ಬಂದಿದ್ದೆ ತಡ ಮನಿಯಾಗ ಸಂಭ್ರಮ.ಕಸ್ತೂರಿ ಗೆ ಧರ್ಮ ಸಂಕಟ.ಕಲಿಬೇಕೋ,ಮದುವಿ ಮಾಡಕೊಬೇಕೋ ಎಂಬ ಚಿಂತಿ.ಒತ್ತಾಯದ ಮನಸ್ಸಿಂದ ಹೊಸ ಸೀರೆಯುಟ್ಟು ಸಿದ್ದವಾದ ಕಸ್ತೂರಿ ದೇವತೆಯಂತೆ ಮಿಂಚುತ್ತಿದ್ದಳು. ನೋಡಾಕ ಬಂದವ ಕಸ್ತೂರಿಯ ವಯಸ್ಸಿಗಿಂತ ಎರಡುಪಟ್ಟು ಅಂಕಲ್ ತರ ಕಂಡವ ಮದುವೆಯ ಗಂಡು ಎಂದು ಕಲ್ಪಿಸಿಕೊಳ್ಳಲು ಅಸಾಧ್ಯ.ರಾಮಪ್ಪ ನು ಕಂಗಾಲು.ಮಗಳು ಮಲ್ಲಿಗೆ, ಮದುಮಗನಾದವ ಮುದಿಯಪ್ಪ.ಶಿವ ಶಿವಾ ಎಂದು ನಿಟ್ಟುಸಿರು ತಗೆದಾಗ,ಕಸ್ತೂರಿಗೆ ಅರ್ಥವಾಗಿತ್ತು.ನನಗ ಮದುವಿ ಬ್ಯಾಡ.ನಾ ಇನ್ನೂ ಕಲಿಬೇಕು.ಎಂದು ದಡಾಬಡಾ ಎದ್ದು ಒಳನಡೆದಾಗ ಬೆನ್ನ ಹಿಂದೆ ಬಂದ ಸುಬ್ಬಮ್ಮ ಸೆರಗಂಚಿಂದ ಕಣ್ಣೀರ ಒರೆಸುತ್ತ,ಸರಿಯಾದ ತೀರ್ಮಾನ ಮಗಳೆ ಬಡತನ ಇದ್ದರೂ ಪರವಾಗಿಲ್ಲ,ಮದುವಿಯಾಗದಿದ್ದರೂ ಅಡ್ಡಿಯಿಲ್ಲ ನೀ ವಿದ್ಯಾ ದೇವತೆಯ ಆರಾಧನೆಯನ್ನು ಪ್ರಾಮಾಣಿಕವಾಗಿ ಮಾಡು ನಿನ್ನ ಕಾಲ ಮಲೆ ನಿಂತು ಸ್ವಾಭಿಮಾನದಿಂದ ಬದುಕು ಮಗಳ ಎಂದು ಹಾರೈಸುವಾಗ,ಈಗ ನಿಜವಾಗಲೂ ಕಸ್ತೂರಿ ಪರಿಮಳ ಜಗತ್ತಿಗೆ ಪಸರಿಸಿದಂತೆ ಕಾಣುತ್ತಿತ್ತು.ಮದುವಿಗಿಂತ ಮೊದಲು ಬದುಕು ಕಟ್ಟಿಕೊಳ್ಳುವುದು ಮುಖ್ಯವೆನಿಸಿತ್ತು.