ಪತ್ರ ಬೆಸೆದ ಬೆಸುಗೆ
ಪತ್ರ ಬೆಸೆದ ಬೆಸುಗೆ
ಸದಾ ಲವಲವಿಕೆಯಿಂದ ಬಾಯ್ತುಂಬಾ ಪಟಪಟ ಮಾತನಾಡುತ್ತಾ ಎಲ್ಲರೊಂದಿಗೂ ಸ್ನೇಹ ಜೀವಿಯಾಗಿದ್ದ ರಮಾ,ಈಗೆರಡು ಮೂರು ವಾರಗಳಿಂದ ಯಾವುದೋ ಚಿಂತೆಯಲ್ಲಿ ಮುಳುಗಿದಂತೆ ಇರುತ್ತಾಳೆ.ಮನೆಯಲ್ಲಿ ಇದನ್ನು ಗಮನಿಸಿದ ಅವಳ ತಂದೆ ತಾಯಿ ಇಬ್ಬರೂ, ಮಗಳನ್ನು ವಿಚಾರಿಸಿದಾಗ, ಏನೋ ಒಂದು ಹಾರಿಕೆಯ ಉತ್ತರ ನೀಡಿ ತಪ್ಪಿಸಿಕೊಳ್ಳುತ್ತಿರುವುದನ್ನು ಗಮನಿಸುತ್ತಿದ್ದ ಅವಳ ಅಪ್ಪ ಅಮ್ಮ ನಿಗೂ ಮಗಳ ಬಗ್ಗೆ ಆತಂಕ ಕಾಡತೊಡಗಿದೆ.
ಆಫೀಸಿನಲ್ಲಿ ಸಹೋದ್ಯೋಗಿ ಗಳಿಗೂ ರಮಾಳ ನಡವಳಿಕೆ ಪ್ರಶ್ನೆ ಯಾಗಿದೆ.ಹಾಗೂ ಕೆಲವರು ಅವಳನ್ನು ಇದರ ಬಗ್ಗೆ ಕೇಳಿ ಕೇಳಿ ಸಾಕಾಗಿಿ ಹೋಯಿತು.
ಅಂದು ಎಂದಿನಂತೆ ಆಫೀಸಿಗೆ ಬಂದು ,ತನ್ನ ಕೆಲಸ ಪ್ರಾರಂಭ ಮಾಡಬೇಕೆನ್ನುವಷ್ಟರಲ್ಲಿ, ಪೋಸ್ಟ್ ಮ್ಯಾನ್ ಬಂದು ನೀಲಿ ಬಣ್ಣದ ಅಂತರ್ದೇಶೀಯ ಪತ್ರವನ್ನು ಕೊಟ್ಟು ಹೋದಾಗ,ಅವಳ ಮೈ ನಡುಗುತ್ತಿತ್ತು.ಮತ್ತದೇ ವಿಳಾಸ ವಿಲ್ಲದ ಪತ್ರ. ಅವಳಿಗೆ ಅದನ್ನು ಹರಿದು ಬಿಸಾಕಿ ಬಿಡಬೇಕೆನಿಸಿ, ಅದನ್ನು ಮುದುರಲು ಹೋದಾಗ, ಅವಳಿಗೆ ಇದ್ದಕ್ಕಿದ್ದಂತೆ ಒಂದು ಐಡಿಯಾ ಹೊಳೆಯಿತು.ಬಿಡಿಸಿ ಓದತೊಡಗಿದಳು.
"ನನ್ನ ಸ್ವೀಟಿ,ನಾನು ಇನ್ನು ಎಷ್ಟು ಪತ್ರ ಬರೆಯಲಿ?
ನೀನಾದರೋ ಒಂದಕ್ಕೂ ಉತ್ತರಿಸುತ್ತಿಲ್ಲ.ನನಗೆ ಜೀವನವೇ ಬೇಸರವೆನಿಸುತ್ತಿದೆ.ನಿನ್ನನ್ನು ಈಗೆರಡು ತಿಂಗಳ ಹಿಂದೆ ಬಸ್ ಸ್ಟಾಂಡ್ ನಲ್ಲಿ ನೋಡಿದಾಗಿಲಿಂದ ನನಗೆನಿದ್ರೆ ಊಟ ಏನೂ ಬೇಡವಾಗಿದೆ.ಒಂದು ಬಾರಿ ಸುತ್ತಲೂ ಕಣ್ಣು ಹಾಯಿಸಿದರೆ ನಾನು ಯಾರೆಂದು ಗೊತ್ತಾಗುತ್ತದೆ.ನಾನು ಎಂದಿನಿಂದಲೂ ನಿನ್ನ ಪ್ರೀತಿಗಾಗಿ ಕಾದು ಹುಚ್ಚನಾಗಿದ್ದೇನೆ.ನಿನಗಾದರೋ ನನ್ನ ಮೇಲೆ ಗಮನವೇ ಇಲ್ಲ.ನೀನು ಮೊದಲು ನನ್ನ ಪ್ರೇಮ ಭಿಕ್ಷೆ ಯನ್ನು ಸ್ವೀಕರಿಸು.ನಂತರ ನಾನೇ ನಿನ್ನ ಮನೆಗೆ ಬಂದು ನಿನ್ನ ಅಪ್ಪ ಅಮ್ಮ ನ ಕಾಲು ಹಿಡಿದು ನಿನ್ನನ್ನು ಬೇಡುತ್ತೇನೆ.ಇಂದು ನೀನು ಆಕಾಶ ನೀಲಿ ಬಣ್ಣದ ಡ್ರೆಸ್ ನಲ್ಲಿ ಅಪ್ಸರೆ ಯೇ ಆಗಿದ್ದೀಯಾ.ಇಂದಾದರೂ ನನ್ನ ಮೇಲೆ ಕರುಣೆ ಇಡು.
ನಿನಗಾಗಿ ನಾನು ಸಾಯಂಕಾಲ ಆರು ಗಂಟೆಗೆ ಅದೇ ಬಸ್ ಸ್ಟ್ಯಾಂಡ್ ನಲ್ಲಿ ಕಾಯುತ್ತಿರುತ್ತೇನೆ.
ನಿನ್ನ ಪ್ರೀತಿಯ ಕನಸಿನಲ್ಲಿ ನಿನಗಾಗಿ ಕಾದಿರುವ
ಅಮಾಯಕ
ಅಪರಿಚಿತ ಪತ್ರವನ್ನು ಹಾಗೆಯೇ ಮಡಿಚಿ ತನ್ನ ವ್ಯಾನಿಟಿ ಬ್ಯಾಗ್ ನಲ್ಲಿ ತುರುಕಿ,ಯಾರಾದರೂ ಗಮನಿಸಿದರೋ ಎಂಬುದನ್ನು ತಿಳಿಯಲು ಅತ್ತಿತ್ತ ಕಣ್ಣಾಡಿಸಿದಳು. ಸಧ್ಯ ಎಲ್ಲರೂ ಅವರವರ ಕೆಲಸದಲ್ಲಿ ತಲ್ಲೀನರಾಗಿರುವುದನ್ನು ಕಂಡು ಅವಳಿಗೆ ಸಮಾಧಾನ ವಾಯಿತು. ಹಾಗೂ ಹೀಗೂ ಒಂದೆರಡು ಗಂಟೆ ಗಳ ಕಾಲ ಕೆಲಸ ಮಾಡುವ ಹೊತ್ತಿಗೆ ಅವಳಿಗೆ ಸಾಕಾದಂತಾಗಿ, ಮಧ್ಯಾಹ್ನ ಅರ್ಧ ದಿನ ಸಿ.ಎಲ್.ಹಾಕಿ ಹೊರಟಳು.
ಆಫೀಸಿನಿಂದ ಕೆಳಗಿಳಿಯುವಾಗ ರಮಾಳಿಗೆ , ತನ್ನ ಭಾವನ ಕೊಲೀಗ್ ಮಧುಕರ್ ನೆನಪಾಯಿತು. ಸಿ.ಬಿ.ಐ. ಕ್ರೈಮ್ ಬ್ರಾಂಚ್ ನಲ್ಲಿ ಫೋರೆನ್ಸಿಕ್ ಡಿಪಾರ್ಟ್ಮೆಂಟ್ ನಲ್ಲಿ ಅಧಿಕಾರಿಯಾಗಿ ಕೆಲಸ ಮಾಡುತ್ತಿರುವ ಮಧುಕರ್ ,ರಮಾಳಿಗೂ ತುಂಬಾ ಪರಿಚಯ ವಾಗಿದ್ದ. ಇವುಗಳೊಂದಿಗೆ ಸ್ನೇಹದಿಂದ ಮಾತನಾಡುತ್ತಿದ್ದ. ಇಂತಹ ಸಂಕಷ್ಟ ಸಮಯದಲ್ಲಿ ಅವನೇ ಆಪದ್ಬಾಂಧವ ನಾಗಬಹುದೇನೋ ಎಂಬ ಯೋಚನೆ ರಮಾಳಿಗೆ ಇದ್ದಕ್ಕಿದ್ದಂತೆ ಫ್ಲಾಶ್ ಆಗಿ , ಅವಳು ನೇರವಾಗಿ ಮಧುಕರ್ ನನ್ನು ಭೇಟಿ ಮಾಡಲು ಹೊರಟಳು.
ಅವಳ ಗಾಡಿ ಮಧುಕರ್ ಆಫೀಸಿನ ಕಡೆ ಓಡಿತು.
ದಿಢೀರ್ ಎಂದು ತನ್ನ ಮುಂದೆ ಪ್ರತ್ಯಕ್ಷಳಾದ ರಮಾಳನ್ನುಕಂಡು ಮಧುಕರ್ ಗೆ ಆಶ್ಚರ್ಯ ಹಾಗೂ ಸಂತೋಷ ಎರಡೂ ಏಕಕಾಲಕ್ಕೆ ಉಂಟಾಯಿತು. "ಹಾಯ್,ಸರ್ ನಮಸ್ಕಾರ", ಎಂದು ಹೇಳುತ್ತಾ ಅವನ ಮುಂದೆ ಕುಳಿತ ರಮಾ, ಈಗೆರಡು ತಿಂಗಳುಗಳಿಂದ ವಾರಕ್ಕೊಂದು ಪತ್ರ ದಂತೆ ಬರುತ್ತಿರುವ ಅಸಂಬದ್ಧ ಪ್ರೇಮಾಲಾಪದ ಅಪರಿಚಿತ ಪತ್ರಗಳನ್ನು ಅವನ ಮುಂದೆ ತೋರಿಸಿ, ಇದಕ್ಕೆ ಒಂದು ಪರಿಹಾರ ಸೂಚಿಸುವಂತೆ ಅವನನ್ನು ಕೇಳಿಕೊಂಡಳು.ತನ್ನ ಮನೆಯಲ್ಲಿ ಈ ವಿಷಯ ಯಾರಿಗೂ ತಿಳಿದಿಲ್ಲ ವೆಂಬುದನ್ನೂ ಸಹ ಅವನಿಗೆ ತಿಳಿಸಿ ಬಿಟ್ಟಳು.
ರಮಾಳಿಂದ ಅಪರಿಚಿತ ಪತ್ರಗಳನ್ನು ತೆಗೆದುಕೊಂಡ ಮಧುಕರ್, ಅವಳಿಗೆ ಮುಂದೆ ನಿಶ್ಚಿಂತೆಯಿಂದ ಇರುವಂತೆ ಅಭಯ ನೀಡಿದಾಗ, ರಮಾಳ ಚಿಂತೆಯ ಭಾರ ಕಡಿಮೆ ಯಾದಂತಾಯಿತು.ಮಧುಕರ್ ತರಿಸಿಕೊಟ್ಟ ಕಾಫಿ ಹೀರಿ ಹಗುರವಾದ ಮನಸ್ಸಿನಿಂದ ಮನೆಗೆ ಹೊರಟಳು. ಅವನ ದಿಗ್ದರ್ಶನದಂತೆ, ರಮಾ ಆ ಅಪರಿಚಿತ ಪತ್ರವನ್ನು ಮಧುಕರ್ ಗೆ ಕಳುಹಿಸುತ್ತಾ ಬಂದಳು.ತಾನು ನಿಲ್ಲುವ ಬಸ್ ಸ್ಟ್ಯಾಂಡ್ ಅನ್ನು ಬದಲಾಯಿಸಿ ಹಿಂದಿನ ಸ್ಟಾಫ್ ನಲ್ಲಿ ನಿಲ್ಲಲು ಪ್ರಾರಂಭಿಸಿದಳು.
ಮುಂದೆ ಒಂದು ವಾರದೊಳಗೆ ಮಧುಕರ್ ನ ಪರಿಶ್ರಮದಿಂದ ಅಪರಿಚಿತ ಪತ್ರದ ಲಿಪಿಕಾರ ಸಿಕ್ಕಿ ಹಾಕಿಕೊಂಡ. ಅವನನ್ನು ಹಿಡಿದು ಪೋಲಿಸ್ ಠಾಣೆ ಗೆ ಎಳೆದುಕೊಂಡು ಬಂದು, ರಮಾಳಲ್ಲಿ ಕ್ಷಮೆ ಕೇಳುವಂತೆ ಮಾಡಿದನು. ಆ ಅನಾಮಿಕ ಪತ್ರ ಕಾರ ಬೇರಾರೂ ಆಗಿರದೆ ರಮಾಳ ಹೈಸ್ಕೂಲ್ ನ ಹಿಂದಿನ ಬೆಂಚ್ ಕ್ಲಾಸ್ ಮೇಟ್ ವಿಕ್ರಾಂತ ಎಂಬುದು ವಿಚಾರಣೆ ಯಿಂದ ತಿಳಿದು ಬಂತು.ಶಾಲಾ ದಿನಗಳಿಂದಲೇ ರಮಾಳನ್ನು ತಾನು ಪ್ರೀತಿಸುತ್ತಿದ್ದು, ಅದನ್ನು ಅವಳಿಗೆ ಹೇಗಾದರೂ ತಿಳಿಸಿ ಅವಳನ್ನೇ ಮದುವೆಯಾಗುತ್ತೇನೆಂದು ತನ್ನ ಗೆಳೆಯರೊಂದಿಗೆ ಚಾಲೆಂಜ್ ಮಾಡಿದ್ದೆನೆಂದೂ ಸಹ ವಿಕ್ರಾಂತ ಒಪ್ಪಿಕೊಂಡು,ರಮಾಳಲ್ಲಿ ಕ್ಷಮೆ ಯಾಚಿಸಿದನು.
ಇನ್ನು ಮುಂದೆ ಎಂದಾದರೂ ರಮಾ ಅಷ್ಟೇ ಅಲ್ಲ, ಬೇರೆ ಯಾವುದೇ ಹೆಣ್ಣು ಮಕ್ಕಳನ್ನು ಹೀಗೆ ಹೆದರಿಸಿದರೆ ಕಂಬಿ ಎಣಿಸಬೇಕಾಗುತ್ತದೆ ಎಂಬ ವಾರ್ನಿಂಗ್ ನೊಂದಿಗೆ ,ಅವನನ್ನು ಬಿಡುಗಡೆ ಮಾಡಿ ದ್ದನು ಮಧುಕರ್.
ಈಗೆರಡು ವಾರಗಳಿಂದ ಅಪರಿಚಿತ ಪತ್ರದಿಂದ ತನಗಾಗುತ್ತಿದ್ದ ಕಷ್ಟ ಗಳನ್ನು ಪರಿಹರಿಸಿದ ಮಧುಕರ್ ಗೆ ರಮಾ ಥ್ಯಾಂಕ್ಸ್ ಹೇಳಿದಳು. ನಂತರ ಎಲ್ಲಾ ವಿಷಯಗಳೂ ರಮಾಳ ಅಪ್ಪ ಅಮ್ಮ ನಿಗೆ ತಿಳಿದಾಗ, ಅವರು,ರಮಾಳಿಗೆ ಬೇಗ ಮದುವೆ ಮಾಡಿ ಮುಗಿಸಬೇಕೆಂದು ನಿರ್ಧರಿಸಿದರು.
ಈ ಘಟನೆಯ ನಂತರ ರಮ ಮತ್ತು ಮಧುಕರ್ ಹತ್ತಿರವಾಗತೊಡಗಿದರು.ಇವರಿಬ್ಬರನ್ನೂ ಗಮನಿಸುತ್ತಿದ್ದ ರಮಾಳ ಭಾವ ಪರಾಕ್ರಮ್, ಮಧುಕರನೊಂದಿಗೆ ರಮಾಳ ಮದುವೆಯ ಪ್ರಸ್ತಾಪ ಮಾಡಿದಾಗ, ಮಧುಕರ್ ಗೆ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತೆ ಆಯಿತು.ಸಂತೋಷದಿಂದ ಸಮ್ಮತಿ ನೀಡಿದನು. ವಿದ್ಯಾವಂತ, ಗುಣವಂತ, ಒಳ್ಳೆಯ ಉನ್ನತ ಉದ್ಯೋಗ ದಲ್ಲಿರುವ ಮಧುಕರ್ ನನ್ನು ತಿರಸ್ಕರಿಸಲು ರಮ್ಯಾಗೆ ಯಾವುದೇ ಕಾರಣವಿರಲಿಲ್ಲ.ಮೇಲಾಗಿ ಅವಳೂ ಸಹ ಅವನನ್ನೇ ಇಷ್ಟ ಪಡುತ್ತಿದ್ದಳು.
ಹಿರಿಯರು ನಿರ್ಧರಿಸಿ ದ ಸುಮುಹೂರ್ತದಲ್ಲಿ ರಮಾ ಮತ್ತು ಮಧುಕರ್ ಸತಿ ಪತಿಗಳಾದರು.ಮೊದಲ ರಾತ್ರಿ ಯ ರೋಮಾಂಚನದ ಸಮಯದಲ್ಲಿ ರೂಂಗೆ ಬಂದ ಮಧುಕರ್ ಮಡದಿ ರಮಾಳ ಕೈಗೆ ಒಂದು ಪತ್ರವನ್ನು ಕೊಟ್ಟಾಗ,ಅವಳ ಸಂತೋಷ ಸಡಗರ ಸರ್ರನೆ ಇಳಿದು ಹೋಗಿ ಆತಂಕದಿಂದ ಆ ಪತ್ರವನ್ನು ಬಿಡಿಸಿ ಓದಿದಾಗ
"ಕಂಗ್ರಾಜುಲೇಷನ್ಸ ರಮಾ.ನಿಮ್ಮ ವೈವಾಹಿಕ ಜೀವನ ಸುಂದರ ಸುಮಧುರವಾಗಲಿ, ನಿಮ್ಮ ಎದುರು ಗಡೆ ನಿಂತು ಅಭಿನಂದಿಸಲಾರದ ನಾನು ಪತ್ರದ ಮೂಲಕ ಅಭಿನಂದಿಸುತ್ತಿದ್ದೇನೆ.ದಯವಿಟ್ಟು ಕ್ಷಮಿಸಿ.
ವಿಕ್ರಾಂತ್"
ಪತ್ರವನ್ನು ಓದಿದ ರಮಾ,'ಇದು ಹೇಗೆ ಬಂತು? 'ಎಂದು ಮಧುಕರ್ ನತ್ತ ನೋಡಿದಾಗ, 'ಈ ಪತ್ರವನ್ನು ಒಂದೆರಡು ದಿನಗಳ ಹಿಂದೆ ವಿಕ್ರಾಂತ್ ತನ್ನ ಕೈಗೆ ಕೊಟ್ಟು ಅದನ್ನು ನಿನಗೆ ತಲುಪಿಸುವಂತೆ ಹೇಳಿದನು 'ಎಂದು ಮಧುಕರ್ ಉತ್ತರಿಸಿದಾಗ,ರಮಾ ಅದನ್ನು ಮುದುರಿ,ಕುಸಿದು ಬುಟ್ಟಿಗೆ ಹಾಕಲು ಮುಂದಾದಳು. ಅವಳನ್ನು ತಡೆದ ಮಧುಕರ್
"ಮೈ ಡಿಯರ್ ವೈಫ್,ಈ ಅಪರಿಚಿತ ಪತ್ರಗಳಲ್ಲವೇ ನಮ್ಮಿಬ್ಬರನ್ನು ಒಂದುಗೂಡುವಂತೆ ಮಾಡಿದ್ದು?
ಅದರ ಮೇಲೆ ನಿನಗೆ ಇನ್ನೂ ಸಿಟ್ಟೇಕೆ?" ಎಂದು ಹೇಳುತ್ತಾ ವಿಕ್ರಾಂತ್ ನ ಪತ್ರವನ್ನು ಒಂದು ಕಡೆಇಟ್ಟು, ರಮಾಳನ್ನು ತನ್ನ ಬಾಹುಗಳಲ್ಲಿ ಬಂಧಿಸಿದನು.