ಪ್ರಯಾಣ ೧
ಪ್ರಯಾಣ ೧
ನಾವು ದಿನನಿತ್ಯದ ಜೀವನ ಬದಲಾವಣೆ ಕಾಣಲು ವಾರಕ್ಕೊಮ್ಮೆ ಹೊಟಲ್ ನ ಸವಿರುಚಿ ಸವಿಯಲು,ತಿಂಗಳಿಗೊಮ್ಮೆಯಾದರೂ ಸ್ನೇಹಿತರ ಮನೆಗೆ ಹರಟೆ ಹೊಡೆಯಲು ಅಥವಾ ಅವರನ್ನೇ ನಮ್ಮ ಮನೆಗೆ ಕರೆಯುತ್ತೇವೆ.ಇದನ್ನು ಹೊರತುಪಡಿಸಿ ಕುಟುಂಬ ಸದಸ್ಯರೊಂದಿಗೆ,ಶಿಕ್ಷಕರು ಮತ್ತು ಸಹಪಾಠಿಗಳೊಡನೆ,ಸ್ನೇಹಿತರೊಡನೆ ವರ್ಷಕ್ಕೊಮ್ಮೆ ಪ್ರಯಾಣ ಮಾಡಿದಾಗ ಏನೊ ಒಂದು ಹೊಸತನ ದೊರಕುತ್ತದೆ..
ನಾನು ಮೊದಲ ಪ್ರವಾಸ ಹೋಗಿದ್ದು,ನನ್ನ ಅಪ್ಪಾಜಿ-ಮಮ್ಮಿ,ಅಪ್ಪಾಜಿಯವರ ಸಹೋದ್ಯೋಗಿಗಳು ಮತ್ತು ಅವರ ಶಾಲಾ ವಿದ್ಯಾರ್ಥಿಗಳೊಂದಿಗೆ ಹೋದದ್ದು...ನನಗೆನೂ ನೆನಪಿಲ್ಲ ಆದರೂ ಆಗಿನ ಫೋಟೋಗಳನ್ನು ನೋಡಿದಾಗ ಮತ್ತು ಮಮ್ಮಿ ಹೇಳೊದರಿಂದ ಆ ನೆನಪು ಮಾತ್ರ ಸಿಗುತ್ತೆ....
ಇನ್ನೂ ನಾನು ಅಂಗನವಾಡಿಗೆ ಹೋಗೊವಾಗ,ಅಲ್ಲಿಯ ಶಿಕ್ಷಕಿರು ನಮ್ಮನ್ನು ಊರ ಹೋರಗಿನ ದೇವಸ್ಥಾನಕ್ಕೆ ಕರೆದುಕೊಂಡು ಹೋದದ್ದು ನೆನಪಿದೆ."ಆಗ ನನ್ನ ಮಮ್ಮಿ ನನಗೆ ಉಪ್ಪಿಟ್ಟು-ಶಿರಾ ಮಾಡಿ ಮೂರು ಡಬ್ಬ ಇರುವ ಒಂದು ಕ್ಯಾರಿಯರ್ ನಲ್ಲಿ ಹಾಕಿ,ಇನ್ನೊಂದು ಡಬ್ಬದಲ್ಲಿ ಪಾರ್ಲೆಜಿ ಬಿಸ್ಕತ್ ಇಟ್ಟು ಕಳಿಸಿದ್ದು ಈಗಲೂ ನೆನಪಿದೆ".ಈಗ ನನ್ನ ಮಕ್ಕಳು ವನಸಂಚಾರಕ್ಕೆ ಹೋದರೆ ಕುರ್-ಕುರೆ,ಚಿಪ್ಸ್,ಚಾಕಲೇಟು ಅವೆ ಮೊದಲು ಬೇಕು..
ಶಿಕ್ಷಣ ಕ್ಷೇತ್ರದಲ್ಲಿ ಮಕ್ಕಳ ಕಲಿಕೆಗೆ ಉತ್ತೇಜನ ನೀಡಲು ಶೈಕ್ಷಣಿಕ ಪ್ರವಾಸಗಳಿಗೆ ಹೆಚ್ಚಿನ ಮಹತ್ವ ಕೊಡಲಾಗಿದೆ.ಅಪ್ಪಾಜಿ ಶಿಕ್ಷಕರಾದ್ದರಿಂದ ಪ್ರತಿ ವರ್ಷ ಅವರೊಡನೆ ಹೋಗುತ್ತಿದ್ದದ್ದು ಇದೆ.
ಅಪ್ಪಾಜಿಯವರೊಡನೆ ಮಾಡಿದ ಬೆಳಗಾವಿ ಜಿಲ್ಲೆಯ ಪ್ರವಾಸದ ನೆನಪು ಈಗಲೂ ಕಣ್ಣು ಕಟ್ಟಿದಂತಿದೆ.ಸೊಗಲ ಸೋಮೆಶ್ವರ,ನವಿಲು ತೀರ್ಥ,ಗೋಕಾಕ ಫಾಲ್ಸ.ಇವು ಒಂದು ದಿನದ ಪ್ರವಾಸಕ್ಕೆ ಸೀಮಿತವಾದ ಸ್ಥಳಗಳು.ಗೋಕಾಕ್ ನಲ್ಲಿರುವ ತೂಗು ಸೇತುವೆಯ ಮೇಲೆ ನಡೆಯುವಾಗ ಅಪ್ಪಾಜಿಯ ಕೈಗಳನ್ನು ಗಟ್ಟಿಯಾಗಿ ಹೀಡಿದು,ಕಣ್ಣು ಮುಚ್ಚಿ ದಾಟಿದ್ದು,ಆ ಸೇತುವೆಯ ಹತ್ತಿರದ ತಳ್ಳು ಗಾಡಿಯಲ್ಲಿನ ಸೌತೆಕಾಯಿ,ಅದರ ಮೇಲೆ ಉಪ್ಪು-ಖಾರಾ ಉದುರುಸಿ ಕೊಟ್ಟದ್ದನ್ನು ತಿನ್ನುತ್ತಾ ಓಡಾಡಿದ್ದು ನಾನೆ..
ನನ್ನನ್ನು ಶಾಲೆಗೆ ಸೇರಿಸಿದಾಗ,ನನ್ನ ಶಾಲೆಯ ವತಿಯಿಂದ ಶೈಕ್ಷಣಿಕ ಪ್ರವಾಸ ಕೈಗೊಂಡಿದ್ದರು,ಆಗ ನಾನು ಎರಡನೆ ತರಗತಿ.ಶಾಲೆಯ ಮುಖ್ಯೋಪಾಧ್ಯಾಯರ ಮುತುವರ್ಜಿ ಮೇಲೆ ನನ್ನನ್ನು ಕಳುಹಿಸಿದರು ಅಪ್ಪಾಜಿ.
ತಿಂಥಣಿ ಮೌನೆಶ್ವರ,ಗುರಗುಂಟಾ ಅಮರೇಶ್ವರ ನೋಡಿದ ನೆನಪು.
ಅಪ್ಪಾಜಿ ನನ್ನ ಶಿಕ್ಷಕರ ಕೈಯಲ್ಲಿ,'ಅವಳೇನಾದರೂ ಕೇಳಿದರೆ ಕೊಡಿಸಿ' ಎಂದು ಹಣ ಕೊಟ್ಟಿದ್ದರಂತೆ.ನನಗೊ ಈ ವಿಷಯ ಗೊತ್ತಿರಲಿಲ್ಲ.ಪ್ರವಾಸದ ಸ್ಥಳದಲ್ಲಿ ಶಿಕ್ಷಕರು
ನಿನಗೆ ಹಣ್ಣು ಕೊಡಿಸಲಾ? ಎಂದು ಕೇಳಿದಾಗ.
ಬೇಡಾ ಸರ್ ಎಂದೆ..
ನನ್ನ ಹತ್ತಿರ ದುಡ್ಡೆ ಇಲ್ಲಾ,ಸರ್ ಜೊತೆ ಹೇಗೆ ಕೊಡಿಸಿಕೊಳ್ಳೋದು ಅಂತಾ ಬೇಡ ಎಂದೆ.
ಅಲ್ಲಿಂದ ಬಂದ ಮೇಲೆ,ಅಪ್ಪಾಜಿಗೆ ದುಡ್ಡು ವಾಪಸ್ ಕೊಡೊವಾಗ..
"ನಿಮ್ಮ ಮಗಳು ಖರ್ಚಿಷ್ಟಳಲ್ಲಾ,ನಿಮ್ಮ ರೊಕ್ಕಾ ಒಳಸ್ತಾಳ ತಗೋರಿ"ಎಂದು ಹೇಳಿದರಂತೆ...
ಈ ಪ್ರವಾಸ ಆದಮೇಲೆ ನಾನು ಏಳನೆ ತರಗತಿಯಲ್ಲಿರುವಾಗ ಕೂಡಲಸಂಗಮಕ್ಕೆ ಒಂದು ದಿನದ ಹೊರ ಸಂಚಾರಕ್ಕೆಂದು ಕರೆದು ಕೊಂಡು ಹೋಗಿದ್ದರು.ಅಲ್ಲಿ ಸಂಗಮನಾಥನ ದೇವಸ್ಥಾನ,ಐಕ್ಯ ಮಂಟಪ,ಸಭಾ ಮಂಟಪ,ದಾಸೋಹ ಭವನ,ಅನುಭವ ಮಂಟಪದ ಅನುಕನ್ನು ನೋಡಿ,
ಗೆಳತಿಯೊಬ್ಬಳು ಕ್ಯಾಮೆರಾ ತಂದಿದ್ದರಿಂದ ಕೆಲವು ಫೋಟೋಗಳನ್ನು ತೆಗೆಸಿಕೊಂಡು ಬಂದೇವು..
ನಾವು ಒಂಭತ್ತನೇ ತರಗತಿಯಲ್ಲಿದ್ದಾಗ ನಮ್ಮದು ಹುಡುಗಿಯರೆ ಇರುವ ವಿಭಾಗ ಇರುವುದರಿಂದ ವರ್ಗದ ಗುರುಗಳಾದ ಕೆಂಗಲ್ ಸರ್ ಒಂದು ದಿನದ ಹೊರಸಂಚಾರ ಏರ್ಪಡಿಸಿರು.ಎಲ್ಲರೂ ಹುರುಪಿನಿಂದ ಒಪ್ಪಿದೇವು.
ಆಗ ನಾವು ಆಯ್ದುಕೊಂಡ ಸ್ಥಳ ಸಿದ್ಧನಕೊಳ್ಳ..ನಮ್ಮ ಬಾಗಲಕೋಟೆ ಜಿಲ್ಲೆಯಲ್ಲೂ ಕೆಲವು ಜೌಗು ಪ್ರದೇಶಗಳಿವೆ.ಮಳೆಗಾಲದಲ್ಲಿ ಅವು ಮೈದುಂಬಿ ಹರಿಯುತ್ತವೆ.ಅಂತಹ ಸ್ಥಳಗಳ ಪೈಕಿ "ಸಿದ್ಧನ ಕೊಳ್ಳವು"ಒಂದು.
ಸಿದ್ಧನಕೊಳ್ಳ ಹೇಗಿದೆ?ಅಲ್ಲಿ ನಾವು ಏನು ಮಾಡಿದೇವು?ಏನೆಲ್ಲಾ ಅನುಭವ ಪಡೆದೇವು ಅನ್ನೋದನ್ನ ಮುಂದಿನ ಭಾಗದಲ್ಲಿ ಹೇಳುತ್ತೇನೆ...
ಮುಂದುವರೆಯುತ್ತದೆ......