ನಿರ್ಭಯಾ!
ನಿರ್ಭಯಾ!
ಯಾಕೆ, ಒಂಥರ ಇದಿಯಾ ಯಾರಾದರು ಬೈದ್ರಾ..? ಕಲ್ಪನಾಳ ಮಾತು ಕಿವಿಗೆ ಬಿದ್ದರು ಕೇಳದಂತೆ ಮೌನವಾಗಿಯೇ ಕುಳಿತಿದ್ದಳು ಸಮುಜತಾ. ನನ್ನ ಹತ್ರಾನು ಹೇಳಲ್ವಾ? ಈ ಬಾರಿ ಕಲ್ಪನಾಳಿಗೆ ಗೆಳತಿಯ ಮೌನ ನೋಡಿ ಭಯವಾಗಿತ್ತು.
ಕಲ್ಪನಾಳನ್ನೇ ದಿಟ್ಟಿಸಿ ನೋಡಿದವಳೆ ಜೋರಾಗಿ ಅಳಲು ಶುರು ಮಾಡಿದಳು.
ಅಳಬೇಡ ಕಣೆ ಏನಾಯ್ತು ಹೇಳು !,ನಾನು ಯಾರಿಗು ಹೇಳೋದಿಲ್ಲ.
ಸಮುಜತಾ ತನಗಾದ ಬೇಸರದ ಬಗೆಗೆ ಬಿಕ್ಕುತ್ತಾ ಹೇಳತೊಡಗಿದಳು.
*****************************
ಸಮುಜತಾ ಹಾಗೂ ಕಲ್ಪನಾ ಇಬ್ಬರು ಹತ್ತನೆ ತರಗತಿಯ ವಿದ್ಯಾರ್ಥಿನಿಯರು. ಸರಕಾರಿ ಶಾಲೆಯಲ್ಲಿ ಇಬ್ಬರು ಕನ್ನಡ ಮಾಧ್ಯಮದ ಒಂದೇ ವಿಭಾಗದಲ್ಲಿ ಓದುತ್ತಾ ಇದ್ದರು. ಒಂದೇ ಊರಿನವರಾದುದರಿಂದ ಸಹಜವಾದ ಸಲುಗೆ ಇಬ್ಬರ ಮಧ್ಯೆಯು ಇತ್ತು. ಸಮುಜತಾಳು ತನ್ನ ಎಲ್ಲಾ ಮನಸಿನ ಖುಷಿ ಹಾಗೂ ದುಃಖದ ಸಂಗತಿಗಳನ್ನು ಗೆಳತಿ ಕಲ್ಪನಾಳ ಬಳಿ ಹೇಳಿಕೊಳ್ಳುತ್ತಾ ಇದ್ದಳು. ಹಾಗೂ ಇಬ್ಬರು ತರಗತಿಯಲ್ಲಿ ಚೆನ್ನಾಗಿ ಅಂಕಗಳಿಸುವ ವಿದ್ಯಾರ್ಥಿನಿಯಾರಾಗಿದ್ದುದರಿಂದ ಶಾಲೆಯ ಎಲ್ಲಾ ಶಿಕ್ಷಕರಿಗು ಇವರೆಂದರೆ ಅಚ್ಚುಮೆಚ್ಚಾಗಿತ್ತು.
ಆದರೆ ಇತ್ತೀಚೆಗೆ ಸಮುಜತಾಳ ಅಂಕ ಕಲ್ಪನಾಳಿಗಿಂತ ಕಡಿಮೆಯಾಗಿತ್ತು. ಹಾಗೂ ಯಾವಾಗಲು ಮಂಕಾಗಿರುವುದನ್ನು ಕಲ್ಪನಾ ಕೂಡ ಗಮನಿಸಿದ್ದಳು.
ಹೇಗಾದರು ಮಾಡಿ ಗೆಳತಿಯ ಬಾಯಿ ಬಿಡಿಸಬೇಕೆಂಬ ಹಠ ತೊಟ್ಟಿದ್ದಳು.
ಅವತ್ತು ಶನಿವಾರ ಎಲ್ಲಾ ತರಗತಿ ಮುಗಿಸಿ ಮನೆಗೆ ಹೋದರು ಕಲ್ಪನಾ ಸಮುಜತಾಳನ್ನು ಮನೆಗೆ ಹೋಗಲು ಬಿಡದೆ ತರಗತಿಯಲ್ಲೆ ಉಳಿಸಿಕೊಂಡಳು.
ಸಮುಜತಾಳ ಮನದೊಳಗೆ ಏನಿದೆ ಅವಳ ದುಃಖಕ್ಕೆ ಕಾರಣವೇನೆಂದು ಕಂಡುಹಿಡಿಯುವ ಸಲುವಾಗಿ ಅವಳನ್ನು ಬಹಳ ಜಾಣ್ಮೆಯಿಂದ ಮಾತನಾಡಿಸತೊಡಗಿದಳು.
*************************
ಕಲ್ಪನಾ ಕೂಡು ಕುಟುಂಬದಲ್ಲಿ ಬೆಳೆದವಳಾದ್ದರಿಂದ ಸ್ನೇಹಕ್ಕೆ ಬಹಳ ಬೆಲೆ ಕೊಡುತ್ತಾ ಇದ್ದಳು. ಈಗ ಬಾಲ್ಯದ ಸ್ನೇಹಿತೆ ದುಃಖಿತಳಾದುದರ ಹಿಂದೆ ಯಾವುದೋ ಮಹತ್ವವಾದ ಕಾರಣವಿದೆ ಎಂದು ಅವಳಿಗೆ ಅನಿಸಿತ್ತು.
ಪದೆಪದೆ ಕಲ್ಪನಾ ಪ್ರಶ್ನೆಗಳನ್ನು ಕೇಳತೊಡಗಿದಾಗ ಸಮುಜತಾಳಿಗೆ ಮಾತನಾಡದೆ ಇರಲು ಸಾಧ್ಯವಾಗದೆ ಇರಲಿಲ್ಲ.
ಅಳುತ್ತಳೇ ತನ್ನ ಬೇಸರದ ಹಿಂದಿನ ಕಾರಣವನ್ನು ಒಂದೇ ಉಸಿರಿನಲ್ಲಿ ಅರುಹಿದಳು. ಅದನ್ನು ಕೇಳುತ್ತಲೇ ಕಲ್ಪನಾ ಬೆಚ್ಚಿಬಿದ್ದಳು ಹಾಗೂ ಅವಳಿಗೆ ಒಂದು ಕ್ಷಣ ಮಾತೇ ಹೊರಡಲಿಲ್ಲ. ತಾನು ತಂದಿದ್ದ ನೀರಿನ ಬಾಟಲಿಯಿಂದ ನೀರು ಕುಡಿದು ಸುಧಾರಿಸಿಕೊಂಡವಳೆ ಗೆಳತಿಯ ಮೊಗವನ್ನೇ ನೋಡುತ್ತಾ ಕುಳಿತಳು.
ಸಮುಜತಾಳ ಕಣ್ಣುಗಳು ಕಣ್ಣೀರಿನ ಕೊಳಗಳಾಗಿದ್ದವು. ಕೆಂಪಾಗಿ ಊದಿದ್ದವು. ಅಲ್ಲಾ ನೀನಿದನ್ನು ನನ್ನ ಹತ್ತಿರ ಯಾಕೆ ಹೇಳಿಲ್ಲ. ಅವತ್ತೆ ಹೇಳಿದ್ರೆ ನಾವು ಅವನಿಗೆ ಸರಿಯಾದ ಪಾಠ ಕಲಿಸಬಹುದಾಗಿತ್ತು. ಇವಾಗಲು ಕಾಲ ಮಿಂಚಿಲ್ಲ. ನೀನು ಸಲ್ಪ ಧೈರ್ಯ ಮಾಡಬೇಕು ಅಷ್ಟೆ ಎಂದಳು. ಅಲ್ವೇ ಇದನ್ನೆಲ್ಲ ಅಷ್ಟು ಜನರ ಮುಂದೆ ಹೇಳಿದರೆ ನಮ್ಮ ಅಪ್ಪಂಗೇನಾದರು ಗೊತ್ತಾದ್ರೆ ಸಾಯಿಸಿ ಬಿಡ್ತಾರೆ ಶಾಲೆಗೆ ಕಳಿಸಲ್ಲ ಅಷ್ಟೆ ಮತ್ತಷ್ಟು ಭಯಗೊಂಡ ಸಮುಜತಾ ಹೆದರಿದ ಹರಿಣಿಯಾದಳು.
ಹಾಗಂತ ನೀನು ಸುಮ್ನೆ ಇದ್ರೆ ಇದು ಇಲ್ಲಿಗೆ ಹೇಗೆ ಸರಿಯಾಗುತ್ತೆ. ನೀನು ಬಾಯಿಬಿಟ್ಟು ಹೇಳದೆ ಇದ್ದರೆ ಆ ಮೋಸ ,ಅನ್ಯಾಯ, ಆ ಹೇಯ ಕೃತ್ಯವನ್ನ ಸಹಿಸಿದ್ದಿ ಅಂತಾಗುತ್ತೆ ಎಂದಳು ಕಲ್ಪನ ಕೋಪಗೊಂಡು.
ಸಮುಜತಾ ಏನನ್ನು ಮಾತನಾಡದೆ ಮತ್ತೆ ಮೌನದ ಮೊರೆ ಹೋದಳು.
ನೀನು ಯಾಕೋ ನಾನು ಹೇಳೋದನ್ನ ಕೇಳೋ ತರ ಕಾಣ್ತ ಇಲ್ಲ. ನಾವು ಇನ್ನು ಮಕ್ಕಳು ಅಲ್ಲ ಹೆಣ್ಣು ಮಕ್ಕಳಾಗಿ ಬೆಳೆದಿದ್ದೇವೆ. ನಾವು ಬಾಯಿ ಬಿಡದೆ ಸುಮ್ಮನೆ ಇದ್ರೆ ಇಂತಹವರ ಸಂಖ್ಯೆ ಇನ್ನು ಹೆಚ್ಚಾಗುತ್ತೆ. ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ ಮತ್ತಷ್ಟು ಹೆಚ್ಚಾಗುತ್ತೆ ಅದಕ್ಕೆ ನಿನ್ನ ಹಾಗೆ ನನ್ನ ಹಾಗಿನ ಹುಡಿಗಿಯರು ಸುಮ್ಮನೆ ಇರೋದೆ ಕಾರಣ ಆಗಿಬಿಡುತ್ತೆ. ನಾವು ಏನು ಹೇಳಲ್ಲ ಏನು ತಿಳುವಳಿಕೆ ಇರಲ್ಲ ಅಂತಾನೆ ನಮ್ಮನ್ನು ಟಾರ್ಗೆಟ್ಟು ಮಾಡುತ್ತಾರೆ. ನಾವು ತಿರುಗಿ ನಿಲ್ಲಬೇಕು ಆಗ ಎಲ್ಲ ಬದಲಾಗುತ್ತೆ. ಎಂದು ಜೋರಾದ ದನಿಯಲ್ಲಿ ಮಾತಾಡಿದ ಕಲ್ಪನ ಗೆಳತಿಯ ಮೊಗವನ್ನೇ ನೋಡಿದಳು.
ಕಲ್ಪು .... !! ನೀನು ಯಾಕೆ ಅರ್ಥಮಾಡಿಕೊಳ್ತಾ ಇಲ್ಲಾ, ಇದು ಎಲ್ಲಾರಿಗು ಗೊತ್ತಾದರೆ ನಾನು ಶಾಲೆಗೆ ಹೇಗೆ ಬರೋದು ಇನ್ನು ಮುಂದೆ, ಸಮುಜತಾ ದಾರಿ ಕಾಣದೆ ಕಂಗಾಲಾಗಿದ್ದಳು.
ನೋಡು, ಸಮು ನೀನು ಈಗ ದೈರ್ಯಮಾಡದೆ ಇದ್ದರೆ ಇದು ನಿನಗು ಇಷ್ಟ ಇತ್ತು ಅಂತಲೇ ಆ ಅಯೋಗ್ಯ ತಿಳಿದುಕೊಳ್ಳುತ್ತಾನೆ ಸಲ್ಪ ಯೋಚಿಸು ಅಂದಳು ಮೆಲ್ಲಗೆ.
ಸಮುಜತಾಳಿಗೆ ಏನು ಮಾಡಬೇಕೆಂದೆ ತೋಚದೆ ಕಂಗಾಲಾದಳು. ತನ್ನ ಕೈಗಳನ್ನು ತಿಕ್ಕಿಕೊಳ್ಳುತ್ತಾ ಬೆವರತೊಡಗಿದಳು.
ಗೆಳತಿ ಚಡಪಡಿಸುವುದ ನೋಡಿ ಕಲ್ಪನಾಳಿಗೆ ಬೇಸರವಾಯಿತು. ಇದಕ್ಕೆ ತಾನೆ ಒಂದು ಇತಿಶ್ರೀ ಬರೆಯಬೇಕೆಂದುಕೊಂಡವಳೆ ಗೆಳತಿಯ ಕೈಯನ್ನು ಹಿಡಿದುಕೊಂಡು ಶಾಲೆಯ ಹತ್ತಿರವಿದ್ದ ಅಲ್ಲೇ ಇದ್ದಂತಹ ವಾಹನ ನಿಲ್ದಾಣಕ್ಕೆ ಬಂದಳು. ಕೆಂಪು ಬಸ್ಸೊಂದು ಜೋರಾಗಿ ಶಬ್ದ ಮಾಡುತ್ತ ಬಂದು ನಿಂತಿತು.
ಸಮುಜತಾ ಅಸಾಹಯಕಾಳಗಿ ಮುಖದಲ್ಲಿ ರಕ್ತವಿಲ್ಲದೆ ಸೋತುಹೋಗಿದ್ದಳು.ಯಾವುದೋ ಅಗೋಚರ ಶಕ್ತಿ ತನ್ನ ಕೈ ಹಿಡಿದು ಎಳೆದು ಬಸ್ಸನ್ನು ಹತ್ತಿಸಿದಂತೆ ಅವಳಿಗೆ ಭಾಸವಾಯಿತು. ಮತ್ತೆಲ್ಲ ಸಮುಜತಾಳಿಗೆ ಅಯೋಮಯ.
ಆದರೆ ಕೆಲವೇ ಸಮಯದಲ್ಲಿ ಕಣ್ಣು ತೆರೆದ ಸಮುಜತಾಳಿಗೆ ಅಚ್ಚರಿ ಕಾದಿತ್ತು. ತನ್ನ ಕಣ್ಣಿನ ಎದುರು ಅದೆ ಬಸ್ಸಿನಲ್ಲಿ ದಿನವು ಕಾಡುತ್ತಿದ್ದ ಆ ವಿಕ್ರುತ ಕಾಮಿ ನಿಂತಿದ್ದ, ಹಾಗೂ ತನ್ನನ್ನು ಕ್ಷಮಿಸುವಂತೆ ಕಾಲಿಗೆ ಬೀಳುತ್ತಾ ಇದ್ದ. ತನ್ನನ್ನು ಬಿಟ್ಟು ಬಿಡಿ ಎಂಬಂತೆ ಕಿರಿಚುತ್ತಾ ಇದ್ದ. ಬಸ್ಸಿನಲ್ಲಿ ಇದ್ದ ಜನ ಥಳಿಸಿದ ಏಟಿಗೆ ಅವನ ಮುಖದ ತುಂಬಾ ರಕ್ತದ ಕಲೆಗಳಿದ್ದವು. ಪಕ್ಕದಲ್ಲೇ ಗೆಳತಿ ಕಲ್ಪನಾ ಹೆಮ್ಮೆಯ ನಗು ಬೀರುತ್ತಾ ನಿಂತಿದ್ದಳು.
ಸಮುಜತಾಳಿಗೆ ತಾನು ಯಾವುದೋ ಹೊಸ ಲೋಕದಲ್ಲಿ ಸಾಗುತ್ತಿರುವಂತೆ ಭಾಸವಾಗತೊಡಗಿತು. ಇದು ತನ್ನ ಕಲ್ಪನೆಯಲ್ಲ ನಿಜವೇ ತನ್ನ ಗೆಳತಿ ಕಲ್ಪನ ಮಾಡಿದ ಅದ್ಭುತ ಎಂದು ಅರಿವಾಗತೊಡಗಿತು.
ಯಾವ ಅನ್ಯಾಯದ ವಿರುದ್ದ , ಯಾವ ದೈಹಿಕ ಶೋಷಣೆಯ ವಿರುಧ್ದ ಎದುರು ನಿಂತರೆ ತನ್ನದೇ ಮರ್ಯಾದೆ ಹೋಗುತ್ತದೆ ಎಂದು ಅಂಜಿದ್ದ ಸಮುಜತಾಳಿಗೆ ಹೇಗೆ ಇಂತಹ ರಕ್ಕಸರನ್ನು ಎದುರಿಸಿ ಇಂತಹ ಲೋಕದಲ್ಲಿ ಬದುಕಬೇಕೆಂಬುದನ್ನು ಗೆಳತಿ ಕಲ್ಪನಾ ತೋರಿಸಿಕೊಟ್ಟಿದ್ದಳು.
ಯಾವ ಬಸ್ಸಿಗೆ ತಾನು ಹತ್ತಲು ಶಾಲೆಗೆ ಬರಲು ಹೆದರುತ್ತಾ ಇದ್ದಳು ಅದೇ ಬಸ್ಸಿಗೆ ದಿನವು ಯಳಾಗಿ ಬರಬಹುದೆಂಬ ಧೈರ್ಯವನ್ನು ಗೆಳತಿ ಕಲ್ಪನಾ ನೀಡಿದ್ದಳು.
**************************
ಸ್ನೇಹಕ್ಕೆ ಹೊಸ ಬಾಷ್ಯ ಬರೆದು ಬದುಕನ್ನು ಎಂತಹುದೇ ಸವಾಲು ಬಂದರು ಎದುರಿಸಿ ನಿಲ್ಲಲ್ಲು ಧೈರ್ಯ ತುಂಬಿದ ಜೀವದ ಗೆಳತಿ ಕಲ್ಪನಾಳಿಗೆ ಹತ್ತನೆ ತರಗತಿಯ ನಂತರ ತನ್ನ ಜೊತೆಗೆ ತನ್ನ ಮನೆಯಲ್ಲೆ ತಂಗಿಯಂತೆ ಜೊತೆಗಿದ್ದು ಮುಂದೆ ಹನ್ನೆರಡನೆಯ ತರಗತಿಯನ್ನು ಓದಲು ತಂದೆಯ ಬಳಿ ಅನುಮತಿ ಪಡೆದು ಅವಳ ಓದಿಗೆ ಸಹಾಯ ಮಾಡಲು ದೃಢ ನಿರ್ಧಾರ ಮಾಡಿ ಇದನ್ನೇ ನಾಳೆಯ ಸ್ನೇಹಿತರ ದಿನದ ವಿಶೇಷವಾಗಿ ಅಚ್ಚರಿಯ ಬಹುಮಾನದಂತೆ ಗೆಳತಿಗೆ ಕೊಡಬೇಕೆಂದುಕೊಳ್ಳುತ್ತಾ ಸಮುಜತಾ ಮೊದಲಿನ ಸಂತೋಷದಲ್ಲೇ ಮನೆಯ ದಾರಿ ಹಿಡಿದಳು.