ಚೈತ್ರ ಭಾಗವತ್

Drama Thriller Others

3.4  

ಚೈತ್ರ ಭಾಗವತ್

Drama Thriller Others

ನಿನಗಾಗಿ ಕಾಯುವ ದಾರಿ ಬಲು ಕ್ರೂರ

ನಿನಗಾಗಿ ಕಾಯುವ ದಾರಿ ಬಲು ಕ್ರೂರ

4 mins
2.5K



ತಡರಾತ್ರಿ ಕೆಲಸ ಮುಗಿಸಿ ಮನೆಗೆ ವಾಪಾಸು ಆಗುತ್ತಿದ್ದ ಒಂಟಿ ಹೆಣ್ಣಿನ ಮೇಲೆ ಗ್ಯಾಂಗ್ ರೇಪ್. ರಾತ್ರಿ ಸುಮಾರು ಎಂಟು ಗಂಟೆಗೆ ಆಸ್ಪತ್ರೆಯ ಡ್ಯೂಟಿ ಮುಗಿಸಿಕೊಂಡು ಹೊರಬಂದ ಡಾಕ್ಟರ್ ಪ್ರಿಯಾ ತನ್ನ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ಅತ್ಯಂತ ಕ್ರೂರವಾಗಿ ಡಾ|| ಪ್ರಿಯಾ ಜೀವನ ಅಂತ್ಯವಾಗಿದೆ. ನಾಲ್ವರು ಕಾಮುಕರ ಕ್ರೂರತನಕ್ಕೆ ಮುಗ್ಧ ಜೀವವೊಂದು ಬಲಿಯಾಗಿಬಿಟ್ಟಿದೆ. ಇದೀಗ ಆ ನಾಲ್ವರೂ ಅಪರಾಧಿಗಳ ಹುಡುಕಾಟ ಶುರುವಾಗಿದೆ.

ಟಿ.ವಿ. ಯಲ್ಲಿ ಬರುತ್ತಿದ್ದ ನ್ಯೂಸ್ ನೋಡುತ್ತಿದ್ದ ಪಾರ್ವತಿಗೆ ನಡುಕ ಶುರುವಾಗಿತ್ತು. ತಿನ್ನುತ್ತಿದ್ದ ಅನ್ನ ಗಂಟಲಿಗೆ ಇಳಿಯಲಿಲ್ಲ, ಅರ್ಧದಲ್ಲೇ ಕೈತೊಳೆದು ಕುಳಿತರು. ಚಿಂತೆಯಿದ್ದಾಗ ಅನ್ನ ದೇಹಕ್ಕಿಳಿಯದು, ಇವರ ಚಿಂತೆ ಒಂದೇ ' ಮಗಳಿನ್ನೂ ಮನೆಗೆ ಬಂದಿಲ್ಲ'.

ಗಡಿಯಾರವಂತೂ ತಿರುಗುತ್ತಲೇ ಇತ್ತು, ಟಿ.ವಿಯಲ್ಲಿ ಆ ಸುದ್ದಿ ಪಾರ್ವತಿಯವರ ಎದೆಯಲ್ಲಿ ನಡುಕ, ದರ್ಶಿನಿಗೆ ಪೋನಚ್ಚಿದರು, ' ಪುಟ್ಟಾ... ಎಷ್ಟು ಹೊತ್ತಾಯಿತು ಎಲ್ಲಿದ್ದೀಯ'

' ಮಾ..... ಶೂಟಿಂಗ್ ಈಗತಾನೆ ಮುಗೀತು, ಇನ್ನೇನು ಹೊರಟೆ. ಕ್ಯಾಬ್ ಬುಕ್ ಮಾಡಿದ್ದೇನೆ. " ಎಂದು ಹೇಳಿ ಕರೆಯನ್ನು ಕಟ್ ಮಾಡಿದ್ದಳು. ಪಾರ್ವತಿಯವರಿಗೆ ಆತಂಕವಿನ್ನೂ ಹೆಚ್ಚಾಯಿತು.

ಕ್ಯಾಬ್ ಹಾ.... ಇವಳು ಒಬ್ಬಳೇ, ಏನಾದರೂ ಅನಾಹುತ ... ಇಲ್ಲ ಇಲ್ಲ, ಹಾಗೇನೂ ಆಗೊಲ್ಲ. ಆ ದೇವರು ಇದ್ದಾನೆ. ಎಂದುಕೊಂಡು ದೇವರ ದೀಪ ಹಚ್ಚಿ ಕಣ್ಮುಚ್ಚಿ ಕುಳಿತರು.‌

ಡಾ|| ಪ್ರಿಯಾಳ ಪಾರ್ಥೀವ ಶರೀರ.. ಅವಳ ತಂದೆ ತಾಯಿಯರ ರೋಧನೆ... ಕಣ್ಮುಂದೆ ಸುಳಿಯಿತು, ಪಾರ್ವತಿಯರು ದಡಕ್ಕನೆ ಎದ್ದು ಎದುರಿಗಿದ್ದ ದೇವರ ಪೋಟೊವನ್ನೇ ದಿಟ್ಟಿಸಿದರು. " ಪೋಟೊದಲ್ಲೇ ಇರುವ ದೇವನು ಹೆಣ್ಣು ಮಕ್ಕಳನ್ನು ಕಾಪಾಡಲಾರ, ಅವ ದುಷ್ಟ ಶಿಕ್ಷಕನೇ ಆಗಿದ್ದರೇ ಪ್ರಿಯಾಳಂತಹ ಎಷ್ಟೋ ಹೆಣ್ಣುಮಕ್ಕಳ ಜೀವಕ್ಕೆ ಬದಲಾಗಿ ಕಾಮುಕರೆಲ್ಲರ ಬಲಿಯಾಗಬೇಕಿತ್ತು.‌ ಆದರೆ ಹಾಗೇಕೆ ಆಗಿಲ್ಲ...... ಆ ದೇವನೂ ಕಣ್ಣು ಮುಚ್ಚಿ ಕುಳಿತಿರಬಹುದೇನೊ!?... ಕಷ್ಟಕಾಲಕ್ಕೆ ಮನುಷ್ಯರೇ ಸಹಾಯ ಮಾಡೊಲ್ಲ ಇನ್ನೂ ಕಣ್ಣಿಗೆ ಕಾಣದ ದೇವರು.... ಹು.ಹು ಕಂಡಿತ ಸಹಾಯ ಮಾಡೊಲ್ಲ. ನಾನೀಗ ಸುಮ್ಮನೆ ಕುಳಿತುಬಿಟ್ಟರೆ! ನನ್ನ ಮಗಳೂ ಮುಂದೊಂದು ದಿನ ನ್ಯೂಸ್ ನಲ್ಲಿ ಬರಬಹುದು, ಪ್ರಿಯಾಳ ತಾಯಿಯ ಸ್ಥಾನದಲ್ಲಿ ನಾನು......ಇಲ್ಲ ಇಲ್ಲ... ಹಾಗೇನೂ ಆಗಬಾರದು. " ನಡುಗುವ ಕೈಯನ್ನೇ ನೆಲಕ್ಕೂರಿ ಎದ್ದು, ಮನೆಯ ಬಾಗಿಲನ್ನು ಮುಚ್ಚಿ, ಸ್ಕೂಟಿಯನ್ನು ಹೊರತೆಗೆದು ನಿಂತರು. ಮನೆಯ ಟಿ.ವಿ ಮಾತ್ರ ಮಾತನಾಡುತ್ತಲೇ ಇತ್ತು. ಇನ್ನೊಮ್ಮೆ ಮಗಳಿಗೆ ಕರೆ ಮಾಡಲು ಪ್ರಯತ್ನಿಸಿದರು,‌ ದರ್ಶಿನಿಯ ಮೊಬೈಲ್ ರಿಂಗಾಯಿತು, " ಮಮ್ಮಾ..... ಮೊಬೈಲ್ ಬ್ಯಾಟರಿ ಲೊ ಆಗಿದೆ, ಕ್ಯಾಬ್ ಕೂಡ ಇನ್ನೂ ಬಂದಿಲ್ಲ. ಆಟೋದಲ್ಲೇ ಬಂದುಬಿಡುತ್ತೀನಿ. ಹೆದರಬೇಡ. "

" ದರ್ಶ... ನಾನೇ ಬರ್ತಾ ಇದ್ದೀನಿ...... " ಎನ್ನುವಷ್ಟರಲ್ಲೇ ಮೊಬೈಲ್ ಕರೆ ಕಟ್ ಆಗಿತ್ತು. ‌ಪಾರ್ವತಿಯರವರು ಹೊರಟೇ ಬಿಟ್ಟರು. ಅತ್ತ ದರ್ಶಿನಿಯೂ ಕ್ಯಾಬ್ ‌ಅನ್ನು ಕ್ಯಾನ್ಸಲ್ ಮಾಡಿದ್ದಳು, ತಕ್ಷಣ ಒಂದು ಆಟೋ ಹಿಡಿದು ಹತ್ತಿ ಕುಳಿತಳು. ಆಟೋದಲ್ಲಿ ಇವಳೊಬ್ಬಳೆ! ಆಟೋ ಹೊರಟಿತು. ದರ್ಶಿನಿ ಮೊಬೈಲ್ ಸ್ವಿಚ್ ಆನ್ ಮಾಡಲು ಪ್ರಯತ್ನಿಸುತ್ತಲೇ ಇದ್ದಳು. ಇವಳಿಗೂ ಅದೇ ಆತಂಕ. ಮನೆಯಲ್ಲಿ ಮಮ್ಮಾ ಒಬ್ಬರೇ!!

ಪಾರ್ವತಿಯವರು,‌‌ ದರ್ಶಿನಿ ಕೆಲಸ ಮಾಡುತ್ತಿದ್ದ ದಾರವಾಹಿ ಶೂಟಿಂಗ್ ಜಾಗಕ್ಕೆ ಬಂದರು, ಸುತ್ತಲೂ ನೋಡಿದರು ಯಾರೂ ಕಾಣಲಿಲ್ಲ. ದರ್ಶಿನಿ ಹೇಳಿದಂತೆ ಆಟೋ ಹಿಡಿದು ಹೊರಟಿರಬಹುದು ಎಂದುಕೊಂಡು ಅತಿ ವೇಗವಾಗಿ ಸ್ಕೂಟಿ ತಿರುಗಿಸಿ ಹೊರಟರು, ಈ ಸ್ಕೂಟಿಗಿಂತ ವೇಗವಾಗಿ ಇವರ ಕಣ್ಣು ರಸ್ತೆಯ ಮೇಲೆ ಓಡಾಡುವ ಆಟೋಗಳ ಮೇಲಿತ್ತು,‌ ಅಕಸ್ಮಾತ್ ಅವಳು ಕ್ಯಾಬ್ ನಲ್ಲೇ ಬರುತ್ತಿದ್ದರೆ! ಸುತ್ತಲೂ ಕಣ್ಣಾಯಿಸಿದರು, ಆ ಸಮಯದಲ್ಲಿ ಕ್ಯಾಬ್ ಗಳು ಆ ರಸ್ತೆಯಲ್ಲಿ ಓಡಾಡುತ್ತಿರಲಿಲ್ಲ. ಪಾರ್ವತಿಯವರ ಮನಸ್ಸು ಯೋಚಿಸತೊಡಗಿತ್ತು. ರಸ್ತೆಯಲ್ಲಿ ಹೆಚ್ಚಿನ ವಾಹನಗಳ ಸಂಚಾರವಿರಲಿಲ್ಲ, ಕೆ.ಎಸ್. ಆರ್. ಟಿ.ಸಿ ಬಸ್ಸುಗಳು, ಒಂದೆರಡು ಸ್ಕೂಟಿ , ಆಟೋಗಳು ಮಾತ್ರ ಓಡಾಡುವುದು ಕಾಣುತ್ತಿತ್ತು. ಏಕೊ ಗೊತ್ತಿಲ್ಲ ಈ ರಸ್ತೆ, ಕವಿದಿದ್ದ ಕತ್ತಲೂ, ಎಲ್ಲೋ ಇರುವ ಮಗಳು! ಜೊತೆಗೆ ಡಾ|| ಪ್ರಿಯಾ.... ಪಾರ್ವತಿಯವರಿಗೆ ಕರುಳೇಕೋ ಒದ್ದಾಡುತ್ತಿರವಂತೆ, ಬಿಸಿ ಕೆಂಡವನ್ನು ಮೈಮೇಲೆ ಇಟ್ಟುಕೊಂಡತೆ ಅನುಭವವಾಗಿತ್ತು. ಹಣೆಯ ಮೇಲಿಂದ ಕೆನ್ನೆಗೆ ಹರಿಯುತ್ತಿರುವ ಬೆವರು, ಪಾರ್ವತಿರವರ ಆತಂಕದ ಕನ್ನಡಿಯಾಗುತ್ತಿತ್ತು.‌

ಆದರೆ ಸ್ಕೂಟಿಯು ರಸ್ತೆಯ ಮೇಲೆ ಚಲಿಸುತ್ತಲೇ ಇತ್ತು, ಸ್ವಲ್ಪ ದೂರದಲ್ಲಿ ಜನರು ಗುಂಪಾಗಿ ನಿಂತಿರುವ ದೃಶ್ಯ ಕಂಡಿತ್ತು. " ದರ್ಶಿನಿಗೆ......ಅಕಸ್ಮಾತ್ ಆಕ್ಸಿಡೆಂಟ್.... " ನಡುಗುತ್ತಿದ್ದ ಪಾರ್ವತಿಯವರ ಕೈಗಳು ಬ್ರೇಕ್ ಹಿಡಿದವು. ಆತಂಕದಿಂದಲೇ ಸ್ಕೂಟಿಯಿಂದ ಇಳಿದು ಜನರ ಗುಂಪಿನ ಕಡೆಗೆ ಹೆಜ್ಜೆಯಿಟ್ಟರು, ಅದೂ ಆಕ್ಸಿಡೆಂಟೇ..... ಆದರೆ ಅಲ್ಲಿದದ್ದು ಬೇರೆಯವರೇ, ತರಚಿದ್ದ ಗಾಯಗಳನ್ನು ಎಣಿಸುತ್ತಾ‌ ನಿಂತಿದ್ದ ಮೂವರು ಯುವಕರು. ಪಾರ್ವತಿಯವರಿಗೆ ನಿರಾಳವಾಗಿತ್ತು. " ಸದ್ಯ ದರ್ಶಿನಿಯಲ್ಲ.... ಆದರೆ ಅವಳು...... " ಮತ್ತೇ ಸಂಚಾರ ಶುರುವಾಗಿತ್ತು. ರಸ್ತೆ ಚಿಕ್ಕದಾದಂತೆ ವಾಹನಗಳ ಸಂಚಾರ ಕೂಡ ಕಡಿಮೆಯಾಗಿತ್ತು. ರಸ್ತೆಯ ಎಡಬದಲಲ್ಲಿ ಕಾಣುವ ದಟ್ಟವಾದ ಮರಗಳೂ ಸಹ ಪಾರ್ವತಿಗೆ ಭಯವನ್ನು ಮೂಡಿಸಿದ್ದವು. ನಿರ್ಜನ ಪ್ರದೇಶ ಬೇರೆ! ' ಅಯ್ಯೊ.. ನಾನೇಕೆ ಇಲ್ಲ ಸಲ್ಲದನ್ನೆಲ್ಲಾ ಯೋಚಿಸುತ್ತಿದ್ದೀನಿ! ಡಾ|| ಪ್ರಿಯಾ ಕಾರಣದಿಂದಲಾ..... ಈ ಸಂಕಟ ಯಾರಿಗೂ ಬೇಡ. ' ಪಾರ್ವತಿರವರು ಆತಂಕದಿಂದಲೇ ಆ ರಸ್ತೆಯನ್ನು ದಾಟಿದ್ದರು!

' ಮನೆಯೇ ಬಂದು ಬಿಟ್ಟಿತ್ತು! ಮಗಳು!!! ' ಮನೆಯ ಸ್ವಲ್ಪ ದೂರದಲ್ಲಿ ಬರುತ್ತಿದ್ದ ಪಾರ್ವತಿರವರಿಗೆ ದರ್ಶನಿ ಆಟೋದಿಂದ ಇಳಿದು ಆಟೋದವನಿಗೆ ಹಣವನ್ನು ಕೊಟ್ಟು ಒಳಹೋದ ದೃಶ್ಯ ಕಣ್ಣಿಗೆ ಬಿತ್ತು. ಭಯದಿಂದ ನಡುಗುತ್ತಿದ್ದ ದೇಹಕ್ಕೇ ಪುನಃ ಜೀವಬಂದಿತ್ತು, ಪಾರ್ವತಿರವರ ಮೊಗದಲ್ಲಿ ನೆಮ್ಮದಿಯಿಂದೊಂದು ನಗು ಹೊರಚೆಲ್ಲಿತ್ತು. ದರ್ಶನಿ ಬಾಗಿಲು ಬಡಿಯುತ್ತಾ ನಿಂತಿದ್ದರೆ! ಹೊರಗಿಂದ ಬಂದ ಪಾರ್ವತಿಯರವರನ್ನು ಕಂಡು,

" ಏನಮ್ಮಾ... ಇಷ್ಟು ಹೊತ್ತಿನಲ್ಲಿ ಎಲ್ಲಿಗೆ ಹೋಗಿದ್ದೆ!"

" ಅ..... ಆ .. ಅದು..... ಗಿರಿಜಾಳ ಮನೆಯಲ್ಲಿ ಬ್ರಹ್ಮ ಕಮಲ ಹೂ ಅರಳಿತ್ತು ನೋಡಲು ಹೋಗಿದ್ದೆ. " ಎಂದು ಸುಳ್ಳು ಹೇಳಿ ಸ್ಕೂಟಿ ನಿಲ್ಲಿಸಿ ಬಾಗಿಲು ತೆರೆದಾಗ, ಆಡುತ್ತಿದ್ದ ಟಿ.ವಿಯನ್ನು ನೋಡಿ ಮತ್ತೊಮ್ಮೆ ಅನುಮಾನಗೊಂಡು ದರ್ಶನಿ,

"' ನಿಜ ಹೇಳು ಎಲ್ಲಿಗೆ ಹೋಗಿದ್ದೆ. ಅವಸರದಲ್ಲಿ ಹೋಗಿ ಬಂದಂತಿದೆ. '' ಎಂದಳು. ಮುಖದ ಮೇಲಿನ ಬೆವರನ್ನು ವರೆಸಿಕೊಂಡ ಪಾರ್ವತಿ. ' "ಆಗಲೇ ಹೇಳಿಲ್ಲವಾ.....ಹೂ ಅರಳಿತ್ತು, ಬಾಡುವ ಮೊದಲೇ ನೋಡಲು ಅವಸರವಾಗಿ ಹೋಗಿ ಬಂದೆ!!! " ಎಂದರು.

" ಮಮ್ಮಾ...... "

" ಹೆಚ್ಚು ಮಾತು ಕಲಿತಿದ್ದೀಯ! ಬಾ ಊಟ ಮಾಡು. " ಎಂದು ತಟ್ಟೆಗೆ ಊಟ ಹಾಕಿಕೊಂಡು ಬಂದರು. ಪಾರ್ವತಿಯವರು ತಿನ್ನದೇ ಕೈತೊಳೆದುಕೊಂಡ ಅನ್ನದ ತಟ್ಟೆ ಟೇಬಲ್ ಮೇಲಿದದ್ದನ್ನು ನೋಡಿ ದರ್ಶನಿ ಸಿಟ್ಟಾದಳು " ನಿಜ ಹೇಳು ಮಮ್ಮಾ... ಏನಾಗಿದೆ ನಿನಗೆ"

" ಪುಟ್ಟ...... ಏನು ಇಲ್ಲ ಕಂದ. ಊಟ ಮಾಡು ಮೊದಲು. "

" ನನಗೆ ಬೇಡ ಮಮ್ಮಾ..... ಅರ್ಧಕ್ಕೆ ಊಟ ಬಿಟ್ಟು , ಟಿ.ವಿಯನ್ನೂ ಆರಿಸದೇ ಅಷ್ಟೊಂದು ಅವಸರದಲ್ಲಿ ಬ್ರಹ್ಮ ಕಮಲವನ್ನು ನೋಡಲು ಹೋಗಿದ್ಯಾ... ನಮ್ಮ ಮನೆಯಲ್ಲಿಯೂ ಅರಳುತ್ತದೆ ತಾನೆ‌ ಪ್ರತಿವಾರ! ಯಾಕಮ್ಮ ಒಬ್ಬಳೆ ಹೋಗಿದ್ದೆ! ಈಗಿನ ಕಾಲ ಸರಿಯಿಲ್ಲ ಮಮ್ಮಾ.... ಒಂಟಿಯಾಗಿ ಎಲ್ಲಿಗೂ ಹೋಗಬೇಡ. ಅದೂ ಅಲ್ಲದೇ ನಾನು ಇರದ ಸಮಯದಲ್ಲಿ ...." ಎಂದಳು, ಪಾರ್ವತಿಯವರ ಮನಸ್ಸು ತಡೆಯಲಾಗಲಿಲ್ಲ ಮಗಳೂ ನನ್ನಂತೆ ಯೋಚಿಸಿ ಕಾಳಜಿ ವಹಿಸುತ್ತಿರುವ ಮಾತು ಕೇಳಿ ದುಃಖರಾದರು. ಹೆಣ್ಣಾದವಳಿಗೆ ಈ ಸಂಕಟವೆಲ್ಲಾ ಮಾಮೂಲೀ ಎಂದೆನಿಸಿತ್ತು.

" ನಾನು ಇದೇ ಕಾರಣಕ್ಕೆ ‌ನಿನ್ನ ಹುಡುಕಿ ಹೊರಟ್ಟಿದ್ದೆ ದರ್ಶನಿ. ನೀನು ಒಬ್ಬಳೇ ಎಂದು...... " ಅವಳನ್ನಪ್ಪಿಕೊಂಡರು. ಆತಂಕಗೊಂಡಿದ್ದ ಎರಡೂ ಹೃದಯಗಳೂ ನೆಮ್ಮದಿಗೊಂಡಿದ್ದವು. ಆದರೆ ಇದು ಇಂದಿಗೆ ಮಾತ್ರ ಸೀಮಿತ.

" ಮಮ್ಮಾ..... ಈ ಕೆಲಸ ಬಿಟ್ಟುಬಿಡೋಣ ಎಂದುಕೊಂಡಿದ್ದೀನಿ! ಬೆಳಗ್ಗೆ ಆರಕ್ಕೊರಟರೇ ಸಂಜೆ ಎಷ್ಟು ಸಮಯವಾಗುವುದೋ ನನಗಂತೂ ಭಯವಾಗುತ್ತದೆ, ಇಡೀ ದಿನ ಆಕ್ಟರ್ಸ್ ಗೆ ಮೇಕಪ್ ಮಾಡುವುದರಲ್ಲೇ ಕಾಲ ಕಳೆದು ಹೋಗುತ್ತಿದೆ. ಮಮ್ಮಾ..... "

" ಬೇಡ ಕಂದಾ.... ನೀ ಇದೇ ಕೆಲಸ ಮಾಡು! ಇದು ನಿನ್ನ ಕನಸಲ್ಲವೇ, ಮೇಕಪ್ ಆರ್ಟಿಸ್ಟ್ ಆಗುವುದು. "

" ಆದರೆ ಇಡೀ ದಿನ ನೀನೊಬ್ಬಳೇ ಈ ಮನೆಯಲ್ಲಿ! " ದರ್ಶನಿಯ ಮಾತಿಗೆ ಪಾರ್ವತಿ ಮೌನಿ.

****************************************************

"ಮಮ್ಮಾ....... ಬೇಗ ತಿಂಡಿ ಕೊಡು! ನನಗಾಗಿ ಆರ್ಟಿಸ್ಟ್ ಗಳು ಹುಡುಕಾಡುತ್ತಿರುತ್ತಾರೆ!" ತಿಂಡಿ ಬಾಕ್ಸಿನ ಜೊತೆಗೆ ಸ್ಕೂಟಿಯ ಕೀ ಹಿಡಿದು ನಿಂತಿದ್ದರು ಪಾರ್ವತಿ.

" ನಡೀ.. ನಾನೇ ನಿನಗೆ ಡ್ರಾಪ್ ಮಾಡುತ್ತೀನಿ, ಸಂಜೆ ಕೂಡ ಯಾವುದೇ ಆಟೋ, ಕ್ಯಾಬ್ ಯಾವುದಕ್ಕೂ ಕಾಯಬೇಡ. ನಾನೇ ಇರ್ತೀನಿ."

" ಮಮ್ಮಾ....... "

" ಬಾ ಬಾ......" ಎಂದು ಅವಳ ಕೈಹಿಡಿದು ನಿಂತೆರು.

ಡಾ|| ಪ್ರಿಯಾ ರವರನ್ನು ರೇಪ್ ಹಾಗೂ ಮರ್ಡನ್ ಮಾಡಿದ್ದ ನಾಲ್ವರೂ ಕಾಮುಕರು, ಪೋಲೀಸರಿಂದ ತಪ್ಪಿಸಿಕೊಂಡು ಹೋಗು ಸಹಾಸ ಮಾಡಿದ್ದರಿಂದ, ಪೋಲೀಸರು ಆ ನಾಲ್ವರನ್ನೂ ಎನ್‌ಕೌಂಟರ್ ಮಾಡಿ ಕ್ಷಣದಲ್ಲೇ ಸಾಯಿಸಿದ ಸುದ್ದಿ ಹೊರಬಿದ್ದಿದೆ!.

ಟಿ.ವಿಯಲ್ಲಿ ಬರುತ್ತಿದ್ದ ಸುದ್ದಿಯನ್ನು ನೋಡಿದ ಪಾರ್ವತಿಯವರ ಮುಖದಲ್ಲಿ ಮಂದಹಾಸ. ಆಡುತ್ತಿದ್ದ ಟಿ.ವಿಯನ್ನು ಆಪ್ ಮಾಡಿ ದರ್ಶಿನಿಯನ್ನು ಡ್ರಾಪ್ ಮಾಡಲು ಹೊರಟರು. ದುಷ್ಟ ಸಂಹಾರವಾಯಿತಲ್ಲಾ!!! ದೈರ್ಯವಂತೂ ಬಂದಿತ್ತು! ಆದರೆ ಆತಂಕ! ಅದು ಯಾವಾಗಲೂ ಇದದ್ದೇ!


Rate this content
Log in

Similar kannada story from Drama