ನೀನಿರಲು ಜೊತೆಯಲ್ಲಿ
ನೀನಿರಲು ಜೊತೆಯಲ್ಲಿ
ಸಮುದ್ರದ ಅಲೆಗಳು ಒಂದಾದ ಮೇಲೆ ಒಂದು ದಡಕ್ಕೆ ಬಂದು ಅಪ್ಪಳಿಸುವುದನ್ನು ಹಾಗೇ ನೋಡುತ್ತಾ, ತನ್ನ ಶಾಂತ ಜೀವನಲ್ಲಿ ಇದ್ದ ಅಲೆಗಳ ಲೆಕ್ಕ ಹಾಕುತ್ತಾ ಸಾಗರದ ಕೊನೆ ನೋಡುತ್ತಾ, ಅಲ್ಲೊಬ್ಬ ಮರಳಿನ ಮೇಲೆ ಕೂತಿದ್ದಾನೆ. ಅವನ ಹೆಸರು ಸಂಭ್ರಮ್. ಅದು ಅವನ ಹೆಸರಿನಲ್ಲಿ ಮಾತ್ರ ಇರುವಂತದ್ದು. ಅವನ ಜೀವನದಲ್ಲಿ ಅದು ಮರೆಯಾಗಿ ಯಾವುದೋ ಕಾಲವಾಯಿತು.
ಸಂಭ್ರಮ್ ಹಾಗೂ ಲಾಸ್ಯ ಒಟ್ಟಿಗೆ ಒಂದೇ ಕಾಲೇಜಿನಲ್ಲಿ ಮೆಡಿಕಲ್ ಮಾಡಿದರು. ನಂತರ ಎಂಡಿ ಕೂಡಾ ಒಟ್ಟಿಗೆ ಒಂದೇ ಕಾಲೇಜಿನಲ್ಲಿ ಮುಗಿಸಿದರು. ನಗರದ ಪ್ರತಿಷ್ಠಿತ ಹಾಸ್ಪಿಟಲ್ ಅಲ್ಲಿ ಒಟ್ಟಿಗೆ ಕೆಲಸಕ್ಕೆ ಸೇರಿದರು. ಎಳೆ ವಯಸ್ಸಿನಲ್ಲಿ ಇಬ್ಬರಲ್ಲೂ ಮೂಡಿದ ಪ್ರೀತಿಗೆ ಮನಸ್ಸಿನಲ್ಲೇ ನೀರೆರೆದು ಪೋಷಿಸಿ ಅದು ಈಗೆ ಹೆಮ್ಮರವಾಗಿ ಬೆಳೆದಿದ್ದರೂ ಅವರು ತಮ್ಮ ಪ್ರೀತಿಯನ್ನು ತೋರ್ಪಡಿಸಿರುವುದಿಲ್ಲ. ಕಾರಣ, ತಮ್ಮ ಹದಿಹರೆಯದ ಬಯಕೆಗಳಿಗೆ ಅಮೂಲ್ಯವಾದ ಭವಿಷ್ಯ ಹಾಳಾಗಬಾರದು ಎಂದು. ತಮ್ಮ ಲೈಫ್ ಸೆಟಲ್ ಆಗೋ ವರೆಗೂ ಕಾಯೋಣ ಎಂದು ತಮ್ಮ ತಮ್ಮಲ್ಲೇ ತೀರ್ಮಾನಿಸಿದ್ದರು.
ಹಲವು ವರ್ಷಗಳು ತಮ್ಮ ಮನದಲ್ಲೇ ಗುಡಿ ಕಟ್ಟಿ ಆರಾಧಿಸಿದ ಒಲವನ್ನು ಹೇಳಿಕೊಳ್ಳಲು ಇಬ್ಬರೂ ನಿರ್ಧರಿಸಿ ತಮ್ಮ ಪ್ರೇಮ ನಿವೇದನೆಯನ್ನು ಮಾಡಿಕೊಂಡಿದ್ದರು. ಇಬ್ಬರ ಸಂತೋಷಕ್ಕೆ ಪಾರವೇ ಇರಲಿಲ್ಲ. ಮುಗಿಲಿನಮೇಲಿಂದ ಬೀಳೋ ಸಾವಿರ ಹನಿಗಳ ನಡುವೆ, ಅಪರೂಪಕ್ಕೆ ಬೀಳೋ ಸ್ವಾತಿ ಮುತ್ತಿಗಾಗಿ ಚಿಪ್ಪು ಬಾಯಿ ತೆರೆದು ಕೂತಂತೆ ಇಬ್ಬರೂ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸದೆ ಕಾದಿದ್ದರು.
ಇಬ್ಬರೂ ಅನಾಥಾಶ್ರಮ ದಲ್ಲಿ ಬೆಳೆದ ಮಕ್ಕಳೇ, ಇಬ್ಬರಿಗೂ ತಮ್ಮವರು ಅಂತ ಯಾರೂ ಇಲ್ಲ. ಇರುವುದು ತಮಗೆ ಆಶ್ರಯ ಕೊಟ್ಟ ಅನಾಥಾಶ್ರಮದವರು. ಅವರ ಸಮ್ಮುಖದಲ್ಲೇ ಇಬ್ಬರೂ ಮದುವೆಯಾದರು. ತಮ್ಮ ಹೊಸ ಜೀವನವನ್ನು ತಮ್ಮದೇ ಆದ ಹೊಸ ಮನೆಯಲ್ಲಿ ಪ್ರಾರಂಭಿಸಿದರು.
ಇಬ್ಬರೂ ಒಟ್ಟಿಗೆ ಹಾಸ್ಪಿಟಲ್ ಹೋಗ್ತಾ ಇದ್ರು, ಒಟ್ಟಿಗೆ ಮನೆಗೆ ಬರ್ತಾ ಇದ್ರು. ಅವರಲ್ಲಿ ಪ್ರೀತಿಗೆ ಕೊರತೆ ಏನೂ ಇರಲಿಲ್ಲ. ತಮ್ಮಂತೆ ಅನಾಥವಾದ ಮಗುವನ್ನೇ ದತ್ತು ತೆಗೆದುಕೊಂಡು ಸಾಕಬೇಕು ಎಂದು ತೀರ್ಮಾನಿಸಿದರು. ಅದರಂತೆ ಅವರ ಮನೆಗೆ ಬಂದ ಹೊಸ ಜೀವಗಳು 5 ವರ್ಷದ ಜಾಹ್ನವಿ ಹಾಗೂ 3 ವರ್ಷದ ಆರುಷ್.
ಅವರದ್ದು ತುಂಬು ಕುಟುಂಬ. ಯಾವುದಕ್ಕೂ ಕೊರತೆ ಇಲ್ಲ. ಹೀಗೆ ಅವರ ಜೀವನ ನಡೆದಿತ್ತು. ಈಗ ಜಾಹ್ನವಿ ಗೆ 12 ವರ್ಷ, ಆರುಷ್ ಗೆ 10 ವರ್ಷ. ಸಂತೋಷ ಸುಖ ಹೆಚ್ಚು ಮಾಡಲು ದೇವರು ಆ ಮಕ್ಕಳನ್ನು ತಮಗಾಗೆ ಕಳುಹಿಸಿದ್ದಾನೆ ಎಂಬುದು ಅವರ ನಂಬಿಕೆ. ಎಲ್ಲವೂ ಚೆನ್ನಾಗಿದ್ದಾಲೇ ವಿಧಿ ತನ್ನ ಆಟ ಶುರು ಮಾಡುವುದು. ಮಕ್ಕಳೊಂದಿಗೆ ಔಟಿಂಗ್ ಬಂದ ದಂಪತಿಗಳ ಕಾರ್ ಆಕ್ಸಿಡೆಂಟ್ ಆಗಿ ಎಲ್ಲರೂ ಆಸ್ಪತ್ರೆ ಸೇರುತ್ತಾರೆ.
ಸಂಭ್ರಮ್ ಗೆ ಎಚ್ಚರ ಆದಾಗ ಅವನು ಲಾಸ್ಯ ಬಗ್ಗೆ ವಿಚಾರಿಸುತ್ತಾನೆ. ಆದರೆ ಡಾಕ್ಟರ್ ಗೆ ಲಾಸ್ಯ ಬಗ್ಗೆ ಯಾವುದೇ ಮಾಹಿತಿ ಇರುವುದಿಲ್ಲ. ಆಕ್ಸಿಡೆಂಟ್ ಆದ ಮೇಲೆ ಯಾರೋ ಇವರನ್ನು ನೋಡಿ ಹಾಸ್ಪಿಟಲ್ ಸೇರಿಸುತ್ತಾರೆ. ಅದು ಅರಣ್ಯ ಪ್ರದೇಶವಾದ್ದರಿಂದ ಒಬ್ಬೊಬ್ಬರು ಒಂದೊಂದು ಕಡೆ ಬಿದ್ದಿರುತ್ತಾರೆ. ಅಲ್ಲಿಯ ಜನಗಳಿಗೆ ಸಿಕ್ಕಿದ್ದು ಸಂಭ್ರಮ್ ಹಾಗೂ ಎರೆಡು ಮಕ್ಕಳು ಮಾತ್ರ.
ಏಟು ಜಾಸ್ತಿ ಆದ ಕಾರಣ ಆಪರೇಷನ್ ಮಾಡಿ ಅವರ ಜೀವಕ್ಕೆ ಏನೂ ತೊಂದರೆ ಇಲ್ಲದ್ದನ್ನು ಡಾಕ್ಟರ್ ನಿಟ್ಟುಸಿರು ಬಿಡುತ್ತಾರೆ. ಅವರಂತೆ ವೃತ್ತಿಯಲ್ಲಿ ಡಾಕ್ಟರ್ ಆಗಿದ್ದ ಸಂಭ್ರಮ್ ಅವರಿಗೆ ಚಿರಪರಿಚಿತ. ಹಾಗಾಗಿ ಅವನಿಗೆ ಹಾಗೂ ಅವನ ಮಕ್ಕಳಿಗೆ ಹೆಚ್ಚಿನ ಕಾಳಜಿಯೊಂದಿಗೆ ಸುಮಾರು ದಿನಗಳಿಂದ ಹಾಸ್ಪಿಟಲ್ ಅಲ್ಲಿ ಆರೈಕೆ ನಡೆಯುತ್ತಿರುತ್ತದೆ. ಮಕ್ಕಳಿಗೆ ಅಪಘಾತದ ಜೊತೆ ಆಘಾತಕ್ಕೂ ಭಯಕ್ಕೂ ಪ್ರಜ್ಞೆ ಬಂದಿರುವುದಿಲ್ಲ.
ಸಂಭ್ರಮ್ ಗೆ ಪ್ರಜ್ಞೆ ಬಂದ ಕೆಲವು ದಿನಕ್ಕೆ ಮಕ್ಕಳಿಗೂ ಪ್ರಜ್ಞೆ ಬರುತ್ತದೆ. ಆದರೆ ಲಾಸ್ಯ ಬಗ್ಗೆ ಯಾರಿಗೂ ಗೊತ್ತಿಲ್ಲ. ಹುಡುಕಿದರೂ ಅವಳ ಸುಳಿವಿಲ್ಲ. ಮಕ್ಕಳಿಗೂ ತಾಯಿಯು ಜೊತೆ ಇರದ್ದು ಕಷ್ಟವಾಯಿತು. ಸಂಭ್ರಮ್ ಮಕ್ಕಳಿಗಾಗಿ ತಾನೇ ಧೈರ್ಯ ತಂದುಕೊಂಡು, ಲಾಸ್ಯಳ ಬರುವಿಕೆಗಾಗಿ ಪ್ರತಿ ಕ್ಷಣ ಹಂಬಲಿಸುತ್ತ ದಿನ ಕಳೆಯುತ್ತಾರೆ.
2 ವರ್ಷಗಳ ನಂತರ ಒಂದು ಹೆಣ್ಣು ದ್ವನಿ ಸಂಭ್ರಮ್ ಎಂದು ಜೋರಾಗಿ ಕಿರುಚಿ ಗಾಭರಿ ಇಂದ ಎದ್ದು ಕೂರುತ್ತಾಳೆ. ಆಕೆಗೆ ತಾನು ಎಲ್ಲಿರುವೆ ಎಂಬ ಅರಿವೂ ಇಲ್ಲ. ಕಣ್ಣು ಬಿಟ್ಟು ಸುತ್ತ ನೋಡಿದರೆ, ಸ ಜಾಗ ಅವಳಿಗೆ ಹೊಸತು. ಅವಳ ದ್ವನಿ ಕೇಳಿ ಒಳಗೆ ಬಂದ ಅಜ್ಜಯ್ಯ, ಲಾಸ್ಯ ಳ ತಲೆ ಸವರಿ, ಎದ್ಯ ನನ್ನವ್ವ. 2 ವರ್ಷದ ನಿನ್ನ ಸುಧೀರ್ಘ ನಿದ್ದೆ ಇಂದು ಮುಗಿಯಿತೇ ಎಂದು ಹೇಳಿದಾಗ ಲಾಸ್ಯಾಗೆ ಏನೂ ಅರ್ಥ ಆಗದೇ ಆ ವ್ಯಕ್ತಿಯ ಕಡೆಗೆ ನೋಡುತ್ತಾಳೆ
ಅವಳ ಮುಖಭಾವ ಅರ್ಥೈಸಿಕೊಂಡ ಹಿರಿ ಜೀವ ತನಗೆ ತಿಳಿದದ್ದನ್ನು ಲಾಸ್ಯಗೆ ಹೇಳುತ್ತಾರೆ
ಅಂದು ಔಷಧಿ ಗೆ ಮೂಲಿಕೆ ತರಲು ಬೆಟ್ಟದ ತಗ್ಗು ಪ್ರದೇಶಕ್ಕೆ ಹೋದಾಗ ಯಾರೋ ನರಲಾಡುವ ದ್ವನಿ ಕೇಳಿ ಅತ್ತ ಹೋದಾಗ ಕಂಡಿದ್ದು ಪ್ರಜ್ಞೆ ಇಲ್ಲದೇ ಮೈ ಎಲ್ಲಾ ಗಾಯವಾಗಿ ಬಿದ್ದಿದ್ದ. ಲಾಸ್ಯ. ಅವಳು ಯಾರೆಂದು ತಿಳಿಯದೇ ಹೋದರು ಮಾನವೀಯತೆಯಿಂದ ಅವಳನ್ನು ಮನೆಗೆ ಕರೆತಂದು ಚಿಕಿತ್ಸೆ ನೀಡಿದ್ದರು
ಮೈ ಮೇಲಿನ ಗಾಯ ಮಾಸಿದ್ದರೂ ಅವಳಿಗೆ ಪ್ರಜ್ಞೆ ಬರಲು ತಗುಲಿದ ಸಮಯ ಬರೋಬ್ಬರಿ 2 ವರ್ಷ. ಲಾಸ್ಯಗೇ ಎಲ್ಲವೂ ಅರ್ಥ ಆಯಿತು. ಕೂಡಲೇ ಹಿರಿಯರಿಗೆ ತನ್ನ ಪರಿಚಯ ಹೇಳಿ ಅವರ ಸಹಾಯದಿಂದ ತನ್ನ ಮನೆಯತ್ತ ಲಾಸ್ಯಾಳ ಸವಾರಿ ಹೊರಟಿತು. ತನ್ನ ಮನದರಸಿ ಬದುಕಿರುವ⁶ಬಗ್ಗೆ ಯಾವುದೇ ಸುಳಿವು ಇರದೇ ಇದ್ದರೂ ಅವಳು ಬಂದೇ ಬರುವಳು ಎಂಬ ನಂಬಿಕೆಯಲ್ಲಿ ಕಾಯ್ತಾ ದಿನ ಕಳೆಯುತ್ತಿದ್ದಾನೆ.
ಬೆಲ್ ಸೌಂಡ್ ಗೆ ಎಚ್ಚರ ಆದ ಸಂಭ್ರಮ್ ಬಾಗಿಲು ತೆಗೆದು ನೋಡಲು ತನ್ನ ಕಣ್ಣನ್ನು ತಾನೇ ನಂಬದಾದ. 2 ವರ್ಷದ ತನ್ನ ಕಾಯುವಿಕೆ ಇಂದು ತನ್ನ ಮನದೊಡತಿ ತನ್ನ ಮನೆಯ ಬಾಗಿಲಲ್ಲೇ ನಿಂತಿರುವುದು ಕನಸೋ ತಿಳಿಯದು.
ತನ್ನ ಮನದೂಡೆಯನ ಮುಖಭಾವವನ್ನು ಅರ್ಥೈಸಿಕೊಂಡ ಲಾಸ್ಯ ಅವನಿಗೆ ಎಲ್ಲವನ್ನೂ ವಿವರಿಸಿ, ಮತ್ತೊಮ್ಮೆ ಬಲಗಾಲಿಟ್ಟು ಸಂಭ್ರಮ್ ನ ಮನೆಯೊಳಗೆ ಹಾಗೂ ಮನದೊಳಗೆ ಸಂಭ್ರಮದಿಂದ ಪಾದಾರ್ಪಣೆ ಮಾಡಿದಳು. ಶಾಲೆಯಿಂದ ಮನೆಗೆ ಬಂದ ಮಕ್ಕಳಿಗೂ ತಾಯಿಯ ಆಗಮನದ ಖುಷಿ ಹೇಳತೀರದು.
ಬರಡಾಗಿದ್ದ ಸಂಭ್ರಮ್ ನ ಬಾಳು ಮತ್ತೊಮ್ಮೆ ಪರಿಪೂರ್ಣ ಆಯಿತು. ಎಲ್ಲರೂ ಸಾವು ಗೆದ್ದು ಬಂದು ತಮ್ಮ ಜೀವನ ಕಟ್ಟಿಕೊಂಡು ಬದುಕುತ್ತಿದ್ದಾರೆ. ಎಲ್ಲದಕ್ಕೂ ಕಾರಣ ಪ್ರೀತಿಯೊಂದೇ... ಪ್ರೀತಿಯೊಂದಿದ್ದರೆ, ಎಲ್ಲವೂ ಅರ್ಥಪೂರ್ಣ....
ನೀ ಇರಲು ಜೊತೆಯಲ್ಲಿ ಬಾಳೆಲ್ಲ ಹಸಿರಾದಂತೆ..........