ನೆಮ್ಮದಿಯ ನೆಲೆ
ನೆಮ್ಮದಿಯ ನೆಲೆ
ಸರ್ಕಾರಿ ಶಾಲೆಯ ಉಪಾಧ್ಯಾಯ ರಮಾಕಾಂತ್ಆ ಮಹಾ ನಗರದಲ್ಲಿ ಬಾಡಿಗೆ ಮನೆಗಾಗಿ ಪರದಾಡಿ ಸಾಕಾಗಿ,ಕಡೆಗೆ ತನ್ನ ಹಳ್ಳಿಗೆ ವರ್ಗಾವಣೆ ಕೇಳಿಕೊಂಡು,ನಗರ ಬಿಟ್ಟು ಹಳ್ಳಿಗೆ ಬಂದ.ಒಂದು ಸಾಧಾರಣ ವಾದ ಹೆಂಚಿನ ಮನೆಯನ್ನು ಬಾಡಿಗೆಗೆ ಹಿಡಿದ.
ಅಲ್ಲಿ ಅವನ ಬಾಲ್ಯ ಸ್ನೇಹಿತ ಬಾಲಚಂದ್ರ , ತನ್ನದೇ ಆದ ಒಂದೆರಡು ಮನೆಗಳನ್ನು ಕಟ್ಟಿಕೊಂಡು ಸ್ಥಿತಿವಂತ ನಾಗಿ ಸುಖವಾಗಿದ್ದ.
ಅವನು ತನ್ನ ಗೆಳೆಯ ರಮಾಕಾಂತ್ ಈಗಿರುವ ಸಣ್ಣ ಮನೆಯನ್ನು ನೋಡಿ, ತಾನು ಕಟ್ಟಿಸಿರುವ ಒಂದು ಹೊಸ ಮನೆಯನ್ನು ರಮಾಕಾಂತ್ ಗೆ ಬಾಡಿಗೆ ಗೆ ಕೊಡುವುದಾಗಿ ಹೇಳಿ ಪ್ರಾಮಿಸ್ ಮಾಡಿದ.
ಗೆಳೆಯ ಬಾಲಚಂದ್ರನ ಮಾತನ್ನು ನಂಬಿಕೊಂಡ ರಮಾಕಾಂತ್, ಅವನ ಮನೆಯನ್ನು ಬಾಡಿಗೆಗೆ ಪಡೆಯಲು ತನ್ನ ಒಪ್ಪಿಗೆ ಸೂಚಿಸಿದ.
ತಿಂಗಳುಗಳು ಕಳೆದರೂ ಬಾಲಚಂದ್ರ ತನ್ನ ಮನೆಯನ್ನು ರಮಾಕಾಂತ್ ನಿಗೆ ಬಾಡಿಗೆ ಕೊಡುವ ಮಾತನ್ನು
ಮರೆತು ಬಿಟ್ಟಾಗ, ರಮಾಕಾಂತ್ ನ ಸ್ವಾಭಿಮಾನ ಎಚ್ಚೆತ್ತು ಕೊಂಡಿತು. ಅದೇ ಹಳ್ಳಿಯಲ್ಲಿದ್ದ ತನ್ನ ೨೦/೩೦ರ ಪುಟ್ಟ ನಿವೇಶನದಲ್ಲಿ ತನ್ನ ಆರ್ಥಿಕ ಮಿತಿಯಲ್ಲಿ,,ಸಣ್ಣದಾದ ಒಂದು ಮನೆಯನ್ನು ಕಟ್ಟಿ ಕೊಂಡಾಗ ಆ ಪುಟ್ಟ ಗೂಡು ಅವನ ನೆಮ್ಮದಿಯ ನೆಲೆಯಾಯಿತು. ನಗರದಲ್ಲಿ ಲಕ್ಷಗಟ್ಟಲೆ ಅಡ್ವಾನ್ಸ್,ಐದು ಅಂಕಿಗಳ ದೊಡ್ಡ ಮೊತ್ತದ ಬಾಡಿಗೆ ಮನೆಯಲ್ಲಿ ವಾಸಮಾಡುವ ಪರದಾಟಕ್ಕಿಂತ ತನ್ನ ಹಳ್ಳಿಯಲ್ಲಿ ತನ್ನದೇ ಪುಟ್ಟ ಗೂಡಿನಲ್ಲಿ ನೆಮ್ಮದಿಯ
ಬದುಕನ್ನು ಕಂಡುಕೊಂಡ ರಮಾಕಾಂತ್.ಮನೆ ಚಿಕ್ಕದಾಗಿದ್ದರೂ ಮನಸ್ಸಿನ ನೆಮ್ಮದಿ ಅತಿ ಮುಖ್ಯವೆಂದು ಅವನ ಅನುಭವದ ಗುರು ಕಲಿಸಿದ ಪಾಠ.ರಮಾಕಾಂತ್ ನ ಮನೆಯನ್ನು ನೋಡಿದ ಬಾಲಚಂದ್ರ ನಾಚಿಕೆಯಿಂದ ತಲೆತಗ್ಗಿಸಿ, ಅವನಲ್ಲಿ ಕ್ಷಮೆ ಕೇಳಿದಾಗ, ರಮಾಕಾಂತ್ ತನ್ನ ಗೆಳೆಯನ ಬೆನ್ನು ತಟ್ಟಿ "ಆದದ್ದೆಲ್ಲಾ ಒಳಿತೇ ಆಯಿತು" ಅಂದ. ಬಹುಶಃ ಬಾಲಚಂದ್ರ ತನ್ನ ಮನೆಯನ್ನು ಬಾಡಿಗೆಗೆ ಕೊಟ್ಟಿದ್ದರೆ ತನಗೆ ಮನೆ ಕಟ್ಟುವ ಛಲ ಬರುತ್ತಿರಲಿಲ್ಲವೆಂದು ಕೊಂಡ.