Kalpana Nath

Classics Inspirational Others

3.6  

Kalpana Nath

Classics Inspirational Others

ನೈಜ ಭಕ್ತ

ನೈಜ ಭಕ್ತ

2 mins
131



 ಒಂದು ಆಶ್ರಮದ ಗುರುಗಳ ಬಳಿ ಹಸಿವಿನಿಂದ ಕಂಗಾಲಾಗಿದ್ದ ಯುವಕನೊಬ್ಬ ಬಂದು ಊಟ ಕೇಳಿದ. ಅವನಿಗೆ ಊಟ ಹಾಕುವಾಗ ಹೀಗೆ ಕೆಲಸವಿಲ್ಲದೇ ಹೊಟ್ಟೆಗೂ ಇಲ್ಲದ ಅವನನ್ನ ತಮ್ಮ ಆಶ್ರಮದಲ್ಲೇ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಇರಲು ಹೇಳಿದ್ದಕ್ಕೆ ಒಪ್ಪಿದ. ಈ ಯುವಕ ಅಲ್ಲಿ ಯಾರಿಗೂ ಆಗದ ಎಷ್ಟೋ ಕಠಿಣ ಕೆಲಸಗಳನ್ನ ತಾನೇ ಮಾಡುತ್ತಿದ್ದ. ಅದಕ್ಕೆ ಸರಿಯಾಗಿ ಎಲ್ಲರಿಗಿಂತಲೂ ಎರಡುಪಟ್ಟು ಹೆಚ್ಚು ತಿನ್ನುತ್ತಿದ್ದ. ಹತ್ತೇ ದಿನಗಳಲ್ಲಿ ಗುರುಗಳ ಹೃದಯವನ್ನು ಕದ್ದು ನೆಚ್ಚಿನ ಶಿಷ್ಯನಾದ. ಒಂದು ದಿನ ಬಹಳ ಹಸಿವಾಗಿ ಅಡುಗೆ ಕೋಣೆಗೆ ಹೋದ. ಅಲ್ಲಿ ಯಾರೂ ಇಲ್ಲ. ಅಂದು ಅಡುಗೆ ಮಾಡುವ ಸೂಚನೆಯೂ ಇಲ್ಲದೇ ಇದ್ದಾಗ ಯಾರನ್ನೋ ಕೇಳಿದಾಗ ತಿಳಿಯಿತು ಅಂದು ಉಪವಾಸ. ಕಾರಣ ಏಕಾದಶಿ. ಇವನಿಗೆ ಒಂದು ಕ್ಷಣ ಭಯವಾಯ್ತು. ಉಪವಾಸವಿದ್ದ ಹಿಂದಿನ ದಿನಗಳು ನೆನೆಪಿಗೆ ಬಂದು ಕಣ್ಣೀರು ಬಂತು. 


ಅಲ್ಲಿಗೆ ಅಕಸ್ಮಾತ್ ಗುರುಗಳು ಬಂದು ಕಣ್ಣೀರಿಗೆ ಕಾರಣ ಕೇಳಿ ಅದಕ್ಕೆ ಏನಾದರೂ ವ್ಯವಸ್ಥೆ ಮಾಡುವುದಾಗಿ ಹೇಳಿದರು. ಸ್ವಲ್ಪ ಸಮಯದ ನಂತರ ಅವನಿಗೆ ಅಡುಗೆ ಮಾಡಲು ಬೇಕಾದ ಎಲ್ಲಾ ಸಾಮಾನುಗಳನ್ನು ಕೊಟ್ಟು ನದೀ ಪಕ್ಕದಲ್ಲಿ ಅಡುಗೆ ಮಾಡಿಕೊಂಡು ಊಟ ಮಾಡುವಂತೆ ಹೇಳಿ , ತಿನ್ನುವ ಮೊದಲು ಆಶ್ರಮದ ಪದ್ದತಿಯಂತೆ ದೇವರಿಗೆ ನೈವೇದ್ಯ ಮಾಡಬೇಕು ಎಂದು ಹೇಳಿದಾಗ ಮೊದಲು ಹೆದರಿದ. ಅನ್ಯ ದಾರಿ ಕಾಣದೆ ಒಪ್ಪಿ ಹೊರಟ. ಎಂದೂ ಅಡುಗೆ ಮಾಡಿದಅನುಭವವಿಲ್ಲ. ಆದರೂ ಹಸಿವು ಅಡುಗೆ ಮಾಡಿಸಿತು. ಹೇಗಿದ್ದರೂ ತಾನೇ ಮಾಡಿದ್ದು ತಿನ್ನಲೇ ಬೇಕಿತ್ತು .ಆಗ ಗುರುಗಳು ಹೇಳಿದ್ದು ಥಟ್ಟನೆ ನೆನೆಪಾಯ್ತು ಒಂದು ಎಲೆಗೆ ಮಾಡಿದ್ದನ್ನೆಲ್ಲಾ ಸುರಿದು ರಾಮ ಬಂದು ತಿನ್ನು ಅಂದ. ರಾಮ ಪತ್ನಿ ಸಮೇತ ಬಂದು ಎಲ್ಲವನ್ನೂ ತಿಂದು ನೀರು ಕುಡಿದು ಮಾಯವಾದ. ಈ ಮುಗ್ದ ಭಕ್ತನಿಗೆ ಬಹಳ ಕೋಪ ಬಂತು. ತನಗೆ ತಿನ್ನಲು ಏನೂ ಉಳಿಸದೆ ಇಬ್ಬರೂ ತಿಂದುಬಿಟ್ಟಿದ್ದರು. ಹೊಟ್ಟೆ ತುಂಬಾ ನೀರು ಕುಡಿದು ಪಾತ್ರೆಗಳನ್ನ ತೊಳೆದು ವಾಪಸ್ ಬಂದ. ಗುರುಗಳಿಗೆ ವಿಷಯ ತಿಳಿಸಿದ. ಆದರೆ ನಕ್ಕು ಎಲ್ಲೋ ಇವನಿಗೆ ಅಡುಗೆಯ ಅನುಭವ ವಿಲ್ಲದ ಕಾರಣ ಎಲ್ಲವನ್ನೂ ನದಿಗೆ ಹಾಕಿರಬಹುದೆಂದು ತಿಳಿದರು. ಹದಿನೈದು ದಿನ ಕಳೆದಾಗ ಮತ್ತೆ ಏಕಾದಶಿ ಬಂತು. ಅದೇ ರೀತಿ ದಿನಸಿ ಪದಾರ್ಥ ಕೊಡುವಾಗ ದಯವಿಟ್ಟು ಮೂರು ಜನಕ್ಕೆ ಬೇಕಾಗುವಷ್ಟು ಕೊಡಿ ಎಂದು ಹೇಳಿ ತೆಗೆದುಕೊಂಡ. ಮತ್ತೆ ರಾಮ ಸೀತೆ ಬಂದರೆ ತನ್ನ ಊಟವನ್ನ ಅವರಿಗೆ ಕಾಣದೆ ಇಟ್ಟು ಕೊಂಡು ಉಳಿದದ್ದು ಅಂದು ಮಾಡಿದಂತೆ ಅವರಿಬ್ಬರಿಗೂ ಬಡಿಸುವ ಉಪಾಯ ಅವನದು. ಆದರೆ ಆದದ್ದೇ ಬೇರೆ. ರಾಮ ರಾಮ ರಾಮ ಎಂದು ಕಣ್ಣು ಮುಚ್ಚಿ ಹೇಳುವಾಗ ಏನೋಪಾತ್ರೆ ಶಬ್ದ ವಾಗಿ ಕಣ್ಣು ಬಿಟ್ಟು ನೋಡಿದರೆ ರಾಮನ ಜೊತೆಯಲ್ಲಿ ಲಕ್ಷ್ಮಣ ಪಕ್ಕದಲ್ಲಿ ಸೀತೆ ಕೂತು ಊಟ ಮಾಡುತ್ತಿದ್ದಾರೆ. ಇವನು ಬಚ್ಚಿಟ್ಟಿದ್ದ ಊಟವೂ ಖಾಲಿ. ಮೊದಲೇ ಹಸಿದ ಹೊಟ್ಟೆ ಈಗಂತೂ ಬಹಳ ಕೋಪಬಂತು ಆದರೆ ಎಲ್ಲೋ ಅವರಿಗೂ ಪಾಪ ಹಸಿವಾಗಿರಬಹುದು ಎಂದು ಹಸಿವಿನ ಅನುಭವವಿರುವ ಅವನು ಸುಮ್ಮನಾದ. ಅಲ್ಲೆಲ್ಲೋ ಉಳಿದಿದ್ದ ಸ್ವಲ್ಪ ಬೆಲ್ಲ ತಿಂದು ಹೊಟ್ಟೆ ತುಂಬಾ ನೀರು ಕುಡಿದು ಹೊರಟ. ಇದನ್ನ ಮರೆಯುವುದರ ಒಳಗೆ ಮತ್ತೊಂದು ಏಕಾದಶಿ ಬಂದೇ ಬಿಟ್ಟಾಗ ಮೊದಲಿಗಿಂತಲೂ ಹೆಚ್ಚುಅಡುಗೆ ಮಾಡಿ ಒಂದು ಪಾತ್ರೆಯಲ್ಲಿ ತನಗೆ ಬೇಕಿರುವಷ್ಟು ಒಂದು ದೊಡ್ಡ ಪಾತ್ರೆಯಲ್ಲಿ ಇಟ್ಟು ಅದನ್ನ ಮರಳಿನಲ್ಲಿ ಮುಚ್ಚಿಟ್ಟು ಬಂದ. ಮೂರು ಎಲೆಗಳಿಗೆ ಉಳಿದದ್ದು ಎಲ್ಲಾ ಹಾಕಿ ರಾಮ ರಾಮ ರಾಮ ರಾಮ ಅಂತ ಹೇಳುತ್ತಾ (ಈಗ ಅಂದಿನಂತೆ ಕಣ್ಣುಮುಚ್ಚಲಿಲ್ಲ.) ಯಾರೂ ಬರದೇ ಇದ್ದುದಕ್ಕೆ ಹೆದರಿದ. ಗುರುಗಳು ಹೇಳಿರುವಂತೆ ಅವರು ಸ್ವೀಕರಿಸದೇ ಇವನು ತಿನ್ನುವಂತಿಲ್ಲ. ಮತ್ತೆ ಜೋರಾಗಿ ಕರೆದ ಕಾಣಲಿಲ್ಲ. ತಾನು ಮರಳಿನಲ್ಲಿ ಬಚ್ಚಿಟ್ಟಿದ್ದ ಊಟ ನೆನಪಾಗಿ ಏನಾಗಿದೆಯೋ ನೋಡೋಣವೆಂದು ಅಲ್ಲಿಗೆ ಬಂದರೆ ಹನುಮಂತ ಕೂತು ಊಟ ಮಾಡಿ ನೀರು ಕುಡಿಯುತ್ತಿದ್ದಾನೆ. ಹೆದರಿದರೂ ಏನೂ ಮಾತನಾಡದೆ ನಮಸ್ಕಾರ ಮಾಡಿ ಮತ್ತೆ ವಾಪಸ್ಸು ಬಂದರೆ ಇಲ್ಲಿ ಎಲೆಗಳಲ್ಲಿ ಇದ್ದ ಊಟವೂ ಖಾಲಿಯಾಗಿದೆ. ಈಗಂತೂ ತನಗಾಗಿ ಒಂದು ಸ್ವಲ್ಪವೂ ಉಳಿಸದೇ ತಿಂದಿದ್ದಕ್ಕಾಗಿ ಬಹಳ ನೊಂದು ಅಲ್ಲಿಂದ ಬಂದು ಇದುವರೆಗೂ ನಡೆದ ವಿಷಯ ಗುರುಗಳಿಗೆ ತಿಳಿಸಿದ. ಅವರು ಅಯ್ಯಾ ನಿನ್ನನ್ನು ಅರ್ಥಮಾಡಿಕೊಳ್ಳಲು ಆಗದ ಮೂಢ ನಾನು. ನಿನ್ನ ಹಿಂದೇಯೇ ಬಂದು ಮರದ ಹಿಂದಿನಿಂದ ಎಲ್ಲವನ್ನೂ ನೋಡಿದೆ. ನನಗೆ ಎಲೆಗಳಲ್ಲಿ ಹಾಕಿದ ಪದಾರ್ಥ ಗಳು ಮೇಲಕ್ಕೆ ಹೋಗುತ್ತಿದ್ದುದು ಮಾತ್ರ ಕಾಣಿಸಿತೇ ಹೊರತು ಮತ್ತೇನೂ ಕಾಣಲಿಲ್ಲ. ಆದರೆ ನೀನು ದೇವರೊಂದಿಗೆ ಮಾತನಾಡುತ್ತಿದ್ದುದನ್ನ ಗಮನಿಸಿದ್ದೇನೆ. ಎಂತಹ ಪುಣ್ಯಶಾಲಿ ನೀನು. ಒಂದು ನಿಮಿಷ ಹಾಗೇ ನಿಲ್ಲು ಅಂತ ಹೇಳಿ ಸಾಷ್ಟಾಂಗ ನಮಸ್ಕಾರಮಾಡಿ ಅವನ ಪಾದಗಳನ್ನ ಗಟ್ಟಿಯಾಗಿ ಹಿಡಿದುಕೊಂಡರು. ಅವನಂತೂ ಏನಾಗುತ್ತಿದೆ ಅಂತ ಅರ್ಥ ಮಾಡಿಕೊಳ್ಳಲಾಗದಷ್ಟು ಮುಗ್ಧನಾಗಿ ಕಂಡ.


Rate this content
Log in

Similar kannada story from Classics