ನಾಳೆಯ ಕುರಿತು ಒಂದಷ್ಟು ಕನಸುಗಳು..
ನಾಳೆಯ ಕುರಿತು ಒಂದಷ್ಟು ಕನಸುಗಳು..
ಹಚ್ಚ ಹಸಿರಿನ ಬೆಟ್ಟ ಗುಡ್ಡಗಳ ನಡುವೆ ಒಂದು ಪುಟ್ಟ ಹಳ್ಳಿ. ಅಲ್ಲಿ ಜೀವನದಲ್ಲಿ ಚಿಂತೆನೆ ಇಲ್ಲದ ಹಾಗೆ ಬೆಳೆದ ನನ್ನ ಸ್ನೇಹಿತೆ ಪಲ್ಲವಿ. ತಂದೆ ತಾಯಿಯ ಮುದ್ದಿನ ಮಗಳು. ತುಂಟಿ ಅನ್ನೊ ಪದಕ್ಕೆ ನಂಟು ಕಟ್ಟಿಕೊಂಡು, ಯಾವಾಗಲೂ ನಗು ನಗುತ್ತಾ, ಎಲ್ಲರನ್ನು ನಗಿಸುತ್ತ, ಚುರುಕಾಗಿ ಶಿಕ್ಷಕರ ನೆಚ್ಚಿನ ವಿದ್ಯಾರ್ಥಿಯಾಗಿ ಶಾಲೆಯಲ್ಲಿ ಓದುತ್ತಿದ್ದಳು. ಬಾಲ್ಯವನ್ನು ಊರಲ್ಲೇ ಕಳೆದ ಪಲ್ಲವಿ, ಪದವಿ ಶಿಕ್ಷಣಕ್ಕಾಗಿ ಪಕ್ಕದಲ್ಲೇ ಇದ್ದ ಪಟ್ಟಣದ ಕಾಲೇಜ್ ಗೆ ಸೇರಿಕೊಂಡಳು. ಊರು ಪಕ್ಕದಲ್ಲೆ ಇದ್ದಿದ್ದರಿಂದ ಕಾಲೇಜ್ ಗೆ ಬಸ್ಸಿನಲ್ಲಿ ಹೋಗಿ ಬಂದು ಮಾಡುತ್ತಿದ್ದಳು.
ಮನೆಯ ಬಡತನದ ಅರಿವಿದ್ದ ಪಲ್ಲವಿ, ದುಂದು ವೆಚ್ಚ ಮಾಡುತ್ತಿರಲಿಲ್ಲ. ಕಾಲೇಜ್ ಬಿಟ್ಟರೆ ಮನೆ, ಮನೆ ಬಿಟ್ಟರೆ ಕಾಲೇಜ್ . ಅಪ್ಪ ಅಮ್ಮನ ಜೊತೆ ಇವರೆಡೆ ಅವಳ ಪ್ರಪಂಚ ವಾಗಿತ್ತು. ಚೆನ್ನಾಗಿ ಓದಿ ಒಳ್ಳೆಯ ಕೆಲಸ ಪಡೆದು ತಂದೆ ತಾಯಿಯನ್ನು ಸುಖವಾಗಿ ನೋಡಿಕೊಳ್ಳಬೇಕೆಂಬ, ಸ್ವಂತ ಮನೆ, ನೆಮ್ಮದಿಯ ಜೀವನದ ಕನಸು ಕಂಡಿದ್ದಳು. ಅದಕ್ಕೋಸ್ಕರ ಹಗಲು ರಾತ್ರಿ ಓದುತ್ತಿದ್ದಳು. ಡಿಗ್ರಿ ಕೊನೆಯ ವರ್ಷದಲ್ಲಿ ಇದ್ದ ಪಲ್ಲವಿ ಕಾಲೇಜ್ ಮುಗಿಸಿಕೊಂಡು ಮನೆಗೆ ಬಸ್ಸಿನಲ್ಲಿ ಹೋಗಬೇಕಾದರೆ, ಡ್ರೈವರ್ನ ಅಚಾತುರ್ಯದಿಂದ ಬಸ್ ಆಯ ತಪ್ಪಿ ಪ್ರಪಾತಕ್ಕೆ ಬೀಳುತ್ತದೆ. ಬಸಲ್ಲಿದ್ದ ಎಲ್ಲ ಪ್ರಯಾಣಿಕರ ಜೊತೆ ಪಲ್ಲವಿ ಕೂಡಾ ಬಸ್ಸಿನ ಜೊತೆ ಪ್ರಪಾತಕ್ಕೆ ಬೀಳುತ್ತಾಳೆ.
ಈ ಸುದ್ದಿ ಕೇಳಿ ಆಘಾತಗೊಂಡ ತಂದೆ ತಾಯಿ ಘಟನಾ ಸ್ಥಳಕ್ಕೆ ಬಂದು ನೋಡುತ್ತಾರೆ. ಸೂರ್ಯ ಮುಳುಗುವ ಹಾಗೆ ಬದುಕೆ ಮುಳುಗಿತೇನೋ ಎನ್ನುವಂತೆ ಬೆಟ್ಟದ ಇಳಿಜಾರಿನಲ್ಲಿ ಇಳಿದುಕೊಂಡು ಹೋಗಿ ನೋಡಿದರೆ, ನೋವೇ ಗೊತ್ತಿರದ ಮುದ್ದು ಮಗಳು ರಕ್ತದ ಮಡುವಿನಲ್ಲಿ ಸಂಜೆಯ ಸೂರ್ಯನೆ ನೋವಿನಲ್ಲಿ ಮಲಗಿದ್ದನೇನೋ ಎನ್ನುವಂತೆ ಮಲಗಿದ್ದ ಮಗಳನ್ನು ಕಂಡ ತಂದೆ ತಾಯಿಯ ಹೃದಯ ಒಡೆದು ಹೋದಂತಾಯಿತು. ಅವರ ಮಗಳ ಮೇಲಿನ ಪ್ರೀತಿ, ಮಮಕಾರ ನೋಡಿ, ಕಣ್ಣೀರ ಕೂಗಿಗೆ ಓಗೊಟ್ಟ ಅಲ್ಲಿ ಪ್ರಪಾತಕ್ಕೆ ಬಿದ್ದ ಹಲವು ಪ್ರಯಾಣಿಕರ ಗುಟುಕು ಜೀವ ಬಂದಿತು. ಅದೃಷ್ಟವಶಾತ್ ಅವರ ಜೊತೆ ಪಲ್ಲವಿಯ ಹೃದಯ ಬಡಿತ ಶುರುವಾಯಿತು. ಕೈ ಕಾಲು ಅಲ್ಲಾಡಿಸಲು, ಅಲ್ಲಿರುವ ಎಲ್ಲರಿಗೂ ಅನಿಸಿತು ಸ್ವಲ್ಪ ಜನ ಉಸಿರಡುತ್ತಿದ್ದಾರೆ ಅಂತ. ತಕ್ಷಣ ಆಂಬುಲೆನ್ಸ್ ಮುಖಾಂತರ ಬದುಕಿರುವ ಎಲ್ಲರನ್ನು ಮೊದಲು ಆಸ್ಪತ್ರೆಗೆ ದಾಖಲು ಮಾಡಿ ಅವರ ಮನೆಯವರ ವಿಳಾಸ ಪಡೆದು ಮನೆಯವರಿಗೆ ಸುದ್ದಿ ತಿಳಿಸುತ್ತಾರೆ.
ಇತ್ತ ಕಡೆ ಪಲ್ಲವಿಯ ಗಂಭೀರ ಪರಿಸ್ಥಿತಿ ಅವಳ ತಂದೆ ತಾಯಿಗೆ ಅಂತಕ ಉಂಟು ಮಾಡುತ್ತೆ. ತಲೆಗೆ ಬಲವಾದ ಪೆಟ್ಟು ಬಿದ್ದ ಕಾರಣ ಬದುಕುವ ಭರವಸೆ ಕಡಿಮೆಯಿದ್ದರು, ಆಪರೇಷನ್ ಮಾಡಿ ಬದುಕಿಸಿ ಕೊಟ್ಟ ವೈದ್ಯರು ತಂದೆ ತಾಯಿಯ ಪಾಲಿಗೆ ದೇವರಾದರು. ಹೀಗೆ ಕೆಲ ದಿನಗಳ ಆಸ್ಪತ್ರೆಯ ವಾಸ ಮುಗಿಸಿ ಡಿಶ್ಚಾರ್ಜ್ ಆಗಿ ಮನೆಗೆ ಬಂದಳು. ಆದರೆ ತಂದೆ ತಾಯಿಯ ಚಿಂತೆ ದೂರವಾಗಿರಲಿಲ್ಲ. ಕಾರಣ ವೈದ್ಯರು ಹೇಳಿದ್ದ ಆ ಒಂದು ಸತ್ಯ. ತಲೆಯ ನರಕ್ಕೆ ಬಲವಾದ ಪೆಟ್ಟು ಬಿದ್ದ ಕಾರಣ ಮಗಳು ಹೆಚ್ಚು ದಿನ ಬದುಕಲ್ಲ ಅಂತ. ತಂದೆ ತಾಯಿಯನ್ನು ದಿನಾಲೂ ಕೊಲ್ಲುತ್ತಿತ್ತು. ಇದನ್ನೆಲ್ಲ ತಿಳಿದು ಕೊಂಡ ಪಲ್ಲವಿಯ ಮನ ಯಾವ ರೀತಿ ವರ್ತಿಸುತ್ತದೆ.
ಬಡತನದಲ್ಲೇ ಹುಟ್ಟಿ ಬೆಳೆದ ಪಲ್ಲವಿಯ ನಾಳೆಯ ಕುರಿತ ಕೆಲವೊಂದು ಕನಸುಗಳು ಕನಸಾಗೆ ಉಳಿದವಾ?...
ಹೆಚ್ಚು ದಿನ ಬದುಕಲ್ಲ ಅಂತ ಗೊತ್ತಿದ್ದ ಪಲ್ಲವಿಯ ನಾಳೆಯ ಕನಸಿನ ಛಲಕ್ಕೆ ಬದುಕುತ್ತಾಳೆ ಎಂಬ ಬಲ ವಿದೆಯಾ...?
ಬಸ್ಸಿನಲ್ಲಿ ಪ್ರಾಣ ಕಳೆದುಕೊಂಡ ಎಲ್ಲ ಪ್ರಯಾಣಿಕರ ನಾಳಿನ ಎಲ್ಲ ಕನಸು ಬಸ್ಸಿನ ಜೊತೆ ಪ್ರಪಾತಕ್ಕಿಳಿಯಿತು...ಆದರೆ ಪಲ್ಲವಿಯ ಕನಸು...?