ಭೂಮಿ ತಾಯಿ
ಭೂಮಿ ತಾಯಿ
ರೈತ ಕುಟುಂಬದ ಹಿನ್ನೆಲೆ ಯಿಂದ ಬಂದಿದ್ದ ದಿನೇಶ್ , ಬಿಎಸ್ಸಿ.(ಎಜಿ)ಯನ್ನೇ ಐಚ್ಛಿಕ ವಿಷಯವಾಗಿ ಆಯ್ಕೆ ಮಾಡಿಕೊಂಡಾಗ ,ಅವನ ಅಪ್ಪ ಅಮ್ಮ ಇಬ್ಬರೂ ಮಗನ ಆಯ್ಕೆಯನ್ನು ವಿರೋಧಿಸಿದರು. ಹೊಲ ಗದ್ದೆ ವ್ಯವಸಾಯ ಬೆಳೆ ಹಾನಿ ಅಂತೆಲ್ಲಾ ತಾವು ಕಷ್ಟ ಪಟ್ಟಿದ್ದು ಸಾಕು ತಮ್ಮ ಮಗ ಇಂಜಿನೀಯರಿಂಗ್ ಸೇರಿದ್ದರೆ ಕೈ ತುಂಬಾ ಹಣ ಗಳಿಕೆಯ ಉದ್ಯೋಗ ದೊರೆಯುತ್ತಿತ್ತು ಅಂತ ಅವರು ತುಂಬಾ ಆಸೆ ಇಟ್ಟುಕೊಂಡಿದ್ದರು. ಆದರೆ ದಿನೇಶ್ ಗೆ ತಮ್ಮ ಮನೆತನಕ್ಕೆ ಒಲಿದು ಬಂದಿರುವ ಭೂಮಿ ತಾಯಿಯನ್ನು ಚೆನ್ನಾಗಿ ಅಭಿವೃದ್ಧಿ ಪಡಿಸಬೇಕೆಂಬ ಆಸೆ. ಅವನು ಯಾರ ಮಾತೂ ಕೇಳದೆ, ಕೃಷಿ ಯ ಅಧ್ಯಯನ ಮಾಡಲು ಮುಂದಾಗಿ, ಅದರಲ್ಲೇ ಸ್ನಾತಕೋತ್ತರ ಪದವಿಯನ್ನೂ ಗಳಿಸಿ, ತನ್ನ ಹಳ್ಳಿಗೆ ಮರಳಿದ.
ಅವನು ಹಳ್ಳಿಗೆ ಮರಳುವ ವೇಳೆಗೆ ಅವನ ತಂದೆಯ ವೃದ್ಧಾಪ್ಯದಿಂದ ಕೆಲವು ಎಕರೆ ಭೂಮಿ ಶುಷ್ಕವಾಗಿ ಬರಡಾಗಿ ಹೋಗಿತ್ತು. ಅದನ್ನು ನೋಡಿದ ದಿನೇಶ್, ಆ ಬರಡು ಭೂಮಿಯನ್ನು ವೈಜ್ಞಾನಿಕ ಸಾಧನಗಳಿಂದ ಹದವಾಗಿಸಿ ಒಳ್ಳೆಯ ಬೀಜಗಳನ್ನು ಬಿತ್ತಿ, ಉತ್ತಮ ಗುಣಮಟ್ಟದ ಗೊಬ್ಬರ ಗಳನ್ನು ಹಾಕಿ, ಚೆನ್ನಾಗಿ ವ್ಯವಸಾಯ ಮಾಡಿದ. ಮೊದಮೊದಲು ಅತ್ಯಂತ ಶ್ರಮವೆನಿಸಿದರೂ, ತನ್ನ ಪರಿಶ್ರಮದಿಂದ ಉತ್ತಮ ಇಳುವರಿ ಪಡೆದು,ಬರಡು ಭೂಮಿಯನ್ನೂ ಸಹ ಹಸಿರಿನಿಂದ ನಳ ನಳಿಸುವಂತೆ ಮಾಡಿ, ಒಳ್ಳೆಯ ಲಾಭವನ್ನೂ ಪಡೆದ. ದಿನೇಶ್ ನ ಪರಿಶ್ರಮದಿಂದ ಬರಡು ಭೂಮಿಯೂ ಹಸಿರಿನಿಂದ ಕಂಗೊಳಿಸುವಂತಾಯಿತು.
ಮಗನ ಭೂತಾಯಿಯ ಸೇವೆಯನ್ನು ಕಂಡು, ದಿನೇಶ್ ನ ತಂದೆ ತಾಯಿಯರ ಮನಸ್ಸು ಹರ್ಷದಿಂದ ತುಂಬಿ ಹೋಯಿತು.
