ಬೆಂಕಿಯಲ್ಲಿ ಅರಳಿದ ಹೂವು. ಭಾಗ 2.
ಬೆಂಕಿಯಲ್ಲಿ ಅರಳಿದ ಹೂವು. ಭಾಗ 2.
ಸಾವಿತ್ರಮ್ಮ ಜನಿಸಿದ ನಂತರ ರಂಗಪ್ಪ ಹಾಗೂ ಶಾಂತಮ್ಮನ ಮನೆಯ ಆರ್ಥಿಕ ಪರಿಸ್ಥಿತಿ ಸುಧಾರಿಸಿದಾಗ ಎಲ್ಲರೂ ಆಕೆಯ ಕಾಲ್ಗುಣದ ಬಗ್ಗೆ ಹೇಳಿದರು. ಅದು ನಿಜವೋ ಆಗಿತ್ತು. ಅಲ್ಪ ಸ್ವಲ್ಪ ಆರ್ಥಿಕ ಸ್ಥಿತಿ ಸುಧಾರಿಸಿ ತಕ್ಕಮಟ್ಟಿಗೆ ಸ್ಥಿತಿವಂತರಾದರು. ಕಾಲ್ಗುಣದ ಜೊತೆಗೆ ರಂಗಪ್ಪನ ದುಡಿಮೆಯ ಬಲದಿಂದ ಎಲ್ಲವೂ ಒಳ್ಳೆಯದಾಗಿತ್ತು.
ಹೀಗಿದ್ದಾಗ ರಂಗಪ್ಪ ಹಾಗೂ ಶಾಂತಮ್ಮನ ಮೊದಲ ಮಗಳು ಮೈನೆರೆದು ದೊಡ್ಡವಳಾದಳು. ಆಕೆಯ ಹಿಂದೆಯೇ ಹಿಂದಿನ ಎರಡು ಮಕ್ಕಳೂ ಮೈನೆರೆಯುವ ಹಾಗೆ ಬೆಳೆದಿದ್ದರು. ಎಲ್ಲ ಮಕ್ಕಳೂ ಹೆಚ್ಚು ಕಮ್ಮಿ ಒಂದೂವರೆ ವರ್ಷದ ಅಂತರವಷ್ಟೆ. ಹೀಗಾಗಿ ರಂಗಪ್ಪ ಶಾಂತಮ್ಮನೊಂದಿಗೆ ಹಿರಿಯ ಮಗಳಾದ ಕಮಲಾಳಿಗೆ ಮದುವೆ ಮಾಡುವ ಕುರಿತು ಹೇಳಿದಾಗ ಶಾಂತಮ್ಮ ಮಗಳು ಚಿಕ್ಕವಳೆಂದೂ, ಇದೀಗ ತಾನೇ ಮೈನೆರೆತು ದೊಡ್ಡವಳಾಗಿದ್ದಾಳೆ, ಆದ್ದರಿಂದ ಒಂದು ವರುಷ ಬಿಟ್ಟು ನೋಡೋಣವೇ ಎಂದಳು.
ಆಗ ರಂಗಪ್ಪ , ನೋಡೇ ಒಬ್ಬಿಬ್ಬರು ಮಕ್ಕಳು ಇದ್ದಿದ್ದರೆ ನಾವು ಹಾಗೆ ಯೋಚಿಸಬಹುದಿತ್ತು , ಆದರೆ ನಮಗಿರುವುದು ಬರೋಬ್ಬರಿ ಹತ್ತು ಮಕ್ಕಳು. ಆದ್ದರಿಂದ ಸುಮ್ಮನೆ ಒಬ್ಬಬ್ಬರದಾಗಿ ಮದುವೆ ಮಾಡಿ ಮುಗಿಸೋಣ ಕಣೆ, ಹಾಗಂತ ನಾನು ಮಕ್ಕಳು ಭಾರವಾಗುತ್ತಾರೆ ಎನ್ನುವ ಅರ್ಥದಲ್ಲಿ ಹೇಳುತ್ತಿದ್ದೇನೆ ಎಂದು ತಿಳಿಯಬೇಡ, ಒಳ್ಳೆಯ ಸಂಬಂಧ ಬಂದರೆ ಹೆಜ್ಜೆ ಮುಂದಿಡೋಣ ಎಂದು ಹೇಳುತ್ತಿದ್ದೇನೆ ಅಷ್ಟೇ ಎಂದನು.
ಆಗ ಶಾಂತಮ್ಮನಿಗೆ ತನ್ನ ಗಂಡ ಹೇಳುತ್ತಿರುವುದು ಸರಿಯಾಗಿದೆ ಎಂದೆನಿಸಿ , ಹಿರಿಯ ಮಗಳ ಮದುವೆ ಮಾಡುವ ಕುರಿತು ಸಮ್ಮತಿ ಇತ್ತಳು. ಕಮಲಕ್ಕನಿಗೆ ಮದುವೆ ಎಂದಾಗ ಎಲ್ಲರೂ ಖುಷಿಯಿಂದ ಕುಣಿದಾಡಿದರು. ಸಾವಿತ್ರಮ್ಮನಿಗಿಂತ ಚಿಕ್ಕವರು ಗಂಡು ಮಕ್ಕಳು ಮನೆಯಲ್ಲೊಂದು ಖುಷಿಯ ಕಾರ್ಯಕ್ರಮ ಎಂದು ಕುಣಿದಾಡಿದರು. ಹೀಗೆ ಮಕ್ಕಳ ಸಂಭ್ರಮ ಕಂಡ ರಂಗಪ್ಪ ಹೆಂಡತಿಗೆ , ನೋಡೇ ಮಕ್ಕಳ ಸಂಭ್ರಮ, ಇನ್ನೂ ಮದುವೆ ಗೊತ್ತಾಗಿಲ್ಲ ಆದರೂ ಕುಣಿತಿದ್ದಾರೆ, ಇದಕ್ಕೆ ಹೇಳೋದು ಮಕ್ಕಳಲ್ಲಿ ಕಪಟ ಇರುವುದಿಲ್ಲ ಎಂದು ಅಲ್ವಾ ?
ಶಾಂತಮ್ಮ: ಹೌದು ರೀ, ಮಕ್ಕಳೆಂದರೆ ಹಾಗೆ ಅಲ್ವಾ?
ರಂಗಪ್ಪ: ಕಮಲಾಳನ್ನು ಕೇಳು ಮದುವೆಗೆ ಒಪ್ಪಿಗೆ ಇದೆಯಾ ಅಂತ.
ಶಾಂತಮ್ಮ: ಹಾ ಕೇಳಿದಿನಿ ತಗೊರಿ, ಅವಳು ಯಾವಾಗಲಾದ್ರೂ ನಿಮ್ಮ ಮಾತಿಗೆ ಇಲ್ಲ ಅಂದಿದಾಳಾ?
ರಂಗಪ್ಪ: ಅಂದ ಹಾಗೆ ಕಮಲಾಳನ್ನು ನಮ್ಮ ಅಕ್ಕನ ಮಗನಿಗೆ ಕೊಟ್ಟರೆ ಹೇಗಾಗುತ್ತೆ? ಇಬ್ಬರೇ ಅಣ್ಣ ತಮ್ಮ ಇದಾರೆ. ಗೊತ್ತಿರುವ ಹುಡುಗ ಬೇರೆ, ಏನಂತೀಯಾ? ಒಂದು ಮೂರು ಎಕರೆ ನೀರಾವರಿ ಜಮೀನು ಇದೆ. ಎರಡು ಮನೆ ಇವೆ. ಅವರ ಕೆಲಸ ಅವರು ಮಾಡಿಕೊಂಡು ಚೆನ್ನಾಗಿದ್ದಾರೆ.
ಶಾಂತಮ್ಮ: ಅವರೆಲ್ಲ ಒಪ್ಪಿಗೆ ಕೊಟ್ಟರೆ ನಂದೇನ್ರಿ ತಕರಾರು?
ರಂಗಪ್ಪ: ಅಲ್ಲಾ ಕಣೇ, ನೀನು ಒಪ್ಪಬೇಕು ಜೊತೆಗೆ ಕಮಲಾನೂ ಒಪ್ಪಬೇಕು. ಅವರದು ಆಸ್ತಿ ಕೂಡ ಹೆಚ್ಚಿಲ್ಲ, ಅದಕ್ಕೆ ನೀವು ಸಂತೋಷದಿಂದ ಒಪ್ಪಿದರೆ ನಾನು ಅವರನ್ನು ನಮ್ಮ ಮನೆಗೆ ಹೆಣ್ಣು ನೋಡುವ ಶಾಸ್ತ್ರಕ್ಕೆ ಬರಲು ಹೇಳುವೆ. ಇಲ್ಲವಾದರೆ ಬೇಡವೇ ಬೇಡ ಎಂದನು.
ಶಾಂತಮ್ಮ: ಈಗಿನ ಕಾಲದಲ್ಲಿ ಗೊತ್ತಿರುವ ಕಡೆಯೇ ಮಕ್ಕಳನ್ನು ಕೊಟ್ಟು ತೆಗೆದುಕೊಂಡರೆ ಒಳ್ಳೆಯದು ರಿ. ನನಗಂತೂ ಕಮಲಾಳನ್ನು ನಾದಿನಿ ಮಗನೊಡನೆ ಮದುವೆ ಮಾಡಿ ಕೊಡಲು ಯಾವುದೇ ತಕರಾರಿಲ್ಲ.