ಬಡತನ
ಬಡತನ
ನಾನ್ ಸ್ಟಾಪ್ ನವಂಬರ್ ಎಡಿಶೆನ್. ಆರಂಭಿಕ ಹಂತ.
ಬಡತನ
ಸಂಗೀತ, ಗೆಳತಿಯ ಮದುವೆಗೆ ಬಂದಿದ್ದಳು . ಅಲ್ಲಿಯ ವೈಭವ , ಸಂಭ್ರಮ ಕಂಡು ಅವಳು ಮನದಲ್ಲಿಯೇ ತಾನೂ ಸಹ ಇಂತಹ ಶ್ರೀಮಂತರ ಮನೆಯ ಮಗಳಾಗಿ ಹುಟ್ಟಬಾರದಾ ಎಂದು ನೊಂದಿದ್ದಳು. ಆದರೆ ಯಾರಿಗೂ ತೋರಿಸಿಕೊಳ್ಳದೆ ತನ್ನ ಗೆಳತಿ ಐಶ್ವರ್ಯಳ ಮದುವೆಯಲ್ಲಿ ಓಡಾಡುತ್ತಿದ್ದಳು.
ಐಶ್ವರ್ಯ , ಹೆಸರಿಗೆ ತಕ್ಕಂತೆ ಕೋಟ್ಯಾಧಿಪತಿಯ ಮಗಳು. ದುಡ್ಡಿಗೆ ಬರವಿಲ್ಲ , ನಯ ವಿನಯಕ್ಕೆ ಕೊರತೆಯಿಲ್ಲ , ಸಹಾಯ ಮಾಡುವ ಮನಸ್ಸು ಕೋಟಿ ಆಸ್ತಿಗಿಂತಲೂ ಹೆಚ್ಚು ಇದ್ದಂತಹ ಐಶ್ವರ್ಯ ಸಂಗೀತಳ ಮುದ್ದು ಮುಖ ಮತ್ತು ಮುಗ್ಧ ಗುಣವನ್ನು ನೋಡಿ ಇಷ್ಟ ಪಟ್ಟು ಆಕೆಯ ಸ್ನೇಹ ಮಾಡಿದ್ದಳು.
ಅಮ್ಮ ದುಡಿದು ತರುವ ದಿನಗೂಲಿಯ ಆ ನೂರು , ಇನ್ನೂರು ರೂಪಾಯಿ ನೋಟು ನೋಡಿ , ಸಾವಿರದ ನೋಟು ನೋಡಿರದ ಬಡ ಹುಡುಗಿ ಸಂಗೀತಾ. ದಿನ ಬೆಳಗಾದರೆ ಅದೇ ಗಂಜಿ ಊಟ , ನಾಳೆಯ ಊಟಕ್ಕಾಗಿ ಚಿಂತಿಸುವುದು ಈ ರೀತಿಯ ಪರಿಸ್ಥಿತಿಯಲ್ಲಿ ಓದು ಸಂಗೀತಳ ಕೈ ಹಿಡಿದಿತ್ತು. ಲಕ್ಷ್ಮಿ ಇಲ್ಲದಿದ್ದರೇನು, ಸರಸ್ವತಿ ಮಾತೆ ಆಕೆಗೆ ಆಶೀರ್ವಾದ ಮಾಡಿದ್ದಳು. ಕಷ್ಟ ಪಟ್ಟು ಅವರಿವರ ಸಹಾಯದಿಂದ ಹತ್ತನೇ ತರಗತಿ ಮುಗಿಸಿ ಪಿ. ಯು. ಸಿ. ಗೆ ಅಡ್ಮಿಶೇನ್ ಮಾಡಿಸಲು ತುಂಬಾ ಕಷ್ಟ ಪಟ್ಟಿದ್ದಳು. ಆದರೆ , ಹತ್ತನೇ ತರಗತಿಯನ್ನು ತಾಲ್ಲೂಕಿಗೆ ಪ್ರಥಮ ಸ್ಥಾನದಲ್ಲಿ ತೇರ್ಗಡೆ ಹೊಂದಿದ್ದಳು. ಅದರಿಂದ ಆಕೆಗೆ ನಗರದ ಪ್ರತಿಷ್ಠಿತ ಕಾಲೇಜಲ್ಲಿ ಫ್ರೀ ಆಗಿ ಸೀಟು ಸಿಕ್ಕು , ಮುಂದಿನ ವ್ಯಾಸಂಗ ಮುಂದುವರೆಸಿದ್ದಳು. ಅಲ್ಲಿ ಅವಳಿಗೆ ಕೋಟ್ಯಾಧಿಪತಿಯ ಮಗಳು ಐಶ್ವರ್ಯ ಸ್ನೇಹಿತೆಯಾಗಿ ಸಿಕ್ಕಿದ್ದಳು. ಐಶ್ವರ್ಯ ,ಸಂಗೀತಳ ಚಿಕ್ಕ ಪುಟ್ಟ ಹಣಕಾಸಿನ ನೆರವು ಮಾಡುತ್ತಿದ್ದಳು. ಅವಳ ಮುಂದಿನ ಓದಿಗೆ ತನ್ನಪ್ಪನ ಜೊತೆ ಮಾತಾಡಿ ಸಹಾಯ ಮಾಡುವುದಾಗಿ ಹೇಳಿದ್ದಳು. ಹೀಗೆ ಆಗುವಷ್ಟರಲ್ಲಿ ಎರಡು ವರ್ಷದ ಪಿ. ಯು. ಸಿ ಮುಗಿದಿತ್ತು. ಅಲ್ಲಿಯೂ ಸಂಗೀತ ಪ್ರಥಮ ಸ್ಥಾನದಲ್ಲೇ ಪಾಸಾಗಿದ್ದಳು.
ಅಷ್ಟರಲ್ಲಾಗಲೇ ಐಶ್ವರ್ಯಳ ಅಪ್ಪ ತನ್ನ ಬ್ಯುಸಿನೆಸ್ ಪಾರ್ಟನರ್ ಮಗನೊಂದಿಗೆ ಆಕೆಯ ಮದುವೆಯ ತಯಾರಿ ಮಾಡಿದ್ದರು. ಐಶ್ವರ್ಯ ತನ್ನ ಗೆಳತಿಯನ್ನು ತಾನೇ ಆಕೆಯ ಮನೆಗೆ ಬಂದು ಒಂದುವಾರ ಮುಂಚಿತವಾಗಿಯೇ ತನ್ನ ಮದುವೆಗೆ ಕರೆದುಕೊಂಡು ಹೋಗಿದ್ದಳು. ಆಕೆಗೆ ಒಡವೆ, ಬಟ್ಟೆ, ಎಲ್ಲವನ್ನು ಕೊಡಿಸಿದ್ದಳು.
ಸಂಗೀತಾ ಇರುವ ರೀತಿಯನ್ನು ನೋಡಿದ ಐಶ್ವರ್ಯಳ ಅಪ್ಪ ಆಕೆಯ ಸಂಸ್ಕಾರ , ರೀತಿ ನೀತಿಗಳನ್ನು ಕಂಡು ಬಹಳ ಸಂತೋಷಗೊಂಡಿದ್ದರು. ಐಶ್ವರ್ಯಳ ಅಣ್ಣ ತನಗೆ ಗೊತ್ತಿಲ್ಲದಂತೆ ಆಕೆಯನ್ನು ಪ್ರೀತಿ ಮಾಡಲು ಶುರು ಮಾಡಿದ್ದನು. ಅಷ್ಟೊಂದು ಅಂದಚೆಂದ , ವಿದ್ಯಾಬುದ್ಧಿ , ನಯವಿನಯ ಎಲ್ಲವೂ ಆಕೆಯಲ್ಲಿ ಇತ್ತು . ಆದರೆ ಹಣವೊಂದು ಮಾತ್ರ ಇರಲಿಲ್ಲ. ಅಪ್ಪ ಸಹ ಇರಲಿಲ್ಲ. ತಾಯಿ ಮಗಳು ಬಡತನದಲ್ಲಿ ಇರುತ್ತಿದ್ದರೂ, ಮರ್ಯಾದೆಯುತರಾಗಿ ಬದುಕುತ್ತಿದ್ದರು.
ಹೀಗೆ ಒಂದು ವಾರ ಐಶ್ವರ್ಯಳ ಮನೆಯಲ್ಲಿ ಇದ್ದು ಎಲ್ಲರ ಮನಸ್ಸು ಕದ್ದಿದ್ದಳು ಈ ಸಂಗೀತಾ. ಐಶ್ವರ್ಯಳ ಮದುವೆಯಲ್ಲಿ ತುಂಬಾ ಜವಾಬ್ದಾರಿಯಿಂದ , ಜಾಗರೂಕತೆಯಿಂದ ಆಕೆಯೊಂದಿಗೆ ಓಡಾಡಿ ಮದುವೆ ಮುಗಿದ ಮೇಲೆ ಎಲ್ಲರಿಂದ ಸಂತೋಷದಿಂದ ಬಿಳ್ಕೊಟ್ಟು ತನ್ನ ಮನೆಗೆ ನಡೆದಿದ್ದಳು.
ಒಂದು ತಿಂಗಳು ಕಳೆದ ಮೇಲೆ ಸಂಗೀತಳಿಗೆ ಒಂದು ದಿನ ಆಶ್ಚರ್ಯಕರ ಸಂಗತಿಯೊಂದು ಮನೆ ಮುಂದೆ ಕಾದಿತ್ತು. ಅಮ್ಮನೊಂದಿಗೆ ಕೂಲಿ ಕೆಲಸ ಮುಗಿಸಿಕೊಂಡು ಬಂದು ತಮ್ಮ ಮನೆಯ ಮುಂದೆ ಬಂದು ನಿಂತಾಗ ತಾಯಿ ಮಗಳಿಗೆ ತಮ್ಮ ಕಣ್ಣು ನೋಡುತ್ತಿರುವುದು ನಿಜವೋ , ಸುಳ್ಳೋ , ಭ್ರಮೆಯೊ ಏನೊಂದು ತಿಳಿಯದೆ ನಿಂತೆ ಬಿಟ್ಟರು. ಆಗ ಐಶ್ವರ್ಯ ಬಂದವಳೇ , " ಹಲೋ ಮೇಡಂ , ನಾನು ಐಶು ಬಂದಿದೀನಿ, ಜೊತೆಗೆ ಅಪ್ಪ , ಅಮ್ಮ , ಅಣ್ಣ ಎಲ್ಲರೂ ಬಂದಿದೀವಿ, ಏನೂ ಅನ್ನಸ್ತಿಲ್ವಾ ನಿನಗೆ , ನಿನಗೊಂದು ಸಿಹಿ ಸುದ್ದಿ ಇದೆ. ಬನ್ನಿ ಮೇಡಂ, ಬಾಗಿಲು ತೆಗಿರಿ " ಎಂದಿದ್ದನ್ನು ಕೇಳಿ ಸಂಗೀತ ಮತ್ತು ಅವಳ ತಾಯಿ ಓಡಿ ಹೋಗಿ , ಬಾಗಿಲು ತೆಗೆದು ಒಳ ಕರೆದರು. ಚಾಪೆ ಹಾಕಿ ಕುಡಿಯಲು ನೀರು ಕೊಟ್ಟು ಕೈ ಕೈ ಹಿಸುಕಿಕೊಳ್ಳುತ್ತ ನಿಂತರು. ಆಗ ಐಶ್ವರ್ಯಳ ಅಮ್ಮ, ಸಂಗೀತ ಮತ್ತು ಅವಳ ತಾಯಿಯನ್ನು ಹತ್ತಿರ ಕರೆದು ಕೂರಿಸಿಕೊಂಡು ಮಾತಾಡಿಸಿದರು. ಜೊತೆಗೆ ತಾವು ಸಂಗೀತಳನ್ನು ತಮ್ಮ ಮಗನಿಗೆ ಹೆಣ್ಣು ಕೇಳಲು ಬಂದಿರುವುದಾಗಿ ಹೇಳಿದರು. ಸಂಗೀತಳ ತಾಯಿ ಬೆಚ್ಚಿಬಿದ್ದರು. ಸ್ವಲ್ಪ ಸುಧಾರಿಸಿಕೊಂಡು ತಮ್ಮ ನಿಜ ಪರಿಸ್ಥಿತಿಯ ಅನಾವರಣ ಮಾಡಿದರು. ಆದರೆ ಐಶ್ವರ್ಯಳ ಅಪ್ಪ , ನೋಡಮ್ಮ ನಮ್ಮ ಮನೆಯಲ್ಲಿ ಲಕ್ಷ್ಮಿ ತುಂಬಿತುಳುಕುತ್ತಿದೆ. ನಮಗೆ ನಿಮ್ಮ ಮಗಳು ಸಂಗೀತಳನ್ನು ಕಳುಹಿಸಿಕೊಟ್ಟರೆ ಸರಸ್ವತಿಮಾತೆಯೂ ನೆಲೆ ನಿಲ್ಲುತ್ತಾಳೆ ಅಂತ ಹೇಳುತ್ತಾ ಹೂವು ಹಣ್ಣು ಸೀರೆ ಕೊಟ್ಟು ಮತ್ತೆ ಬರುವುದಾಗಿ ಹೇಳಿ ಹೋದರು.
ತನ್ನ ಬಾಳಲ್ಲಿ ಕೇವಲ ಬಡತನದ ನೋವನ್ನೇ ಕಂಡಂತಹ ತಾಯಿ ಮಗಳಿಬ್ಬರು ತಮ್ಮ ಬದುಕು ನಲಿವಿನೆಡೆಗೆ ಸಾಗುತ್ತಿರುವುದಕ್ಕೆ ತುಂಬಾ ಖುಷಿ ಪಟ್ಟರು.