ಅಪ್ಪ ಮಗ
ಅಪ್ಪ ಮಗ
ಕಾಲೇಜಿನ ಪರೀಕ್ಷೆ ಶುಲ್ಕಕ್ಕಾಗಿ ಮಗನ ಕೈಗೆ ಕೊಟ್ಟಿದ್ದ ಎರಡು ಸಾವಿರ ರೂಪಾಯಿಯನ್ನು ಮಗ ದಾರಿಯಲ್ಲಿ ಬೀಳಿಸಿ ಕೊಂಡು ಬಂದು, ಅಪ್ಪ ನ ಎದುರು ಹೆದರುತ್ತಾ ನಿಂತು,ವಿಷಯ ತಿಳಿಸಿದಾಗ, ಅಪ್ಪನಿಗೆ ನಖಶಿಖಾಂತ ಕೋಪ ಬಂತು. ಮಗನ ವಿದ್ಯಾಭ್ಯಾಸಕ್ಕಾಗಿ ಕಷ್ಟಪಟ್ಟು ಗಳಿಸಿದ್ದ ಹಣ ಕಳೆದು ಹೋದಾಗ, ಮಧ್ಯಮ ವರ್ಗದ ತಂದೆಗೆ ಮಗನ ಮೇಲೆ ಕೋಪ ಬರುವುದು ಸಹಜ. ಮಗನಿಗೆ ಎರಡು ಥಳಿಸಿ ತನ್ನ ಕೋಪವನ್ನು ತೀರಿಸಿಕೊಂಡ ಅಪ್ಪ, ಮಗನನ್ನು ಮಾತನಾಡಿಸದೆ ದುರದುರನೆ ತನ್ನ ರೂಮಿಗೆ ನಡೆದ. ಅಪ್ಪನ ಕೋಪದಿಂದ ತುಂಬಾ ಅನುಮಾನಗೊಂಡ ವಯಸ್ಸಿಗೆ ಬಂದ ಮಗ , ಉಪವಾಸ ಸತ್ಯಾಗ್ರಹ ಶುರು ಮಾಡಿದ.
ಒಂದು ದಿನ ಮಗ ಊಟ ಮಾಡದಿದ್ದಾಗ, ಯಾವ ರೀತಿಯ ಪ್ರತಿಕ್ರಿಯೆಯನ್ನೂ ತೋರಿಸದ ಅಪ್ಪ, ಮಗ ಮರುದಿನವೂ ಊಟ ತಿಂಡಿ ಮಾಡದಿದ್ದಾಗ, ಅವನ ಕರುಳು ಚುರ್ ಅಂದರೂ ತನ್ನ ಪಟ್ಟು ಬಿಡಲು ಅವನ ಸ್ವಾಭಿಮಾನ ಅಡ್ಡ ಬಂತು. ಆದರೆ ಅಂದು ಅವನ ಗಂಟಲಲ್ಲಿ ಅನ್ನ ಇಳಿಯಲಿಲ್ಲ. ಕಡೆಗೆ ತಾನೂ ಉಪವಾಸ ಕುಳಿತ. ಅಪ್ಪ ಮಗನ ಮಧ್ಯೆ ಸಿಕ್ಕಿ ಹಾಕಿಕೊಂಡ ಅಮ್ಮ , ಇಬ್ಬರಿಗೂ ರಾಜಿ ಮಾಡಿಸಿ, ಅವರಿಬ್ಬರ ಉಪವಾಸ ಸತ್ಯಾಗ್ರಹವನ್ನು ಅಂತ್ಯ ಗೊಳಿಸಿದಳು.
ಮಾರನೆಯ ದಿನ ಬೆಳಗ್ಗೆ. ಅಪ್ಪ ತನ್ನ ಮಗನನ್ನು ಕರೆದು, ಅವನ ಕೈಯಲ್ಲಿ ಮತ್ತೆ ಎರಡು ಸಾವಿರ ಕೊಟ್ಟು, ಜೋಪಾನವಾಗಿ ಕಾಲೇಜಿಗೆ ಹೋಗಿ, ಪರೀಕ್ಷಾ ಶುಲ್ಕ ಕಟ್ಟುವಂತೆ ಹೇಳಿದಾಗ, ಅಪ್ಪನ ಕಠಿಣ ವರ್ತನೆಯ ಹಿಂದೆ ಇರುವ ವಾತ್ಸಲ್ಯವನ್ನು ಅರಿತು,ಮಗ ಅವನ ಕಾಲು ಮುಟ್ಟಿ ನಮಸ್ಕರಿಸಿ ಕ್ಷಮೆ ಕೇಳಿದಾಗ, ಅಪ್ಪ ಮಗನ ಪ್ರೀತಿ ವಾತ್ಸಲ್ಯ ವನ್ನು ದೂರದಿಂದ ನೋಡುತ್ತಿದ್ದ ಅಮ್ಮನ ಕಣ್ಣು ಗಳಿಂದ
ಆನಂದಾಶ್ರುಗಳು ಉದುರುತ್ತಿತ್ತು.
ಮಗನಿಗೆ ಅಪ್ಪ ಎಂದರೆ "ವಜ್ರಾದಪಿ ಕಠೋರಾಣಿ ಮೃದೂನಿ ಕುಸುಮಾದಪಿ ", ಎಂಬ ಅರಿವಾಯಿತು.