ಆಮಂತ್ರಣ ಪತ್ರಿಕೆ
ಆಮಂತ್ರಣ ಪತ್ರಿಕೆ
ಮಗಳ ಮದುವೆಯ ಆಮಂತ್ರಣ ಪತ್ರಿಕೆಯನ್ನು ವಿತರಿಸಬೇಕಾಗಿರುವವರ ಹೆಸರುಗಳ ಪಟ್ಟಿ ಬರೆಯುತ್ತಿದ್ದ ಲೋಕೇಶ್ ಗೆ ಕಡೆಯಲ್ಲಿ ಒಂದು ಹೆಸರು ನೆನಪಾದಾಗ ದ್ವಂದ್ವ ಕಾಡಿತು. ಯಾವುದೋ ಕಾರಣದ ಮನಸ್ತಾಪದಿಂದ ಈಗ ಬಹಳ ವರ್ಷಗಳಿಂದ ದೂರವಾಗಿದ್ದ ತನ್ನ ಆಪ್ತ ಗೆಳೆಯ ನಾಗೇಶನಿಗೆ ಆಮಂತ್ರಣ ಪತ್ರಿಕೆ ಕಳುಹಿಸದೇ ಇರಲು ಅವನ ಮನಸ್ಸು ಕೇಳಲಿಲ್ಲ. ಒಂದು ಕಾಲದಲ್ಲಿ ಎರಡು ದೇಹ ಒಂದೇ ಆತ್ಮದಂತಿದ್ದ ಗೆಳೆಯ, ಯಾವುದೋ ಬೇಡದ ವಿಷಯಕ್ಕೆ ಮನಸ್ತಾಪ ಮಾಡಿಕೊಂಡು, ತನ್ನ ಸಂಪರ್ಕದಿಂದ ದೂರವಾಗಿರುವುದಾದರೂ, ಅವನಿಗೆ ಮದುವೆ ಆಮಂತ್ರಣ ಪತ್ರಿಕೆ ಕಳುಹಿಸದೇ ಇರಲು ಆಗದು ಎಂದು ನಿರ್ಧರಿಸಿದ ಲೋಕೇಶ, ನಾಗೇಶನ ಈಗಿನ ವಿಳಾಸ ಪತ್ತೆ ಹಚ್ಚಿ ಅವನಿಗೊಂದು ಪತ್ರಿಕೆ ಕಳುಹಿಸಿದ. ಆದರೆ ಅವನು ತನ್ನ ಆಹ್ವಾನವನ್ನು ಮನ್ನಿಸುತ್ತಾನೋ ಇಲ್ಲವೋ ಎಂಬ ಅನುಮಾನ ಲೋಕೇಶನಿಗಿತ್ತು. ಆದರೆ ತಾನು ತನ್ನ ಗೆಳೆತನಕ್ಕೆ ಮೋಸಮಾಡಿಲ್ಲವೆಂಬ ಸಮಾಧಾನ ಅವನಿಗಾಗಿತ್ತು.
ಮದುವೆಯ ದಿನ ಲೋಕೇಶ ಮಗಳಿಗೆ ಧಾರೆ ಎರೆದು ಕೊಡುತ್ತಿದ್ದಾಗ , ಅವನ ಆಪ್ತ ಗೆಳೆಯ ನಾಗೇಶ ಎದುರಿಗೆ ನಿಂತಿರುವುದನ್ನು ಕಂಡು ಅವನಿಗೆ ತುಂಬಾ ಖುಷಿಯಾಯಿತು. ಗೆಳೆಯನನ್ನು ದೂರದಿಂದಲೇ ನಗಿಸಿದ್ದ.
ಮದುವೆ ಶಾಸ್ತ್ರಗಳೆಲ್ಲವೂ ಮುಗಿದು, ಲೋಕೇಶ ವೇದಿಕೆಯಿಂದ ಕೆಳಗಿಳಿದು ಬಂದು,, ನಾಗೇಶನ ಕೈ ಕುಲುಕಿ,
"ಏನಯ್ಯ ನಾಗೇಶ ಹೇಗಿದ್ದೀಯೋ?, ಕಡೆಗೂ ನಿನ್ನ ವಿಳಾಸ ಪತ್ತೆ ಹಚ್ಚಿ ಆಮಂತ್ರಣ ಪತ್ರಿಕೆ ಕಳುಹಿಸಿದ್ದೆ. ಆದರೆ ನೀನು ಬರುತ್ತೀಯಾ ಎಂದು ನಂಬಿರಲಿಲ್ಲ.ಸಧ್ಯ ಬಂದೆಯಲ್ಲಾ?
ತುಂಬಾ ಖುಷಿ ಆಯ್ತು ಕಣೋ", ಎಂದು ತನ್ನ ಸಂತೋಷವನ್ನು ತೋಡಿಕೊಂಡ.
"ಅಯ್ಯೋ ನಾನು ನನ್ನ ಆಪ್ತ ಮಿತ್ರನ ಆಹ್ವಾನವನ್ನು ಮನ್ನಿಸದೇ ಇರುತ್ತೀನಾ?, ನಿನ್ನನ್ನು ನೋಡಬೇಕು ಅಂತ ತುಂಬಾ ದಿನಗಳಿಂದ ಅಂದುಕೊಳ್ಳುತ್ತಿದ್ದೆ. ಈ ಆಮಂತ್ರಣ ಪತ್ರಿಕೆಯಿಂದ ಅದು ಸಾಧ್ಯವಾಯಿತು. ನೀನು ಹೇಗಿದ್ದೀಯೋ?"
ಮಗಳ ಮದುವೆಯ ಆಮಂತ್ರಣ ಪತ್ರಿಕೆ, ದೂರವಾಗಿದ್ದ ಹಳೆಯ ಗೆಳೆಯರನ್ನು ಮತ್ತೆ ಹತ್ತಿರ ಮಾಡಿತ್ತು.