Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Natesh MG

Abstract Classics

3.7  

Natesh MG

Abstract Classics

ಮುಕ್ತಿ .ಮಾತೃ ಹತ್ಯೆ .

ಮುಕ್ತಿ .ಮಾತೃ ಹತ್ಯೆ .

6 mins
184


ಹಾಸಿಗೆ ಮೇಲೆ ಮಲಗಿದ , ಅಮ್ಮನ ಕಡೆಯೇ ನೋಡುತ್ತಾ ಕುಳಿತಿದ್ದೆ ನಾನು.  ಗೊತ್ತಿತ್ತು ನನಗೆ , ನಾನು ಕೊಟ್ಟ "ನಿದ್ದೆಯ "ಇಂಜೆಕ್ಷನ್ ಬಹಳ ಹೊತ್ತು ಆಕೆಯನ್ನು ಮಲಗಿಸುವುದಿಲ್ಲವೆಂದು.   ಹೆಚ್ಚು ಎಂದರೆ ಇನ್ನೊಂದು ಗಂಟೆಯಲ್ಲಿ , ಆಕೆಗೆ "ಎಚ್ಚರ "ಆಗುತ್ತದೆ ಎಂಬುದು ಕೂಡ ತಿಳಿದಿತ್ತು. ಅದೆಷ್ಟು ದಿನಗಳಾಯಿತು "ಅಮ್ಮ "ಮಲಗಿ , ಎಂದು ಲೆಕ್ಕ ಹಾಕಿದೆ .

ಸೊಂಟ ನೋವು ಎಂದು ಆರು ತಿಂಗಳ ಹಿಂದೆಯೇ ಆಕೆ ಹೇಳಿದಾಗ , ನನ್ನದೇ "ಆಸ್ಪತ್ರೆಯಲ್ಲಿ "ಸಂಪೂರ್ಣ ಚೆಕ್ ಮಾಡಿಸಿದ್ದೆ . ಬಂದ , ಬರುತ್ತಿರುವ ಒಂದೊಂದೇ "ರಿಪೋರ್ಟ್" ನೋಡಿ ಕಂಗಾಲಾಗಿ ಹೋಗುತ್ತಿದ್ದೆ . " ಬೋನ್ ಕ್ಯಾನ್ಸರ್ "ಮೂರನೇ ಹಂತ ದಾಟಿ ,  ನಾಲ್ಕನೆ ಹಂತಕ್ಕೆ ಕಾಲಿಟ್ಟು ಬಿಟ್ಟಿತ್ತು. ಅದೆಷ್ಟೋ ರೋಗಿಗಳನ್ನು ನೋಡಿದ್ದೆ , ಆದರೆ ಈ ರೋಗ ನನ್ನ ಅಮ್ಮನಿಗೆ ಬರುತ್ತದೆ ಎಂಬುದು ....ಕನಸು-ಮನಸಿನಲ್ಲಿಯೂ ಆಲೋಚನೆ ಮಾಡಿರಲಿಲ್ಲ.


ಅದೆಷ್ಟು ಕನಸಿತ್ತು ಅವಳಲ್ಲಿ , ನಾನು ಡಾಕ್ಟರ್ ಆಗಲಿ ಎಂದು. ಅದೊಂದೇ "ಕನಸು" ಬಹುಶಃ ನಿಜವಾಗಿತ್ತು ಅವಳದು. ಅದೆಷ್ಟು  "ಸಂಭ್ರಮವಿತ್ತು "ನಾನು ಡಾಕ್ಟರ್ ಆದಾಗ. ಎಲ್ಲವೂ ಅವಳ ಕೊಡುಗೆಯೇ . ಇಲ್ಲದೇ ಹೋಗಿದ್ದರೆ , ನಾನು "ಕುಡುಕರ "ಪಟ್ಟಿ ಸೇರಿ ಹೋಗುತ್ತಿದ್ದೆ ಚಿಕ್ಕ ವಯಸ್ಸಿನಲ್ಲಿಯೇ.  ಅಮ್ಮ ಅಂದರೆ ಅವಳು, ಕೇವಲ ಅಮ್ಮ ಆಗಿರಲಿಲ್ಲ ನನಗೆ . ಉತ್ತಮ ಗೆಳತಿಯಾಗಿದ್ದಳು.  ಪ್ರತಿ ವಿಷಯವನ್ನು ಅವಳು "ವಿಶ್ಲೇಷಿಸುವ " ರೀತಿಯೇ ಬೇರೆ ಇತ್ತು.

ಕಾಲೇಜ್ ಮೆಟ್ಟಿಲು ಹತ್ತಿದವನು, ಒಮ್ಮೆ ರುಚಿ ನೋಡಲು "ವಿಸ್ಕಿ "ಕುಡಿದಿದ್ದೆ . ಕಡೆಗೆ ವಾರಕ್ಕೊಮ್ಮೆ ಅದೇ ಅಭ್ಯಾಸವಾಗಿ ಹೋಯಿತು ಅದು ನನಗೆ . ಪ್ರತಿಯೊಂದನ್ನು "ಕಣ್ಣಂಚಿನಲ್ಲಿ "ಗಮನಿಸುತ್ತಿದ್ದ ಅಮ್ಮ , ಒಂದು ಮಾತು ಕೂಡ ಆಡಿರಲಿಲ್ಲ . ಒಮ್ಮೆ ಕುಡಿದು ಬಂದು ಊಟಕ್ಕೆ ಕುಳಿತಾಗ , ಎಲ್ಲವನ್ನು ವಾಂತಿ ಮಾಡಿದ್ದೆ . ಓಡಿ ಬಂದು ತನ್ನ "ಬೊಗಸೆ" ಒಡ್ಡಿದ್ದು ಈಗಲೂ ಕಣ್ಣಿಗೆ ಕಟ್ಟಿದ ಹಾಗಿದೆ .  ನಾಲ್ಕಾರು ದಿನ ರಜೆ ಇದ್ದಾಗ , ಆಕೆ ಸ್ವಲ್ಪ ಹೊರಗಡೆಯ ಊರಿಗೆ ಹೋಗಿ ಸುತ್ತಾಡಿ ಬರೋಣ ಅಂದಾಗ ಖುಷಿಯಾಗಿ ಹೊರಟಿದ್ದೆ .  ಸೀದಾ ಆಕೆ ಕರೆದುಕೊಂಡು ಹೋಗಿದ್ದು , ಮಂಗಳೂರಿಗೆ .

ಮೊದಲ ದಿನ ಬೀಚ್ ಸುತ್ತಾಟ , ಅಲ್ಲಿನ ಸಮುದ್ರ ... ಎಲ್ಲವನ್ನೂ ಅಮ್ಮನ ಜೊತೆ ಕುಳಿತು ನೋಡಿದ್ದೆ . ಆಟ ಆಡಿದ್ದೆ.

ಇಬ್ಬರೂ ಸೇರಿ ಆವತ್ತು , ಮರಳಿನಲ್ಲಿ ಹಠ ತೊಟ್ಟು "ಈಶ್ವರ ಲಿಂಗವನ್ನು "ಮಾಡಿ ನಿಟ್ಟುಸಿರು ಬಿಡುವ ಮುನ್ನವೇ ದೊಡ್ಡ ಅಲೆಯೊಂದು ಅದನ್ನು ಕೊಚ್ಚಿಕೊಂಡು , ತನ್ನ ಕಡೆಗೆ ಎಳೆದುಕೊಂಡು ಹೋಗುತ್ತಿತ್ತು . "ಜೀವನವೇ ಹಾಗೆ ಕಣೋ ಎಂದಿದ್ದಳು "ಅಮ್ಮ ಆಗ .  ಮರುದಿನ ಆಕೆ ಕರೆದುಕೊಂಡು ಹೋಗಿದ್ದು , "ಮಣಿಪಾಲ್ ಕಸ್ತೂರ್ಬಾ "ಆಸ್ಪತ್ರೆಗೆ .

ಮೊದಲೇ ಸಾಕಷ್ಟು "ಬ್ರೆಡ್ "ಅನ್ನು ತೆಗೆದುಕೊಂಡು ಒಳಗೆ ಹೋಗಿದ್ದೆವು ನಾವು . ಅರ್ಥವೇ ಆಗಿರಲಿಲ್ಲ ನನಗೆ , ಅವಳು ಅಲ್ಲಿಗೆ ಯಾಕೆ ನನ್ನ ಇಲ್ಲಿಗೆ ಕರೆ ತಂದಳು ಎಂದು .  ಅಲ್ಲಿನ ವಾರ್ಡ್ ನಲ್ಲಿ , ಕುಡಿದು ಹಾಳಾದ ಲಿವರ್ ರೋಗಿಗಳು ಮಲಗಿದ್ದರು . ಹೊಟ್ಟೆ "ಊದಿ "ಹೋಗಿತ್ತು ಅವರದು .  ಕುಡಿದು , ಅದರಿಂದ ಬಂದ ಕ್ಯಾನ್ಸರ್ ಪೀಡಿತರಿಗೆ ಕೂಡ ..ನನ್ನಿಂದಲೇ "ಬ್ರೆಡ್ ಪ್ಯಾಕನ್ನು " ಕೊಡಿಸಿದಳು.            ಭೂಲೋಕದಲ್ಲಿರುವ "ನರಕವನ್ನು "ಆಗಲೇ ನಾನು ನೋಡಿದ್ದು . ಅಲ್ಲಿ ಮಲಗಿದವರ ಮಕ್ಕಳನ್ನು , ಅವರ ಹೆಂಡಿರನ್ನು . ಎಲ್ಲರೂ ಕೂಡ ನನ್ನಂತೆ , ಮೊದಲು" ರುಚಿ " ನೋಡಲು ಹೋಗಿ ....ಅದರ ಗಾಳಕ್ಕೆ ಸಿಕ್ಕಿದವರೆ ಆಗಿದ್ದರು.  ಅದೆಷ್ಟು "ಬುದ್ದಿವಂತಿಕೆಯಿಂದ "ನನ್ನ ಕುಡಿತ ಬಿಡಿಸಿ ಬಿಟ್ಟಿದ್ದಳು ಆಕೆ .ಒಂದು ಮಾತನಾಡದೇ , ಒಮ್ಮೆಯೂ ಗದರಿಸದೆ ನನ್ನ ಕುಡಿತ , ಸಿಗರೇಟ್ ಚಟವನ್ನು ಬಿಡಿಸಿ ಹಾಕಿದ್ದಳು .

      

ಅಷ್ಟರ ಮೇಲೆಯೂ ಆಕೆ , ಅದರ ಸುದ್ದಿ ಎತ್ತಿರಲಿಲ್ಲ.  ಕನಸಿತ್ತು ನನಗೂ , ಅಮ್ಮನ ಹಾಗೆ . ಇಬ್ಬರ ಕನಸು ಕೂಡ ಒಂದೇ ತರಹ .  ನನ್ನ ಮದುವೆ , ಮಕ್ಕಳನ್ನು ನೋಡಲು ಆಸೆ ಪಟ್ಟಿದ್ದಳು. ಆದರೆ ಅಷ್ಟರ ಒಳಗೆ , ದೇವರು ನಮ್ಮ ಮೇಲೆ ಮುನಿಸಿಕೊಂಡಿದ್ದ .  ಕಾಯಿಲೆ ಅವಳನ್ನು ಕುಗ್ಗಿಸಲಿಲ್ಲ , ಆದರೆ ನನ್ನ ಕುಗ್ಗಿಸಿ ಬಿಟ್ಟಿತ್ತು ಅದು . ಅಮ್ಮನ ಈ ಪಾತು , ಡಾಕ್ಟರ್ "ಪಾರ್ಥ ಸಾರಥಿ 'ಆಗಿ ಬಹಳಷ್ಟು ....ಅವಳ ಎದುರಿಗೆ ಸಾಧಿಸಿ ತೋರಿಸಬೇಕು ಎಂದು ಇದ್ದೆ. ಆದರೆ ಅವಳ ಕಣ್ಣಲ್ಲಿ ನೀರು ಹಾಕಿಸಿದ್ದು ಮಾತ್ರ , ಅದರ ನೋವು .  "ತಡೆಯಲಾರದ ನೋವು ". ಪ್ರತಿನಿತ್ಯ ಹೊಟ್ಟೆಗೆ ಕೇವಲ "ಒಂದೆರಡು "ಚಮಚ , ಹಣ್ಣಿನ ರಸ ಹೋಗುತ್ತಿತ್ತು . ಆದರೂ ಈ "ಜೀವ "ಮಾತ್ರ ಅದರಲ್ಲೇ ಜೀವಿಸುತಿತ್ತು.

            

ನಿಧಾನಕ್ಕೆ "ಪಾತು "ಎಂದಳು ಅಮ್ಮ ...ಸಣ್ಣಗೆ ಎಚ್ಚರ ಆಗತೊಡಗಿತು ಅವಳಿಗೆ. "ನೋವು ಕಣೋ , ಯಾಕೋ ಈ ಜೀವ ಕೂಡ ಹೋಗುತ್ತಿಲ್ಲ " ಎಂದಿದ್ದಳು .  ಕಟ್ಟಿ ಹಿಡಿದಿದ್ದ ಕಣ್ಣೀರು , ಉಕ್ಕಿ ಬರತೊಡಗಿತ್ತು ನನಗೆ .  ಈ ರೋಗವೇ ಹಾಗೆ . ಪ್ರಜ್ಞೆ ಕೂಡ ತಪ್ಪಿಸದೆ , ಅದು ಕೊಡುವ ನೋವು ಅತಿ ಭೀಕರ .  "ಪಾತು ತಡೆಯೋಕೆ ಕಷ್ಟ ಆಗ್ತಾ ಇದೆ ನನಗೆ , ಬೆನ್ನು ಕೂಡ ಸುಲಿದು ಹೋಗಿದೆ ಕಣೋ ". ತಕ್ಷಣ ಎದ್ದುಹೋಗಿ "ಅಮ್ಮನ ಮಗ್ಗಲು " ಬದಲಾಯಿಸಿ ಬಂದೆ ...  ಮಲಗಿ ಮಲಗಿ , ಬೆನ್ನಿನಲ್ಲಿ ಗಾಯ ಆಗಿತ್ತು . ಮೇಲಿರುವ ಚರ್ಮವೇ ಸುಲಿದು ಹೋಗಿತ್ತು.  ವಾಟರ್ ಬೆಡ್ ಮೇಲೆ ಮಲಗಿಸಿದ ಮೇಲೆ ಕೂಡ , ಅಮ್ಮನ ಬೆನ್ನಿನ ಗಾಯ ನಿಂತಿರಲಿಲ್ಲ .ಪ್ರತಿ ದಿನ ಅದನ್ನು "ಸ್ವಚ್ಛಗೊಳಿಸಿ "ಔಷಧ ಹಚ್ಚಿ ನಿಧಾನವಾಗಿ ಮಲಗಿಸುತ್ತಿದ್ದೆ .

            

ಅಮ್ಮನ ಮುಂದಿನ ದಿನಗಳು , ಅತಿ ಘೋರ ಎಂದು ತಿಳಿದಿತ್ತು .ಈ ಬೋನ್ ಕ್ಯಾನ್ಸರ್ ವೇ ಹಾಗೆ . ಕೊನೆ ಕೊನೆಗೆ ಮೈನ ಎಲುಬುಗಳು "ಬಿಸ್ಕೇಟ್ ನಂತೆ "ಮೆದುವಾಗಿ ...ಕಂಡ ಕಂಡಲ್ಲಿ "ಪುಡಿಯಾಗುತ್ತಾ " ಇರುವುದು ಕೂಡ ಇದರ ಒಂದು ಲಕ್ಷಣ .  ನಾ ಚಿಕ್ಕವನು ಇದ್ದಾಗಲೇ ತೀರಿಕೊಂಡ ಅಪ್ಪನ ನೆನಪು ಕೂಡ , ನನಗೆ ಬಾರದಂತೆ ಬೆಳೆಸಿದ್ದಳು ನನ್ನನ್ನು .

            

ಹತ್ತಿರದ "ಶಾಲೆಯಲ್ಲಿ "ಟೀಚರ್ ನೌಕರಿ ಮಾಡುತ್ತಾ. ಹೆಮ್ಮೆ ಇತ್ತು ಅವಳ ಬಗ್ಗೆ , ಅದೆಷ್ಟು ಜನ ಮಕ್ಕಳಿಗೆ ಆಕೆ ಕನಸುಗಳನ್ನು ಕಟ್ಟಿ ಕೊಟ್ಟಿದ್ದಳು . ಯಾವಾಗಲೂ ಅವಳ ತುಟಿಯ ಮೇಲೆ ಮಾಸದ ನಗು , ಅದು ಪ್ರತಿಯೊಂದು ಮಕ್ಕಳಲ್ಲಿ ಜೀವಂತಿಕೆ ತುಂಬಿಸುತ್ತಾ ಇದ್ದಿದ್ದು ಖಾತ್ರಿ .  ಪ್ರತಿ ಕ್ಷಣ ಅಮ್ಮನ ಮುಂದೆಯೇ ಇರುತ್ತಿದ್ದೆ .ಎಷ್ಟೋ ಬಾರಿ ದೇವರನ್ನು ಕೇಳಿಕೊಂಡೆ ಕೂಡ ....ಅವಳು ಅನುಭವಿಸುವ "ಅರ್ಧದಷ್ಟು "ನೋವು ನನಗಾದರು ಕೊಡು ಎಂದು .

   

ಒಮ್ಮೆ ಅಮ್ಮನನ್ನು "ದೇವರು "ನೋಡಿದರೂ ಕೂಡ ಸಾಕಾಗಿತ್ತು . ಖಂಡಿತಾ ಆತನ ಕಣ್ಣಿನಲ್ಲಿ ಕೂಡ ನೀರು ಬರುತಿತ್ತು .

ಆದರೆ ಆತನಿಗೆ ಪುರುಸೊತ್ತು ಎಲ್ಲಿದೆ . ಗುರುಗಳಿಗೆ , ದೇವರಿಗೆ ಹೋಲಿಸುವ ಟೀಚರ್ ಅನ್ನು , ಅಮ್ಮನನ್ನು ಕೂಡ ಸ್ವಲ್ಪವೂ ಕರುಣೆ ತೋರದೆ ಪ್ರತಿಕ್ಷಣ ಹಿಂಸಿಸಿ "ಜೀವ ಹಿಂಡುತಿತ್ತು "ರೋಗ . " ಪಾತು , ಆಗೋಲ್ಲ ಕಣೋ ನನ್ನಿಂದ ".

ಅಮ್ಮನ ಸಣ್ಣ ಬಿಕ್ಕಳಿಕೆ ಕಣ್ಣೀರು ಅಮ್ಮನ ಕಣ್ಣಿನಿಂದ , ತಾನಾಗೇ ಹರಿದು ಹೋಗುತ್ತಿತ್ತು . ನೋವನ್ನು ತುಟಿ ಕಚ್ಚಿ ಸಹಿಸಿ ಕೊಳ್ಳುತ್ತಿದ್ದಳು .  ಅಮ್ಮನ ತಲೆ ಸವರಿ ಸಾಂತ್ವಾನ ಹೇಳುವುದು ಬಿಟ್ಟರೇ , ನನಗೂ ಯಾವ ದಾರಿ ಇರಲಿಲ್ಲ . ಎಲ್ಲಿ ಎಂದು ರೇಡಿಯೋ ಥೆರಪಿ ಕೊಡಿಸುವುದು . ಕೇಮೋ ಇಂಜೆಕ್ಷನ್ ಕೂಡ ವ್ಯರ್ಥ ಈ ಕಾಯಿಲೆಗೆ .ಆಕೆಯ ಕಣ್ಣೀರು ಒರೆಸುತ್ತಿರುವಾಗ , ಒಂದು ಕ್ಷಣ ದೊಡ್ಡದಾಗಿ ಕೂಗಿ ಕೊಂಡಳು .ಆಗ ಅರಿವು ಆಗಿತ್ತು , "ಹುಬ್ಬು" ಕೂಡ ಪುಡಿಯಾಗುತ್ತ ಇದೆಯೆಂದು .

               

ಆಕೆ ನನ್ನ ಕೈ ಹಿಡಿದು , ಇಷ್ಟು ದಿನದ ನರಳಾಟದ ನಂತರ ಕೇಳಿದ್ದು ಒಂದೇ ....."ಯಾವುದಾದರೂ ಇಂಜೆಕ್ಷನ್ ಕೊಟ್ಟು , ದಯವಿಟ್ಟು ನೋವಿನಿಂದ ಮುಕ್ತಿ ಕೊಡಿಸು ನನ್ನನ್ನು " ಎಂದು . ಯಾಚನೆ ಇತ್ತು ಅವಳ ಕಣ್ಣಲ್ಲಿ .ಆಗ ಮಾತ್ರ ಗಟ್ಟಿಯಾಗಿ ಅತ್ತು ಬಿಟ್ಟೆ , ಅವಳ ಎದುರಲ್ಲೇ . ಹಿಂದಿನಿಂದ ಅಮ್ಮನ ಸ್ವರ ಮತ್ತೆ ."ಬೇಡಿ ಕೊಳ್ಳುತ್ತೇನೆ , ದಯವಿಟ್ಟು ನನ್ನ ಇದರಿಂದ ಮುಕ್ತಿ ಕೊಡಿಸೋ " ಎಂದು ಕಷ್ಟ ಪಟ್ಟು ಹೇಳಿದ್ದಳು . ಯಾವಾಗಲೂ ಅಮ್ಮ ಜೊತೆಗಿರಲಿ ಎಂದು ಬಯಸಿದ ನನಗೆ , ಇತ್ತೀಚೆಗೆ ಎಷ್ಟೋ ಸಲ ಆಕೆ "ಜೀವ ಬಿಟ್ಟರೆ ಸಾಕು ದೇವರೇ "ಎಂದು ಪ್ರಾರ್ಥನೆ ಮಾಡುತಿದ್ದೆ .


ಜಗತ್ತಿನಲ್ಲಿ  ಮೊದಲ ಮಗ ನಾನೇ ಇರಬೇಕು , "ಅಮ್ಮನನ್ನು ಕರೆದುಕೊಂಡು ಹೋಗು ದೇವರೇ " ಎಂದಿರುವುದು.

ಯೋಚಿಸುತ್ತಾ ಕುಳಿತು ಬಿಟ್ಟೆ . ಅಮ್ಮ ಪ್ರತಿಕ್ಷಣ ಬೇಡಿ ಕೊಳ್ಳುತ್ತಾ ಇದ್ದಿದ್ದು ಕೇಳುತ್ತಾ . ಅದೆಷ್ಟು ಇರಬೇಡ ಆಕೆಗೆ ನೋವು . ಮಗನಾಗಿ ನಾನು ಎಲ್ಲವನ್ನೂ ಮಾಡಬಹುದಿತ್ತು , ಆದರೆ ಈ ನೋವನ್ನು ಮಾತ್ರ  ತೀರ್ಮಾನಕ್ಕೆ ಬಂದಿದ್ದೆ ನಾನು , ಯಾರು ಏನಾದರೂ ಕರೆಯಲಿ ನನ್ನ ತಾಯಿ ಕೊಂದವನು , ಮಾತೃ ಹತ್ಯೆ ಮಾಡಿದವನು ಎಂದು .

  ಮಾತೃ ಹತ್ಯೆ ದೋಷ , ನೂರಾರು ಜನ್ಮದವರೆಗೆ ಎಂದು ಕೇಳಿದ್ದೆ . ಅದಕ್ಕೆ ಪ್ರಾಯಶ್ಚಿತವಾಗಿ , ಹದಿನೆಂಟು ಬಂಗಾರದ "ದೇವಸ್ಥಾನಗಳನ್ನು "ಕಟ್ಟಿದರೂ ಕೂಡ ಹೋಗುವುದಿಲ್ಲವೆಂದು ಕೇಳಿದ್ದೆ .  ಆದರೆ ಅವಳು ನನ್ನಲ್ಲಿ ಕೇಳಿ ಕೊಂಡಿದ್ದು ಒಂದೇ , ಅವಳ ಇಡೀ ಜೀವನದಲ್ಲಿ . "ನೋವಿನಿಂದ ಮುಕ್ತಿ ಕೊಡಿಸು "ಎಂದು .


ಕಣ್ಣಿನ ನೀರು ಒರೆಸಿಕೊಂಡು , ಅಮ್ಮನ ಕಡೆ ನೋಡಿ ಬಾಗಿಲು ಮುಂದೆ ಮಾಡಿ ರಸ್ತೆಗೆ ಇಳಿದಿದ್ದೆ . ರಸ್ತೆಯ ಅತ್ತ ಇರುವ , ಮೆಡಿಕಲ್ ಸ್ಟೋರ್ ಕಡೆಗೆ . ನಾ ಹೇಳುತಿದ್ದ ಎಲ್ಲಾ ತರಹದ ಇಂಜೆಕ್ಷನ್ ತೆಗೆದು ಇಡುತ್ತಿದ್ದ ಆತ .ಪ್ರಖ್ಯಾತ ಡಾಕ್ಟರ್ ಎಂದು ಎಲ್ಲರಿಗೂ ಗೊತ್ತಿತ್ತು , ನನ್ನ ಬಗ್ಗೆ . ಆದರೆ ನಾ ಒಂದು "ಕೊಲೆ "ಮಾಡಲು ಹೋಗುತ್ತಾ ಇದ್ದೇನೆ , ಎಂಬುದು ಯಾರಿಗೂ ತಿಳಿದಿರಲಿಲ್ಲ . "ಅದರಲ್ಲೂ ಅಮ್ಮನ ಕೊಲೆ". ಮನೆ ಒಳಗೆ ಬಂದು , ಅರ್ಧ ಗಂಟೆ ಆಲೋಚನೆ ಮಾಡುತ್ತಾ ಇದ್ದೆ . ಅಮ್ಮನ ನರಳಾಟ "ನಿರಂತರ " ಎಂಬಂತೆ ಇತ್ತು ."ನೋವಿನಿಂದ ಮುಕ್ತಿ ಕೊಡಿಸು "ಎಂದು , ಪ್ರತಿಕ್ಷಣ ನನ್ನ ಕಣ್ಣಲ್ಲಿ ಕಣ್ಣಿಟ್ಟು ಯಾಚನೆ ಮಾಡುತಿದ್ದಳು . ಎಲ್ಲಿಯೂ ಕೂಡ ಆಗದ , ಮಾಡದ ಕೆಲಸವನ್ನು ನಾನು ಮಾಡಲಿಕ್ಕೆ ಹೊರಟಿದ್ದೆ . ಕೈ ನಡುಗುತ್ತಿತ್ತು ನನ್ನದು ಮೊದಲ ಬಾರಿಗೆ , ಅಮ್ಮನ ಕಣ್ಣಲ್ಲಿ ನೋಡುವ ದೈರ್ಯ ಇರಲಿಲ್ಲ .

             

ಕಣ್ಣೀರು ಒಂದು ಕಡೆ ಇಳಿದು ಹೋಗುತ್ತಿತ್ತು , ನಾ ಮಾಡುವ ಹೇಸಿಗೆ ಕೆಲಸವನ್ನು ನೆನದು . ಅಮ್ಮನಿಗೂ ಗೊತ್ತಾಗಿರಬೇಕು ಅದು. ಕಣ್ಣು ಸನ್ನೆಯಿಂದಲೇ ಕರೆದಿದ್ದಳು ಬಳಿಗೆ ."ನಾನೇ ಸ್ವತಃ ಹೇಳುತ್ತಿದ್ದೇನೆ ಕಣೋ , ಇದು ಪುಣ್ಯದ ಕೆಲಸ . ಅಮ್ಮನ ನೋವು ಕಡಿಮೆ ಮಾಡಿದ ಪುಣ್ಯ ಬರುತ್ತೆ , ಯಾವ ದೋಷ ಕೂಡ ಬರೋಲ್ಲ "ಎಂದಿದ್ದಳು . ಅವಳ "ನೋವು "ಈ ಮಾತನ್ನು ಆಡಿಸಿದ್ದು ಎಂದು ಗೊತ್ತಾಗಿತ್ತು ನನಗೆ . ನಡುಗುವ ಕೈಯಿಂದಲೇ ನಿಧಾನಕ್ಕೆ , ಅಮ್ಮನ ಕಾಲಿನ ನರಕ್ಕೆ ಏರಿಸಿದ್ದೆ ಕೆಲ ಇಂಜೆಕ್ಷನ್ ನನ್ನು ಮಿಶ್ರಣ ಮಾಡಿ. ನಡುಗುತ್ತಿದ್ದ ಕೈಯಲ್ಲಿ .

ಅಮ್ಮನ ಕಣ್ಣಲ್ಲಿ ಒಂದು ತೃಪ್ತಿ ಇತ್ತು ಈಗ , "ನೀ ಮಾಡಿದ್ದು ತಪ್ಪು ಅಲ್ಲವೆಂದು ಹೇಳುತ್ತಿತ್ತು "ಅದು .

         

ಅಮ್ಮನ ಕೈಯನ್ನು ಹಿಡಿದುಕೊಂಡು ಕುಳಿತಿದ್ದೆ , ಕೊನೆ ಕ್ಷಣದಲ್ಲಿ ಕೂಡ ಆಕೆ ನನ್ನ ಜೊತೆಗೆ ಇರಲಿ ಎಂದು . ನಿಧಾನಕ್ಕೆ ಕೈ "ತಣ್ಣಗೆ "ಆಗತೊಡಗಿತು .ಅಮ್ಮನ ಕಣ್ಣು ಮಾತ್ರ , ನನ್ನ ದಿಟ್ಟಿಸಿ ನೋಡುತ್ತಿತ್ತು ."ಬಿಟ್ಟು ಹೋಗುತ್ತಿದ್ದೇನೆ ಪಾತು ನಿನ್ನ 'ಎಂದು .  ಪವಿತ್ರವಾದ ಕೆಲಸವನ್ನು , ಜೀವ ಕಾಪಾಡುವ ವೃತ್ತಿಯನ್ನು ..ಅಮ್ಮನ ಕೋರಿಕೆ ಮೇರೆಗೆ ಅಡವು ಇಟ್ಟಿದ್ದೆ.

ನಾ ಮಾಡಿದ ಕೆಲಸ , ಹೇಯ ಕೃತ್ಯವನ್ನು ಸಮರ್ಥಿಸುವ ಮಾತೇ ಇರಲಿಲ್ಲ . ಪೋಲಿಸ್ ಸ್ಟೇಷನ್ ಕಡೆಗೆ ಹೆಜ್ಜೆ ಹಾಕಿದ್ದೆ .

ಅಲ್ಲಿಗೆ ಹೋಗುವ ಮುಂಚೆ , ನನ್ನ ಚೆಂದದ ಅಮ್ಮನ ಕಣ್ಣು ಮುಚ್ಚಿ.


Rate this content
Log in

Similar kannada story from Abstract