ಶ್ರೀ ಮದ್ಭಗವದ್ಗೀತಾ
ಶ್ರೀ ಮದ್ಭಗವದ್ಗೀತಾ
ಸಮರ ಭೂಮಿಯೊಳು
ಸಂದಿಗ್ಧ ಸಮಯದಲಿ
ಮೊಳಗಿತು ಭಗವದ್ ವಾಣಿ
ಈ ಲೋಕೋದ್ಧಾರಕೆ
ಗೀತಾಮೃತ ಧಾರೆಯನು
ತಾನೇ ಕರೆದನು ಶ್ರೀ ಕೃಷ್ಣ
ಉಭಯ ಸೇನೆಗಳ ನಡುವೆ
ರಥದ ಲಗಾಮು ಹಿಡಿದು
ಬೋಧಿಸಿದ ಪರಮಾರ್ಥ
ಗಾಂಡೀವಿಯ ವಿಷಾಧವ
ನೋಡಿ ಮುಗುಳ್ನಗುತ
ಓಡಿಸಿದನವನ ಕ್ಲೇಶವನು
ಒಂದು ಕೈಯಲ್ಲಿ ಅಭಯ
ಮತ್ತೊಂದು ಕೈಯಲಿ ಚಾಟಿ
ಪಾಠ ಹೇಳಿದ ಪಾರ್ಥಸಾರಥಿ
ಜನ್ಮಾಂತರ ರಹಸ್ಯಗಳ
ಬಿಚ್ಙಿಡುತ ಜೀವನಧರ್ಮವ
ಬೋಧಿಸಿದ ಜಗದೀಶ
ಭುವಿಯ ಯಾರಿಗೂ
ದೇಹವು ಶಾಶ್ವತವಲ್ಲ
ಸಂದೇಶಿಸಿದ ಸುದರ್ಶನ
ಕರ್ಮಾಕರ್ಮಗಳ
ಯುಕ್ತಾಯುಕ್ತಗಳ
ಮರ್ಮವನರುಹಿದ ಮಾಧವ
ಕರ್ಮ ಜ್ಞಾನ ಭಕ್ತಿ
ಯೋಗಗಳ ಶ್ರೇಷ್ಠ ತೆಗಳ
ಅರುಹಿದನಾ ಅಸುರಾರಿ
ಜಗವೆಲ್ಲ ತನಗಧೀನ
ಮನುಜ ನೆಪಮಾತ್ರ
ಇದನರಿಯಿರೆಂದ ಮುರಾರಿ
ಮಾಡುವ ಕರ್ಮಗಳೆಲ್ಲವ
ತನಗರ್ಪಿಸಿ ಮಾಡಿರೆಂದು
ಶರಣಾಗತಿ ಸಾರಿದ ಸನಾತನ
ಗುಢಾಕೇಶನ ವಿಷಾದವ
ಹೊಡೆದೋಡಿಸಿ ದೂರ
ಗಾಂಡೀವ ಹಿಡಿಸಿದ ಹೃಷೀಕೇಶ
ವಿಶ್ವ ರೂಪವ ತೋರಿ
ವಿಸ್ಮಯಗೊಳಿಸುತ
ವಿಶ್ವಧರ್ಮವ ಸಾರಿದ ವಿಶ್ವೇಶ
ಜಯತು ಜಯ ಶ್ರೀ ಕೃಷ್ಣ
ಜಯತು ಗೀತಾಚಾರ್ಯ
ಜಯತು ಶ್ರೀ ಭಗವದ್ಗೀತಾ
ಶ್ರೀ ಕೃಷ್ಣಾರ್ಪಣಮಸ್ತು