ಅಕ್ಷರ ಮಾಲಾ ಸ್ತುತಿ
ಅಕ್ಷರ ಮಾಲಾ ಸ್ತುತಿ
ಅಷ್ಟದರಿದ್ರಗಳಾ ನೀಗಿಸುತ
ಆನಂದವ ನೀಡು ಆದಿಯೋಗಿ
ಇಷ್ಟಾರ್ಥಗಳ ಕರುಣಿಸುತ
ಈತಿಭಾದೆಯ ನೀಗಿಸು ಈಶಾನ
ಉಪಟಳವ ಕಳೆಯಿಸುತ
ಊರ್ಜಿತಗೊಳಿಸು ಉಮೇಶ
ಋಷಿ ಹೃದಯವ ನೀಡುತ
ಋಜು ಮಾರ್ಗವ ತೋರು ಋಷಿಧುರ್ಯ
ಎಡರು ತೊಡರುಗಳ ತೊಡೆದು
ಏಕಾಗ್ರತೆ ಪಾಲಿಸು ಏಕದಂತ ಪಿತ
ಐಸಿರಿ ಕರುಣಿಸಿ ಸದ್ಬುದ್ಧಿ ನೀಡು ಈಶ್ವರನೆ
ಒಡಲುರಿಯ ತಣಿಸುತ
ಓದನವ ಕರುಣಿಸು ಓಂಕಾರೇಶ್ವರ
ಔದ್ದತ್ಯವ ತೊಲಗಿಸು ಔದಾರ್ಯ ಪ್ರಭು
ಅಂಧಕಾರವ ಕಳೆಯಿಸು ಅಂಧಕಾರೇಶ್ವರ
ಕಂಟಕಗಳ ತೊಡೆ ಕಂದರ್ಪಹರ
ಖುಷಿಯನು ನೀಡು ಖಂಡಪರಶು
ಗಮನಿಗಳ ದಮನಮಾಡು ಗಂಗಾಧರ
ಘನತೆಯ ಹೆಚ್ಚಿಸು ಗೌರಾಂಗ
ಚಡಪಡಿಕೆ ಯ ಕಳೆ ಚಂದ್ರಚೂಡ
ಛಾಂದಸ ಪ್ರಿಯ ಚಂದ್ರಶೇಖರ
ಜಗದ ಜಟಿಲಗಳ ಪರಿಹರಿಸುತ
ಝಣತ್ಕರಿಸು ನಿನಾದವ ಜಗದೀಶ
ಟಂಕಾರ ಮಾಡುತ ಢಕ್ಕೆಯ ಬಡಿದು
ಠಕ್ಕರ ನಡುಗಿಸು ನಟರಾಜ
ಡಂಬಕತನವನು ಅಟ್ಟೋಡಿಸುತ
ಢಮರುಗ ಮೊಳಗಿಸು ಪರಮೇಶ
ತಪಸ್ವಿಗಳ ತಾಪವ ತಗ್ಗಿಸಿ
ಥಟ್ಟನೆ ವರಕೊಡು ಶಿವಶಂಕರ
ದುಷ್ಟರ ದಂಡಿಸಿ ಶಿಷ್ಟರ ರಕ್ಷಿಸು
ಧರ್ಮವನುಳಿಸು ಧೂರ್ಜಟಿಯೇ
ನಂಜನು ನುಂಗಿ ವಿಶ್ವ ವನುಳಿಸಿದ
ಪರಮ ಕಾರುಣ್ಯ ನಂಜುಂಡೇಶ್ವರ
ಫಣಿಯನು ಧರಿಸಿಹ ಪಾಶುಪತಿ
ಬಾಗುವೆ ಶಿರವನು ನಿನ್ನ ಡಿಗೆ
ಭಕುತರ ಕಾಯೋ ಭವಹರನೇ
ಮದವನು ಮೆಟ್ಟಿ ಮನವನು ಅರಳಿಸಿ
ಯೋಗದಲ್ ನೆಲೆಸೋ ಮಹಾಯೋಗಿ
ರಕ್ಷಿಸು ಶಂಕರ ಮತ್ತಭಯಂಕರ
ಲಿಂಗರೂಪಿ ಮಹಾಲಿಂಗ
ವಿಶ್ವವ ರಕ್ಷಿಸಿ ರೋಗವ ತೊಲಗಿಸಿ
ಶಾಂತಿಯ ನೀಡು ಶಾಂಭವನೇ
ಷಣ್ಮುಖ ಪ್ರಿಯ ಷಡಕ್ಷರಿ ಮಂತ್ರರೂಪಿ
ಸರ್ವರಿಗೂ ಸುಖ ಶಾಂತಿ ಗಳ ನೀಡು
ಹರ ಹರ ಮಹಾದೇವ ಶಂಭೋ
ಸೂಚನೆ
ಗಮನಿ = ಮೋಸಗಾರ
ಟಂಕಾರ= ಬಿಲ್ಲಿನ ಝೇಂಕಾರ
ಛಾಂದಸ = ಛಂದಶ್ಶಾಸ್ತ್ರಜ್ಞ
ಋಷಿಧುರ್ಯ=ಶಿವ