ದಧೀಚಿ
ದಧೀಚಿ
ದಧೀಚಿ
ಪೌರಾಣಿಕ ಕಥೆ
ಕೃತಯುಗದಲ್ಲಿ ವೃತ್ರಾಸುರನೆಂಬ ರಾಕ್ಷಸನಿದ್ದ. ಅವನು ದೇವತೆಗಳಿಗೆ ತುಂಬಾ ತೊಂದರೆ ಕೊಡುತ್ತಿದ್ದ. ಅವನು ಅತ್ಯಂತ ಬಲಶಾಲಿಯಾಗಿದ್ದು, ಅವನನ್ನು ಎದುರಿಸಿ ಗೆಲ್ಲಲು ದೇವತೆಗಳಿಗೂ ಸಾಧ್ಯವಾಗಿರಲಿಲ್ಲ. ಕಡೆಗೆ ದೇವತೆಗಳೆಲ್ಲರೂ ಬ್ರಹ್ಮನ ಬಳಿ ಹೋಗಿ , ವೃತ್ರಾಸುರರನಿಂದ ತಮಗಾಗುತ್ತಿರುವ ಸಂಕಷ್ಟಗಳನ್ನು ಹೇಳಿಕೊಂಡು ಅವನನ್ನು ಗೆಲ್ಲುವ ಉಪಾಯವನ್ನು ಬೇಡಿಕೊಂಡರು. ಆಗ ಬ್ರಹ್ಮ ದೇವ ದೇವತೆಗಳಿಗೆ ಒಂದು ಮಾರ್ಗವನ್ನು ಸೂಚಿಸಿದ.
"ಎಲೈ ದೇವತೆಗಳಿರಾ, ಈ ವೃತ್ರಾಸುರ ನನ್ನು ಸಾಧಾರಣ ಶಸ್ತ್ರಾಸ್ತ್ರಗಳಿಂದ ಸಂಹರಿಸಲು ಸಾಧ್ಯವಿಲ್ಲ. ಅದಕ್ಕಾಗಿ ವಿಶೇಷವಾದ ಅಸ್ತ್ರಗಳೇ ಬೇಕು. ಆ ಆಸ್ತ್ರಗಳು ದಧೀಚಿ ಎಂಬ ಮಹರ್ಷಿಯ ಬೆನ್ನು ಮೂಳೆಯಲ್ಲಿ ಸಿಗುತ್ತದೆ .ಅದನ್ನು ತೆಗೆದುಕೊಂಡು ವೃತ್ರಾಸುರನನ್ನು ಸಂಹಾರ ಮಾಡಿ "
ಬ್ರಹ್ಮ ದೇವರ ಮಾತುಗಳನ್ನು ಕೇಳಿ ದೇವತೆಗಳಿಗೆ ಆಶ್ಚರ್ಯವಾಯಿತು.
"ಬ್ರಹ್ಮದೇವ, ಈ ಅಸ್ತ್ರಗಳು ದಧೀಚಿ ಮಹರ್ಷಿಯ ಬೆನ್ನು ಮೂಳೆಯಲ್ಲಿ ಹೇಗೆ ಸೇರಿಕೊಂಡಿವೆ ?. ನಮಗೆ ಬಹಳ ಆಶ್ಚರ್ಯವಾಗುತ್ತಿದೆ." ದೇವತೆಗಳು ಬ್ರಹ್ಮನನ್ನು ಕೇಳಿದರು.
" ಈ ಹಿಂದೆ ನಿಮ್ಮ ಪೂರ್ವಜರು ಭೂಮಿಯಲ್ಲಿ ಇರುವ ದಧೀಚಿ ಮಹರ್ಷಿಗಳ ಬಳಿಯಲ್ಲಿ ಈ ವೃತ್ರಾಸುರನನ್ನು ಸಂಹರಿಸಲು ಬೇಕಾಗಿರುವ ವಿಶೇಷವಾದ ಅಸ್ತ್ರಗಳನ್ನು ಕೊಟ್ಟು ಬಂದಿದ್ದರು. ಬಹಳ ಕಾಲ ಕಳೆದ ಮೇಲೂ ನಿಮ್ಮ ಪೂರ್ವಜರು ಆ ವಿಶೇಷವಾದ ಅಸ್ತ್ರಗಳನ್ನು ದಧೀಚಿಯಿಂದ ಮತ್ತೆ ಹಿಂದಕ್ಕೆ ಪಡೆಯಲು ಹೋಗಲಿಲ್ಲ. ಆಸ್ತ್ರಗಳು ತುಂಬಾ ಹಳೆಯದಾಗಿ ಕೆಲಸಕ್ಕೆ ಬಾರದ ಸ್ಥಿತಿ ತಲುಪಿದಾಗ, ದಧೀಚಿ ಮಹರ್ಷಿ ತಮ್ಮಅವುಗಳನ್ನುನೀರಿನಲ್ಲಿ ಕರಗಿಸಿ ಅದನ್ನು ಕುಡಿದುಬಿಟ್ಟನು. ಹೀಗಾಗಿ ಆ ವಿಶೇಷವಾದ ಅಸ್ತ್ರಗಳ ಶಕ್ತಿ ಆ ದಧೀಚಿ ಮಹರ್ಷಿಯ ಬೆನ್ನು ಮೂಳೆಯಲ್ಲಿ ಅಡಗಿವೆ. ನೀವೆಲ್ಲರೂ ಆ ಮಹರ್ಷಿಯ ಬಳಿಗೆ ಹೋಗಿ,
ಆ ಆಸ್ತ್ರಗಳನ್ನು ಹಿಂದಕ್ಕೆ ಪಡೆದುಕೊಂಡು ಅದರಿಂದ ಆಯುಧವನ್ನು ತಯಾರಿಸಿ, ಆ ವೃತ್ರಾಸುರನನ್ನು ಸಂಹರಿಸಿ .ನಿಮಗೆ ಒಳ್ಳೆಯದಾಗಲಿ "
ಬ್ರಹ್ಮದೇವ ದೇವತೆಗಳನ್ನು ಹರಸಿ ಬೀಳ್ಕೊಟ್ಟನು.
ಬ್ರಹ್ಮದೇವರಿಗೆ ನಮಸ್ಕರಿಸಿ, ದೇವತೆಗಳೆಲ್ಲರೂ ಭೂಲೋಕದಲ್ಲಿರುವ ದಧೀಚಿ ಮಹರ್ಷಿಗಳ ಬಳಿಗೆ ಬಂದು, ತಮ್ಮ ಪ್ರಾರ್ಥನೆ ಸಲ್ಲಿಸಿದರು.
ದೇವತೆಗಳ ಮನವಿಯನ್ನು ಪರಿಗಣಿಸಿದ ದಧೀಚಿ ಮಹರ್ಷಿ ಸಂತೋಷದಿಂದ ಸ್ವಇಚ್ಚೆಯಿಂದ ತನ್ನ ಪ್ರಾಣವನ್ನು ಬಿಟ್ಟನು. ಆಗ ದೇವತೆಗಳು ಅವನ ಬೆನ್ನು ಮೂಳೆಯಿಂದ "ವಜ್ರಾಯುಧ"ವನ್ನು ಮಾಡಿಸಿಕೊಂಡು, ಅದರಿಂದ ಲೋಕಕಂಟಕನಾಗಿದ್ದ ಆ ವೃತ್ರಾಸುರನನ್ನು ಸಂಹಾರ ಮಾಡಿದರು. ಇದರಿಂದ ಆ ರಾಕ್ಷಸನ ಉಪಟಳ ತಪ್ಪಿ ಎಲ್ಲರೂ ನೆಮ್ಮದಿಯಿಂದ ಬಾಳಲು ಸಧ್ಯವಾಯಿತು.
ಇಡೀ ಜಗತ್ತಿನ ಉಪಕಾರಕ್ಕಾಗಿ, ದಧೀಚಿ ಮಹರ್ಷಿ ತನ್ನ ದೇಹವನ್ನೇ ದಾನ ಮಾಡಿದನು. ಈ ದಾನ ಚಿಂತಾಮಣಿ ಇಂದಿಗೂ ಜನರಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದ್ದಾನೆ. "ಪರೋಪಕಾರಾರ್ಥಮಿದಂ ಶರೀರಂ" ಎಂಬಂತೆ ಬಾಳಿದರು ದಧೀಚಿ ಮಹರ್ಷಿಗಳು.
ಆಕರ (ಮಹಾಭಾರತ)
