ಹುಯ್ಯೋ ಹುಯ್ಯೋ ಮಳೆರಾಯ
ಹುಯ್ಯೋ ಹುಯ್ಯೋ ಮಳೆರಾಯ
ನಾನ್ ಸ್ಟಾಪ್ ನವೆಂಬರ್ ಆವೃತ್ತಿ 3
ದಿನ 11
ವಿಷಯ: ಮಳೆ
ಆಕಾಶದಲ್ಲಿ ಕಾರ್ಮೋಡ ತುಂಬಿ ನಿಂತಾಗ, ಮಹೇಶನಿಗೆ ಖುಷಿಯಾಯಿತು. ಇನ್ನು ತನ್ನ ಬೆಳೆಗಳಿಗೆ ಭಯವಿಲ್ಲ ಎಂದು ಕೊಂಡ. ಭೂಮಿಯಲ್ಲಿ ಬೀಜ ಬಿತ್ತಾಗಿತ್ತು. ಇನ್ನು ವರುಣನ ಕೃಪೆ ಒಂದು ಸರಿಯಾಗಿ ಬಿದ್ದರೆ, ಈ ವರ್ಷದ ಫಸಲು ಚಿನ್ನವನ್ನು ಕೊಡುವುದರಲ್ಲಿ ಯಾವ ಸಂಶಯವೂ ಇಲ್ಲವೆಂದು ಲೆಕ್ಕ ಹಾಕುತ್ತಿದ್ದ.
ಕೃಷಿಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದು,ಓಳ್ಳೆಯ ಹುದ್ದೆಯಲ್ಲಿದ್ದ ಮಹೇಶ, ಹತ್ತು ವರ್ಷಗಳ ನಂತರ ಉದ್ಯೋಗಕ್ಕೆ ರಾಜಿನಾಮೆ ನೀಡಿ, ಪಿತ್ರಾರ್ಜಿತವಾಗಿ ಬಂದಿದ್ದ ಹತ್ತಾರು ಎಕರೆ ಭೂಮಿಯನ್ನು ನೋಡಿಕೊಳ್ಳುತ್ತಾ, ಕೃಷಿಯಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಾ, ಭೂತಾಯಿ ಸೇವೆಯಲ್ಲಿ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದ. ಪಂಪ್ ಸೆಟ್ ಭಾವಿ, ಒಳ್ಳೆಯ ಟ್ರಾಕ್ಟರ್ ಎಲ್ಲ ನವೀನ ಸಾಧನಗಳನ್ನು ಇಟ್ಟುಕೊಂಡು, ಆಳುಗಳೊಂದಿಗೆ ತಾನೂ ಆಳಾಗಿ ಗದ್ದೆಗಿಳಿಯುತ್ತಿದ್ದ.
ಪ್ರತಿವರ್ಷದಂತೆ ಈ ವರ್ಷವೂ ಬತ್ತವನ್ನು ಬಿತ್ತಿದ್ದ. ಚಿತ್ತೆಯ ಮಳೆಗಾಗಿ ಎದುರು ನೋಡುತ್ತಿದ್ದ. ಅವನಿಗೆ ಎಲ್ಲಾ ಅನುಕೂಲಗಳಿದ್ದರೂ ಈ ದೇಶದ ಇತರ ರೈತಮಿತ್ರರಿಗಾಗಿ ಅವನ ಮನಸ್ಸು ಮಿಡಿಯುತ್ತಿತ್ತು. ಅವನು ಎಲ್ಲಾ ರೈತಬಾಂಧವರಿಗಾಗಿ ಮೊರೆ ಇಡುತ್ತಿದ್ದ. ಅವನ ಮೊರೆ ದೇವರಿಗೆ ಮುಟ್ಟಿ, ಮುಂಗಾರು ಮಳೆ ಹನಿಹನಿಯಾಗಿ ಭೂಮಿಗೆ ಇಳಿದಾಗ ಮಹೇಶ ಮಳೆಯಲ್ಲೇ ಕುಣಿದು ಕುಪ್ಪಳಿಸಿದ.
ಹುಯ್ಯೋ ಹುಯ್ಯೋ ಮಳೆರಾಯ
ಹೂವಿನ ತೋಟಕೆ ನೀರಿಲ್ಲ
ಬಾರೋ ಬಾರೋ ಮಳೆರಾಯ
ಬಾಳೆಯ ತೋಟಕೆ ನೀರಿಲ್ಲ