ನನ್ನೊಳಗೊಬ್ಬ ಸನ್ಯಾಸಿ....
ನನ್ನೊಳಗೊಬ್ಬ ಸನ್ಯಾಸಿ....
ನನ್ನೊಳಗೊಬ್ಬ ಸನ್ಯಾಸಿ....
ಲತೆ ಮರವ ತಬ್ಬಿತಾದರೂ ಆಸರೆಗಷ್ಟೇ ಎಂದದು ನಂಬಿತ್ತಾದರೂ ಮರಕ್ಕೆ ಅದು ನಗಣ್ಯವಾಗಿತ್ತು.
ಭತ್ತ ಕೊಯಿಲಿಗೆ ಬಂದಾಗ, ರೈತ ಸಿರಿಸಿಕ್ಕಷ್ಟು ಕುಣಿಯುವ. ವರುಣನಭ್ಭರಕ್ಕೆ ಭತ್ತದ ತೆನೆ ನೆಲಕಚ್ಚಿದ್ದರೇನು ಮಾಡಿಯಾನು?
ಸತಿಯೊಡನೆ ಸಪ್ತಪದಿ ತುಳಿದು ಮಂತ್ರೋಚ್ಛರಿಸಿದ್ದು ಈಗಲೂ ನೆನಪುಂಟಾದರೂ ನೆರೆಹೊರೆಯ ಆಸ್ತಿಯಲಿ ಪಾಲು ಬಯಸಿದ್ದಾದರೂ ಏಕೆ?
ಕಬ್ಬು ಬಲಿತಷ್ಟೂ ಸಿಹಿಯಂತೆ, ಮಬ್ಬು ಕವಿದಷ್ಪೂ ಹೊತ್ತು, ಸತ್ತುಬದುಕಿದ ಅವಳು ಕುಡುಕ ಗಂಡನಿಗಿತ್ತ ಸ್ವತ್ತು..
ತನ್ನದೆಂಬುದೇನಿತ್ತು ಅವಳಲ್ಲಿ?
ಮನೆಯಂಗಳದಿ ಮುಗ್ಗರಿಸಿದ ಪುಟ್ಟ ಮಗುವನೆತ್ತಿ ನೆತ್ತಿದಡವಿ ಮಿಡಿವ ತಾಯಿಯ ಸೆರಗು ಜಾರಿದ್ದಷ್ಟೇ ಸಾಕಿತ್ತು, ಅವನೊಳಗನ್ನು ಕೆಣಕಲು..
ನನ್ನವ್ವನಿಲ್ಲದ ಅಪ್ಪನಲ್ಲಿ ಕಾಣಸಿಗಲಿಲ್ಲ ಮಮಕಾರದ ಗಂಧ, ಸುಟ್ಟು ಕರಕಲಾದ ಚುಟ್ಟದ ತುದಿಯಲ್ಲಿತ್ತು ನನ್ನ ಬದುಕು..
ಕಿಬ್ಹೊಟ್ಟೆಯ ಹಸಿವಿಗೆ ಸ್ವಾಭಾಮಾನದ ಕಿಚ್ಚಿತ್ತು, ಬಟ್ಟೆಯೊಳಗಡಗಿದ್ದ ಬೆತ್ತಲೆಗೆ ನಾಚಿಕೆಯ ಹಂಗಿಲ್ಲ, ಹಗಲಿಗಿಂತ ಇರುಳೇ ಚೆನ್ನಿತ್ತು ಆಗ...
ಇದ್ದಷ್ಟು ದಿನಗಳೂ ಅಪ್ಪನ ಪರದಾಟ,
ಬಂದದ್ದೇನೂ ಉಳಿದಿಲ್ಲದ ಕಾಲವದು.
ಸಿಕ್ಕಿದ್ದನ್ನು ನಾನು ತೊಡಲೊಲ್ಲೆ, ನನಗೆ ನನ್ನದೇ ಆದ ಅಹಂ ಇತ್ತು..
ಕನ್ಯೆಯವಳ ನಗುವಿನಳತೆಗೆ ಮಾರುಹೋದೇನೆಂಬ ಆತಂಕವಿತ್ತು, ಸೊನ್ನೆ ಬದುಕಿದು ನನ್ನದು, ಅವಳೊಟ್ಟಿಗೆ ಸಹ್ಯವಲ್ಲವೆಂದು ಖಾತ್ರಿಯಿತ್ತು...
ಸಂತೆಯಲಿ ಬೇಡುವವನಂತೆ ಕಂಡೆನೇನೋ ಅವಳಿಗೆ, ಹತ್ತಿರ ನಿಂದು ಕಾಡಿದ್ದಳು , ಎತ್ತರದ ತೆಂಗುಮರಕ್ಕೆ ವಾಲಿದ್ದೆ ಆಸರೆಗೆ..
ಜಲಪಾನಕ್ಕೆಂದು ಹೊಳೆದಂಡೆಗಿಳಿದಾಗ ಮಧುಮಕ್ಕಿಯಂತೆ ಹಾರಿದ್ದಳು ಬಳಿಗೆ, ಎದೆಮಟ್ಟ ಎದುರುನಿಂತು ದಟ್ಟವಾಗಿ
ಮೆಟ್ಟಿದಳೆದೆಯೊಳಗೆ.
ಮುಷ್ಟಿಬಿಗಿಯಲಿ, ಹಿಡಿದಿಟ್ಟ ಜೀವಕೆ
ಅಗಿಷ್ಟಿಕೆ ನೆನಪಾಯ್ತು, ಬಿಸಿತುಪ್ಪವಿದು
ನುಂಗಲಾರೆ, ಉಗಿಯಲಾರೆನೆಂದರಿತಿದ್ದೆ, ಬಿಟ್ಟರೆ ಬದುಕುಳಿಯಲಶಕ್ಯವೇ..
ಒಂದಿರುಳು ಆಗಂತುಕನಂತೆ ಹೊರಟೆ
ಸುಂಕವಿಲ್ಲದಂತೆ ತೆರಳಿ ಊರ ಬಾಗಿಲ ದಾಟಿ, ಅವಳಧರಗಳ ಕಂಪಿಗೆ ಸೋಲಬಾರದೆಂಬ ಗತ್ತಿನಲಿ..
ಬಡವನಾನಾದೆನಿಂದು ಪ್ರೀತಿಯಿಲ್ಲದೆ,
ಅಡವಿಯೊಳಲೆದಲೆದು ಬಸವಳಿದು ನಿಂತೆ, ಜಡದೇಹದಡಿಯಲ್ಲಿ ಕದಡಿದ
ಸಂತನೊಬ್ಬನ ಕಮರಿದ ಕನಸರಾಶಿಯಿಲ್ಲಿ...
ಅಮ್ಮನಿಲ್ಲದ ಅಪ್ಪನೊಬ್ಬನ ಮಗನ
ಕರುಣಕತೆಯೊಳಡಗಿದ ಕಂಬನಿಯು.
ಧಾರುಣವಾದ ತಾರುಣ್ಯದ ಮಾರಣಹೋಮದ ಕರ್ಮಕಾಂಡ!!