ಗೆಳೆಯಾ..
ಗೆಳೆಯಾ..
ಈ ಸಂಜೆ ವ್ಯಾಳೆಯಲಿ ತಂಪುಗಾಳಿಗೆ
ತೂರಾಡುತಿದೆ ನನ್ನೀ ಮುಂಗುರುಳು..
ಅದಕೆ ನಿನ್ನದೇ ಬೆರಳತುದಿ ಬೇಕಿಹುದು
ಸವರಿ ಮುದಗೈದು ಸಂಭ್ರಮಿಸಲು..
ಹರಿವ ನೀರಿಗೂ ನನ್ನೊಡಲ ಕಂಡು
ಕೊಂಚ ಕಿಚ್ಚು ಹೆಚ್ಚಾಗಿದೆ ನೋಡು.
ಈ ಕೆಂಪಿನ ಸೀರೆಯಲಿ ಮಿಂಚುವುದ
ಕಂಡು ಪೈಪೋಟಿಗಿಳಿದಂತಿದೆ ಜಾಡು..
ನನ್ನ ಗೆಳತಿಯರೆಲ್ಲ ಗುಸುಗುಸುವಿನಲಿ
ನಗುವ ಮುನ್ನ, ಬಂದು ಹೋಗು ನೀ
ಮುತ್ತನಿತ್ತು ಗತ್ತಿನಲಿ ಮರಳುವೆ ನಾ..
ಮತ್ತೆ ನಾಳೆಗೆ ಭೇಟಿ ಇದೇ ವೇಳೆಯಲಿ.
ಹೋಟೆಲ್ಲಿಗೆ ಪಾರ್ಕಿಗೆ ಕರೆಯಬೇಡ
ಈಗ ಕೊರೋನಾ ತೊಡರಿಕೊಂಡಿದೆ
ರಾತ್ರಿ ಪಾಳಿ ಪೇದೆಗಳ ಕಾಟವೊಂದಿದೆ
ಈ ಕಾವೇರಿಯವ್ವನ ತಟವೇ ಸಾಕಿದೆ..
ಬರುವಾಗ ಮಲ್ಲೆದಂಡೆಯೊಂದಿರಲಿ
ತರುವಾಗ ಅದರೊಳಗೆ ಪ್ರೀತಿಯಿರಲಿ
ಕರಗುವ ನಾವು ಅದರೊಳೊಂದಾಗಿ
ಬೆರೆಯುವ ಮಾವುಬೇವಿನ ತೆರದಲಿ.
ಪತ್ರ, ಕವನಗಳ ವಿನಿಮಯ ಸಾಕು
ಖಾತ್ರಿ ಮಾಡಲು ನೀನು ಬರಲೇಬೇಕು
ಎಂದೇನೂ ನಾ ದುಂಬಾಲು ಬೀಳೋಲ್ಲ..
ನೆನಪಿರಲಿ ನೀ ನನಗೆ ಗೆಳೆಯನಷ್ಟೇ ಅಲ್ಲ, ಅಂತರಂಗದ ನಲ್ಲಾ...