ಬೆಂಗಳೂರಿನ ಮಳೆ
ಬೆಂಗಳೂರಿನ ಮಳೆ
ಬೆಂಗಳೂರಿನ ಮಳೆಯ ರಭಸಕ್ಕೆ,
ಹಾದಿಬೀದಿಗಳು ತುಂಬಿ ತುಳುಕಿದಂತೆ,
ಅವನೋಡೋಡಿ ಬಂದ ಆತುರಕೆ,
ನನ್ನೆದೆಯ ಬಡಿತ ಇಮ್ಮಡಿಸಿತು.
ಮನದಂಗಳದಲಲ್ಲಿ ಬಣ್ಣದ ರಂಗವಲ್ಲಿ
ತಂತಾನೆ ಅರಳಿ ಚಿತ್ತಾರ ಮೂಡಿಸಿತ್ತು.
ಅದೇಕೆ ತಳಮಳ? , ಏದುಸಿರ ಕಳವಳ?
ಎನಲು ಅವನಾಡಿದ ಒಲವನುಡಿಗೆ,
ಪ್ರೀತಿ ಚಿಮ್ಮಿಸಿ ಹೃದಯ ಹಾಡಿತು.
ಕೆರೆಕೊಳ್ಳಗಳು ಹರಿದಂತೆ, ಮೊರೆತು,
ನಾ ಬರೆದ ಕವನಕೆ ಅನುರಾಗ ಬೆರೆಸಿ,
ಪ್ರಣಯದೋಣಿಯಲಿ ತೇಲಿಸಿದ್ದ..
ನಲ್ಲೆ ಒಲ್ಲೆಯೆನ್ನದೇ ಒಪ್ಪಿಬಿಡು, ತಡವಾದೀತು.
ಇಲ್ಲೆ, ಈಗಲೇ, ಕೊಟ್ಟುಬಿಡುವೆ ನನ್ನೆಲ್ಲವನು.
ಗಲ್ಲ, ತುಟಿ ಸವರಿ, ಸಾಂತ್ವನಿಸಿದ ಸಿಹಿನುಡಿಗೆ,
ಮೆಲ್ಲನೆ ನಕ್ಕು ಸಮ್ಮತಿಸಿದ್ದೆನಾದರೂ,
ಇಣುಕಿತ್ತು ಸಲ್ಲದ ಕುಹಕ ಸಂಶಯವೊಂದು ಅಂತರಂಗದಲ್ಲಿ.
ಎಲ್ಲೆ ಮೀರಿತೇ ಪ್ರೀತಿ , ತ್ಯಾಗದಲಿ ಧನ್ಯತೆಯಿತ್ತು.
ಸೊಲ್ಲಡಗಿಸಲು ಬೇಕಿತ್ತು, ಸಮಯದ ಪರಿಭಾಷೆ
ಬೆಲ್ಲದಂತೆ, ಅವನಾಡಿದ ಮಾತಲಿ ಹುರುಳಿತ್ತು.
ಕಲ್ಲು ಸಹ ಕರಗುವಂತೆ ಮೌನ ಮುರಿದಿತ್ತು.
ಲಲ್ಲೆಗರೆದು ಮಡಿಲಿಗೊರಗಿಸಿ ಸೋಲೊಪ್ಪಿತ್ತು.
ಮನದ ದುಗುಡ ದುಮ್ಮಾನಗಳು ಹಾರಿ ಹೋಗಿದ್ದವು.
ಕ್ಷಣದ ಸಂಶಯ ದೂರವೆನಿಸಿ ಹಾಯೆನಿಸಿತ್ತು...