ನಮ್ಮ ಕಾವ ಸೈನಿಕ
ನಮ್ಮ ಕಾವ ಸೈನಿಕ
![](https://cdn.storymirror.com/static/1pximage.jpeg)
![](https://cdn.storymirror.com/static/1pximage.jpeg)
ಸುತ್ತೆಲ್ಲ ಎಡೆಬಿಡದೆ ಮಂಜು ಸುರಿಯುತಿದೆ
ಮೂಳೆರಕ್ತವ ಛಳಿಯು ಹೆಪ್ಪುಗಟ್ಟಿಸಿದೆ
ಶತೃವೆಂದೆರಗುವನೋ ಯಾವ ದಿಕ್ಕಿನಲೋ
ಗಡಿಯಲ್ಲಿ ನಿಂತು ನಾ ಕಾಯಲೇಬೇಕಿದೆ
ಶತೃ ಎದುರಲಿ ನಿಂದು ಬಂದೂಕವೆದೆಗಿಡಲು
ಮಾನವೀ ಮೌಲ್ಯಗಳ ತಿಳಿಪರಾರು?
ಗುಂಡಿಗೆಗೆ ಗುಂಡಿಳಿವ ಮುನ್ನ ಮುಂದಡಿಯಿಡಲು
ಬಾಳ್ನನಿಶ್ಚಿತತೆಯ ತೋರ್ವರಾರು?
ಅಧಿಕಾರಲಾಲಸೆಗೆ ದೇಶ ಒಡೆದರು ಅಂದು
ಆಂಗ್ಲರಿಂ ಸ್ವಾತಂತ್ರ್ಯ ಪಡೆಯುವಂದು
ದಶಕಗಳೆ ಉರುಳಿದರು ದ್ವೇಷದುರಿನಂದದು
ಈ ಸಾವು ನೋವ್ಗಳಿಗೆ ಕೊನೆಯು ಇನ್ನೆಂದು
ಡಾವರದ ಮಣ್ಣಿನಲಿ ಕನಸಿನಲಿ ತಿನಿಸಿನಲಿ
ಬೀಸುವಲರಲಿ ಹೂವ ಸೌಗಂಧದಲ್ಲಿ
ಮಕರಂದದಲಿ ಹರಿವ ನೀರ ಹನಿಹನಿಯಲ್ಲಿ
ರುಧಿರ ವಾಸನೆ ತುಂಬಿ ತುಳುಕುತಿಲ್ಲಿ
ಸೈನಿಕರಿಗಾಗಿಯೇ ಈ ದೇಶವಿದೆಯೇನು
ಸೈನಿಕರು ಮಾತ್ರವೇ ಕಾಯಬೇಕೇನು
ರಾಷ್ಟ್ರರಕ್ಷಣೆ ಹೊಣೆಯು ಪ್ರಜೆಗಳಿಗೆ ಬೇಡೇನು
ಇಂಥ ಸತ್ಕಾರ್ಯಕ್ಕೆ ಮುಂಬನ್ನಿರಿನ್ನು
ಸೈನಿಕರು ಮಾತ್ರವೇ ದೇಶ ಕಾಯಲು ಬೇಕು
ಎಂಬ ಭ್ರಾಂತಿಯ ತೊರೆದು ನುಗ್ಗಿ ಬನ್ನಿ
ಕಾದಲು ಕಾಯಲು ಸಿಂಹ ಗುಂಡಿಗೆ ಬೇಕು
ಎಂಬ ಸತ್ಯವನೀಗ ಅರಿಯಬನ್ನಿ
ಪ್ರತಿ ನಾಗರಿಕನಿಗೂ ತರಬೇತಿಯನು ನೀಡಿ
ಬಂದೆಲ್ಲ ದೇಶವನು ಕಾಯಲಿಲ್ಲಿ
ಜಾತಿ ಮತ
ಲಿಂಗಗಳ ಬಿಟ್ಟೆಲ್ಲರೊಗ್ಗೂಡಿ
ಗಡಿಯಲಡಿತೆಗೆಯದೆಲೆ ನಿಲ್ಲಲಿಲ್ಲಿ
ಶಿಸ್ತು ಸಂಯಮ ಮರೆತು ಸ್ವಾರ್ಥದಿಂದಲಿ ಮಲೆತು
ವಾಕ್ಸಮರದಲಿ ಧೈರ್ಯ ಮೆರೆವವರೆ ಬನ್ನಿ
ಕೇಳಿಸದು ಕಿವಿಮುಚ್ಚೆ ಇತರರಾಡುವ ಮಾತು
ಗುಂಡಿಗಾಗತಿಯಿಲ್ಲ ನೋಡಬನ್ನಿ
ಅಧಿಕಾರ ಅಂತಸ್ತು ಅತಿ ಆಸ್ತಿ ಸಂಪತ್ತು
ಇದರಲ್ಲೇ ಮುಳುಗೇಳ್ವ ರಾಜಕಾರಣಿಯೆ
ದೇಶ ಸಂರಕ್ಷಣೆಯ ಹೊಣೆಯ ನೀ ಹೊತ್ತು
ಇಲ್ಲಿ ಬರುವಾ ಮುನ್ನ ಶ್ರಮವನರಿಯೆ
ಸುತ್ತ ರಕ್ಷಕ ಭಟರು ಕಣ್ಗಾವಲಿನ ನಡುವೆ
ಮೆರೆದು ಶೌರಿಯ ತೆರದಿ ಆಡುವವರೆಲ್ಲ
ಕೊರೆವ ಛಳಿಯಲಿ ಬಟ್ಟಬಯಲಿನ ನಡುವೆ
ನಿಂತಾಗ ತಿಳಿಯುವುದು ಶೌರ್ಯವೆಲ್ಲ
ಶತೃವನು ಕೊಂದಾಗ ಮೆಚ್ಚದೆಲೆ ಹೊಗಳದೆಲೆ
ಅದರಲ್ಲೂ ಲಾಭವು ನಿಮಗೆ ಸಿಗೆ ಸಾಕು
ಜೀವಕಾಪತ್ತಿಲ್ಲ ಉಂಬುವುದು ಖಚಿತವಿರೆ
ದೇಶ ಕಾಯುವ ಕೆಲಸ ಏಕೆ ಬೇಕು?
ನಿತ್ಯ ದೀಪಾವಳಿ ನಡೆದಿಹುದು ಇಲ್ಲೆಲ್ಲ
ಬರಲಿ ಪರಿಸರವಾದಿ ಮಾಲಿನ್ಯ ತಡೆಗೆ
ಸಿಡಿದ ಮದ್ದಿನಿಂ ಗಂಧಕದ ಹೊಗೆ ಎಲ್ಲ
ಶುದ್ಧ ಹವೆಯದು ಸಿಗಲಿ ನಮ್ಮ ನಾಸಿಕಕೆ
ಮೈಕು ಸಿಕ್ಕೊಡೆ ಕೊರೆವ ಬುದ್ದಿಜೀವಿಗಳೆಲ್ಲ
ಪಾಮರರ ಬಿಟ್ಟರಿಗಳೆದುರೊರಲಿರೈ
ಬೇಸತ್ತು ಭಾಷಣಕೆ ಓಡೆ ಶತೃಗಳೆಲ್ಲ
ಕೂಗಿರೈ ಆಗೊಮ್ಮೆ ಭಾರತಿಗೆ ಜೈ