ನಾನು
ನಾನು
ನಾನೇನೆಂಬುದನರಿಯೆ
ನನ್ನ ಈ ದೇಹ , ಮನಸುಗಳು ನನ್ನದಲ್ಲ ಹರಿಯೆ..
ನೀನೇ ಇಟ್ಟ ಹಣೆಬರಹ ಪಟ್ಟಿ
ಓದಿಕೊಳಲೂ ಆಗದಂತೆ ಮುಚ್ಚಿಟ್ಟೆ
ದೇಹಕ್ಕೆ ಜೀವ ತುಂಬಿ ಅಟ್ಟಿಬಿಟ್ಟೆ..
ಕೊಳೆಯಿತು ಮನಸು ಹಲವು ಆಸೆಗೆ
ಬಲಿಯಾಗಿ , ಬಿಡಿಸಲಾಗದ ಬೆಸುಗೆ
ನನ್ನಿರವಿನರಿವು ನನಗೇ ತಿಳಿಯದಾಗಿದೆ
ಪಯಣದ ಆಸು ಪಾಸು ಸೆಳೆತದ
ಕವಲುಗಳನಿಟ್ಟು ನೀ ಒಳನೂಕಿಬಿಟ್ಟೆ
ಸರೀ ದಾರಿ ಅರಿಯದೆ ನಾ ಹೆಜ್ಜೆಯಿಟ್ಟೆ
ಎದುರಾದವು ಬೇಡದ ತುಮುಲಗಳು
ಮರೆಮಾಚಲಾಗದೆ ಬೆತ್ತಲಾದವು
ಕತ್ತಲಲಿ, ಕುರುಹುಗಳೇ ಉಳಿದವು
ಮನದ ಮೂಲೆಯಲ್ಲಿ ಕುಳಿತ ನೀನು
ಮೌನವಾದೆ, ಗುಡಿಗೋಪುರದಂತೆ
ಬಸವಳಿದೆ ಬಹಳ ನಡೆಯಲಾರದಾದೆ
ಯಾವ ಪುರುಷಾರ್ಥಕ್ಕಾಗಿ ನಾನಿಲ್ಲಿಹೆ
ಎಂಬುದನರುಹು ಮೊದಲು , ಆಗುತಿದೆ ಪ್ರಕೃತಿಯ ಮಾರಣಹೋಮ ಇಲ್ಲಿ
ಜಗದ ಗಾಳಿ, ಬೆಳಕು ,ಜಲ, ನೆಲ ಸಂಪನ್ಮೂಲಗಳು ಹೋಮಕುಂಡದಿ
ಭಸ್ಮವಾಗುತಿವೆ, ನಿನ್ನ ಹೆಸರಲೇ..
ಅಹಿತಚಿಂತಕರೇ ಇಲ್ಲಿ,ಕುಲೀನರ ಸಂತೆ
ಅನ್ಯರ ಕೆಡುವಿ ಬಾವಿ ತೋಡುವರಲ್ಲಾ
ಉಪ್ಪರಿಗೆಯೇರಿ ತಾ ಬೀಗುವರೆಲ್ಲಾ
ದೇವಾ! ನಾ ಬಂದೆ ನಿಮಿತ್ತ ಮಾತ್ರವಿಲ್ಲಿ
ಬೇಡವೆನಗೆ ಉಪ್ಪರಿಗೆಗಳ ಮೋಹ
ಮಾಡಲಾರೆ ಮನಕೊಪ್ಪದ ಕಾಯಕ
ಮುಗಿಸುವಾಸೆ ಇಲ್ಲೇ ಕರ್ಮಕಾಂಡಗಳ
ಮುಕ್ತವಾಗಿಸು ನನ್ನಾತ್ಮವ ಎಲ್ಲದರಿಂದ
ಮಗುವಿನಂತೆ ಮುಗ್ದಳಾಗ ಬಯಸುವೆ.