ನಾವು ನಾವಾಗಿರಬೇಕು
ನಾವು ನಾವಾಗಿರಬೇಕು
ಒಂದು ಊರಿನಲ್ಲಿ ಒಬ್ಬ ಒಂದು ದಿನಸಿ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದ. ಇವನಿಗೆ ರಾತ್ರಿಯಾದರೆ ಒಂದು ಇಲಿ ಬಹಳ ಕಷ್ಟಕೊಡುತ್ತಿತ್ತು ಮೂಟೆಗಳನ್ನೆಲ್ಲ ಕತ್ತರಿಸಿ ಧಾನ್ಯಗಳನ್ನೆಲ್ಲಾ ಹಾಳುಮಾಡುತ್ತಿತ್ತು. ಇದರಿಂದ ಬಹಳ ನಷ್ಟ ಅನುಭವಿಸಬೇಕಾಯ್ತು. ಇವನ ಸ್ನೇಹಿತನೊಬ್ಬನಿಗೆ ಇದರ ಬಗ್ಗೆ ತಿಳಿಸಿದ. ಅವನು ರಾಜನ ಅರಮನೆಯ ಕೆಲಸಗಾರನಾಗಿದ್ದ ಕಾರಣ ಸ್ನೇಹಿತನಿಗೆ ಸಹಾಯ ಮಾಡಲು ಅರಮನೆಯಲ್ಲಿದ್ದ ಒಂದು ದೊಡ್ಡ ಬೆಕ್ಕನ್ನು ತಂದು ಅಂಗಡಿಯಲ್ಲಿ ಬಿಟ್ಟ. ಆ ಬೆಕ್ಕು ಸುಖವಾಗಿ ಅರಮನೆಯಲ್ಲಿ ಬೆಳೆದ ಕಾರಣ ಇಲಿ ಎದುರಿಗೆ ಬಂದರೂ ಹಿಡಿಯಲಿಲ್ಲ.ಅದಕ್ಕೆ ಅದರ ಅವಶ್ಯಕತೆ ಇರಲಿಲ್ಲ. ಹಸಿವಾಗುವ ಮೊದಲೇ ಅರಮನೆಯಲ್ಲಿ ಬಗೆ ಬಗೆಯ ಊಟ ಹಾಲು ಸಮಯಕ್ಕೆ ಸರಿಯಾಗಿ ಬೇಕಾದಷ್ಟು ಕೊಡುತ್ತಿದ್ದರು. ಆದ್ದರಿಂದ ಅದಕ್ಕೆ ಇಲಿಯನ್ನ ಹಿಡಿದು ತಿನ್ನುವುದು ಬಹಳ ದೂರದ ವಿಷಯ. ಇಲಿಯೂ ಬೆಕ್ಕಿನಬಳಿಯೇ ಓಡಾಡಿಕೊಂಡು ಇರುವುದು ಕಿಟಕಿಯಿಂದ ನೋಡಿದ. ಮಾರನೇದಿನ ಬೆಕ್ಕನ್ನು ತೆಗೆದುಕೊಂಡು ಹೋಗಿ ಅಲ್ಲೇ ಬಿಟ್ಟು ಒಂದು ಸಾಧಾರಣ ಬೆಕ್ಕನ್ನ ತಂದು ರಾತ್ರಿ ಬಿಟ್ಟ. ಸ್ವಲ್ಪ ಸಮಯದಲ್ಲೇ ಇಲಿಯನ್ನು ಬಾಯಲ್ಲಿ ಕಚ್ಚಿ ಹಿಡಿದು ಹೊರಗೆಬಂತು. ಆಗ ಅವನ ಸ್ನೇಹಿತನಿಗೆ ಹೇಳಿದ ಎರಡೂ ಬೆಕ್ಕುಗಳೇ ಆದರೂ ಒಂದು ಬೆಕ್ಕಿಗೆ ಬೆಕ್ಕಿನಂತೆ ಇರಲು ತಿಳಿದಿಲ್ಲ. ನಾಳೆ ಅದು ಯಾವುದೊ ಕಾರಣಕ್ಕೆ ಅರಮನೆಯಿಂದ ಹೊರಗೆ ಹೋದರೆ ಬದುಕಲಾರದು. ಅದೇ ಈ ಬೆಕ್ಕು ನೋಡು ಎಲ್ಲಿ ಬೇಕಾದರೂ ಜೀವಿಸಬಹುದು ಅಂದ. ಇದು ನಮ್ಮಜೀವನಕ್ಕೆ ಹಿಡಿದ ಕನ್ನಡಿ ಅಲ್ಲವೇ ಸ್ನೇಹಿತರೆ?