ಸ್ನೇಹ
ಸ್ನೇಹ
ಕಾಮಿನಿ ಹಾಗೂ ಕುಮುದಳ ಒಂದನೆಯ ತರಗತಿಯಲ್ಲಿ ಪ್ರಾರಂಭವಾದ ಸ್ನೇಹ ಕಾಲೇಜು ಜೀವನದ ಅಂತಿಮ ವರ್ಷದಲ್ಲಿತ್ತು.ಇವರಿಬ್ಬರ ಗೆಳೆತನವನ್ನು ಕಂಡು ಸಹಪಾಠಿಗಳೂ ಕುರುಬುತ್ತಿದ್ದರು. ಆಗ ತಾನೆ ಅಂತಿಮ ವರ್ಷದ ಬಿ.ಎ ತರಗತಿ ಪ್ರಾರಂಭವಾಗಿತ್ತು.ಹೊಸತಾಗಿ ಕಾಲೇಜಿಗೆ ಸೇರ್ಪಡೆಯಾದ ಕಾಂಚನಾಳಿಗೆ ಯಾರ ಪರಿಚಯವಿಲ್ಲದೆ ಒಬ್ಬಂಟಿಯಾಗಿ ಇರುತ್ತಿದ್ದಳು.ಎಲ್ಲಾ ವಿದ್ಯಾರ್ಥಿಗಳು ಅವರವರ ಸ್ನೇಹಿತರೊಂದಿಗೆ ಗುಂಪು ಕಟ್ಟಿಕೊಂಡು ಆಟ ಪಾಠಗಳಲ್ಲಿ ಜೊತೆಯಾಗಿದ್ದರು. ಕಾಮಿನಿ ಮತ್ತು ಕುಮುದಾ ಇಬ್ಬರೇ ಜೊತೆಯಾಗಿರುವುದನ್ನು ಗಮನಿಸಿದ ಕಾಂಚನಾ ಅವರಿಬ್ಬರ ಸ್ನೇಹ ಸಂಪಾದಿಸಲು ಅವಕಾಶಕ್ಕಾಗಿ ಕಾಯುತ್ತಿದ್ದಳು. ಒಂದು ದಿನ ಕಾಮಿನಿ ಕುತ್ತಿಗೆಗೆ ಹಾಕಿಕೊಂಡ ಶಾಲು ಡೆಸ್ಕ್ ಗೆ ಸಿಕ್ಕಿಕೊಂಡು ಏಳಲಾರದೆ ಮುಗ್ಗರಿಸಿ ಬಿದ್ದಳು.ಅಲ್ಲಿಯೇ ಇದ್ದ ಕಾಂಚನಾ ಅವಳಿಗೆ ಏಳಲು ಸಹಾಯ ಮಾಡಿದಲ್ಲದೇ ಕುಡಿಯಲು ನೀರನ್ನು ಕೊಟ್ಟಳು.ಹೀಗೆ ಪ್ರಾರಂಭವಾಯಿತು ಮೂವರ ಸ್ನೇಹ.
ಕಾಮಿನಿ ಮತ್ತು ಕುಮುದಾ ತುಂಬಾ ಸಂಕೋಚ ಸ್ವಭಾವದ ಹುಡುಗಿಯರು. ಕಾಲೇಜಿನ ಯಾವುದೇ ದೊಂಬಿ ಗಲಾಟೆಯಲ್ಲಿ ಪಾಲ್ಗೊಳ್ಳುತಿರಲಿಲ್ಲ. ಕಾಲೇಜಿಗೆ ಬಂಕ್ ಹಾಕದೇ, ತಾವಾಯಿತು ತಮ್ಮ ಓದಾಯಿತು ಎಂದು ಇದ್ದವರು. ಕಾಂಚನಾಳ ಜೊತೆಯಲ್ಲಿ ಗೆಳೆತನ ಪ್ರಾರಂಭವಾದ ಮೇಲೆ ಒಂದೊಂದೇ ದುರಾಭ್ಯಾಸಗಳನ್ನು ಕಲಿತರು.
ಒಂದು ದಿನ ಕ್ಲಾಸ್ ಗೆ ಬಂಕ್ ಹಾಕಿ ಸಿನೆಮಾ ನೋಡಲು ಹೋಗೊಣ ಎಂದಳು ಕಾಂಚನಾ. ಮೊದಲಿಗೆ ಇಬ್ಬರು ತಿರಸ್ಕರಿಸಿದರೂ ಕಾಂಚನಾಳ ಬಲವಂತಕ್ಕೆ ಒಪ್ಪಿ ಅವಳೊಂದಿಗೆ ಹೊರಟರು.ಮತ್ತೊಂದು ದಿನ ಕಾಂಚನಾ, ಕಾಮಿನಿ ಮತ್ತು ಕುಮುದಾಳಿಗೆ ಕಾಲೇಜಿಗೆ ರಜೆ ಹಾಕಿಸಿ ಅವಳ ಹಳೆ ಫ್ರೆಂಡ್ಸ್ ಗಳನ್ನು ಭೇಟಿ ಮಾಡಲು ಕರೆದುಕೊಂಡು ಹೋದಳು. ಕಾಂಚನಾಳ ಗೆಳತಿಯರ ಒತ್ತಾಯಕ್ಕೆ ಅವರ ಜೊತೆಯಲ್ಲಿ ಕಾಮಿನಿ ಮತ್ತು ಕುಮುದಾ ಕೂಡ ಪಬ್ ಗೆ ಹೋದರು.
ಪಬ್ ನಲ್ಲಿ ಕಾಮಿನಿ ಹಾಗೂ ಕುಮುದಾಳನ್ನು ಕಂಡ ಕಾಂಚನಾಳ ಗೆಳೆಯರು, ಅವರಿಬ್ಬರ ಪೋನ್ ನಂಬರ್ ಅನ್ನು ಕಾಂಚನಾಳಿಂದ ಪಡೆದು ಪೋನ್ ಕರೆ ಮಾಡುವುದರ ಜೊತೆಗೆ ಅಸಭ್ಯ ಮತ್ತು ಅಶ್ಲೀಲ ಮೆಸೇಜ್ ಕಳುಹಿಸುತ್ತಿದ್ದರು. ಯಾರು ಮೆಸೇಜ್ ಕಳುಹಿಸುತ್ತಾರೆಂದು ತಿಳಿಯದೆ ನಂಬರ್ ಬ್ಲಾಕ್ ಮಾಡಿದರೂ ಹೊಸ ನಂಬರ್ನಿಂದ ಮೆಸೇಜ್ ಗಳು ಮತ್ತು ಪೋನ್ ಕರೆಗಳು ಬರುತ್ತಿದ್ದವು.ಮನೆಯವರಿಗೆ ಹೇಳಲಾಗದೆ ಕಾಮಿನಿ ಹಾಗೂ ಕುಮುದಾ ಮನದಲ್ಲಿಯೇ ಕೊರಗಿದರು.
ಇಷ್ಟರವರೆಗೆ ಕಾಲೇಜಿಗೆ ಬಂಕ್ ಹಾಕದೆ ಇದ್ದ ಕಾಮಿನಿ ಹಾಗೂ ಕುಮುದಾ ಒಂದು ತಿಂಗಳಿನಲ್ಲಿ ಹತ್ತಕ್ಕೂ ಹೆಚ್ಚು ರಜೆ ಹಾಕಿದಾಗ ಕಾಲೇಜಿನ ಪ್ರಾಂಶುಪಾಲರು ಇಬ್ಬರನ್ನೂ ಕರೆದು "ಯಾಕೆ ಇಷ್ಟು ರಜೆ ಹಾಕಿದ್ದೀರಾ?" ಎಂದು ಕೇಳಿದರು. ಇಬ್ಬರೂ ಮೌನವಾಗಿರುವುದನ್ನು ಕಂಡು ಇನ್ನು ಮುಂದೆ ಇದೇ ರೀತಿ ರಜೆ ಹಾಕಿದರೆ ಮನೆಯವರಿಗೆ ವಿಷಯ ತಿಳಿಸುತ್ತೇನೆ ಎಂದು ಗದರಿಸಿದರು.
ಪೋನ್ ಕರೆ ಮತ್ತು ಅಸಭ್ಯ ಮೆಸೆಜ್ ನಿಂದ ಮೊದಲೆ ನೊಂದಿದ್ದ ಇಬ್ಬರೂ, ಇನ್ನೂ ಕಾಲೇಜಿಗೆ ರಜೆ ಹಾಕಿದ ವಿಷಯ ಮನೆಯವರಿಗೆ ತಿಳಿದರೆ ಎಂದು ಹೆದರುತ್ತಾರೆ. ಕಾಮಿನಿ ಮತ್ತು ಕುಮುದಾಳಿಗೆ ತಮ್ಮೆಲ್ಲಾ ಸಮಸ್ಯೆಗಳು ಪ್ರಾರಂಭವಾದದ್ದು ಕಾಂಚಾನಳಿಂದ ಎಂದು ತಿಳಿಯುತ್ತದೆ.ಆದಷ್ಟು ಅವಳನ್ನು ಹಾಗೂ ಅವಳ ಸ್ನೇಹವನ್ನು ದೂರಮಾಡುತ್ತಾರೆ.
ಕಾಂಚನಾಳಿಂದ ದೂರವಾದ ಮೇಲೆ ಇಬ್ಬರೂ ಕಾಲೇಜಿಗೆ ರಜೆ ಹಾಕುವುದು ಕಡಿಮೆಯಾಗುತ್ತದೆ.ಪೋನ್ ಕರೆಗಳು ಮತ್ತು ಮೆಸೇಜ್ ಗಳು ಬರುವುದು ನಿಲ್ಲುತ್ತವೆ.ಕಾಮಿನಿ ಮತ್ತು ಕುಮುದಾ ಮೊದಲಿನ ಹಾಗೆ ಓದಿನಲ್ಲಿ ತಮ್ಮನ್ನು ತೊಡಗಿಸಿಕೊಂಡರು.ವಾರ್ಷಿಕ ಪರೀಕ್ಷೆಯಲ್ಲಿ ಇಬ್ಬರೂ ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾದರು.
ಕಾಲೇಜಿನ ಪ್ರಾಂಶುಪಾಲರು ಕಾಮಿನಿ ಹಾಗೂ ಕುಮುದಾಳನ್ನು "ನೀವಿಬ್ಬರೂ ನಮ್ಮ ಕಾಲೇಜಿಗೆ ಕೀರ್ತಿ ತಂದವರು " ಎಂದು ಹೊಗಳಿ ಸನ್ಮಾನಿಸಿದರು.
ಕಾಂಚನಾ ಸಿನೆಮಾ, ಪಬ್ ಎಂದು ಸಮಯ ಹಾಳು ಮಾಡಿ ಎಲ್ಲಾ ವಿಷಯದಲ್ಲೂ ಅನುತ್ತೀರ್ಣಳಾಗಿ ತಲೆ ತಗ್ಗಿಸಿ ನಿಂತಿರುವುದನ್ನು ಕಂಡ ಕಾಮಿನಿ ಹಾಗೂ ಕುಮುದಾಳಿಗೆ "ಅಲ್ಪರ ಸಂಘ ಮಾಡಿದರೆ ಅಭಿಮಾನ ಭಂಗವಾಗುತ್ತದೆ" ಎಂದು ಶಾಲೆಯಲ್ಲಿ ಕಲಿತ ಗಾದೆ ಮಾತು ನೆನಪಾಗುತ್ತದೆ .