ಒಗ್ಗಟ್ಟಿನಲ್ಲಿ ಬಲವಿದೆ
ಒಗ್ಗಟ್ಟಿನಲ್ಲಿ ಬಲವಿದೆ
![](https://cdn.storymirror.com/static/1pximage.jpeg)
![](https://cdn.storymirror.com/static/1pximage.jpeg)
ಒಂದು ಊರಿನಲ್ಲಿ ಮಂಜು ಮತ್ತು ರಂಜು ಇಬ್ಬರು ಅಣ್ಣ ತಮ್ಮಂದಿರು ಇದ್ದರು.ಆಸ್ತಿ ಹಂಚುವಿಕೆಯ ವಿಚಾರದಿಂದ ಇಬ್ಬರೂ ಬದ್ದವೈರಿಗಳಾಗಿ ಅಕ್ಕ ಪಕ್ಕದಲ್ಲಿ ಬೇರೆ ಮನೆ ಮಾಡಿದ್ದರು. ತಂದೆಯ ವೃತ್ತಿಯಾದ ಕುರಿ ಸಾಕಾಣಿಕೆಯನ್ನೇ ಮಾಡಿ ಇಬ್ಬರೂ ಜೀವನ ನಡೆಸುತ್ತಿದ್ದರು.
"ಕಾಡಿನಿಂದ ಚಿರತೆಯೊಂದು ಬಂದಿದೆ, ಸಾಕಿದ ಕುರಿಗಳನ್ನು ಎತ್ತಿಕೊಂಡು ಹೋಗುತ್ತದೆ " ಎಂಬ ಸುದ್ದಿ ಕೇಳಿ ಮಂಜು ಮತ್ತು ರಂಜು ಇಬ್ಬರಿಗೂ ತಲೆಬಿಸಿ ಶುರುವಾಯಿತು. ತಮ್ಮ ಕುರಿಗಳನ್ನು ಕಾಯಲು ರಾತ್ರಿಯಿಡೀ ಜಾಗರಣೆ ಮಾಡುತ್ತಿದ್ದರು. ಬೆಳಗಿನ ಹೊತ್ತು ಕೆಲಸ ರಾತ್ರಿಯ ಹೊತ್ತು ಜಾಗರಣೆ ಮಾಡಿ ಅಣ್ಣತಮ್ಮಂದಿರ ಆರೋಗ್ಯ ದಿನದಿಂದ ದಿನಕ್ಕೆ ಹದಗೆಟ್ಟಿತು. ಇದರಿಂದ ನೊಂದ ಇಬ್ಬರೂ, ಚಿರತೆಯನ್ನು ಹಿಡಿದು ಕುರಿಗಳ ಜೊತೆಗೆ ತಮ್ಮ ಆರೋಗ್ಯವನ್ನು ಉಳಿಸಬೇಕೆಂದು ಊರಿನ ಮುಖಂಡರಲ್ಲಿ ಮನವಿ ಮಾಡಲು ಹೋದರು.
ಇವರ ಮಾತನ್ನು ಆಲಿಸಿದ ಮುಖಂಡ "ಚಿರತೆಯನ್ನು ಹಿಡಿಯುವುದು ಸುಲಭದ ಕೆಲಸವಲ್ಲ, ಸ್ವಲ್ಪ ಹೆಚ್ಚು ಕಡಿಮೆ ಆದರೆ ಪ್ರಾಣವನ್ನೇ ಕಳೆದುಕೊಳ್ಳಬೇಕಾಗುತ್ತದೆ. ಈಗಾಗಲೇ ಅರಣ್ಯಧಿಕಾರಿಗಳ ಗಮನಕ್ಕೆ ಈ ವಿಷಯವನ್ನು ತಂದಿದ್ದೇವೆ. ಅವರು ಚಿರತೆಯನ್ನು ಹಿಡಿಯುವವರೆಗೂ ನೀವಿಬ್ಬರೂ ಒಂದು ದಿನ ಒಬ್ಬರಂತೆ ಜಾಗರಣೆ ಮಾಡಿ ನಿಮ್ಮ ಕುರಿಯನ್ನು ಉಳಿಸಿಕೊಳ್ಳಿ" ಎಂದರು.
ಮಂಜು ಮತ್ತು ರಂಜು ಮುಖಂಡನ ಮಾತನ್ನು ಮೊದಲಿಗೆ ಒಪ್ಪಿಕೊಳ್ಳದಿದ್ದರೂ ತಮ್ಮ ಆರೋಗ್ಯದ ದೃಷ್ಟಿಯಿಂದ ಸರಿಯೆಂದು ಒಪ್ಪಿಕೊಂಡರು.ಇಬ್ಬರೂ ಮನೆಗೆ ಬಂದು ಒಪ್ಪಂದ ಮಾಡಿಕೊಳ್ಳುತ್ತಾ ಇಂದಿನ ರಾತ್ರಿ ಮಂಜು ಇಬ್ಬರ ಕುರಿಯನ್ನು ಕಾವಲು ಕಾಯುವುದು ರಂಜು ಮಲಗುವುದೆಂದು ಮೊದಲೇ ತೀರ್ಮಾನಿಸಿದಂತೆ ಮನೆಯೊಳಗೆ ಇರುತ್ತಾರೆ.
'ಮಂಜಣ್ಣ ತನ್ನ ಕುರಿಗಳನ್ನು ಕಾಯುತಿಲ್ಲವೋ ? 'ಎಂಬ ಅನುಮಾನ ಬಂದು ಮಧ್ಯರಾತ್ರಿಯಲ್ಲಿ ಎದ್ದು ರಂಜು ಹೊರಬರುತ್ತಾನೆ.
ಚಿರತೆಯೊಂದು ರಂಜುವಿನ ಕುರಿಯನ್ನು ತಿನ್ನಲು ಹೊಂಚುಹಾಕುತಿರುವುದನ್ನು ನೋಡಿ ಮಂಜು ತನ್ನ ಪ್ರಾಣವನ್ನು ಪಣಕ್ಕಿಟ್ಟು ಚಿರತೆಯೊಂದಿಗೆ ಹೋರಾಡುತಿರುವುದು ಕಾಣಿಸಿದಾಗ ರಂಜು ಊರಿನವರಿಗೆಲ್ಲಾ ಮಾಹಿತಿಕೊಟ್ಟು ಮನೆಯೊಳಗಿದ್ದ ಬಲೆಯನ್ನು ಚಿರತೆಯ ಮೇಲೆ ಬೀಸುತ್ತಾನೆ.
ಬಲೆಯಲ್ಲಿ ಸಿಕ್ಕಿಬಿದ್ದ ಚಿರತೆ ಹೋರಾಡಲಾಗದೆ ಒದ್ದಾಡುತ್ತದೆ. ಅಷ್ಟರಲ್ಲಿ ಅರಣ್ಯಾಧಿಕಾರಿಗಳು ಹಾಗೂ ಜನರು ಸೇರಿ ಚಿರತೆಯನ್ನು ಹಿಡಿದು ಬೋನಿನಲ್ಲಿ ಹಾಕಿ ತೆಗೆದುಕೊಂಡು ಹೋಗುತ್ತಾರೆ.
ರಂಜು ಅಣ್ಣನ ಕೈಕಾಲಿಗೆ ಆದ ಗಾಯವನ್ನು ನೋಡಿ ತನ್ನ ನೀಚ ಬುದ್ದಿಯ ಬಗ್ಗೆ ಅಸಹ್ಯಪಟ್ಟು ನೊಂದುಕೊಳ್ಳುತ್ತಾ ಮಂಜುವಿಗೆ ಮುಲಾಮು ಹಚ್ಚುತಾನೆ. ಊರಿನ ಮುಖಂಡ ಇವರ ಬಳಿ ಬಂದು "ನೀವಿಬ್ಬರೂ ಒಟ್ಟಾಗಿ ಇದ್ದದ್ದರಿಂದ ನಿಮ್ಮ ಪ್ರಾಣದ ಜೊತೆಗೆ ನಿಮ್ಮ ವ್ಯಾಪಾರವು ಉಳಿಯಿತು.ಒಬ್ಬರಿಗೊಬ್ಬರು ಮಾತನಾಡದೇ ಇದ್ದಿದ್ದರೆ ನಿಮ್ಮಿಬ್ಬರಲ್ಲಿ ಒಬ್ಬರು ಸಾಯುತ್ತಿದ್ದರು. ಇದೇ ಕಾರಣಕ್ಕೆ ಹಿರಿಯರು 'ಒಗ್ಗಟ್ಟಿನಲ್ಲಿ ಬಲವಿದೆ' ಎನ್ನುವ ಗಾದೆ ಮಾತು ಹುಟ್ಟು ಹಾಕಿದ್ದು" ಎಂದು ಹೇಳಿ ಮನೆಗೆ ಹೋಗುತ್ತಾರೆ.
ರಂಜುವಿಗೆ ತನ್ನ ತಪ್ಪಿನ ಅರಿವಾಗಿ ಮಂಜುವಿನಲ್ಲಿ ಕ್ಷಮೆ ಕೋರಿ ಹಳೆಯ ದ್ವೇಷ ಮರೆತು 'ಅಣ್ಣ' ಎಂದು ಆಲಂಗಿಸುತ್ತಾನೆ. ಇನ್ನು ಮುಂದೆ ಪ್ರೀತಿ ವಿಶ್ವಾಸದಿಂದ ಬಾಳೋಣ ಎಂದು ಇಬ್ಬರೂ ತೀರ್ಮಾನಿಸುತ್ತಾರೆ.