ವೆಂಕಜ್ಜಿಯ ಬುದ್ಧಿವಂತಿಕೆ- 5
ವೆಂಕಜ್ಜಿಯ ಬುದ್ಧಿವಂತಿಕೆ- 5
ವೆಂಕಜ್ಜಿಗೆ ಶಾಲೆಗೆ ಹೋಗಬೇಕೆಂಬ ಆಸೆ ಇತ್ತು. ಕಾರಣಾಂತರಗಳಿಂದ ಮೂರನೇ ತರಗತಿಯಲ್ಲಿಯೇ ಶಾಲೆಯನ್ನು ಬಿಡಬೇಕಾಗಿತ್ತು.. ಓದಬೇಕೆಂಬ ಹಂಬಲವಿದ್ದ ವೆಂಕಜ್ಜಿ ,ಮಕ್ಕಳು ಓದುವಾಗ ಅವರೊಂದಿಗೆ ಕುಳಿತು ಓದಿ ಒಂದಿಷ್ಟು ಜ್ಞಾನವನ್ನು ಪಡೆದುಕೊಂಡಿದ್ದಳು. ಪುಸ್ತಕ ಓದುವ ಅಭ್ಯಾಸವಿದ್ದ ವೆಂಕಜ್ಜಿಗೆ ಪತ್ತೇದಾರಿ ಪುಸ್ತಕಗಳೆಂದರೆ ಬಹಳ ಅಚ್ಚುಮೆಚ್ಚು. ಮಗಳು ಕಾಲೇಜಿಗೆ ಹೋಗುವಾಗ ಕಾಲೇಜು ಲೈಬ್ರರಿ ಇಂದ ಪುಸ್ತಕವನ್ನು ತರಿಸಿಕೊಂಡು ಓದುವಷ್ಟು ಹುಚ್ಚು ವೆಂಕಜ್ಜಿಗಿತ್ತು.
ಮೊಬೈಲ್ ಬಂದ ನಂತರ ಮೊಬೈಲ್ ನಲ್ಲಿ ಹುಡುಕಿ ರೋಚಕ ತಿರುವುಗಳಿರುವ ಕಾದಂಬರಿಗಳನ್ನು ಹುಡುಕಿ ಓದುತ್ತಿದ್ದಳು. ಹೊಸತೆನೇ ಇದ್ದರೂ ಹುಡುಕಿ ಕಲಿಯುವುದೆಂದರೆ ವೆಂಕಜ್ಜಿಗೆ ಬಲು ಪ್ರೀತಿ. ಮೊಬೈಲ್ ನಲ್ಲಿ ಸೋಶಿಯಲ್ ಮೀಡಿಯಾಗಳನ್ನು ಬಳಸುವುದರ ಬಗ್ಗೆ ಕಲಿತುಕೊಂಡಿದ್ದಳು.. ಫೇಸ್ಬುಕ್ ಇನ್ಸ್ಟಾಗ್ರಾಂ ಬಳಕೆದಾರರಲ್ಲಿ ಒಬ್ಬಳಾಗಿ ತನಗೆ ಪರಿಚಯವಿರುವವರಿಗೆ ರಿಕ್ವೆಸ್ಟ್ ಕಳಿಸುವ ಮೂಲಕ " ಈ ಮುದುಕಿಗೆ ಈಗ ಇದು ಬೇಕಿತ್ತಾ"ಎಂದು ಅನಿಸಿಕೊಂಡಿದ್ದು ಉಂಟು"ಅಬ್ಬಾ ಈ ವಯಸ್ಸಿನಲ್ಲಿಯೂ ಇವುಗಳನ್ನೆಲ್ಲ ಕಲಿಯುವ ಆಸಕ್ತಿ ಇದೆಯಲ್ಲ ಮೆಚ್ಚಬೇಕು" ಎಂದು ಹೊಗಳಿಸಿಕೊಂಡಿದ್ದು ಉಂಟು.. ಅಂತೂ ಟೈಮ್ ಪಾಸ್ ಗೆಂದು ವೆಂಕಜ್ಜಿ ಟಿವಿ ಯ ಜೊತೆಗೆ ಆಗಾಗ ಮೊಬೈಲ್ ಹಿಡಿದು ಕುಳಿತುಕೊಳ್ಳುತ್ತಿದ್ದಳು.
ಇತ್ತ ಅಮ್ಮನನ್ನು ಹುಡುಕಿ ಹೊರಟ ಮನೋಹರನಿಗೆ ನಿರಾಸೆ ಕಾದಿತ್ತು. ವೆಂಕಜ್ಜಿ ಹೇಳಿದ ಆಶ್ರಮದಲ್ಲಿ ವಿಚಾರಿಸಿದಾಗ ಆ ಹೆಸರಿನವರು ಯಾರು ಇಲ್ಲವೆಂದು ವಾಪಾಸು ಕಳುಹಿಸಿದ್ದರು. ಹಾಗೆಯೇ ಆ ಊರಿನಲ್ಲಿದ್ದ ನಾಲ್ಕೈದು ಆಶ್ರಮವನ್ನು ವಿಚಾರಿಸಿದ. ಎಲ್ಲಾ ಕಡೆ ಬಂದ ಉತ್ತರ ಒಂದೇ ಆಗಿತ್ತು. ಒಂದೊಂದು ಬಾರಿ ಆಶ್ರಮದ ಮುಂದೆ ನಿಂತಾಗಲು"ಥೂ ನನ್ನಂತ ಮಕ್ಕಳು ಇರುವವರೆಗೂ ಇಂತಹ ಆಶ್ರಮಗಳು ಹೆಚ್ಚಾಗುತ್ತಲೇ ಇರುತ್ತವೆ" ಎಂದು ತನ್ನನ್ನು ತಾನು ಶಪಿಸಿಕೊಂಡ. ನನ್ನಂತ ಮೂರ್ಖರಿಂದ ಹೊರಬೀಳುವ ವೃದ್ಧ ತಂದೆ ತಾಯಿಗಳಿಗೆ ನೆಲೆ ಕಲ್ಪಿಸುವ ಮನಸ್ಸು ಮಾಡಿದ ಆಶ್ರಮದ ಸ್ಥಾಪಕರುಗಳನ್ನು ನೆನೆದು ಭಾವುಕನಾದ.. ಅದೇ ದಾರಿಯಲ್ಲಿ ಬರುತ್ತಿದ್ದ ವೆಂಕಜ್ಜಿ ಸೋತು ಕುಳಿತಿದ್ದ ಮನೋಹರನನ್ನು ಕಂಡು ಮರುಗಿದರು. ಮಾಡಿದ ತಪ್ಪಿಗೆ ಶಿಕ್ಷೆ ಆಗಲೇಬೇಕೆಂದುಕೊಂಡು ಮಾತನಾಡಿಸದೆ ಮುನ್ನಡೆದರು.
ಮನೋಹರ ಊರಿಗೆ ಬಂದು ಅದಾಗಲೇ ಆರು ತಿಂಗಳುಗಳು ಕಳೆದಿತ್ತು. ಒಂದು ಚಿಕ್ಕ ಅಂಗಡಿಯಲ್ಲಿ ಕೆಲಸವನ್ನು ಹುಡುಕಿಕೊಂಡಿದ್ದ. ಹಾಗೆಯೇ ಪುಟ್ಟದಾದ ಒಂದು ಬಾಡಿಗೆ ಮನೆಯಲ್ಲಿ ವಾಸವಿದ್ದು ತಾಯಿಯನ್ನು ಹುಡುಕುವ ಕೆಲಸವನ್ನು ಮುಂದುವರಿಸಿದ್ದ. ಒಂದು ದಿನ ಹಿಂದೊಮ್ಮೆ ವಿಚಾರಿಸಿದ ಆಶ್ರಮದ ಸಹಾಯಕಿ ಒಬ್ಬರನ್ನು ಭೇಟಿಯಾಗಿ ವಿಚಾರಿಸಿ ಗೋಗರೆದಾಗ ತಿಳಿದ ವಿಷಯ ಕೇಳಿ ಒಂದು ಕ್ಷಣ ಚಕಿತನಾಗಿ ನಿಂತ. ವಿಷಯ ಕೇಳಿದ ತಕ್ಷಣ ವೆಂಕಜ್ಜಿಯ ಮನೆಯ ಬಾಗಿಲನ್ನು ಬಡಿದ.
"ಯಾರು?ಯಾರು ಬಂದಿದ್ದು..?"
"ವೆಂಕಜ್ಜಿ ನಾನು ಮನೋಹರ.. ಬಾಗಿಲು ತೆಗೆಯಿರಿ. ನಿಮ್ಮ ಬಳಿ ಮುಖ್ಯವಾದ ವಿಷಯವೊಂದನ್ನು ಹೇಳುವುದಿತ್ತು."
ಬಾಗಿಲು ತೆಗೆದ ವೆಂಕಜ್ಜಿ"ಏನು ?ಏನು ಅಂತಹ ಮುಖ್ಯವಾದ ವಿಷಯ.. ಅಮ್ಮ ನಿನ್ನನ್ನು ಕ್ಷಮಿಸಿದಳೆ??ಎಲ್ಲಿ ಸುಭದ್ರ ಕಾಣುತ್ತಿಲ್ಲವಲ್ಲ?? ನೀ ಮಾಡಿದ ಬಾಡಿಗೆ ಮನೆಯಲ್ಲಿ ಬಿಟ್ಟು ಬಂದಿದ್ದೀಯ? ನೆಡಿ ಹೋಗೋಣ ನಾನು ಅವಳೊಡನೆ ಮಾತನಾಡಬೇಕು"ಎಂಬ ಸಾಲು ಸಾಲು ಪ್ರಶ್ನೆಗಳಿಗೆ ಉತ್ತರ ಕೊಡಲಾಗಿದೆ ತಬ್ಬಿಬ್ಬಾದ ಮನೋಹರ "ಅಮ್ಮನನ್ನು ನನ್ನ ಹೆಂಡತಿ ವಸುಮತಿ ಕರೆದುಕೊಂಡು ಹೋಗಿದ್ದಾಳಂತೆ, ಕರೆದುಕೊಂಡು ಹೋಗಿ ಅದಾಗಲೇ ಆರು ತಿಂಗಳು ಕಳೆದಿದೆಯಂತೆ ಎಲ್ಲಿದ್ದಾರೆ ಎಂದು ತಿಳಿದಿಲ್ಲ ನನ್ನನ್ನು ಹೊರಹಾಕಿ ಅಮ್ಮನನ್ನು ಯಾಕೆ ಕರೆದುಕೊಂಡು ಹೋಗಿದ್ದಾಳೆ, ನನಗೇನು ತಿಳಿಯುತ್ತಿಲ್ಲ ವೆಂಕಜ್ಜಿ ಏನು ಮಾಡಬೇಕೆಂದು ತೋಚದೆ ನಿಮ್ಮ ಬಳಿ ಓಡಿ ಬಂದಿದ್ದೇನೆ.." ವೆಂಕಜ್ಜಿಯ ಮನೆ ಎದುರಿನಿಂದ ನೋಡುವಾಗ ಹಳೆ ಮನೆಯಂತೆ ಕಂಡರೂ ಮನೆಯ ಹಿಂಬದಿಯಲ್ಲಿ ಹೊಸದಾದ ಎರಡು ರೂಮಿನ ಕಟ್ಟಡ ಒಂದನ್ನು ಮಗ ಕಟ್ಟಿದ್ದ. ಮನೆಯವರನ್ನು ಹೊರತುಪಡಿಸಿ ಈ ವಿಚಾರ ಯಾರಿಗೂ ತಿಳಿದಿರಲಿಲ್ಲ. ಕಂಗಲಾಗಿ ಮಾತು ಬಾರದೆ ನಿಂತ ಮನೋಹರನನ್ನು ವೆಂಕಜ್ಜಿ ತಮ್ಮ ಮನೆಯ ಹಿಂದೆ ಇದ್ದ ಹೊಸ ಮನೆಗೆ ಕರೆದುಕೊಂಡು ಹೋದಳು..
ಒಂದು ಕ್ಷಣ ಅಲ್ಲಿದ್ದವರನ್ನು ಕಂಡು ಮನೋಹರ ಬೆರಗಾದ. ತಾನು ಬೀದಿಯಲ್ಲಿ ಬಿಟ್ಟ ತನ್ನಮ್ಮ ತನ್ನನ್ನು ಬೀದಿಗೆ ನಿಲ್ಲಿಸಿದ ತನ್ನ ಹೆಂಡತಿ ಹಾಗೂ ಮಕ್ಕಳನ್ನು ಒಂದೇ ಜಾಗದಲ್ಲಿ ನೋಡಿದಾಗ ತಲೆ ತಿರುಗಿ ಬೀಳುವಂತಾಗಿತ್ತು. ಏನನ್ನು ಮಾತನಾಡಲಾಗದೆ ದಂಗಾಗಿ ನಿಂತ ಮನೋಹರನನ್ನು ಕುರಿತು ವೆಂಕಜ್ಜಿ ಮಾತು ಆರಂಭಿಸಿದರು.
"ನೀನು ಸುಭದ್ರಾಳನ್ನು ಬೀದಿಗೆ ನಿಲ್ಲಿಸಿ ಹೋದಾಗ ನಾನು ಊರಿನಲ್ಲಿ ಇರಲಿಲ್ಲ. ಮಗನ ಮನೆಯಿಂದ ವಾಪಾಸು ಬಂದಾಗ ವಿಚಾರ ತಿಳಿದು ಬಹಳ ನೋವಾಯಿತು. ರಜಕ್ಕೆಂದು ಮಕ್ಕಳು ಮನೆಗೆ ಬಂದು ವಾಪಸು ಹೋದ ನಂತರ ಅವಳನ್ನು ಹುಡುಕಿ ಅವಳಿದ್ದ ಆಶ್ರಮಕ್ಕೆ ಹೋದೆ. ಮಂಕಾಗಿ ಕುಳಿತ ಸುಭದ್ರ ನನ್ನನ್ನು ಕಂಡು ಅಪ್ಪಿಕೊಂಡು ಕಣ್ಣೀರು ಹಾಕಿದಳು. ಅವಳನ್ನು ಅಲ್ಲಿ ಬಿಟ್ಟು ಬರುವ ಮನಸಾಗದೆ ನಮ್ಮ ಮನೆಗೆ ಕರೆದುಕೊಂಡು ಬಂದೆ. ಈ ವಿಚಾರವನ್ನು ಯಾರಿಗೂ ತಿಳಿಸಿರಲಿಲ್ಲ. ಎಲ್ಲರೂ ಸುಭದ್ರ ಆಶ್ರಮದಲ್ಲಿಯೇ ಇದ್ದಾಳೆ ಎಂದು ಭಾವಿಸಿದ್ದರು. ಇದ್ದಕ್ಕಿದ್ದಾಗೆ ಒಂದು ದಿನ ಒಂದು ನಂಬರ್ ನಿಂದ ಕರೆ ಬಂದಿತ್ತು. ಕರೆ ಸ್ವೀಕರಿಸಿದಾಗ ಆ ಕರೆ ನಿನ್ನ ಹೆಂಡತಿಯದೆಂದು ತಿಳಿಯಿತು. ಅವಳ ಮಾತಿಗೆ ಬೆಲೆ ಕೊಡದೆ ಅವಳನ್ನು ಹೆದರಿಸಿ ತಾಯಿಯನ್ನು ಹೊರಗೆ ಹಾಕಿದ ವಿಚಾರವನ್ನು ತಿಳಿಸಿದ ವಸುಮತಿ ತನ್ನತ್ತೆಯನ್ನು ನೆನೆದು ಕೊರಗಿದಳು. ನೆಡದ ವಿಚಾರವನ್ನು ಸೂಕ್ಷ್ಮವಾಗಿ ಗಮನಿಸಿ ನಿನಗೆ ಸರಿಯಾದ ಬುದ್ಧಿ ಕಲಿಸಬೇಕೆಂದು ನಾನೇ ವಸುಮತಿಗೆ ನಿನ್ನನ್ನು ಮನೆಯಿಂದ ಹೊರ ಹಾಕುವಂತೆ ಹೇಳಿದೆ. ಅವಳು ತನ್ನತ್ತೆಗಾಗಿ ಮನಸ್ಸಿಗೆ ಹಿಂಸೆಯಾದರೂ ನಾ ಹೇಳಿದ ಕೆಲಸವನ್ನು ಸಂಶಯ ಭಾರದಂತೆ ನಿಭಾಯಿಸಿದಳು. ಅಂದು ನೀನು ನಮ್ಮ ಮನೆಯ ಬಾಗಿಲನ್ನು ರಾತ್ರಿ ಬಡಿದು ನಿಂತಾಗ ಎಲ್ಲರೂ ಇಲ್ಲಿಯೇ ಇದ್ದರು. ನಿನಗೆ ಯಾವುದೇ ರೀತಿ ಸಂಶಯ ಬರಬಾರದೆಂದು ನಿನ್ನನ್ನು ಹೆಚ್ಚು ಹೊತ್ತು ನಿಲ್ಲಿಸಿಕೊಳ್ಳದೆ ಬೇಗ ಕಳುಹಿಸಿದ್ದೆ.ಮೊನ್ನೆ ನಿನ್ನನ್ನು ನೋಡಿ ಸಂಕಟವಾಯಿತು.ನಿನ್ನ ಹೆಂಡತಿಗೆ ಮಕ್ಕಳನ್ನು ಕರೆದುಕೊಂಡು ಬಾ ಸತ್ಯ ತಿಳಿಸೋಣ ಎಂದು ಕರೆಸಿದೆ.ಅಷ್ಟರಲ್ಲಿ ನೀನೆ ಬಂದೆ.. ಈಗ ನಿನಗೆ ಬುದ್ದಿ ಬಂತಲ್ಲವೇ "ಇಷ್ಟು ಹೇಳಿ ಮಾತು ನಿಲ್ಲಿಸಿ ವೆಂಕಜ್ಜಿ ಸುಮ್ಮನಾದಳು..
ತನ್ನ ತಪ್ಪಿನ ಅರಿವಾಗಿ ಮನೋಹರ ತಾಯಿ ಹೆಂಡತಿಯ ಬಳಿ ಕ್ಷಮೆ ಕೇಳಿದ. ತಾಯಿ ಕರಳು ಮಗನನ್ನು ಕ್ಷಮಿಸಿತು. ವಸುಮತಿಯು ಕೂಡ ಒರಟಾಗಿ ನಡೆದುಕೊಂಡಿದ್ದಕ್ಕೆ ಮನೋಹರನಲ್ಲಿ ಕ್ಷಮೆ ಕೇಳಿದಳು. ಅಂತೂ ವೆಂಕಜ್ಜಿ ತನ್ನ ಚತುರತೆಯಿಂದ ನೋವಿನಲ್ಲಿ ಮುಳುಗಿದ್ದ ಸುಭದ್ರಮ್ಮನ ಕುಟುಂಬವನ್ನು ರೋಚಕ ತಿರುವು ನೀಡಿ ಒಂದಾಗುವಂತೆ ಮಾಡಿದ್ದಳು. ರೋಚಕತೆ ತುಂಬಿದ ಪುಸ್ತಕಗಳನ್ನು ಓದಿ ಸಮಸ್ಯೆಗಳನ್ನು ರೋಚಕವಾಗಿ ಬಗೆಹರಿಸುವ ಚಾಕ ಚಕ್ಯತೆ ಡಬಲ್ ಡಿಗ್ರಿ ಪಡೆಯದಿದ್ದರೂ ನಮ್ಮ ವೆಂಕಜ್ಜಿಯಲ್ಲಿತ್ತು. ಬೀದಿಗೆ ಬಿದ್ದ ಸುಭದ್ರಮ್ಮನ ಕಥೆಗೆ ರೋಚಕ ತಿರುವು ಎಂಬಂತೆ ವಸುಮತಿಯ ಸಹಾಯ ಪಡೆದು ಮನೋಹರನಿಗೆ ಬುದ್ಧಿ ಕಲಿಸಿದಳು.
ಸಮಸ್ಯೆಗಳಿಗೆ ಪರಿಹಾರ ವೆಂಕಜ್ಜಿಯ ಬಳಿ ಇರುತ್ತದೆ ಸುಲಭ ಉಪಾಯ...
ವೆಂಕಜ್ಜಿ ಹೇಳಿದ ಮೇಲಿನ ವಿಚಾರಗಳನ್ನು ಕೇಳಿದ ವೆಂಕಜ್ಜಿಯ ಮಕ್ಕಳು ಶಾಕ್ ನಲ್ಲಿದ್ದರೆ ವೆಂಕಜ್ಜಿಯ ಮೊಮ್ಮಕ್ಕಳು " ವೆಂಕಜ್ಜಿ ರಾಕ್ ಅಪ್ಪ ಅಮ್ಮ ಇನ್ ಶಾಕ್" ಎಂದು ಕೇಕೆ ಹಾಕುತ್ತಾ ಕುಡಿದು ಕುಪ್ಪಳಿಸಿದರು..
ಬದುಕಿನಲ್ಲಿ ಇದ್ದಾಗ ರೋಚಕತೆ
ಹೆಚ್ಚಿಸುವುದು ನಮ್ಮ ಚಾಕಾಚಕ್ಯತೆ
ಹೊರಹಾಕದಾಗ ಸಂಸಾರದ ನ್ಯೂನ್ಯತೆ
ಇರುತ್ತದೆ ಸಂಸಾರದಲ್ಲಿ ಸಾಮ್ಯತೆ..
ಮುಗಿಯಿತು.
