ಸಂಜೀವ ಅಜ್ಜನ ಕೆಂಪ (ನೀಯತ್ತಿನ ಬದುಕೇ ನಿಜಾಯತಿ ಅಲ್ಲವೆ....)
ಸಂಜೀವ ಅಜ್ಜನ ಕೆಂಪ (ನೀಯತ್ತಿನ ಬದುಕೇ ನಿಜಾಯತಿ ಅಲ್ಲವೆ....)
"ಏಯ್, ಕೂರ್... ಕೂರ್... ಹೇ... ಕೆಪಾ ಎಲ್ ಹ್ವಾದೆ? ಬಾ... ದ್ಯೋ... ದ್ಯೋ..." ಎಂದು ತಾವು ತಿನ್ನುತ್ತಿದ್ದ ತಟ್ಟೆಯಲ್ಲಿನ ಒಂದು ನೀರು ದೋಸೆಯನ್ನು ಕೈಯಲ್ಲಿ ಹಿಡಿದು, ತಾವು ಪ್ರೀತಿಯಿಂದ ಸಾಕಿದ ನಾಯಿಯನ್ನು ಸಂಜೀವ ಅಜ್ಜಯ್ಯ ಕರೆಯುತ್ತಿದ್ದರು. ಒಮ್ಮೆ ಅಜ್ಜ ಕರೆದರೆ ಸಾಕು ಕೆಂಪ ಪಾತಾಳದಲ್ಲೇ ಇದ್ದರೂ ತಕ್ಷಣ ಅಜ್ಜನ ಎದುರು ಪ್ರತ್ಯಕ್ಷವಾಗುತ್ತಿತ್ತು. ಯಾವಾಗಲೂ ತನ್ನ ತಟ್ಟೆಯಲ್ಲಿನ ತಿಂಡಿಯಲ್ಲಿ ಕೆಂಪನಿಗೊಂದು ಪಾಲು ಹಾಕಿ ಒಮ್ಮೆ ಮುದ್ದಿಸುತ್ತಿದ್ದರು. ಆದರೆ ಇಂದು "ಎಲ್ ಹೋಯ್ತ್ ಆ ನಾಯಿ, ನೀನ್ ಅದಕ್ಕೆ ಮನಿಬದಿಗೆ ಬಪ್ಪುಕೆ ಬಿಡುವುದಿಲ್ಲ ಮರೆತಿ," ಎಂದು ತನ್ನ ಹೆಂಡತಿ ರಾಜೀವಿ ಅಜ್ಜಿಯನ್ನು ಬೈದಾಗ, ಅಲ್ಲೇ ಜಗುಲಿಯ ಮೇಲೆ ಕುಳಿತಿದ್ದ ರಾಜೀವಿ ಅಜ್ಜಿ, "ಹೌದ್ ಹೌದ್ ನಿಮ್ಮದೊಂದ್ ಇಕ್ಲಿಪು, ನೀವ್ ಸತ್ತ್ರ್ ಮೇಲೆ ನಿಮ್ಮ ಸೊಡ್ಲಿ, ಸತ್ತಿಗಿಯೆಲ್ಲ ಆ ನಾಯೆ ಹಿಡಿತ್, ತಂದ್ ತೆಕ್ಲಗೆ ಮನ್ಸಕಣಿ" ಎಂದು ತನ್ನ ಗಂಡನ ಮೇಲೆ ರೇಗಿದಾಗ, ಸಂಜೀವ ಅಜ್ಜಯ್ಯ ತನ್ನ ಹೆಂಡತಿ ಕಡೆಗೆ ಮಾಮೂಲಿ ನೋಟ ಬೀರುತ್ತಾ, ತಂದಿರುವ ದೋಸೆಯನ್ನು ಹಾಗೆಯೇ ಹಿಡಿದು ಒಳನಡೆದರು. ದೋಸೆಯನ್ನು ತನ್ನ ಪ್ಲೇಟಿನಲ್ಲಿಟ್ಟು, ತನ್ನ ಮಗಳು ವಾಸಂತಿಯನ್ನು ಕರೆದು " ಇಗ, ಈ ಪ್ಲೇಟಗೆ ಒಂದ್ ದ್ವಾಸಿ ಇತ್, ಆ ಕೆಂಪ ಬಂದ್ರ್ ಕೂಡ್ಲೆ ಅವನಿಗೆ ಹಾಕ್" ಎಂದು ಮಗಳು ತಂದಿಟ್ಟ ಚಹಾದ ಲೋಟವನ್ನು ಎತ್ತಿಕೊಂಡರು.
"ಎಷ್ಟ್ ದಿನು ಆಯ್, ಮನಿಬದಿಯೆಲ್ಲ ಜಂತ್ರ್ ಮ್ವಾಳ್ ಆಯ್ತ್, ಅದೊಂದ್ ಗುಡ್ಡಿ ಹೆಗ್ಗುಳ ಇಲ್ಲೇ ಮನಿ ಮಾಡ್ಕಂಡಿತ್, ಅದನ್ನ ಕೊಂದ್ ಹಾಕಕ್ ಅಂದ್ರೂ ಕೈಗ್ ಸಿಕ್ಕುದೇ ಇಲ್ಲ." ಎಂದು ವಾಸಂತಿ ಹಲವು ದಿನದಿಂದ ಹೇಳುತ್ತಿದ್ದಳು. ಈ ಮಾತನ್ನು ಕೇಳಿಸಿಕೊಂಡ ಕೆಂಪ ಆ ಹೆಗ್ಗಣವನ್ನು ಬೇಟೆಯಾಡಲು ಕಾಯುತ್ತಲೇ ಇತ್ತು. ಹಾಗೋ...! ಹೀಗೋ...! ಹೇಗೋ...! ಆ ಹೆಗ್ಗಣದ ದುರದೃಷ್ಟವೋ! ಆ ದಿನ ಹೆಗ್ಗಣ ಕೆಂಪನ ಬಾಯಿಗೆ ಬಲಿಯಾಗಿತ್ತು. ತಾನು ಆ ಹೆಗ್ಗಣದ ಬಳಿಯೇ ಕುಳಿತು ತನ್ನ ಯಜಮಾನನ ಬರುವಿಕೆಗಾಗಿ, ತನ್ನ ಸಾಧನೆಯನ್ನು ಹೇಳಲು ಕಾಯುತ್ತಿತ್ತು.
ಚಹಾ ಕುಡಿದ ಸಂಜೀವ ಅಜ್ಜಯ್ಯ ಕೈ ತೊಳೆಯಲು, ಮನೆಯ ಪಕ್ಕದ ತೆಂಗಿನ ಕಟ್ಟೆಯ ಬಳಿಗೆ ಒಂದು ಚೊಂಬು ನೀರು ಹಿಡಿದು ಸಾಗಿದಾಗ, ಬಾಯಿಯೆಲ್ಲ ಮಣ್ಣು, ರಕ್ತ ಮಾಡಿಕೊಂಡು ಬಿಟ್ಟರೆ ಇನ್ನೂ ಎದ್ದು ಓಡಿಗುವುದೋ ಏನೋ ಎಂಬಂತೆ ಸತ್ತ ಹೆಗ್ಗಣವನ್ನು ಬಾಯಲ್ಲೇ ಅದುಮಿ ಹಿಡಿದುಕೊಂಡಿತ್ತು ಕೆಂಪ. ಅಜ್ಜನ ಪಕ್ಕದಲ್ಲೇ ಇದ್ದ ಆರು ವರ್ಷದ ಮೊಮ್ಮಗ ಆರುಷ್ ಅದಾವುದರ ಗೊಡವೇ ಇಲ್ಲದೆ ಆಟವಾಡುತ್ತಿದ್ದ.
