ನಿನ್ನೇ ಪ್ರೀತಿಸುವೆ -1
ನಿನ್ನೇ ಪ್ರೀತಿಸುವೆ -1
ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯ್ತು ಎಂಬ ಮಾತಿನಂತೆ ಮೃಣಾಲಿನಿ ತಾಯಿ ತನ್ನ ಗಂಡ ನಿತ್ಯ ತಡವಾಗಿ ಮನೆಗೆ ಬರುವ ಕಾರಣವೇನೆಂದು ತಿಳಿಯಲು ಜಗಳವಾಡುತ್ತಾ ಹೆದರಿಸಲೆಂದು ಚಾಕುವಿನಿಂದ ಕೈ ಕುಯ್ದು ಕೊಳ್ಳಲೂ ಹೋಗಿ ಆಳವಾಗಿ ಕುಯ್ದು ಹೋದ ಕಾರಣ ಅತೀವ ರಕ್ತಸ್ರಾವವಾಗಿ ವೈದ್ಯರ ಬಳಿ ಹೋದರೂ ಉಳಿಸಿಕೊಳ್ಳಲಾಗಿರಲ್ಲಿಲ್ಲ.. ಆತರುಗಾರನಿಗೆ ಬುದ್ಧಿ ಮಂದ ಎಂಬಂತೆ ತಾಳ್ಮೆಯಿಂದ ಕೂತು ಮಾತನಾಡುವ ಬದಲು ಸಂಶಯದಿಂದ ವಿಷಯವನ್ನು ಪೂರ್ತಿ ಕೇಳಿಸಿಕೊಳ್ಳದೆ ಆತುರಕ್ಕೆ ಬಿದ್ದು ಮೃಣಾಲಿನಿ ತಾಯಿ ಸಾವನ್ನಪ್ಪಿದ್ದರು.
ಗಂಡ ಸಂತೋಷ ಆಫೀಸ್ ಕೆಲಸ ಮುಗಿದ ನಂತರ ಪುಟ್ಟದೊಂದು ಪ್ರಿಂಟಿಂಗ್ ಪ್ರೆಸ್ ನಲ್ಲಿ ಪಾರ್ಟ್ ಟೈಮ್ ಜಾಬ್ ಮಾಡುತ್ತಿದ್ದ ವಿಚಾರ ಆಕೆಗೆ ತಿಳಿದಿರಲಿಲ್ಲ. ಹೆಂಡತಿ ಮಗಳ ಭವಿಷ್ಯಕ್ಕಾಗಿ ಕಷ್ಟಪಟ್ಟು ದುಡಿಯುತ್ತಿದ್ದ ಸಂತೋಷ್ ಗೆ ಹೆಂಡತಿಯ ಈ ವರ್ತನೆ ಬೇಸರದ ಜೊತೆಗೆ ಅವಳನ್ನು ಕಳೆದುಕೊಂಡು ಜೀವನ ಖಾಲಿ ಎನಿಸುತ್ತಿತ್ತು. ತನಗಾಗಿ ಅಲ್ಲದಿದ್ದರೂ ಮಗಳಿಗಾಗಿ ನಗುಮುಖದಿಂದ ಬದುಕಬೇಕೆಂದು ನಿರ್ಧರಿಸಿದ.
ಮೃಣಾಲಿನಿ ತಾಯಿ ಇಲ್ಲದ ತಬ್ಬಲಿಯಾಗಿಯೇ ಬೆಳೆದಳು. ಬಹಳ ಕಷ್ಟದಿಂದ ಅಪ್ಪ ಸಂತೋಷ್ ಎರಡು ವರ್ಷದ ಮಗು ಮೃಣಾಲಿನಿಯನ್ನು ಬೆಳಸಲು ಪ್ರಾರಂಭಿಸಿದ.. ಅಮ್ಮ ಎಲ್ಲಿ ಎಂದು ಕೇಳುವ ಪ್ರಶ್ನೆಗಳಿಗೆ ಅವನ ಬಳಿ ಉತ್ತರವಿರುತ್ತಿರಲ್ಲಿಲ್ಲ. ಅಮ್ಮ ಬೇಕು ಎಂದು ಹಠ ಮಾಡುವಾಗ ಆಕಾಶದ ನಕ್ಷತ್ರಗಳನ್ನು ತೋರಿಸುತ್ತಾ" ಅಮ್ಮ ಅಲ್ಲಿಂದ ನಿನ್ನನು ನೋಡುತ್ತಿದ್ದಾಳೆ .ನೀನು ಅಳುವುದಕ್ಕೆ ಅಮ್ಮ ನಿನ್ನ ಬಳಿ ಬರುತ್ತಿಲ್ಲ ನೀನು ಅಳದೆ ನಗುನಗುತ್ತಾ ಹಠ ಮಾಡದೆ ನಾನು ಹೇಳಿದಂತೆ ಕೇಳಿದರೆ ಅಮ್ಮ ಬರುತ್ತಾಳೆ" ಎಂದು ಮಿನುಗುವ ನಕ್ಷತ್ರಗಳನ್ನು ತೋರಿಸುತ್ತಾ ಸಮಾಧಾನ ಮಾಡಿ ಊಟ ಮಾಡಿಸಿ ಮಲಗಿಸುವ ವೇಳೆಗೆ ಬದುಕು ನರಕವೆನಿಸುತ್ತಿತ್ತು. ಆದರೆ ವಿಧಿಯ ಮುಂದೆ ಯಾರೂ ದೊಡ್ಡವರಲ್ಲ ಹಣೆಬರಹದಲ್ಲಿ ಬರೆದಿದ್ದನ್ನು ಅನುಭವಿಸಲೇಬೇಕು ಎಂದು ಧೈರ್ಯ ತಂದುಕೊಂಡು ಜೀವನ ಸಾಗಿಸುತ್ತಿದ್ದ.
ಎರಡು ವರುಷದ ಮಗುವೀಗ ಬೆಳೆದು ನಿಂತು 18 ವರುಷ ತುಂಬಿದೆ.ಮೃಣಾಲಿನಿಗೆ ಅಪ್ಪನೆ ಪ್ರಪಂಚ.. ಜಗತ್ತಿನಲ್ಲಿ ಅವಳು ಅತಿಯಾಗಿ ಪ್ರೀತಿಸುವ ವ್ಯಕ್ತಿ ಯಾರು ಎಂಬ ಪ್ರಶ್ನೆಗೆ ಅವಳ ಮೊದಲ ಉತ್ತರ ಅಪ್ಪ ಎಂಬುದಾಗಿತ್ತು.. ಅಪ್ಪ ತನ್ನನ್ನು ಬೆಳೆಸಲು ಪಟ್ಟ ಶ್ರಮ ಅವಳಿಗೆ ಅರಿವಿತ್ತು. ಪ್ರತಿಯೊಂದು ಹೆಜ್ಜೆಯಲ್ಲಿಯೂ ಬೆನ್ನೆಲುಬಾಗಿ ನಿಂತು ಸಹಕರಿಸುತ್ತಿದ್ದ ರೀತಿ ಎಲ್ಲದರಲ್ಲಿಯೂ ಉರಿದುಂಬಿಸಿ ಪ್ರೋತ್ಸಾಹಿಸಲು ಅವಳಿಗೆಂದು ಇದ್ದ ಏಕೈಕ ಜೀವವೇ ಅಪ್ಪ. ಪ್ರತಿ ಬಾರಿ ದೇವರ ಮುಂದೆ ನಿಂತು ಬೇಡುವಾಗ ಅಪ್ಪನಿಗೆ ಆಯಸ್ಸು, ಆರೋಗ್ಯ ಕೊಡು ಎಂದು ಬೇಡುತ್ತಿದ್ದಳೆ ಹೊರತು ತನ್ನಗಾಗಿ ಏನನ್ನು ಕೇಳುತ್ತಿರಲಿಲ್ಲ. ಅಪ್ಪನೆಂಬ ಜೀವ ನನ್ನ ಜೊತೆಗಿದ್ದರೆ ಸಾಕು ಇಡೀ ಜಗತ್ತನ್ನು ಗೆದ್ದಂತೆ ಎಂಬ ಭಾವ ಅವಳದ್ದಾಗಿತ್ತು. ಅಕ್ಕ ಪಕ್ಕದವರು ಅಪ್ಪ ಮಗಳ ಪ್ರೇಮವನ್ನು ಕಂಡು ಕಣ್ತುಂಬಿ ಕೊಳ್ಳುತ್ತಿದ್ದರು..
ಅದ್ಯಾವ ವಕ್ರ ದೃಷ್ಟಿ ಈ ತಂದೆ ಮಗಳ ಮೇಲೆ ಬಿದ್ದಿತೋ ತಿಳಿಯದು.. ಇದ್ದಕ್ಕಿದ್ದ ಹಾಗೆ ಪೇಪರ್ ಓದುತ್ತಾ ಕುಳಿತಿದ್ದ ಸಂತೋಷ್ ಎದೆ ಹಿಡಿದುಕೊಂಡು ಕುಳಿತರು.. ಧೃತಿಗೆಡದೆ ಮೃಣಾಲಿನಿ ತಕ್ಷಣ ಸಂತೋಷ್ನನ್ನು ವೈದ್ಯರ ಬಳಿ ಕರೆದುಕೊಂಡು ಹೋದಳು.. ಮೈಲ್ಡ್ ಆಗಿ ಹಾರ್ಟ್ ಅಟ್ಯಾಕ್ ಆಗಿದೆ.. ಚಿಕ್ಕದೊಂದು ಸರ್ಜರಿ ಅಗತ್ಯವಿದೆ ಎಂದ ವೈದ್ಯರು ಸರ್ಜರಿಗಾಗಿ ಹಣ ಪಾವತಿಸಲು ಹೇಳಿ ಟ್ರೀಟ್ಮೆಂಟ್ ಆರಂಭಿಸಿದರು.
ಮನೆಯಲ್ಲಾ ಹುಡುಕಿದರು ಮೃಣಾಲಿನಿಗೆ ದುಡ್ಡಿನ ಸುಳಿವು ಸಿಗಲಿಲ್ಲ.. ಹೇಗೆ ಹೊಂದಿಸುವುದು ಎಂಬ ಚಿಂತೆಯಲ್ಲಿರುವಾಗ ಬಾಲ್ಯದಿಂದಲೂ ಪರಿಚಯವಿದ್ದ ಅಪ್ಪನ ಸ್ನೇಹಿತರಾದ ಪ್ರಭಾಕರ್ ಅವರಿಗೆ ಕರೆ ಮಾಡಿ ವಿಷಯವನ್ನು ತಿಳಿಸಿದಳು.. ಮೊದಲಿನಿಂದಲೂ ಈ ಕುಟುಂಬದ ಪರಿಚಯವಿದ್ದ ಪ್ರಭಾಕರ್ ಮೃಣಾಲಿನಿಗೆ ಧೈರ್ಯ ಹೇಳಿ ಆಸ್ಪತ್ರೆಯ ವೆಚ್ಚವನ್ನು ತಾನೆ ಕಟ್ಟಿ ಸರ್ಜರಿಯಾಗಿ ಡಿಸ್ಚಾರ್ಜ್ ಆಗುವವರೆಗೂ ಜೊತೆಗಿದ್ದರು..
ಡಿಸ್ಚಾರ್ಜ್ ಆಗುವಾಗ ವೈದ್ಯರು ಹೇಳಿದ ಮಾತು ಮೃಣಾಲಿನಿಯನ್ನು ಚಿಂತೆಗೆ ದುಡಿತು.... ಅಪ್ಪನಿಗೆ ಒತ್ತಡವಾಗುವಂತಹ ಯಾವುದೇ ಕೆಲಸವನ್ನು ನೀಡಬಾರದು ಎಂದರೆ ಮೊದಲು ಅಪ್ಪ ಕೆಲಸ ಬಿಡಬೇಕು ಕೆಲಸವನ್ನು ಬಿಡಲು ಒಪ್ಪಿಸಿ ನಾನು ಕೆಲಸಕ್ಕೆ ಸೇರುವುದಾಗಿ ಒಪ್ಪಿಸಬೇಕು ಎಂದು ನಿರ್ಧರಿಸಿಕೊಂಡಳು.. ಅಪ್ಪನನ್ನು ಒಪ್ಪಿಸುವುದು ಅಷ್ಟು ಸುಲಭದ ಮಾತಾಗಿರಲಿಲ್ಲ.."ಅಪ್ಪ ನಿನ್ನನ್ನು ಬಿಟ್ಟು ಈ ಜಗತ್ತಿನಲ್ಲಿ ನನಗೆ ಯಾರು ಇಲ್ಲ ಒತ್ತಡ ಹೆಚ್ಚಾಗಿ ನೀನು ನನ್ನನ್ನು ಬಿಟ್ಟು ಹೋದರೆ ನಾನು ಹೇಗೆ ಇರಲಿ, ನಿನಗಿಂತ ಮುಂಚೆ ನಾನೇ ಹೋಗುವೆ"ಎಂಬ ಮಾತು ಸಂತೋಷ್ ನನ್ನು ಕಟ್ಟಿ ಹಾಕಿತು ಮುದ್ದಿನಿಂದ ಸಾಕಿದ ಮಗಳು ತನಗಾಗಿ ಕಷ್ಟಪಡಬೇಕಾಗುತ್ತದ್ದಲ್ಲಾ ಎಂದು ಮರುಗುತ್ತಿದ್ದ.. ಆದರೆ ಅವನ ಗೆಳೆಯ ಪ್ರಭಾಕರ್ ತನ್ನದೇ ಕಂಪೆನಿಯ ಸಣ್ಣ ಪುಟ್ಟ ಕೆಲಸಗಳನ್ನು ಮನೆಯಿಂದಲೇ ಕೂತು ನಿಭಾಯಿಸುವ ಒಂದು ಅವಕಾಶವನ್ನು ಕಲ್ಪಿಸಿ ಮನೆಯಲ್ಲಿ ಕಾಲಿ ಕೂತು ಯೋಚನೆಗೆ ಒಳಗಾಗುವುದನ್ನು ತಪ್ಪಿಸಿದ್ದ.. ಕಷ್ಟ ಕಾಲಕ್ಕೆ ಕೈಹಿಡಿಯುವವರು ಸ್ನೇಹಿತರೇ. ಇದಕ್ಕೆ ಉದಾಹರಣೆ ಎಂತಿತ್ತು ಪ್ರಭಾಕರ್ ಹಾಗು ಸಂತೋಷ ಅವರ ಸ್ನೇಹ..
ಮುಂದುವರೆಯುವುದು.....
