ಲಾಕ್ ಡೌನ್ ಪ್ರೇಮಿಗಳು
ಲಾಕ್ ಡೌನ್ ಪ್ರೇಮಿಗಳು
ಅಂದು ಭಾನುವಾರ ಸಾಯಂಕಾಲ ಆರು ಗಂಟೆ. ಅರುಣೋದಯ ಮೆಡಿಕಲ್ ಸ್ಟೋರ, ಪವನಪೂರ ಮುಂದೆ ಗ್ರಾಹಕರು ಸರದಿಯಲ್ಲಿ ನಿಂತಿದ್ದಾರೆ. ಕರೋನಾ ಭೀತಿ ಇರುವದರಿಂದ ಅವರೆಲ್ಲರೂ ಮಾಸ್ಕ ಧರಿಸಿ ಅಂತರ ಕಾಯ್ದುಕೊಂಡಿರುವರು. ಓರ್ವ ಯುವತಿ ತನ್ನ ಸರದಿ ಬಂದಾಗ ಬಿಲ್ ಪೇಮೆಂಟ್ ಮಾಡಿ ಔಷಧ ಬ್ಯಾಗ್ ತೆಗೆದುಕೊಂಡ ಮೇಲೆ ಮೊಬೈಲ್ ಸಂಭಾಷಣೆ ಯಲ್ಲಿ ನಿರತಳಾಗಿ ಅಲ್ಲಿಯೇ ನಿಂತಳು. ಹಿಂದೆ ಇರುವ ಯುವಕ,
"ಮ್ಯಾಡಮ್, ಬೇಗ ಹೋಗಿ. ಮನೆಗೆ ಹೋಗಿ ಮೊಬೈಲ್ ನಲ್ಲಿ ಬೇಕಾದಷ್ಟು ಮಾತನಾಡಿ."ಎಂದ
ಅದಕ್ಕೆ ಆಕೆಗೆ ಒಮ್ಮೆಲೇ ಸಿಟ್ಟು ಬಂದು,"ಒಂದು ನಿಮಿಷ ತಡೆಯುವ ತಾಳ್ಮೆ ಇಲ್ಲವೇ?" ಎಂದಳು
ಅದಕ್ಕೆ ಆ ಯುವಕ,"ಸಿಟ್ಟು ಮಾಡುವದಕ್ಕೆ ಇದು ನಿಮ್ಮ ಮನೆ ಅಲ್ಲ. ಬೇಗ ಹೊರಡಿ." ಎಂದು ಖಾರವಾಗಿ ಹೇಳಿದ
ಆಕೆಗೆ ಇನ್ನಷ್ಟು ಸಿಟ್ಟು ಬಂದು ಆ ಯುವಕನಿಗೆ, "ಮಿಸ್ಟರ್, ಮರ್ಯಾದೆಯಿಂದ ಮಾತನಾಡಿ." ಎಂದಳು ಇಬ್ಬರು ಸಂಭಾಷಣೆ ನಿಲ್ಲಿಸುವ ಲಕ್ಷಣ ಕಾಣಲಿಲ್ಲ.
ಯುವಕನಿಗೂ ಕೋಪ ಬಂದು ಪರಿಸ್ಥಿತಿ ವಿಕೋಪಕ್ಕೆ ಹೋಯಿತು.
ಕ್ಯೂ ನಲ್ಲಿ ಇರುವ ಇತರರು ಅವರಿಬ್ಬರಿಗೆ ಪಕ್ಕದಲ್ಲಿ ಹೋಗಿ ಬೇಕಾದಷ್ಟು ಜಗಳವಾಡಿ ಎಂದರು. ಮೆಡಿಕಲ್ ಸ್ಟೋರ್ ನ ಸೇಲ್ಸ ಮ್ಯಾನ್ ಪರಿಸ್ಥಿತಿ ಹತೋಟಿಗೆ ತರಲು ಹರಸಹಾಸ ಮಾಡಬೇಕಾಯಿತು.
ಆಕೆ ಸಿಟ್ಟಿನ ಆವೇಶದಲ್ಲಿ ಔಷಧ ತೆಗೆದುಕೊಂಡು ಡೆಬಿಟ್ ಕಾರ್ಡ ವ್ಯಾನಿಟಿ ಬ್ಯಾಗ್ ನಲ್ಲಿ ಇಟ್ಟುಕೊಂಡು ತನ್ನ ಸ್ಕೂಟರ್ ಸ್ಟಾರ್ಟ ಮಾಡಿ ಆ ಯುವಕನಿಗೆ ನೋಡುತ್ತ ಹೊರಟೇ ಬಿಟ್ಟಳು. ಯುವಕ ತನ್ನ ಸರದಿ ಬಂದಮೇಲೆ ಬೇಕಾದ ಔಷಧ ತೆಗೆದುಕೊಂಡು ತನ್ನ ದ್ವಿಚಕ್ರ ವಾಹನ ಸ್ಟಾರ್ಟ ಮಾಡಿ ನಡೆದ. ಸ್ವಲ್ಪ ಮುಂದೆ ಹೋದ ಮೇಲೆ ಆದೇ ಹುಡುಗಿ ರಸ್ತೆ ಮೇಲೆ ಕುಳಿತು ಸಹಾಯ ಯಾಚಿಸುವ ದು:ಸ್ಥಿತಿಯನ್ನು ಗಮನಿಸಿದ. ಆಕೆಯ ದ್ವಿಚಕ್ರ ವಾಹನ ಪಕ್ಕದಲ್ಲಿ ಇರುವದು ನೋಡಿದ. ಸುತ್ತಮುತ್ತ ಯಾರೂ ಇರಲಿಲ್ಲ. ಕಾರಣ ಆ ಸಮಯದಲ್ಲಿ ಲಾಕ್ ಡೌನ್ ಇರುವದರಿಂದ ನಿಷೇಧಾಜ್ಞೆ ಜಾರಿಯಲ್ಲಿ ಇತ್ತು. ಆಗ ಆ ಯುವಕ ಆಕೆ ಕೈ ಹಿಡಿದು ಮೇಲೆ ಎಬ್ಬಿಸಿ ಒಂದು ಕಡೆ ಕೂಡಿಸಿದ. ಆಕೆ ವಾಹನವನ್ನು ಪಕ್ಕದಲ್ಲಿ ಸುರಕ್ಷಿತ ಸ್ಥಳದಲ್ಲಿ ನಿಲ್ಲಿಸಿದ. ಆಕೆಗೆ ಎಚ್ಚರವಿದ್ದರೂ ಬಲ ಕೈ ಹಾಗೂ ಎಡಕಾಲಿಗೆ ಪೆಟ್ಟು ಆಗಿ ರಕ್ತ ಬಂದಿದ್ದರಿಂದ ನಿಶಕ್ತಳಾಗಿದ್ದಳು. ನಾಯಿ ಅಡ್ಡ ಬಂದು ವಾಹನ ಟರ್ನ ಮಾಡುವಾಗ ಆಕ್ಸಿಡೆಂಟ್ ಆಯಿತು ಎಂದಳು. ಆಕೆಯನ್ನು ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋದ. ಬ್ಯಾಂಡೇಜ ಆದಮೇಲೆ ಮಾತ್ರೆಗಳನ್ನು ಕೊಟ್ಟರು. ಹತ್ತು ನಿಮಿಷದಲ್ಲಿ ಅವಳು ಸುಧಾರಿಸಿ ಕೊಂಡಳು. ಯುವಕನಿಗೆ ಥ್ಯಾಂಕ್ಸ ಎಂದಳು. ಆಗ ಯುವಕನಿಗೆ ಆಶ್ಚರ್ಯ ಕಾದಿತ್ತು. ಅವಳು ಬೇರೆ ಯಾರೂ ಆಗಿರದೇ ತನ್ನ ಪಕ್ಕದ ಮನೆಗೆ ಎರಡು ದಿವಸ ಹಿಂದೆ ಬಾಡಿಗೆ ಬಂದ ಹುಡುಗಿ. ಆದರೆ ಆಕೆ ಹೆಸರು ಗೊತ್ತಿಲ್ಲ. ಆಕೆಗೆ ಅವನು ಯಾರು ಎಂದು ಗೊತ್ತಾಗಲಿಲ್ಲ. ಯುವಕ ತನ್ನ ಹೆಸರು ಅಕ್ಷಯ ಎಂದು ಆಕೆಯ ಪಕ್ಕದ ಮನೆಯಲ್ಲಿ ಇರುವದಾಗಿ ಹೇಳಿದ. ಆಕೆ ತನ್ನ ಹೆಸರು ಮಂದಾಕಿನಿ ಎಂದಳು. ಇಬ್ಬರೂ ಆಸ್ಪತ್ರೆ ಒಳಗೆ ಇರುವ ಕ್ಯಾಂಟೀನ್ ಗೆ ಹೋದರು. ಸ್ವಲ್ಪ ಸಮಯದ ಹಿಂದೆ ಇಬ್ಬರ ನಡುವೆ ಆದ ವಾಗ್ವಾದ ಮರೆತು ಸ್ನೇಹಿತರಾದರು. ಚಹಾ ಕುಡಿಯುತ್ತಾ ಮಾತು ಮುಂದುವರೆಸಿದರು.
"ಅಕ್ಷಯ, ಈಗ ಏನು ಮಾಡುತ್ತಾ ಇರುವಿರಿ?"
"ಬಿ ಕಾಂ ಆದಮೇಲೆ ಚಾರ್ಟರ್ಡ ಅಕೌಂಟಂಟ್ ಕೋರ್ಸಗೆ ಪ್ರಯತ್ನ ಮಾಡಿದೆ. ಅದು ಆಗಲಿಲ್ಲ. ಸಧ್ಯ ಸೂರ್ಯಾ ಬ್ಯಾಂಕ್ ನಲ್ಲಿ ಕ್ಲರ್ಕ ಕೆಲಸ ಸಿಕ್ಕಿದೆ. ಮಂದಾಕಿನಿ ನೀವು ಸರ್ವೀಸ್ ನಲ್ಲಿ ಇದ್ದೀರಾ?"
" ಇಲ್ಲ. ನಾನು ಕಳೆದ ವರ್ಷ ಬಿ ಎಸ್ಸಿ ಮಾಡಿದೆ. ಮುಂದೆ ಓದಲು ಅಮ್ಮ ಬೇಡ ಅಂದರು. ಕೆಲಸಕ್ಕೆ ಅಲೆದಾಡುತ್ತ ಇರುವೆ."
ಸುಮಾರು ಅರ್ಧ ಗಂಟೆ ಮಾತಾಡಿ ಪರಸ್ಪರ ಮೊಬೈಲ್ ನಂಬರ್ ವಿನಿಮಯ ಮಾಡಿಕೊಂಡರು. ಆಕೆ ತನ್ನ ದ್ವಿಚಕ್ರ ವಾಹನದ ಮೇಲೆ ಮನೆಗೆ ಹೋದಳು. ಮತ್ತೆ ಭೇಟಿ ಆಗುವದಾಗಿ ಬೈ ಎಂದಳು.
ಮನೆಗೆ ಹೋದ ಮೇಲೆ ಅಕ್ಷಯಗೆ ಬರಿ ಮಂದಾಕಿನಿಯ ಚಿಂತೆ. ಆಕೆಯ ಸೌಂದರ್ಯ, ಅವಳಲ್ಲಿ ಇರುವ ಗಾಂಭೀರ್ಯ ಮತ್ತು ಮಾತನಾಡುವ ಶೈಲಿ ನೋಡಿ ಆಕೆಯಲ್ಲಿ ಪ್ರೇಮ ಅಂಕುರಿಸಿತು. ಆದರೆ ಆಕೆ ತನಗೆ ಪ್ರೀತಿ ಮಾಡುವಳೋ ಅಥವಾ ಇಲ್ಲ ಎನ್ನುವದದು ಗೊತ್ತಾಗಲಿಲ್ಲ. ಮೊಬೈಲ್ ನಲ್ಲಿ ಅವರಿಬ್ಬರ ಸಂಭಾಷಣೆ ಅವ್ಯಾಹತವಾಗಿ ನಡೆಯಿತು. ಆದರೆ ಒಂದು ಸಲ ವಾದರೂ ಪ್ರೀತಿ ಪ್ರೇಮದ ಬಗ್ಗೆ ಮಾತನಾಡಲಿಲ್ಲ. ಅಕ್ಷಯ ತನ್ನ ಇಚ್ಚೆಯನ್ನು ತಂದೆ, ತಾಯಿಗೆ ಹೇಳಿದ. ಅವರು ಅಪರಿಚಿತ ಹುಡುಗಿ ಜೊತೆಗೆ ಪ್ರೇಮ ಬೇಡ ಎಂದು ಬುದ್ಧಿವಾದ ಹೇಳಿದರು. ಅಕ್ಷಯ ಮನಸ್ಸಿನಲ್ಲಿ ಹೀಗೆ ಅಂದುಕೊಂಡ. ಆಧುನಿಕ ಹುಡುಗ ಹುಡುಗಿ ಪ್ರೇಮ ಮಾಡುವದು ಇವರಿಗೇನು ಗೊತ್ತು? ಅವರಿಗೆ ಬರಿ ತಮ್ಮ ಕಾಲದಲ್ಲಿ ಇರುವ ಹಳೆಯ ಪದ್ಧತಿ ಮುಂದುವರೆಸುವ ಅಭಿಲಾಷೆ. ಪ್ರಸ್ತುತ ಇದೆಲ್ಲ ನಡೆಯುವುದಿಲ್ಲ. ತಂದೆ ತಾಯಿ ವಿರೋಧ ಮಾಡಿದರೂ ಅಕ್ಷಯ ಆಕೆಯನ್ನೇ ಮದುವೆ ಆಗುವ ಹಟ ಮಾಡಿದ. ಏಕೈಕ ಪುತ್ರ ಎಂದು ಪ್ರೀತಿಯಿಂದ ಬೆಳೆಸಿದರು.
ಸ್ವಲ್ಪ ದಿವಸ ಆದ ಮೇಲೆ ಒಂದು ದಿವಸ ಮಂದಾಕಿನಿ ಅಮ್ಮ ಅಪ್ಪನ ಜೊತೆಗೆ ಅಕ್ಷಯ ಮನೆಗೆ ಸಾಯಂಕಾಲ ಏಳು ಗಂಟೆಗೆ ಬರುವದಾಗಿ ಹೇಳಿ ಸಮಯಕ್ಕೆ ಸರಿಯಾಗಿ ಆಗಮಿಸಿದರು. ಅಕ್ಷಯಗೆ ಅಪರಿಮಿತ ಆನಂದ. ಆದರೆ ಆತನ ತಂದೆ ತಾಯಿಗೆ ಚಿಂತೆ. ಕಾರಣ ಕೊರೋನಾ ವೈರಸ್ ಇರುವಾಗ ಬೇರೆಯವರು ಮನೆಗೆ ಬರಬಾರದು. ಅವರು ಬರುವ ಮೊದಲು ಅಂತರ ಇರುವ ಆಸನಗಳ ವ್ಯವಸ್ಥೆ ಮಾಡಿದರು. ಎಲ್ಲರೂ ಮಾಸ್ಕ ಹಾಕಿಕೊಂಡು ಹೊರಗಡೆ ಸ್ಯಾನಿಟೈಜರ್ ಬಾಟಲ್ ಇಟ್ಟು ನಿಯಮ ಪಾಲಿಸಲು ಹೇಳಿದರು. ಅವರು ಬಂದ ಉದ್ದೇಶ ಅಂದು ಅಕ್ಷಯ ಮಾಡಿದ ಉಪಕಾರಕ್ಕೆ ಧನ್ಯವಾದ ಹೇಳುವ ದಾಗಿತ್ತು. ಮೊದಲು ಎರಡೂ ಕುಟುಂಬದವರು ಪರಿಚಯ ಮಾಡಿಕೊಂಡರು. ಅವರು ಕೇವಲ ಐದು ನಿಮಿಷ ನಿಂತು ಕೊಂಡು ಮಾತನಾಡಿ ಹೊರಟರು. ಮಂದಾಕಿನಿ ತಂದೆ ವೇಂಕಟರಮಣ ಇಂಡಿಯಾ ಪೋಸ್ಟ್ ನಲ್ಲಿ ಗುಮಾಸ್ತ. ತಾಯಿ ರುಕ್ಮಿಣಿ ಗೃಹಿಣಿ. ಅಕ್ಷಯ ತಂದೆ ಮಧುಸೂಧನ ಸೂರ್ಯಾ ಬ್ಯಾಂಕ್ ನಿವೃತ್ತ ಅಧಿಕಾರಿ. ತಾಯಿ ಮಂಗಲಾ ನಿವೃತ್ತ ಹೈಸ್ಕೂಲ್ ಶಿಕ್ಷಕಿ. ಮಂದಾಕಿನಿ ಮಾತನಾಡದೇ ಇರುವದಕ್ಕೆ ಅಕ್ಷಯಗೆ ನಿರಾಸೆ ಆಯಿತು.
ಹಾಗೆ ಒಂದು ವಾರ ಕಳೆಯಿತು. ಈ ಮಧ್ಯೆ ಆಕೆಯ ಮೊಬೈಲ್ ಸಂಭಾಷಣೆ ಆಗಿರಲಿಲ್ಲ. ಬಹುಶಃ ಆಕೆ ತಂದೆ ತಾಯಿ ವಿಷಯ ತಿಳಿದು ನಿರ್ಭಂಧ ಮಾಡಿರಬಹುದು. ಒಂದು ದಿವಸ ಬೆಳಗ್ಗೆ ಏಳು ಗಂಟೆಗೆ ಅಕ್ಷಯನ ಮೊಬೈಲ್ ರಿ0ಗಾಯಿತು. ಆತನಿಗೆ ಎಲ್ಲಿಲ್ಲದ ಸಂತೋಷ. ಫೋನ್ ಎತ್ತಿ ಹಲೋ ಎಂದ. ಆ ಕಡೆಯಿಂದ ಮಂದಾಕಿನಿ,
"ಹಲೋ, ಆಕ್ಷಯ ಚೆನ್ನಾಗಿದ್ದೀರಾ?"
"ನಾನು ಚೆನ್ನಾಗಿದ್ದೇನೆ. ನೀನು ಹೇಗಿದ್ದೀ?"
"ನಾನು ಓಕೆ. ಅಂದು ನೀವು ಸರಿಯಾದ ಸಮಯಕ್ಕೆ ಬಂದು ನನ್ನನ್ನು ಕಾಪಾಡಿದಿರಿ. ನಿಮಗೆ ಎಷ್ಟು ಸಲ ಥ್ಯಾಂಕ್ಸ್ ಹೇಳಿದರೂ ಕಡಿಮೆ."
"ಅದು ಸರಿ ಮಂದಾಕಿನಿ. ವಿಷಯಕ್ಕೆ ಬರುವೆ. ಅಂದು ನಿನ್ನ ಮೇಲೆ ಪ್ರೀತಿ ಅಂಕುರಿಸಿತು. ನೀನು ಒಪ್ಪಿದರೇ ಮದುವೆ ಆಗೋಣ."
"ಅಕ್ಷಯ, ನಾನು ಹೇಳುವದನ್ನು ನೀನೇ ಹೇಳಿದೆ. ಆದರೆ ಕೆಲವು ಸಮಸ್ಯೆಗಳು ಇವೆ."
"ಸಮಸ್ಯೆಗಳು...? ಅದೇನು ಹೇಳು?"
"ಮೊಬೈಲ್ ನಲ್ಲಿ ಹೇಳಲು ಆಗುವುದಿಲ್ಲ. ನಾಳೆ ಸಾಯಂಕಾಲ ಆರು ಗಂಟೆಗೆ ಅರುಣೋದಯ ಮೆಡಿಕಲ್ ಸ್ಟೋರ್ ಪಕ್ಕದಲ್ಲಿ ಇರುವ ಬಯಲು ಪ್ರದೇಶದಲ್ಲಿ ಒಂದು ಆಲದ ಮರ ಇದೆ. ಅದರ ಕೆಳಗೆ ಕೂಡಲು ಸ್ಥಳ ಇದೆ. ಅಲ್ಲಿಗೆ ಬಾ."
"ಒಳ್ಳೆದು."
ಅದರಂತೆ ನಿಗದಿತ ಸ್ಥಳದಲ್ಲಿ ಭೇಟಿ ಆದರು.
ಅರ್ಧ ಗಂಟೆ ಯಲ್ಲಿ ಮಾತು ಮುಗಿಸಿ ನಿರ್ಗಮಿಸಿದರು. ಅವರಿಬ್ಬರಲ್ಲಿ ಆದ ಮಾತು ಏನು ಎಂದು ಗೊತ್ತಾಗಲಿಲ್ಲ.
ಮರುದಿವಸ ಇಬ್ಬರೂ ಪವನಪೂರದಿಂದ ಅದೃಶ್ಯರಾದರು.
ಎಲ್ಲಿಗೆ ಹೋದರು?
ಇಬ್ಬರ ತಂದೆ ತಾಯಿಗೆ ತಡೆಯಲಾರದ ದು:ಖವಾಗಿ ಪೋಲಿಸ್ ಸ್ಟೇಷನ್ ನಲ್ಲಿ ದೂರು ಕೊಟ್ಟರು. ಮಾರನೆಯ ದಿವಸ ಬೆಳಗ್ಗೆ ಇಬ್ಬರೂ ಹೊಸ ಬಟ್ಟೆ, ಕೊರಳಲ್ಲಿ ಹಾರ ಶೃಂಗಾರ ಮಾಡಿಕೊಂಡು ದಂಪತಿಗಳಾಗಿ ಪ್ರತ್ಯಕ್ಷರಾಗಿ ಹಿರಿಯರ ಆಶೀರ್ವಾದ ಮಾಡಲು ಹೇಳಿದರು. ನಂತರ ತಿಳಿದು ಹಿರಿಯರಿಗೆ ಮುಜುಗರ ಆಯಿತು. ಮಂದಾಕಿನಿ ಮೊದಲ ಸಲ ಮದುವೆ ನಿಶ್ಚಿತಾರ್ಥ ಆಗಿ ಕ್ಯಾನ್ಸಲ್ ಆಯಿತು. ಪೋಲಿಸ್ ಸ್ಟೇಷನ್ ಗೆ ಹೋಗುವದು ಆಯಿತು. ಎರಡನೇ ಸಲ ಆಕೆಯ ನಿಶ್ಚಿತಾರ್ಥ ಆಗಿ ಮದುವೆ ಕರೆಯೋಲೆ ಹಂಚಿದಮೇಲೆ ಕ್ಯಾನ್ಸಲ್ ಆಯಿತು.
ಈ ಜೋಡಿ ಪ್ರೇಮ ಕುರುಡು ಎಂದು ಸಿದ್ಧ ಮಾಡಿ ಎಲ್ಲರ ಗಮನ ಸೆಳೆದರು.