ಇಂದು ನೆನೆಯುತ್ತಿದ್ದೇನೆ ನಿನ್ನ
ಇಂದು ನೆನೆಯುತ್ತಿದ್ದೇನೆ ನಿನ್ನ
ನಿನ್ನ ಜೊತೆ ಕಳೆದ ಕ್ಷಣವೆಲ್ಲವು ಮಾಯವಾಗಿ ನೆನಪುಗಳೇ ಕಾಡುತ್ತಿದೆ. ಆ ನೆನಪಿನ ಅಂಗಳದಲ್ಲಿ ಸದಾ ಆಡುತ್ತ , ಆ ನೆನಪಿನ ಆಗಸದಲ್ಲಿ ಸದಾ ತೇಲುತ್ತಿರುವೆನು ನನ್ನ ಗೆಳೆಯ. ನೀ ನನ್ನ ಬಿಟ್ಟು ದೂರ ಹೋದರು ನಿನ್ನ ಜೊತೆ ಕಳೆದ ಸಿಹಿಕಹಿ ಕ್ಷಣಗಳು ಮಾತ್ರ ಎಂದೂ ಮಾಸದು. ನೀ ಆಡಿದ ಪ್ರತಿಯೊಂದು ಮಾತುಗಳು ಕೂಡ ಈ ದಿನವು ನಾನು ನೆನೆಸುತ್ತಿದ್ದೇನೆ. ತನಗೆ ಏನೇ ನೋವು ಸಂಕಟ ಕಷ್ಟಗಳು ಇದ್ದರು ಅದು ಯಾವುದನ್ನು ಮೊಗದಲ್ಲಿ ತೋರಿಸದೆ ಸದಾ ನಗು ನಗುತ್ತಾ ಇರುವೆ. ಕಷ್ಟವಿದ್ದರೂ ದುಃಖದಲ್ಲಿದ್ದರೂ ಸಮಾಧಾನದ ಮಾತುಗಳಿಂದ ಮನಸ್ಸನ್ನು ಹಗುರಗೊಳಿಸುವೆ. ಯಾರ ವೇದನೆಯನ್ನು ಬಹುಬೇಗನೆ ಅರಿತು ಅವರ ಕಣ್ಣೀರ ಕಂಬನಿಯ ಒರೆಸೋ ಮೊದಲ ಕೈ ನಿನ್ನದು. ಗುಣಕ್ಕೇನು ಕಡಿಮೆ ಇಲ್ಲ. ಹಗೆತನ ಎನ್ನುವುದು ಗೊತ್ತಿಲ್ಲ. ಗೆಳೆತನ ಎಂಬುದು ಎಷ್ಟೊಂದು ಅಮೂಲ್ಯ ಅದನ್ನು ಹೇಗೆ ಜೋಪಾನ ಮಾಡಬೇಕೆಂದು ತಿಳಿಸಿದ ಚತುರ. ನನ್ನ ಗೆಳೆಯ ಊರಿಗೆ ಉಪಕಾರಿ ಮನೆಯವರಿಗೂ ಸಹಕಾರಿ. ಯಾರೇ ಸಂಕಷ್ಟ ಎಂದು ಬಂದರೂ ಕೈಲಾದ ಸಹಾಯವನ್ನು ಮಾಡುವ ಧ್ಯೇಯೋದ್ದೇಶ ಅವನಲ್ಲಿತ್ತು.ನನಗಿಂತಲೂ ಹಿರಿಯರಾದರೂ ಮನಸ್ಸು ಮಾತ್ರ ಮಗುವಿನಂತೆ ಪ್ರಶಾಂತ ಶಾಂತ. ಅವನೇ ನಾ ಈ ಜಗದಲ್ಲಿ ಕಂಡ ಅಪರೂಪದ ಮಾಣಿಕ್ಯ.
ಆದರೆ ಇಂದು ಆ ಮಾಣಿಕ್ಯ ಆಗಸದಲ್ಲಿ ಬೆಳ್ಳಿಚುಕ್ಕಿಯಾಗಿ ಮಾತ್ರ ನೋಡಲು ಸಾಧ್ಯ. ವಿಧಿಯ ಕ್ರೂರ ಆಟಕ್ಕೆ ತಲೆಬಾಗಿ ಬಿಟ್ಟ . ಸಾವೆಂಬ ಗಂಟೆಯೂ ಅವನ ಬಾಳಲ್ಲಿ ಈ ಮೊದಲು ಜೋರಾಗಿ ಬಡಿದರು ಇಂದು ಜಗದಿಂದಲೇ ಮಾಯವಾದ. ಆಡು ಭಾಷೆಯಲ್ಲಿ ಒಂದು ಮಾತಿದೆ ಒಳ್ಳೆಯವರಿಗೆ ಬೇಗ ಸಾವೆಂದು ಆ ಮಾತು ನಿಜಕ್ಕೂ ನನ್ನ ಗೆಳೆಯನ ಜೀವನದಲ್ಲಿ ಸತ್ಯವಾಯಿತು. ಈ ಬಗ್ಗೆ ಹೇಳಿ ಅಮ್ಮನಲ್ಲಿ ಎಷ್ಟು ಬಾರಿ ಅತ್ತದ್ದು ಇದೆ. ಆ ಸಮಯದಲ್ಲಿ ಅಮ್ಮ "ಜೀವನವೇ ಹೀಗೆ ಕಂದ ಇಲ್ಲಿ ಯಾರೂ ಶಾಶ್ವತವಲ್ಲ. ಈ ಜಗದ ಮಾಯೆಯೇ ಹಾಗೆ ಇಂದು ಅವ ನಾಳೆ ನಾನು ಹಿಂದಿ ಜೀವನವೆಂಬುದು ಬಸ್ಸಿನಂತೆ. ಬಸ್ನ ಕೊನೆಯ ನಿಲ್ದಾಣವೇ ಸಾವು. ಸಾವಿಗೆ ಎಲ್ಲರೂ ಶರಣಾಗಲೇಬೇಕು ಎಂದು ಸಮಾಧಾನಪಡಿಸುತ್ತಿದ್ದಳು ಆದರೂ ನನ್ನ ಗೆಳೆಯನ ನೆನಪು ಮಾತ್ರ ಸದಾ ಉರಿಯುವ ದೀಪದಂತೆ ಪ್ರಜ್ವಲಿಸುತ್ತಾ ಇರುತ್ತದೆ.
ಮಿಸ್ ಯು ಗೆಳೆಯ