ಗುರುಕಾಣೆಕೆ..
ಗುರುಕಾಣೆಕೆ..
ಹಾಲ್ನಲ್ಲಿ ಕುಳಿತು ಪೇಪರ್ ಓದುತ್ತಿದ್ದವನು ಅಡುಗೆ ಮನೆ ಕಡೆ ತಿರುಗಿ ಹೆಂಡತಿಯನ್ನು ಕೇಳಿದ..
"ಮಧು ಬಿಝಿ ಇದ್ಯಾ"
"ಇಲ್ಲ ಹೇಳು ಮನು "
"ನಿನ್ನೆ ರಾತ್ರಿ ನನ್ ಕನಸಲ್ಲಿ ಶಾರದಾ ಟೀಚರ್ ಬಂದಿದ್ರು."
"ಹೌದಾ.. ಎಷ್ಟೋ ವರ್ಷಗಳು ಕಳಿತು..ನಾವು ಅವರನ್ನು ಕಾಲೇಜು ಬಿಟ್ಟ ಮೇಲೆ ಬೇಟಿಯಾಗಿಲ್ಲ ಅಲ್ವಾ..?
"ಹೌದು ಮಧು.. ಇವತ್ತು ನಾವು ನೆಮ್ಮದಿಯಾಗಿ ಜೀವನ ನೆಡೆಸುತ್ತಾ ಇದ್ದೀವಿ ಅಂದ್ರೆ ಅವರೇ ಕಾರಣ..ಒಂದು ಕಾಲದಲ್ಲಿ ಅವರ ಮೇಲೆ ತುಂಬಾ ಕೋಪ ಇತ್ತು.ನಮ್ಮಿಬ್ಬರ ಪ್ರೀತಿ ವಿಷ್ಯಾನ ಅಪ್ಪ ಅಮ್ಮನಿಗೆ ಹೇಳಿ ದೂರ ಆಗೋ ಹಾಗೆ ಮಾಡಿದ್ರು ಅಂತಾ.."
"ನಿಜಾ ನನಗೂ ಹಾಗೆ ಅನಿಸಿತ್ತು.. ಅಪ್ಪ ನನ್ನನ್ನು ಫೈನಲ್ ಇಯರ್ ಗೆ ಕಳ್ಸಲ್ಲ ಅಂತ ಕೂತಾಗ ಅವರೇ ತಿಳಿ ಹೇಳಿ ಡಿಗ್ರಿ ಮುಗಿಸಿ ಡಬಲ್ ಡಿಗ್ರಿನೂ ಮಾಡೋ ಹಾಗೆ ಮಾಡಿದ್ರು..ಅವರಂತ ಟೀಚರ್ ಪಡೆಯೋಕೆ ಪುಣ್ಯ ಮಾಡಿದ್ವಿ ಅನ್ಸುತ್ತೆ.. ಅಲ್ವಾ..?
"ಹೌದು ಮಧು..ಅವರು ಯಾವಾಗ್ಲೂ ಒಂದು ಮಾತು ಹೇಳ್ತಾ ಇದ್ರು ಓದೊ ಟೈಮ್ ನಲ್ಲಿ ಓದಬೇಕು.. ಜವಾಬ್ದಾರಿಗೆ ಸಿದ್ದರಾಗಬೇಕು..ಅಪ್ಪ ಅಮ್ಮ ಹಾಗು ಕಲಿತ ಶಾಲೆಯ ಕೀರ್ತಿ ಹೆಚ್ಚಿಸಬೇಕು ಅಂತ.. ನೆನಪಿದ್ಯಾ?
"ಹುಂ ನೆನಪಿದೆ.. ಅವರಷ್ಟು ಕಾಳಜಿಯಿಂದ ನಮಗೆ ಬುದ್ಧಿ ಹೇಳಿದ್ದಕ್ಕೆ ಅನ್ಸುತ್ತೆ ಅವರನ್ನ ಸದಾ ನೆನಪಿಸಿಕೊಳ್ಳುತ್ತಲೆ ಇರ್ತೀವಿ ಅಲ್ವಾ..?"
"ನಿಜಾ ಮಧು..ನಾವು ಯಾಕೆ ಅವರನ್ನ ಬೇಟಿಯಾಗಬಾರದು..?"
"ಐಡಿಯಾ ಚೆನ್ನಾಗಿದೆ..ಆದರೆ ಅವರು ಎಲ್ಲಿದ್ದಾರೆ ಅಂತ ಗೊತ್ತಿಲ್ವಲ್ಲಾ.."
"ನಾವು ಓದಿರೋ ಕಾಲೇಜಿಗೆ ಹೋಗಿ ಕೇಳೋಣ..ಅಲ್ಲಿ ಇಲ್ಲಾ ಅಂದ್ರೆ ಟ್ರಾನ್ಸ್ಫರ್ ಆಗಿದ್ರೆ ಡೀಟೈಲ್ಸ್ ತಗೊಳೋಣ.."
"ಸರಿ ಹಾಗಾದರೆ ಈ ವೀಕ್ ಎಂಡ್ ಹೋಗೋಣ " ಎಂದು ಮಾತನಾಡಿದವರು ಹೊರಡಲು ತಯಾರಿ ನಡೆಸಿದರು..
"ಮನು ಕನಸಲ್ಲಿ ಬಂದು ಶಾರದಾ ಟೀಚರ್ ಏನಾದ್ರು ಅಂದ್ರಾ..?"
"ಇಲ್ಲ ಮಧು ನಾವು ಯಾವಾಗಲೂ ಶಾರದಾ ಟೀಚರ್ ನಗ್ತಾ ಇದ್ದಿದ್ದನ ನೋಡಿದ್ದು..ಕನಸಲ್ಲಿ ಆ ನಗುನೇ ಇರಲ್ಲಿಲ್ಲ.."
"ನಾವು ಮದುವೆಗೆ ಕರಿಬೇಕಿತ್ತು..ಗಡಿಬಿಡಿ ಆಯ್ತು ಅಂತ ಕರಿಯೋದು ಮರತ್ವಿ.."
"ಹೌದು ಮಧು..ನಿಮ್ಮ ಪ್ರೀತಿ ಪವಿತ್ರವಾದುದು ಆಕರ್ಷಣೆಯಲ್ಲ ಎಂದಾದರೆ ನೀವು ಒಂದಾಗಿ ಬದುಕು ನಡೆಸ್ತೀರ ಅಂತ ಅವತ್ತು ಹೇಳಿದ್ರು.."
"ನಾವು ಹೋದಾಗ ಅದೇ ಕಾಲೇಜಿನಲ್ಲಿ ಸಿಕಿದ್ರೆ ಸಾಕು"ಎಂದು ಹೇಳುತ್ತಾ ಪ್ರಯಾಣ ಬೆಳೆಸಿದವರು ಕಾಲೇಜು ತಲುಪಿದರು..
ಆದರೆ ಅವರು ಬಂದ ಕಾರ್ಯ ಸಫಲವಾಗಲ್ಲಿಲ್ಲ.. ಕಾಲೇಜು ಆಡಳಿತ ಮಂಡಳಿ ಬದಲಾಗಿತ್ತು.. ಯಾರಿಗೂ ಹಳೆಯ ಸ್ಟಾಫ್ ಪರಿಚಯವಾಗಲಿ ಎಲ್ಲಿದ್ದಾರೆ ಎಂಬ ಮಾಹಿತಿಯಾಗಲಿ ತಿಳಿಯದ ಕಾರಣ ಹೊರಡಲು ಮುಂದಾದವರಿಗೆ ಕಾಲೇಜು ಅಟೆಂಡರ್ ಬರುತ್ತಿರುವುದನ್ನು ನೋಡಿ ಅವನ ಬಳಿ ಓಡಿ ಶಾರದಾ ಟೀಚರ್ ಬಗ್ಗೆ ವಿಚಾರಿಸಿದರು..
ಶಾರದಾ ಟೀಚರ್ ಗಂಡ ಮತ್ತು ಮಕ್ಕಳಿಗೆ ಆಕ್ಸಿಡೆಂಟ್ ಆಗಿ ಸ್ಥಳದಲ್ಲಿಯೇ ಮೃತಪಟ್ಟರು.. ಈ ಊರಿನಲ್ಲಿ ಅವರ ನೆನಪುಗಳೊಂದಿಗೆ ಬದುಕುವುದು ಕಷ್ಟವೆಂದು ಈ ಶಾಲೆಯನ್ನು ಬಿಟ್ಟು ಟೀಚರ್ ಹೊರಟು ಹೋದರು.. ನನಗೆ ಗೊತ್ತಿರುವುದು ಇಷ್ಟೇ, ಎಲ್ಲಿದ್ದಾರೆ ಅಂತ ಗೊತ್ತಿಲ್ಲ.. ಎಂದವನ ಮಾತು ಕೇಳಿ ಇಬ್ಬರ ಮನವು ನೊಂದಿತ್ತು.. ಅಷ್ಟು ಒಳ್ಳೆಯ ಟೀಚರಿಗೆ ಹೀಗಾಗಬಾರದಿತ್ತು ಎಂದುಕೊಂಡರು..
ಬಂದ ಕಾರ್ಯ ಸಫಲವಾಗದೆ ಅಲ್ಲಿಂದ ಪುನಃ ಮನೆ ಕಡೆಗೆ ತೆರಳುವಾಗ ಮಾರ್ಗ ಬದಲಾಯಿಸಿ ಬಂದ ದಾರಿಯಲ್ಲಿ ಹೋಗದೆ ಇನ್ನೊಂದು ದಾರಿಯಿಂದ ಮನೆಗೆ ಹೋಗಲು ಗಾಡಿ ತಿರುಗಿಸಿದರು...ದಾರಿ ಮಧ್ಯದಲ್ಲಿ ಒಂಟಿಯಾಗಿ ವೃದ್ಧೆಯೊಬ್ಬಳು ಕುಳಿತಿರುವುದನ್ನು ಗಮನಿಸಿದರು..
ದಾಟಿ ಮುಂದೆ ಹೋದವರಿಗೆ ಅದೇನೆನಿಸಿತು ಕಾರನ್ನು ಬದಿಗೆ ನಿಲ್ಲಿಸಿ ವೃದ್ದೆಯನ್ನು ಮಾತನಾಡಿಸಲು ತೆರಳಿದರು.. ಹತ್ತಿರ ಹೋಗುವವರೆಗೂ ಅವರು ಹುಡುಕುತ್ತಿದ್ದದ್ದು ಅವರನ್ನೇ ಎಂಬುದು ತಿಳಿದಿರಲಿಲ್ಲ... ನಿರ್ಗತಿಕರಂತೆ ಕುಳಿತಿದ್ದ ಆ ವೃದ್ಧೆಯನ್ನು ನೋಡಿ ಕರುಳು ಹಿಂಡಿದಂತಾಯಿತು.. ಒಂದು ಕಾಲದಲ್ಲಿ ನಮ್ಮಂತಹ ಅದೆಷ್ಟು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಿದ ಶಿಕ್ಷಕಿಗೆ ಇದೆಂಥ ಪರಿಸ್ಥಿತಿಯನ್ನು ಆ ದೇವರು ತಂದೊಡ್ಡಿದ್ದಾನೆ ಎಂದು ಮನದಲ್ಲಿ ಶಪಿಸಿಕೊಂಡರು..
ಆ ಸ್ಥಿತಿಯಲ್ಲಿ ಅವರನ್ನು ಅಲ್ಲಿಯೇ ಬಿಟ್ಟು ಹೋಗಲು ಮನಸ್ಸಾಗದೆ ಅವರನ್ನು ಕಾರಿನಲ್ಲಿ ಕರೆದುಕೊಂಡು ಮನೆ ಕಡೆ ತೆರಳಿದರು... ಹಳೆಯದು ಯಾವುದು ನೆನಪಿಲ್ಲದೆ ಎಲ್ಲವನ್ನು ಕಳೆದುಕೊಂಡು ಬೀದಿಗೆ ಬಿದ್ದಿದ್ದ ಟೀಚರ್ನ ಗುರುತಿಸಿ ಮನೆಗೆ ಕರೆದುಕೊಂಡು ಬಂದು ಆರೈಕೆ ಮಾಡಿ ವೈದ್ಯರ ಬಳಿ ಕರೆದುಕೊಂಡು ಹೋದರು.. ಸರಿ ಹೋಗಲು ಅನೇಕ ತಿಂಗಳಿಗಳು ಬೇಕು ಎಂದು ಹೇಳಿದ ವೈದ್ಯರ ಸಲಹೆ ಮೇರೆಗೆ ಶಾರದಾ ಟೀಚರ್ನನ್ನು ಮನೆಗೆ ಕರೆತಂದು ಉಪಚರಿಸಲು ನಿರ್ಧರಿಸಿದರು..
ಪುಟ್ಟ ಮಕ್ಕಳನ್ನು ಜೋಪಾನ ಮಾಡುವಂತೆ, ಆರೈಕೆ ಮಾಡುವಂತೆ ಶಾರದಾ ಟೀಚರ್ನನ್ನು ನೋಡಿಕೊಳ್ಳಲು ಆರಂಭಿಸಿದರು.. ತಾವಿಂದು ಬದುಕುತ್ತಿರುವ ಬದುಕು ಶಾರದಾ ಟೀಚರ್ ಕೊಟ್ಟ ಭಿಕ್ಷೆ ಎಂಬುದನ್ನು ಬಲವಾಗಿ ನಂಬಿದ ಜೋಡಿಗಳು ಅವರನ್ನು ನೋಡಿಕೊಳ್ಳುವ ಮೂಲಕ ಅವರ ಋಣ ತೀರಿಸಬೇಕೆಂದು ನಿರ್ಧರಿಸಿದರು...
ಶಾರದಾ ಟೀಚರ್ ಕ್ರಮೇಣವಾಗಿ ಇವರುಗಳು ತೋರುತ್ತಿದ್ದ ಪ್ರೀತಿ ಮಮತೆಯಿಂದ ಚೇತರಿಸಿಕೊಂಡರು... ಹಳೆಯದೆಲ್ಲಾ ಕಾಲಕ್ರಮೇಣ ನೆನಪಾಗಿ ತನ್ನ ವಿದ್ಯಾರ್ಥಿಗಳು ಬೀದಿಯಲ್ಲಿ ಬಿದ್ದಿದ್ದ ನನಗೆ ಮರು ಬದುಕನ್ನು ನೀಡಿದರು ಎಂಬ ವಿಷಯ ತಿಳಿದು ಶಿಕ್ಷಕಿಯಾಗಿ ಹಲವಾರು ಮಕ್ಕಳಿಗೆ ಪಾಠ ಮಾಡಿ ಸರಿದಾರಿಯಲ್ಲಿ ನಡೆಯುವಂತೆ ಸಲಹೆ ನೀಡಿದ್ದಕ್ಕೂ ತನ್ನ ಬದುಕು ಸಾರ್ಥಕವೆನಿಸಿತು..
ಶಾರದಾ ಟೀಚರ್ ಮಧು ಹಾಗೂ ಮನುವಿನ ಕುಟುಂಬದ ಓರ್ವ ಸದಸ್ಯರಾಗಿ ಅವರೊಂದಿಗೆ ನೆಮ್ಮದಿಯಾಗಿ ದಿನ ಕಳೆದರು.. ನಿರ್ಗತಿಕರಾಗಿದ್ದ ಟೀಚರ್ ಅನ್ನು ಮನೆಗೆ ಕರೆತಂದು ತಾಯಿಯಂತೆ ನೋಡಿಕೊಳ್ಳುವ ಮೂಲಕ ಗುರು ಕಾಣಿಕೆಯನ್ನು ಸಲ್ಲಿಸಿದರು...
