ಮಸಣದೂರಿನ ನಿನ್ನ ಜಾಗ.
ಮಸಣದೂರಿನ ನಿನ್ನ ಜಾಗ.
ಈ ಸಣ್ಣ ಯಾತ್ರೆಯಲಿ
ಎಷ್ಟೊಂದು ತಿರುವುಗಳು.
ಬದುಕಿನ ಜಾತ್ರೆಯಲಿ
ಬಹಳಷ್ಟು ಬಣ್ಣಗಳು.
ಜೀವನದ ಸಂತೆಯಲಿ
ಸಾಕಷ್ಟು ಗೊಂದಲಗಳು.
ಈ ಚಿಕ್ಕ ಬಾಳನ್ನು
ಅರಿತು ಜೀವಿಸಬೇಕು.
ಬಂದ್ಹಾಗೆ ಬದಲುಗಳ
ಒಪ್ಪಿ ನಡೆಯಬೇಕು.
ಅಗ್ನಿಸಾಕ್ಷಿಯಲಿ ನವಬದುಕು
ಆರಂಭಿಸಿ, ಸಂಸಾರವ ಹೊರಬೇಕು
ಜಂಜಾಟಗಳ ಎದುರಿಸಿ ನಲಿಯಬೇಕು.
ಮಕ್ಕಳಿಗೆ ಸಮಾನ ಪ್ರೀತಿ ಕೊಡಬೇಕು.
ಸವೆದ ಹಾದಿಯಲಿ ಅಚ್ಚ್ಹೊತ್ತಿ ಕುಳಿತ
ಹೆಜ್ಜೆ ಗುರುತುಗಳು, ಮಾಸಿಹೋಗುವ ಮುನ್ನ
ಹಂಚಿಬಿಡಬೇಕು ಕೂಡಿಟ್ಟ ಹೊನ್ನು.
ಅಂತ್ಯದ ಬಾಯಾರಿಕೆಗೆ
ತುಳಸಿ ನೀರಿನ, ಮೂರು ಹನಿಯನ್ನು ಕುಡಿಸಲು
ಜೊತೆಗಿರಬೇಕು ಹೆತ್ತ ಮಕ್ಕಳು.
ಚಟ್ಟವ ಹೊತ್ತು ಮೆರವಣಿಗೆ ಮಾಡಲು,
ಬರಬೇಕು ದಾಯಾದಿ ಬಂಧುಗಳು.
ಅಗ್ನಿಯಲಿ ನೀ ದಹನವಾದಾಗ
ಬೆಂಕಿಯ ಕಿಡಿಗಿಂತ ಹೆಚ್ಚು
ಜನರ ಚೀತ್ಕಾರ ಕೇಳಬೇಕು.
ನಿನ್ನ, ಆತ್ಮವು ಇಹಲೋಕ ತ್ಯಜಿಸಿ
ಪರಲೋಕಕ್ಕೆ ಸಂಚರಿಸಬೇಕು.
ಆ ದೇವನು ಹಣೆಬರಹದಲ್ಲಿ
ಬರೆದಿಟ್ಟ ನಿನ್ನ, ಈ ಮೂರು ದಿನಗಳ ಯಾತ್ರೆಯಲಿ
ಉಳಿಯುವುದು ಬರೀ ನಿನ್ನ ಕಳೇಬರಹವು.
ಆಸೆ ದುರಾಸೆಗಳ ಮೋಹದಲಿ
ಮರೆಯಾಗುವ ಈ ಜೀವಕ್ಕೆ
ಕೊನೆಗುಳಿಯುವುದೊಂದೇ
ಮಸಣದೂರಿನಲ್ಲಿನ ನಿನ್ನ ಪುಟ್ಟ ಜಾಗ.
ಮಾನವ ಬದುಕಿದ್ದಾಗ ಎಷ್ಟೆಲ್ಲಾ ಮೆರೆಯಬಹುದು,
ಬಹು ಮಹಡಿ ಕಟ್ಟಡ ಕಟ್ಟಬಹುದು, ಅಲ್ಲೇ ಬದುಕುವೆ
ಎಂದುಕೊಳ್ಳಬಹುದು. ಆದರೆ ಕೊನೆಗೆ ಆತ ಹೋಗುವುದು ಸ್ಮಶಾನಕ್ಕೆ ಅಲ್ಲವೇ?