ಅನ್ನದಾತನಿವನೇ..!
ಅನ್ನದಾತನಿವನೇ..!
ಪೂರ್ವೋದಯಿ ರವಿಗೂ ಪೂರ್ವದೊಳ್,
ಉದಯಕಾಲವ ಸ್ಪರ್ಶಿಸಿ, ಮನದೊಳು ನಮಿಸಿ,
ನೇಗಿಲೊಡೆ ಕಂಕಣ ಕಟ್ಟಿ,
ಝೇಂಕಾರ ಮೊಳಗಿಸಿ, ತೃಣವೂ ನವೋಲ್ಲಾಸಗೊಂಡಿರಲು,
ಭೂತಾಯ ಪ್ರದಕ್ಷಿಣೆಗೆ ಹೊರಡುವನು.
ನೆರಳ ಛಾಯೆಯೂ ಅರಿಯದಿರ,
ಸುರಿವ ಕಾರ್ಪಣ್ಯಾಂಬನಿಗಳ ಹರಿವು,
ನೆಚ್ಚುತ ಉತ್ತಂಗಿಯ ನೆರವಿನ ಹಸ್ತ,
ಜರುಗಿಸಿದೆ ಹಸಿವಿನ ಸಮಾಪ್ತಿಯ ಪಥ,
ಅದರಲ್ಲೂರಿಹ ಹೆಜ್ಜೆಗಳ್ನುಡಿವ ಕೊನೆಯಾರಂಭಗಳ ನಾಮ ಸಲ್ಲುವುದಿವನಿಗೇ.
ಬೆಳೆ ಬದಲಾದರೂ, ಬೆಳೆವ ಭುವಿಯಲ್ಲ,
ನೂರಾರು ಒಡ್ಡುಗಳನೊಡ್ಡಿದರೂ ಹರಿವುದುದಕವೇಯಲ,
ಅನಂತವಾಗುರುಳಿದರೂ ಚಕ್ರ ಸೇರುವುದು ಕಾಲವನ್ನೇ,
ಅಂತೆಯೇ ಸಹಸ್ರ ತಲೆಮಾರುಗಳುರುಳಿದರೂ,
ಜೀವಕುಸಿರನೀವ ವಂಶ ಈತನದೇ.
ಲೌಕಿಕ ಭಾರಕೆದೆಯನೊಡ್ಡಿ,
ಜಾಗತಿಕ ಈಟಿಯ ಮೇಟಿಯೊಳೆದುರಿಸಿ,
ಯೋಗಿಯ ಸಹನೆಯ ಮೈಗೂಡಿಸಿ,
ಶತ್ರು ಸಂಹರಿಸಿ, ಜೈ ಎನುವ ಜವಾನನಿಗೂ,
ಅಂತರ್ಶಕ್ತಿ ನೀಡಿಹ ಅನ್ನದಾತನಿವನೇ..!