ಅಂದಿನ ಕಾಲೇಜಿನ ಅನುಭವಗಳು
ಅಂದಿನ ಕಾಲೇಜಿನ ಅನುಭವಗಳು
ಮೂವತ್ತು ವರ್ಷಗಳ ಹಿಂದೆ ನಾನು ಇಂಜಿನೀಯರಿಂಗ್ ಕಾಲೇಜಿಗೆ ಸೇರಿದಾಗ ನನ್ನ ಅಪ್ಪನಿಗೆ ಎಲ್ಲಿಲ್ಲದ ಸಂತಸ.
ನನ್ನ ಮಗಳು ಇಂಜಿನೀಯರ್ ಆಗ್ತಾಳೆ ಅಂತ. ನನಗೂ ಹೆಮ್ಮೆ ಆಗಿತ್ತು. ಆದರೆ ಒಂದೇ ಕೊರಗು. ನಾನು ಮನೆಯಿಂದ ದೂರವಾಗಿ ಬಾಗಲಕೋಟೆ ಹಾಸ್ಟೆಲ್ ನಲ್ಲಿರಬೇಕಾಗ ಪರಿಸ್ತಿತಿ ಆಗಿತ್ತು.
ಮೊದಲ ಬಾರಿ ತಂದೆತಾಯಿಗಳಿಂದ ದೂರವಿರುವ ಪ್ರಸಂಗ ನೋವಿನ ಸಂಗತಿ. ಭಯದ ಜೊತೆ ಆತಂಕಗಳೂ ಮನೆ ಮಾಡಿದ್ದವು. ಹಣದ ಕೊರತೆ, ಸಂಸಾರದ ಬವಣೆ ಅಪ್ಪನನ್ನು ಎದೆಗುಂದಿಸಲಿಲ್ಲ. ನನಗೆ ಅನುದಿನವೂ ಹುರಿದುಂಬಿಸುತ್ತಿದ್ದರು. ಓದುವುದಷ್ಟೇ ನನ್ನ ಕರ್ತವ್ಯವಾಗಿತ್ತು.
ಮೆಸ್ ಗೆ ಎರಡು ಹೊತ್ತಿನ ಊಟಕ್ಕೆ ಹಣ ಪಾವತಿಸಲೂ ಹೆಣಗುತ್ತಿದ್ದರು. ತಿಂಗಳಿಗೆ rs 500 ಎಲ್ಲ ಖಚ್ಚುಗಳೂ ಸೇರಿ ಊಟದ ಖರ್ಚೂ ಸಹ ನಿಭಾಯಿಸುವುದು ದುಸ್ತರವಾಗಿತ್ತು. ಆಗ ನಾನು ಮೆಸ್ನಿಂದ ಒಂದೇ ಕ್ಯಾರಿಯರ್ ತರಿಸಿಕೊಳ್ಳಲು ಶುರು ಮಾಡಿದೆ . ಅದನ್ನೇ ಎರಡು ಹೊತ್ತೂ ತಿನ್ನಬಹುದೆಂದು.
ಕಾಲೇಜು ಸ್ವಲ್ಪ ದೂರದಲ್ಲಿತ್ತು. ಕಾಲೇಜಿನ ಬಸ್ ಸೌಲಭ್ಯವಿತ್ತು. ಅದಕ್ಕೂ ಹಣ ಕಟ್ಟಬೇಕಿತ್ತು. ಎಷ್ಟೊಂದು ಹಣದ ಅವಶ್ಯಕತೆಯಿದೆಯಲ್ಲ. ಹೇಗೆ ನಿಭಾಯಿಸುವುದೆಂಬ ಚಿಂತೆ ನನ್ನನ್ನು ಹಗಲಿರುಳೂ ಕಾಡುತ್ತಿತ್ತು.
ಅಪ್ಪನ ಕಾಗದ ತಿಂಗಳಿಗೊಮ್ಮೆ ಬರುತ್ತಿತ್ತು. ಅದಕ್ಕಾಗಿ ದಿನಾ ಕಾಯುವುದೇ ಒಂದು ಸಂತಸವಾಗಿತ್ತು ನನಗೆ. ಅಪ್ಪ ತನ್ನೆಲ್ಲ ಕಷ್ಟಗಳನ್ನು ಪತ್ರದಲ್ಲಿ ಹೇಳಿಕೊಳ್ಳುತ್ತಿದ್ದರು, ತಮ್ಮ ತಂಗಿಯರ ಶಾಲೆಗಳ ಖರ್ಚು, ಅಮ್ಮನ ದವಾಖಾನೆಯ ಖರ್ಚು, ಮನೆಯ ಖರ್ಚು ಎಲ್ಲವೂ ವ್ಯಯವಾಗಿ ಸಾಲದಾಗ ಪೀಎಫ್ ಲೋನ್ ಪ್ರತೀ ತಿಂಗಳ ಕೊನೆಯಲ್ಲಿ rs 200 ಡ್ರಾ ಮಾಡದೇ ವಿಧಿಯಿರಲಿಲ್ಲ. ಆಗೆಲ್ಲಾ ನನಗೆ ತುಂಬಾ ಹಿಂಸೆಯಾಗುತ್ತಿತ್ತು. ನನ್ನದೂ ಖರ್ಚು ಇದರಲ್ಲಿ ಯಾಕೆ ಬರೆದಿಲ್ಲವೆಂದು.
ಅಪ್ಪ ನನ್ನನ್ನು ಹೆಣ್ಣು ಮಗಳೆಂದು ಭಾವಿಸಲೇ ಇಲ್ಲ. ಗಂಡಿಗೆ ಸಮನಾಗಿ ಸಾಕಿದ್ದರು. ಅವರನ್ನು ನಾನೂ ಅಷ್ಟೇ ಗೌರವ ಹಾಗೂ ಪ್ರೀತಿಯಿಂದ ಕಾಣುತ್ತೇನೆ . ಅವರ ಪತ್ರಕ್ಕೆ ಪ್ರತಿಯಾಗಿ ನಾನೂ ಉದ್ದನೆಯ ಪತ್ರ ಬರೆಯುತ್ತಿದ್ದೆ.
ನನ್ನೆಲ್ಲ ಭಾವನೆಗಳನ್ನು ಅಲ್ಲಿ ಹಂಚಿಕೊಳ್ಳುತ್ತಿದ್ದೆ. ಓದು ಮುಗಿಸಿ ಕೆಲಸ ದೊರೆತ ಮೇಲೆ ನಾನೆಲ್ಲ ಜವಾಬ್ಧಾರಿಯನ್ನು ತೆಗೆದುಕೊಳ್ಳುವುದಾಗಿ ಭರವಸೆಯನ್ನು ಕೊಡುತ್ತಿದ್ದೆ. ತಂದೆಗೆ ತುಂಬಾ ಖುಷಿಯಾಗುತ್ತಿತ್ತು. ತನ್ನ ಸ್ನೇಹಿತರಿಗೆಲ್ಲ ನನ್ನ ಪತ್ರವನ್ನು ತೋರಿಸಿ ಹೆಮ್ಮೆ ಪಟ್ಟದ್ದು ನನಗೀಗಲೂ ನೆನಪಿದೆ. ಅಂತಹ ಆಪ್ತತೆ ಇಬ್ಬರಿಗೂ. ರಾತ್ರಿ ಮಲಗುವಾಗ ಅಪ್ಪ ನನ್ನ ಪತ್ರಗಳನ್ನು ದಿಂಬಿನಡಿಯಲ್ಲಿಟ್ಟು ಮಲಗುತ್ತಿದ್ದರೆಂದು ಅಮ್ಮ ಹೇಳಿದ್ದು ನೆನಪಿದೆ.
ಯಾಕೋ ಇಂದು ಅಪ್ಪನ ನೆನಪು ತುಂಬಾ ಆಗುತ್ತಿದೆ. ಚೆನೈಲಿ ಒಂಟಿಯಾದ ಬದುಕು ಒಮ್ಮೊಮ್ಮೆ ಹಿಂದಿನದೆಲ್ಲವನ್ನೂ ಮೆಲುಕು ಹಾಕುವಂತೆ ಭಾವನಾತ್ಮಕತೆಗೆ ತಳ್ಳಿಬಿಡುತ್ತದೆ. ನನ್ನ ಅಪ್ಪ ಅಮ್ಮ ಅಂದರೆ ನನಗೆ ತುಂಬಾ ಹೆಮ್ಮೆ . ಅವರು ಪಟ್ಟ ಶ್ರಮವೇ ನಾನಿಂದು ಸುಖವಾಗಿರಲು ಕಾರಣ. ಅವರ ಸಂತೋಷವೇ ನನ್ನ ಸಂತೋಷವೂ. ಹಿರಿಯರ ಒಳ್ಳೆಯತನ ಮಕ್ಕಳನ್ನು ಕಾಪಾಡುತ್ತದೆ. ಅವರು ಮಾಡಿದ ಕರ್ಮದ ಫಲ ಮಕ್ಕಳಿಗೆ ದೊರಕುತ್ತದೆ ಎಂಬುದು ಮಾತ್ರ ಸುಳ್ಳಲ್ಲ. 🙏
