ಕರುನಾಡು
ಕರುನಾಡು
ಭವ್ಯ ಸಂಸ್ಕೃತಿಯ ಚಿನ್ನದ ನಾಡು,
ಅಂದ ಚೆಂದದ ಸುಂದರ ನೆಲೆವೀಡು,
ಸೌಹಾರ್ದತೆಯನು ಎಲ್ಲೆಡೆ ಸಾರುವ ಸಿರಿನಾಡು,
ಹಿರಿಮೆಯಲಿ ರಾರಾಜಿಸುವ ಹೆಮ್ಮೆಯ ಕರುನಾಡು!!
ಕಾವೇರಿ ತಾಯಿಯ ಚಿರಂತನ ಜೀವಧಾರೆ,
ಕೃಷ್ಣ, ತುಂಗೆ, ಶರಾವತಿಗಳ ಅನನ್ಯ ಆಸರೆ,
ನೇತ್ರ, ಭದ್ರೆ, ಹೇಮಾವತಿಗಳ ಜಲಧಾರೆ,
ವಿಶ್ವಖ್ಯಾತಿ ಜೋಗವು ಕರುನಾಡ ಉಸಿರೆ!!
ಹಂಪಿಯ ದೇಗುಲಗಳಲಿ ಸಪ್ತಸ್ವರ ಆಕರ್ಷಕ,
ಬಾದಾಮಿ, ಐಹೊಳೆ, ಪಟ್ಟದಕಲ್ಲು ಐತಿಹಾಸಿಕ,
ಜೀವಂತ ಶಿಲೆಗಳ ಕಥೆಗಳು ಮನಮೋಹಕ,
ವೈಭವ ಶಿಲ್ಪಕಲಾಕೃತಿಗಳಲಿ ಕರುನಾಡ ಸಿರಿ ಸಾಂಸ್ಕೃತಿಕ!!
ಶಿವಶರಣರ ವಚನ ಸಾಹಿತ್ಯ ಮೇರು,
ದಾಸರ ನುಡಿಪದಗಳಲಿ ಅವತರಿಸುವ ದೇವರು,
ಕೃತಿಕಾವ್ಯಗಳಲಿ ಮೆರೆವ ಪಂಪ, ಜನ್ನ, ಪೊನ್ನರು,
ಕುವೆಂಪು, ಬೇಂದ್ರೆ, ಕಾರಂತರ ಪದಗಳಲಿ ಭಾವದ ಉಸಿರು!!
ಹನಿಹನಿಯಲಿ ಹರಿಯುತಿದೆ ಕರುನಾಡ ಜೀವ,
ಶಿಲ್ಪಕಲೆಗಳಲಿ ಬಿಂಬಿಸುತಿದೆ ನಾಡ ಪರಂಪರೆಯ ಗೌರವ,
ಕನ್ನಡಿಗರ ಅಣುಅಣುವಿನಲಿ ಕನ್ನಡದ ಕಲರವ
ಗರಿಮೆಯಲಿ ಸಾರುತಿದೆ ಕರುನಾಡಿನ ಗತವೈಭವ!!
ಕನ್ನಡಿಗರ ಅನನ್ಯ ಜೀವನಾಡಿ,
ಔದಾರ್ಯತೆಯನು ಸಾರುವ ಚೆನ್ನುಡಿ,
ಹೃನ್ಮನದಿ ಅಭಿವ್ಯಕ್ತಿಸುವ ಕನ್ನಡ ನುಡಿ,
ಕನ್ನಡವೇ ಸತ್ಯ,ಕನ್ನಡವೇ ನಿತ್ಯವೆನ್ನುವ ಹೊನ್ನುಡಿ!