ಒಣಗಿ ಮುದುಡಿಕೊಳ್ಳುವ ಮುಪ್ಪು
ಒಣಗಿ ಮುದುಡಿಕೊಳ್ಳುವ ಮುಪ್ಪು
"ಓ ಒಣಗಿ ಮುದುಡಿಕೊಳ್ಳುವ ಮುಪ್ಪು ನಿನಗಿದೋ ನನ್ನ ದಿಕ್ಕಾರ, ನನ್ನ ಚಲುವಿನ ರೂಪ, ಆಕಾರ ವಿಕಾರ ಗೊಳಿಸಿ, ನನ್ನ ಚೈತ್ಯಪೂರ್ಣ ಕೆಲಸಾ ಮಾಡುವ ಹುಮ್ಮಸ್ಸು ಎಲ್ಲಾ ದೋಚಿಕೊಂಡು ಅಶಕ್ತಗೊಳಿಸಿದೆಯಲ್ಲ. ನೂರು ಸಂವತ್ಸರ ಕಾಲ ಬದುಕಿದರೇನು ಈ ಜಿಗುಪ್ಸೆ ಹಾಗೂ ಸಾವಿನ ಭಯದಲ್ಲಿನ ಬದುಕು ತತ್ತರ" ಎಂದು ರಾಮಜ್ಜ ಬೇಸರದಿಂದ ಹಲುಬಿಕೊಳ್ಳುತ್ತಿದ್ದ.
ಇದ್ದ ಒಬ್ಬೇ ಒಬ್ಬ ಮಗ ರಾಜುನೂ ರಾಮಜ್ಜನ ಮಾತಿಗೆ ಬೇಲೇಕೊಡದೆ ಕೀಳಾಗಿ ನೋಡಿಕೊಳ್ಳುತ್ತಿದ್ದ. ರಾಮಜ್ಜ ತನ್ನ ಇಳಿವಯಸ್ಸಿನಲ್ಲಿ ತನ್ನ ಸ್ವಕಾರ್ಯಗಳನ್ನು ಮಾಡಿಕೊಳ್ಳಲು ಅಶಕ್ತನಗಿದ್ದ. ಆದರೂ ತನ್ನ ಮೊಮ್ಮಗ ಪ್ರಶಾಂತನ ಜೊತೆ ಸಂಜೆಯ ಸಮಯದಲ್ಲಿ ತನ್ನ ತೋಟದಲ್ಲಿ ಸುತ್ತಾಡಿಕೊಂಡು ತನ್ನ ಬೇಸರವನ್ನು ಕಳೆಯುತ್ತಿದ್ದ. ತನ್ನ ನೋವ ಮರೆಯಲು ತೋಟದಲ್ಲೇ ಬೆಳೆದಿದ್ದ ತನ್ನಂತೆಯೇ ಮುಪ್ಪಾಗಿದ್ದ ಹಲಸಿನ ಮರದಡಿಯಲ್ಲಿ ಕೂತು ಹಕ್ಕಿಗಳ ಚಿಲಿಪಿಲಿಯ ಗಾನಗಳನ್ನು ಕೇಳುತ್ತಾ ಕಷ್ಟಗಳನ್ನೆಲ್ಲ ಕ್ಷಣಕಾಲ ಮರೆತು ಪ್ರಶಾಂತತೆಯನ್ನು ಅನುಭವಿಸುತ್ತಿದ್ದ.
ನೂರಾರು ಜೀವರಾಶಿಗಳ ಸಾಕಿ ಬೆಳೆಸುತ್ತಿರುವ ದೊಡ್ಡ ಹಲಸಿನ ಮರ ಅದಾಗಿತ್ತು. ಇಲ್ಲಿಯವರೆಗೆ ಅದು ಸಾಕಷ್ಟು ರುಚಿರುಚಿಯಾದ ಹಣ್ಣುಗಳನ್ನು ನೀಡಿತ್ತು. ಬರಬರುತ್ತಾ ಅದರ ಇಳುವರಿ ಕಡಿಮೆಯಾಗತೊಡಗಿತು. ಆದುದರಿಂದ ಅದನ್ನು ಕಡಿದು ಹಾಕಲು ರಾಜು ನಿರ್ಧರಿಸಿದ. ವ್ಯಾಪಾರಿ ಮನೋಭಾವದ ರಾಜುಗೆ ಆ ಮರದಿಂದ ಯಾವ ಲಾಭವೂ ಇಲ್ಲ ಎಂದೆನಿಸಿತ್ತು.
ಹಲಸಿನ ಮರವನ್ನು ಕಡಿದು ಹಾಕುವ ವಿಷಯ ಅವನ ಪುಟ್ಟ ಮಗ ಪ್ರಶಾಂತನಿಗೆ ತಿಳಿಯಿತು. ಅವನು ತಂದೆಗೆ "ಮರದಲ್ಲಿ ಸಾಕಷ್ಟು ಪಕ್ಷಿಗಳು ನೆಲೆಸಿವೆ, ಮರವನ್ನು ಕಡಿದರೆ ಅವುಗಳಿಗೆಲ್ಲಾ ಮನೆ ಇಲ್ಲದಂತಾಗುತ್ತೆ" ಎಂದು ಎಸ್ಟೇ ಹೇಳಿದರೂ ರಾಜು ಕೇಳದಾದ. ಮೊಮ್ಮಗನ ಗೋಗರತೆಯನ್ನು ಕೇಳಿಸಿಕೊಂಡ ರಾಮಜ್ಜ ಮರವನ್ನು ಹೇಗಾದರೂ ಉಳಿಸಬೇಕೆಂದು ತೀರ್ಮಾನಿಸಿ ಮಗನ ಮನಸ್ಸಿಗೆ ತಕ್ಕಂತೆ ಬುದ್ಧಿವಾದ ಹೇಳಲು ನಿರ್ಧರಿಸಿದ.
"ಯಾವ ಮರವು ವ್ಯರ್ಥವಲ್ಲ, ಅದು ಹಣ್ಣು ನೀಡದೆ ಇರಬಹುದು, ನೆರಳು ನೀಡುತ್ತದೆ ಅಲ್ಲದೆ ನೀನು ಜೇನು ಸಾಕಾಣಿಕೆ ಕೂಡ ಮಾಡಬಹುದು ಅದರಿಂದಲೂ ಬಾರಿ ಲಾಭವಿದೆ. ಕೇವಲ ಲಾಭದ ಉದ್ದೇಶ ಹೊಂದಿರುವ ನಿನ್ನ ಬುದ್ಧಿಗೆ ಮಂಕು ಕವಿದಿದೆ ಕಾಲನ ಗಡಿಯಾರ ಎಂದೂ ನಿಲ್ಲುವುದಿಲ್ಲ ಎಲ್ಲವೂ ನಶ್ವರ. ಇದೇ ಮರದಡಿ ನೀನು ಆಟ ಆಡುತ್ತಾ ರುಚಿಕರ ಹಣ್ಣುಗಳನ್ನು ಸವಿಯುತ್ತ ನಿನ್ನ ಬಾಲ್ಯವನ್ನು ಕಳೆದೆ, ಆ ಸವಿ ನೆನಪುಗಳು ನಿನಗಿಲ್ಲವೆ? ಆ ಸುಮಧುರ ಕಾಲ ಮತ್ತೆ ಬರುತ್ತದೆಯೇ? ಮರಕ್ಕಲ್ಲದೆ ನನಗೂ ಕೊನೆಗೆ ನಿನಗೂ ಮುಪ್ಪು ಬಾರದಿರುವುದೇ? ಇಂದೋ ನಾಳೆಯೋ ಬಿದ್ದುಹೋಗೊ ಮರಕ್ಕೆ ಕೊಡಲಿ ಪೆಟ್ಟು ಬೇಕೆ ? " ಎಂದು ಪರಿ ಪರಿಯಾಗಿ ವಿನಮ್ರತೆಯಿಂದ ಲಾಭದಾಸೆಯ ಮಗನಿಗೆ ತಿಳಿಹೇಳಿದ.
ತಂದೆ ರಾಮಜ್ಜನ ಮಾತುಗಳನ್ನು ಕೇಳಿದ ರಾಜುಗೆ ಈಗಾ ಜ್ಞಾನೋದಯವಾಯಿತು. ಹಣ್ಣು ಬಿಡದ ಮರದಿಂದ ಹೀಗೂ ಲಾಭ ಮಾಡಬಹುದು ಎಂದೆನಿಸಿತು ಜೊತೆಗೆ ತನ್ನ ಬಾಲ್ಯದ ನೆನಪುಗಳು ಹಾಗೂ ಮುಂದೆ ಬರುವ ತನ್ನ ಮುಪ್ಪಿನ ಚಿತ್ರಣ ಮನಸ್ಸಿನಲ್ಲಿ ಮೂಡಿತು. ತನ್ನ ತಪ್ಪಿನ ಅರಿವಾಗಿ ಮರ ಕಡಿಯುವ ನಿರ್ಧಾರವನ್ನು ಕೈ ಬಿಟ್ಟ. ಇದರಿಂದ ಖುಷಿಯಾದ ಪ್ರಶಾಂತ "ನಾನು ಅಷ್ಟು ಗೋಗರೆದರೂ ಕೇಳದ ಅಪ್ಪ, ನಿನ್ನ ಮಾತನ್ನು ಹೇಗೆ ಕೇಳಿದ ತಾತ" ಎಂದು ತಾತನನ್ನು ಕೇಳಿದ. ಅದಕ್ಕೆ ರಾಮಜ್ಜ " ಯಾರಿಗೆ ಯಾವುದು ಪ್ರಿಯವೋ ಅದರಂತೆ ನಾವು ಬುದ್ಧಿ ಹೇಳಬೇಕು" ಎಂದು ಹೇಳಿ ಮೊಮ್ಮಗನ ಕೆನ್ನೆ ತಟ್ಟಿದ.
ರಾಮಜ್ಜನಿಗೆ ತನ್ನ ಮಗನು ಹೀಗಾದರೂ ಬುದ್ಧಿ ಮಾತು ಕೇಳಿದನಲ್ಲ ಎನ್ನುತ ಸಮಾಧಾನವಾಗಿ ನೆಮ್ಮದಿಯ ನಟ್ಟುಸಿರು ಬಿಟ್ಟನು. ರಾಜು ಕೂಡ ಮೊದಲಿನ ತನ್ನ ನಡತೆ ಬದಲಾಯಿಸಿಕೊಂಡು ರಾಮಜ್ಜನನ್ನು ತಕ್ಕ ಮಟ್ಟಿಗೆ ಚೆನ್ನಾಗಿ ನೋಡಿಕೊಳ್ಳುತ್ತಾನೆ.