ಬೆಳ್ಳಿ ಬಿಂದಿಗೆ
ಬೆಳ್ಳಿ ಬಿಂದಿಗೆ
![](https://cdn.storymirror.com/static/1pximage.jpeg)
![](https://cdn.storymirror.com/static/1pximage.jpeg)
ನಾಲ್ಕು ಜನ ಹೆಣ್ಣುಮಕ್ಕಳಾದಮೇಲೆ ದೇವರಲ್ಲಿ ಹರಕೆ ಹೊತ್ತು, ನೇಮ ನಿತ್ಯ ವೃತಗಳ ಆಚರಿಸಿ ಹುಟ್ಟಿದ ಕೂಸಿನ ಮೇಲೆ ಸುನಂದಮ್ಮನಿಗೆ ಎಲ್ಲಿಲ್ಲದ ಪ್ರೀತಿ. ಶಿವನ ಕೃಪೆಯಿಂದ ಹುಟ್ಟಿರುವನೆಂದು ಶಿವ ಎಂಬ ಹೆಸರಿಟ್ಟು ದೇವರಿಗೆ ಕೃತಜ್ನ್ಯತೆಯನ್ನು ಸುನಂದಮ್ಮ ತೋರಿದ್ದಳು. ಎಲ್ಲರು ಆ ಕೂಸಿನ ಮೇಲೆ ಪ್ರೀತಿ ತೋರುವವರೇ . ಯಾರಿಂದ ಮಗುವಿಗೆ ನೆದರಾಯಿತೋ ಏನೋ ಒಂದು ವರ್ಷ ತುಂಬುವಷ್ಟರಲ್ಲಿ ಮಗುವಿಗೆ ವಿಚಿತ್ರ ಖಾಯಿಲೆಯೊಂದು ಹತ್ತಿಕೊಂಡಿತು. ಈ ಖಾಯಿಲೆಯಿಂದ ಹುಟ್ಟಿದಾಗ ಭೀಮನಂತಿದ್ದ ಶಿವ ವಾಂತಿ ಭೇದಿಯಿಂದ ತತ್ತರಿಸಿ ಝರ್ಜರಿತಗೊಂಡು ಕಳ್ಳಿ ಕಟ್ಟಿಗೆಯಂತಾಗಿ ಹೋದ. ಇದರ ಜೊತೆಗೆ ನವಿಲುಗರಿಯಂತಿದ್ದ ಅವನ ಹುಬ್ಬಿನ ಕೂದಲುಗಳು ಕಟುಕರು ಕೊಂದ ಕೋಳಿಯ ಪುಕ್ಕದಂತೆ ಉದುರಿದವು. ಎಷ್ಟು ಕಡೆ ತೋರಿಸಿದರು ಈ ವಿಚಿತ್ರ ಖಾಯಿಲೆ ಮಾತ್ರ ಕಡಿಮೆ ಆಗಲಿಲ್ಲ.
ಹಿಂಗಾದ್ರ ಕೂಸು ಉಳೀತೇತಿಲ್ಲ ಅಂತ ಸುನಂದಮ್ಮ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಹಲುಬುತ್ತಾ ಕಾಲ ಕಳೆಯುತ್ತಿದ್ದಳು. ಇಡೀ ಜಿಲ್ಲೆಯಲ್ಲಿ ಹುಡುಗನನ್ನು ತೋರಿಸದ ಡಾಕ್ಟರ್ಗಳಿಲ್ಲ . ಸುತ್ತದ ಮಂದಿರ ಮಸೀದಿಗಳಿಲ್ಲ . ಏನ ಮಾಡಬೇಕೆಂದು ಮಗುವನ್ನ ಊರ ಹೊರಗಿನ ಶಿವನ ಗುಡಿಗೆ ಒಯ್ದು " ನಮ್ಮಪ್ಪ , ನೀ ಬಲಗೈಲೆ ಕೊಟ್ಟ ಮಗನ್ನ ಹಿಂಗ ಎಡಗಯ್ಯಾಗ ಇಸ್ಕೊಣಕತ್ತಿಯಲ ಯಾಕ ನಮ್ಮಪ್ಪ ಈ ಪರದೇಸಿ ಮ್ಯಾಲ ಯಾಕ ಸಿಟ್ಟು ಹೇಳು, ಈ ಕೂಸಿನ ನಿನ್ನ ಮಡಿಲಾಗ ಹಾಕಿನೀ ಉಳಿಸಿಕೋ " ಎಂದು ಅಳುತ್ತ ಮಗುವನ್ನ ಲಿಂಗದ ಮುಂದೆ ಇಟ್ಟು ದೇವರಲ್ಲಿ ಬೇಡಿಕೊಂಡಳು.
ಇದಾದ ಒಂದು ವಾರವಾಗಿರಬೇಕು ಸುನಂದಮ್ಮನ ಕನಸಿನಲ್ಲಿ ಶಿವನು ಬಂದು " ನನ್ನ ಸನ್ನಿಧಾನಕ್ಕೆ ಬೆಳ್ಳಿ ತೊಟ್ಟಿಲು ಮುಟ್ಟಿಸು ನಿನ್ನ ಮಗ ಆರಾಮ್ ಆಗ್ತಾನಾ " ಎಂದು ಆಕಾಶವಾಣಿ ಇತ್ತನಂತೆ. ಸುನಂದಮ್ಮನ ಕನಸಿನ ಸುದ್ದಿ ನೆಂಟರಿಷ್ಟರಿಗೆಲ್ಲ ಹಬ್ಬಿ ನಾಲ್ಕಾರು ದಿನಗಳೇ ಕಳೆದಿರಬೇಕು. ಅದು ಶಿವನ ಪವಾಡ ವೆಂಬಂತೆ ಸುನಂದಮ್ಮನ ಮಗ ಚೇತರಿಕೆ ಕಾಣುತ್ತ ಬಂದ. ಒಂದು ಕಡೆ ಕೈಬಿಟ್ಟ ಮಗ ಮರುಜನ್ಮ ಪಡೆದುದು ಹೋಳಿಗೆ ಉಂಡಷ್ಟು ಸಂತಸವನ್ನ ತಂದರೆ . ಹರಕೆ ತೀರಿಸುವ ದುಗುಡ ಇನ್ನೊಂದು ಚಿಂತೆಗೆ ಜನ್ಮ ನೀಡಿತು .
ಅದಕ್ಕೆ ಕಾರಣ ಸುನಂದಮ್ಮನಿದ್ದ ಪರಿಸ್ಥಿತಿ . ಹೇಳಿಕೊಳ್ಳಲಿಕ್ಕೆ ನದಿಯ ತಟದಲ್ಲಿ 10 ಎಕರೆ ಜಮೀನು. ಆದರೆ ಅದರಲ್ಲಿ ಬೆಳೆದ ಕಬ್ಬಿನ ಫಸಲು ಗಂಡನ ಸಾರಾಯಿಗೆ ಸರಿಹೋದರೆ, ಉಳಿದ ತುಂಡು ನೆಲದಲ್ಲಿ ಬೆಳೆದ ನೆಲ್ಲು ಇವರ ಸಂಸಾರದಲ್ಲಿದ್ದ ೭ ಜನರ ಹೊಟ್ಟೆ ತುಂಬಿಸುತಿತ್ತು.
ಪರಿಸ್ಥಿತಿ ಹೀಗಿರುವಾಗ ದೇವರಿಗೆ ಬೆಳ್ಳಿ ಕಿರೀಟವನ್ನ ಕೊಡಿಸುವುದು ಒಣಗಿದ ಬಾವಿಯಲ್ಲಿ ನೀರ ಹುಡುಕಿದಂತೆ ಸರಿ. ಇದಕ್ಕಾಗಿ ಸಾಲ ಮಾಡಬೇಕೆನಿಸಿದರು ಅದು ದುಸ್ಸಾಹಸವಾದೀತೆಂದು ಸುನಂದಮ್ಮ ದುಃಖಿತಳಾದಳು . ಚಿಂತೆಯಲ್ಲಿ ಕೂತ ಸುನಂದಮ್ಮನಿಗೆ ಥಟ್ಟನೆ ಹೊಳೆದದ್ದು ಅವಳ ತವರು ಮನೆಯವರು ಕೊಟ್ಟ ಬೆಳ್ಳಿ ಬಿಂದಿಗೆ.
ಬೆಳ್ಳಿ ಬಿಂದಿಗೆಯನ್ನು ಮುರಿಸಿ, ಅದಕ್ಕೆ ಸ್ವಲ್ಪ ಕೂಡಿಟ್ಟ ಹಣ್ಣವನ್ನ ವ್ಯಯಿಸಿದರೆ ಬೆಳ್ಳಿ ಕಿರೀಟವಾದೀತೆಂದು ಯೋಚಿಸಿ ಅಕ್ಕಸಾಲಿಗನಲ್ಲಿ ವಿಚಾರಿಸಿ ತಿಳಿಕೊಂಡಳು. ಬೀಳಿ ತಂಬಿಗೆಯ ಸಹಿತ ತಾನು ಕೂಡಿಟ್ಟ ಹಣದಲ್ಲಿ ಅಕ್ಕಸಾಲಿಗನ ಮಜೂರಿಯ ಸಹಿತ ಕಿರೀಟವಾಗುವುದೆಂದು ತಿಳಿದಾಗ ಸುನಂದಮ್ಮ ನಿಟ್ಟುಸಿರಿಟ್ಟಳು.
ಕಿರೀಟ ತಯಾರಾದಮೇಲೆ ರಥಬೀದಿಯ ಶಿವಯೋಗ ಮಠದ ಸ್ವಾಮಿಗಳಿಗೆ ವಿಷಯವನ್ನ ಸುನಂದಮ್ಮ ತಿಳಿಸಿದಾಗ " ಕುಂಭ ಕಳಸವನ್ನ ಹೊತ್ತ 11 ಮುತ್ತೈದೆಯರೊಡಗೂಡಿ ಸುನಂದಮ್ಮನ ಗಂಡನ ಮನೆ ದೇವರಾದ ಕೂಡಲೇಶ್ವರನಿಗೆ ಕಿರೀಟವನ್ನ ಅರ್ಪಿಸು " ಎಂಬ ಅಜ್ಞೇಯನಿತ್ತರಂತೆ .
ಸ್ವಾಮಿಗಳ ಅಪ್ಪಣೆ ಮತ್ತೊಂದು ಸಮಸ್ಯೆಯನ್ನ ತಂದೊಡ್ಡಿತು. " ಹನೊಂದು ಮಂದಿ ಅಂತ ಸ್ವಾಮಗೊಳು ಹೇಳ್ಯಾರ ಅದ್ರ ಹನ್ನೊಂದ ಮಂದಿ ಆರಿಸದು ಹ್ಯಾಂಗ" ಎಂದು ಮತ್ತೆ ಸುಂದಮ್ಮನನ್ನು ಚಿಂತೆಗೀಡುಮಾಡಿತು. ಕಡೆಗೆ ಊರಲ್ಲಿದ್ದ ಎಲ್ಲ ನೆಂಟರನ್ನು ಕರೆದುಕೊಂಡು ಕಿರೀಟ ಸಮರ್ಪಿಸಲು ಕೂಡಲಕ್ಕೆ ಹೊರಡಲೆಂದು ಎಲ್ಲವನ್ನು ಸಿದ್ದ ಪಡಿಸಿದಳು .
ಕಳಸಗಿತ್ತಿಯರು, ತನ್ನ ಸಂಸಾರ ಆಪ್ತ ನೆಂಟರೆಲ್ಲರೂ ಸೇರಿ ೩೦ ಜನ ಹೊರಡುವುದೆಂದು ನಿರ್ಧಾರವಾಯಿತು. ಕಿರೀಟ ಸಮರ್ಪಣೆಯ ಲಿಂಗಾರ್ಚನೆಗಳ ನಂತರ ಪ್ರಸಾದದ ವ್ಯೆವಸ್ಥೆಗೆ ಎಲ್ಲ ಸಾಮಾನುಗಳನ್ನು ಸಜ್ಜು ಗೊಳಿಸಲಿಯಾಯಿತು. ಹೋಳಿಗೆ ಮಾಡಲು ಕಡಲೆಬೇಳೆ, ಗೋದಿಹಿಟ್ಟು, ಬೆಲ್ಲ, ಅನ್ನಕ್ಕೆ ಅಕ್ಕಿ, ಸಾರಿಗೆ ಖಾರದಪುಡಿ, ಉಪ್ಪು, ಹುಣಸೆ ಹಣ್ಣನ್ನು ಖರೀದಿಸಿ ಒಂದು ದೊಡ್ಡ ಚೀಲದಲ್ಲಿ ಕಟ್ಟಿಯಾಯಿತು.
ಎಲ್ಲ ವ್ಯವಸ್ಥೆಯೇನೋ ಆಯಿತು ಆದರೆ ಯಾವುದೇ ಖಾಸಗಿ ವಾಹನ ಸಿಗಲಿಲ್ಲವಾದ್ದರಿಂದ ಎಲ್ಲರು ಬಸ್ಸಿನಲ್ಲೇ ಹೋಗುವುದೆಂದು ನಿರ್ಧಾರವಾಗಿ, ಅಮಾವಾಸ್ಯೆಯ ಮರು ದಿನ ಸಾಯಂಕಾಲವೇ ಕೂಡಲಕ್ಕೆ ವಸ್ತಿ ಹೋಗುವುದೆಂದು ಎಲ್ಲರು ಸಜ್ಜಾದರು. ಸಂಜೆ ನಾಲ್ಕಕ್ಕೆ ಹೊರಡುವ ಬಸ್ಸಿನಲ್ಲಿ ಹೊರಡಲು ಮೂರಕ್ಕೆ ಬಂದು ಎಲ್ಲರು ಕಾಯುತ್ತ ಕೂತರು. ಆದರೆ ಬಸ್ ಮಾತ್ರ ೪: ೩೦ ಆದರೂ ಬರಲಿಲ್ಲ. ರಣ ಬಿಸಿಲು, ಮಗುವಿನ ಅಳು, ಬಸ್ಟ್ಯಾಂಡಿನಲ್ಲಿ ಕಿಕ್ಕಿರಿದು ಸೇರಿದ ಜನ ಎಲ್ಲ ಸೇರಿ ಇವರ ಉತ್ಸಾಹವೇ ಉಡುಗಿ ಹೋಯಿತು. ಕಡೆಗೆ ೫ ಗಂಟೆಗೆ ಬಸ್ ಬಂದು ಅಲ್ಲಿಂದ ಹೊರಟಾಗ ೫: ೩೦ ಆಯಿತು.
ಕಿಕ್ಕಿರಿದು ತುಂಬಿದ್ದ ಬಸ್ಸಿನಲ್ಲಿ ಸುಮಾರು ೧೦೦ ಜನರು ತುಂಬಿದ್ದರು.ಜನರು ಪಟ ಪಟನೆ ಮಾತನಾಡುವ ಗದ್ದಲ, ಮೊಬೈಲ್ನಲ್ಲಿ ಜೋರಾಗಿ ಕೇಳುತಿದ್ದ ಹಾಡುಗಳು, ಇದಕ್ಕೆ ಸರಿಯಾಗಿ ಕರ್ಕಶವಾಗಿ ಧ್ವನಿಗೂಡಿಸುತಿದ್ದ ಬಸ್ಸಿನ ಕಿಟಾರನೆ ಶಬ್ದ, ನಡ ನಡುವೆ ಟಿಕೆಟ್ ತಗೆದುಕೊಳ್ಳಿ ಎಂದು ಕಿರುಚುವ ಕಂಡಕ್ಟರ್ ನ ಕೀರಲು ಧ್ವನಿ ಎಲ್ಲವನ್ನು ಕೇಳುತ್ತ ಮಗುವಿಗೆ ಅಸಹ್ಯವೆನಿಸಿತೋ ಏನೋ ಒಂದೇ ಸಮನೆ ಅಳುತ್ತ ತಾಯಿಯನ್ನ ಕಾಡುತಿತ್ತು.
ಸುನಂದಮ್ಮ ಚಪ್ಪಾಳೆ ತಟ್ಟಿದಳು, ಲಾಲಿ ಹಾಡಿದಳು, ಹಾಲುಣಿಸಿದಳು, ಬೇರೆಯವರ ಕೈಗೆ ಮಗುವನ್ನ ಕೊಟ್ಟಳು, ಆದರೆ ಏನೇ ಮಾಡಿದರು ಮಗು ಅಳುವುದನ್ನ ನಿಲ್ಲಿಸಲೇ ಇಲ್ಲ . ಕೊನೆಗೆ ಪಕ್ಕದಲ್ಲೇ ಇದ್ದ ಸಹ ಪ್ರಯಾಣಿಕನೊಬ್ಬ ತನ್ನ ಕಾಯಲಿದ್ದ smartphone ನಲ್ಲಿ ಹಾಡೊಂದನ್ನು ಹಚ್ಚಿ ಕೊಟ್ಟಾಗ ಮಗು ಅಳುವನ್ನ ನಿಲ್ಲಿಸಿತು.
ಈ ಎಲ್ಲ ಸದ್ದು ಗದ್ದಲ, ಅರಚಾಟ, ಧ್ವನಿ, ಅಳುಗಳ ಗೊಡವೆಯಲ್ಲಿ ತನ್ನ ಕೈಗೆ ಕೊಟ್ಟ ಟಿಕೆಟ್ ಗಳನ್ನ ಮಗು ತಿಂದೇಬಿಟ್ಟಿತೆಂದು ಯಾರ ಗಮನಕ್ಕೂ ಬರಲೇ ಇಲ್ಲ . ಆದರೆ ಮಗು ಅಳು ನಿಲ್ಲಿಸಿತಲ್ಲ ಎಂಬ ಸಮಾಧಾನ ಮಾತ್ರ ಅಲ್ಲಿ ಸುತ್ತಲಿದ್ದ ಜನಗಳಲ್ಲಿ ನಿಟ್ಟುಸಿರು ಬಿಡುವಂತೆ ಮಾಡಿತು.
ಬಸ್ಸು ಮುಂದೆ ಸಾಗಿ ಮುಂದಿನ ನಿಲ್ದಾಣ ತಲುಪಿತು , ಅಲ್ಲಿ ಹಪ್ಪಳ, ಸೋಡಾ ಮಾರುವವರ ಕೂಗುವಿಕೆಯ ಸದ್ದಿಗೆ ಮಗು ಅದೇಕೋ ನಗಲಾರಂಭಿಸಿತು. ಮಗಿವಿನ ನಗುವು ತಾಯಿಯಲ್ಲಿ ಪಾಯಸ ಕುಡಿದಷ್ಟು ಸಂತೋಷವನ್ನ ತಂದಿತು.
ಆ ನಿಲ್ದಾಣದಿಂದ ಹೊರಟ ಬಸ್ಸು ನಿಧಾನವಾಗಿ ಚಲಿಸಿತು, ಇದರ ವೇಗಕ್ಕ ಬಸ್ಸಿನಲ್ಲಿದ್ದ ಬಹುತೇಕರಿಗೆ ಜೋಗುಳ ಹಾಡಿದಂತಾಗಿ ಮೊದಲು ತೂಕಡಿಸಿ, ಆಮೇಲೆ ನಿದ್ರೆಗೆ ಜಾರಿದರು. ಇದಕ್ಕೆ ಸುನಂದಮ್ಮ ಮತ್ತು ಅವಳ ಮಕ್ಕಳು ಹೊರತಾಗಲಿಲ್ಲ.
ಸುನಂದಮ್ಮನಿಗೆ ಎಚ್ಚರವಾದಾಗ ಬಸ್ಸು ಕೂಡಲದ ದೇವಸ್ಥಾನದ ಮುಂದೆ ನಿಂತಿತ್ತು. ಜನರು ಒಬ್ಬೊಬ್ಬರಾಗಿ ಕೆಳಗೆ ಇಳಿಯುತ್ತಿದ್ದರು . ಕೂಸನ್ನು ಎತ್ತಿಕೊಂಡು ಕೆಳಗೆ ಇಳಿಯುವಾಗ ಬಸ್ಸಿನ ಮೆಟ್ಟಿಲ ಕಡೆಗೆ Ticket Checker ನಿಂತಿದ್ದನು .
ಬದಿಯಲ್ಲಿ ಸುನಂದಮ್ಮ ಕರೆ ತಂದಿದ್ದ ಜನ ನಿಂತಿದ್ದರು. ಸುನಂದಮ್ಮನನ್ನು TC ಟಿಕೆಟ್ ಕೇಳಿದಾಗ ಮಗುವಿನ ಕೈ ನೋಡಿದಳು . ಅದು ಕಾಣದಿದ್ದಾಗ ದಂಗಾದಳು . ಮಗುವಿನ ಕೈಗೆ ಕೊಟ್ಟ ಟಿಕೆಟಿನ ಗೊಂಚಲು ಹುಡುಕಲು ಮೇಲೆ ಹತ್ತಿ ತಾನು ಕುಂತಿದ್ದ ಜಾಗವೆಲ್ಲ ಹುಡುಕಾಡಿದಳು.
ಅದು ಸಿಗದಿದ್ದಾಗ ದಿಗಿಲುಗೊಂಡಳು, ಮತ್ತೆ ಸಾವರಿಸಿಕೊಂಡು ಕೆಳಗಡೆ ಬಂದು "ಸಾಹೇಬ್ರ ಟಿಕೆಟು ಕೂಸಿನ ಕಯ್ಯಾಗ ಕೊಟ್ಟಿದ್ಯಾ ರೀ, ಅದು ಬಾಯಗ್ ಹಾಕ್ಕೊಂಡಾಂಗ ಕಾಣತೇತಿ , ಕೈ ಮುಗಿತೀನಿ ನಮ್ಮನ್ನ ಬಿಟ್ಟು ಬಿಡ್ರಿ" ಎಂದು ಟಿಕೆಟ್ ಕಲೆಕ್ಟರ್ನಲ್ಲಿ ಅಂಗಲಾಚಿದಳು .
" ಹುಡುಗುರ್ ಕಯ್ಯಾಗ ಟಿಕೆಟ್ ಕೊಡ್ತಾರನ್ ಬೇ " ಎಂದು ಬಯ್ದು ಎಲ್ಲರನ್ನು ಬಿಟ್ಟು ಕಳಿಸಿದನು . ಆ ರಾತ್ರಿ ನದಿಯ ದಂಡೆಯಲ್ಲಿದ್ದ ಒಂದು ಕಲ್ಯಾಣ ಮಂಟಪದಲ್ಲಿ ಎಲ್ಲರು ಮಲಗಿದರು . ಆದರೆ ಮಗು ಮಾತ್ರ ಅಳುತ್ತಲೇ ಇತ್ತು . ಬೆಳಗಾಗುವವರೆಗೂ ಸುನಂದಮ್ಮ ಮಗುವನ್ನ ರಮಿಸಲು ಪ್ರಯತ್ನಿಸಿ ಸೋತಳು .
ಮುಂಜಾನೆಯ ಹೊತ್ತಿಗೆ ಮಗುವಿಗೆ ವಿಪರೀತ ಭೇದಿ, ವಾಂತಿ. ಏನು ಮಾಡಬೇಕೆಂದು ತಿಳಿಯದೆ ಮಗುವನ್ನ ಕೂಡಲದ ಆಸ್ಪತ್ರೆಗೆ ಸೇರಿಸಿದರು, ನೆಂಟರೆಲ್ಲ ಊರು ಸೇರಿದರು. ಸುನಂದಮ್ಮ ಕಣ್ಣೀರಿಡುತ್ತ ನೆನೆದು ಕೊಂಡಳು . " ಯಪ್ಪಾ ಶಿವನ ಉಪಯೋಗ ಮಾಡಿದ ಸಾಮಾನು ಮುರಿಸಿ ನಿನಗ ಕಿರೀಟ ಮಾಡಿಸಿದ್ದು ತಪ್ಪಾಗೇತಿ, ನನ್ನ ಕೂಸು ಉಳಿಸುಕೊಡು, ಇನ್ನ ಒಂದು ಕಿರೀಟ ಮಾಡಿಸಿ ಹಾಕ್ತಿನಿ" .
ಎರಡು ದಿನಗಳ ನಂತರ ಹುಡುಗ ಹುಷಾರಾದ, ಸುನಂದಮ್ಮ ಕಿರೀಟವನ್ನು ದೇವಸ್ಥಾನದ ಪೂಜಾರಿಗೆ ಒಪ್ಪಿಸಿ ಊರಿಗೆ ನಡೆದಳು . ಆದರೆ ಟಿಕೆಟನ್ನು ಮಾತ್ರ ತನ್ನ ಚೀಲದಲ್ಲಿ ಇಟ್ಟಳು.