ಸಮಯ - ಸಂಯಮ
ಸಮಯ - ಸಂಯಮ
ಅಂದು ಕೊಳ್ಳದಿರು
ನೀ ಹುದುಗಿ ಹೋದೆನೆಂದು!
ಭೂಮಿ ಮುಚ್ಚಿದ ಬೀಜ
ಹುದುಗಿದರು ಕೂಡ
ಆಗುವುದು ವೃಕ್ಷ,
ಇಳೆಗೆ ನೆರಳಾಗಿ,
ಶುಕಗಳಿಗೆ ಗೃಹವಾಗಿ,
ಪಡೆವುದು ಮಹಾನ್ ರೂಪ !
ಬೂದಿ ಮುಚ್ಚಿದ ಕೆಂಡ
ಕಂಡರೂ ತಣ್ಣಗೆ
ಕಿಡಿ ಹಿಡಿದು ಕೊಂಡಿಹುದು,
ಗಾಳಿಯ ಬಿರುಸಿಗೆ
ಅದು ಕಾಯುತಿಹುದು !
ಮೋಡ ಮುಸುಕಿದರೇನು ?
ಸೂರ್ಯನಿಲ್ಲವೆಂದೇನು?
ಅಮಾವಾಸ್ಯೆ ಬಂದರೆ
ಚಂದ್ರನಿಲ್ಲವಾದನೇನು ?
ನೀಲಾಕಾಶದಲ್ಲಿ
ರವಿಯ ಆ ಪ್ರಭೆಗೆ
ತಾರೆಗಳು ಕಾಣದಿಹವು
ರಜನಿಯಾ ಬರುವಿಕೆಗೆ
ಅವು ಕಾಯುತಿಹವು!
ಸಸಿಗೆ ಬೇಕು ನೀರು
ಕೆಂಡಕದು ಗಾಳಿ
ಧೋ! ಎಂದು ಮಳೆಯಾಗೆ
ಮೋಡ ಸರಿಯೆ
ಭಾನುವಿನ ಬರವಾಯ್ತು!
ರಾತ್ರಿ ಕತ್ತಲ ಚಂದಿರ
ಹುಣ್ಣಿಮೆಯಂದಾದ ಸುಂದರ,
ರಾತ್ರಿಯಲ್ಲಿ ತಾರಾಪುಂಜವೇ
ಆಗುವುದು ಗೋಚರ!
ಕಾಯಬೇಕು ಸಮಯಕ್ಕೆ
ಸ್ವಲ್ಪ ಕಾಲವು ಮಾತ್ರ
ಕಾದು ನೋಡಲು ಸಿಗುವುದು ಉತ್ತರ!
ಮನಕೆ ಹತ್ತಿರವಾಗಿ ಉಳಿವುದು ನೂರ್ ಕಾಲ !