ಭೀಕ್ಷುಕ ರಾಜನಾದ ಕಥೆ
ಭೀಕ್ಷುಕ ರಾಜನಾದ ಕಥೆ
ಒಂದು ಊರು ಆ ಊರಲ್ಲಿ ಒಬ್ಬ ರಾಜನಿದ್ದನು. ಆ ರಾಜನು ಅಕಾಲಿಕವಾಗಿ ಮರಣವನ್ನು ಹೊಂದುತ್ತಾನೆ. ಆ ರಾಜನಿಗೆ ಮಕ್ಕಳ ಸಂತಾನ ಇಲ್ಲದಿರುವುದರಿಂದ ಮುಂದಿನ ರಾಜಕುಮಾರನನ್ನು ನೇಮಿಸಲು ಅಲ್ಲಿನ ಮಂತ್ರಿ ಮಂಡಳ ಒಂದು ಕಾನೂನು ರಚನೆ ಮಾಡುತ್ತದೆ. ಗ್ರಾಮದ ಹೆಬ್ಬಾಲಿಗೆ ಒಂದು ಗಂಟೆಯನ್ನು ಕಟ್ಟಿ ಆ ಗಂಟೆಯನ್ನು ಯಾರು 3 ಸಾರಿ ಬಾರಿಸುತ್ತಾರೋ ಅವನು ಆ ರಾಜ್ಯದ ರಾಜಕುಮಾರನಾಗುತ್ತಾನೆ. ಹೀಗೆ ಆಯ್ಕೆಗೊಂಡ ರಾಜಕುಮಾರನ ಅಧಿಕಾರ ಅವಧಿಯನ್ನು 2 ವರ್ಷಕ್ಕೆ ನಿಗದಿ ಪಡಿಸುತ್ತಾರೆ.ಹೀಗೆ 2 ವರ್ಷ ಅಧಿಕಾರ ಅವಧಿ ಪೂರ್ಣಗೊಂಡ ನಂತರ ಆ ರಾಜಕುಮಾರನನ್ನು ಗ್ರಾಮದ ಪಕ್ಕ ಇರುವ ಸಮುದ್ರದ ಆಚೆಯ ಕಾಡಿನಲ್ಲಿ ಬಿಟ್ಟು ಬರುವುದು. ಈ ರೀತಿಯಾಗಿ ನೂತನ ರಾಜಕುಮಾರನಿಗಾಗಿ ಹೊಸದಾದ ಕಾನೂನನ್ನು ರಚನೆ ಮಾಡುತ್ತಾರೆ. ಈ ಸುದ್ದಿಯನ್ನು ಗ್ರಾಮದ ಸುತ್ತಮುತ್ತಲಿನ ಎಲ್ಲ ಜನರಿಗೆ ತಿಳಿಸುತ್ತಾರೆ. ಕೆಲವು ಜನರು ರಾಜಕುಮಾರನಾಗುವ ದುರಾಸೆಯಿಂದ ಹೆಬ್ಬಾಲಿಗೆ ಕಟ್ಟಿರುವ ಗಂಟೆಯನ್ನು ಬಾರಿಸಿ ರಾಜರಾಗುತ್ತಾರೆ. ನಂತರ 2 ವರ್ಷದ ಅವಧಿ ಮುಗಿದ ನಂತರ ರಾಜನನ್ನು ಸಮುದ್ರದ ಆಚೆ ಇರುವ ಕಾಡಿನಲ್ಲಿ ಬಿಟ್ಟು ಬರುತ್ತಾರೆ. ಕಾಡಿನಲ್ಲಿರುವ ಕ್ರೂರ ಕಾಡುಪ್ರಾಣಿಗಳಿಗೆ ಆ ರಾಜನು ಬಲಿಯಾಗುತ್ತಾನೆ. ಹೀಗೆ ಹಲವು ಜನರು ಹೆಬ್ಬಾಲಿಗೆ ಕಟ್ಟಿರುವ ಗಂಟೆಯನ್ನು ಬಾರಿಸಿ ರಾಜರಾಗಿ ಆಳ್ವಿಕೆ ಮಾಡಿ ತಮ್ಮ ಅವಧಿ ಮುಗಿದ ನಂತರ ಕಾಡಿನಲ್ಲಿ ಪ್ರಾಣವನ್ನು ಕಳೆದು ಕೊಂಡಿರುತ್ತಾರೆ.
ಹೀಗಿರುವಾಗ ಒಂದು ದಿನ ಓರ್ವ ಭಿಕ್ಷುಕನು ಆ ಗ್ರಾಮದ ಹೆಬ್ಬಾಲಿಗೆ ಕಟ್ಟಿರುವ ಗಂಟೆಯನ್ನು ಭಾರಿಸುತ್ತಾನೆ. ಅವಾಗ ಅಲ್ಲಿರುವ ಜನರು ಆ ಗಂಟೆಯನ್ನು ಏಕೆ ಭಾರಿಸಿದ್ದೀಯಾ ಅಂತ ಭಿಕ್ಷುಕನಿಗೆ ಕೇಳುತ್ತಾರೆ. ಆವಾಗ ಭಿಕ್ಷುಕನು ನಾನು ಈ ರಾಜ್ಯದ ರಾಜಕುಮಾರನಾಗುವೆ ಅದಕ್ಕಾಗಿ ಈ ಗಂಟೆಯನ್ನು ಬಾರಿಸಿರುವೆ ಅಂತಾ ಹೇಳುತ್ತಾನೆ. ಅಲ್ಲಿನ ಮಂತ್ರಿಮಂಡಲವು ಆ ಭಿಕ್ಷುಕನಿಗೆ ರಾಜಕುಮಾರನ ಅಧಿಕಾರವಧಿ ಮುಗಿದ ನಂತರ ಕಾಡಿನಲ್ಲಿ ಬಿಟ್ಟು ಬರುವುದಾಗಿ ಹೇಳುತ್ತಾರೆ. ಅದಕ್ಕೆ ಭಿಕ್ಷುಕನೂ ತನ್ನ ಸಂಪೂರ್ಣ ಒಪ್ಪಿಗೆಯನ್ನು ಸೂಚಿಸುತ್ತಾನೆ. ಇದರಿಂದಾಗಿ ಭಿಕ್ಷುಕನನ್ನು ಆ ರಾಜ್ಯದ ರಾಜಕುಮಾರನನ್ನಾಗಿ ನೇಮಿಸುತ್ತಾರೆ. ರಾಜಕುಮಾರನು ಆ ಗ್ರಾಮದ ಜನರ ಕಷ್ಟಗಳನ್ನು ಅತ್ಯಂತ ಸುಲಭವಾಗಿ ಇಡೇರಿಸುತ್ತಾ , ಅತ್ಯಂತ ಪ್ರೀತಿ ವಿಶ್ವಾಸದಿಂದ ಜನರ ಮನಸ್ಸುಗಳನ್ನು ಗೆದ್ದು ಯಶಸ್ವಿ ರಾಜ್ಯನಾಗಿ ಹೆಸರನ್ನು ಗಳಿಸುತ್ತಾನೆ. ಈ ರಾಜನು ಮಾಡಿರುವ ಕಾರ್ಯಗಳು ಸುತ್ತಮುತ್ತಲಿನ ಎಲ್ಲ ಗ್ರಾಮಗಳಿಗೂ ಕೂಡ ಪಸರಿಸುತ್ತದೆ. ಹೀಗಿರುವಾಗಲೇ ಈ ರಾಜಕುಮಾರನ ಅಧಿಕಾರಾವಧಿಯು 2 ವರ್ಷ ಮುಗಿದು ಬಿಡುತ್ತದೆ. ಆ ರಾಜ್ಯದ ಕಾನೂನು ಪ್ರಕಾರ ಈಗ ಈ ರಾಜಕುಮಾರನನ್ನು ಸಮುದ್ರದ ಆಚೆ ಇರುವ ಕಾಡಿನಲ್ಲಿ ಬಿಟ್ಟು ಬರಬೇಕಾಗುತ್ತದೆ. ಅದಕ್ಕಾಗಿ ಅಲ್ಲಿಯ ಜನರು ಸಕಲ ಸಿದ್ಧತೆಯನ್ನು ಮಾಡಿಕೊಂಡು ಎಲ್ಲರೂ ಸೇರಿಕೊಂಡು ರಾಜನನ್ನು ಕರೆದುಕೊಂಡು ಕಾಡಿನ ಕಡೆಗೆ ತೆರಳುತ್ತಾರೆ. ಆದರೆ ಅಲ್ಲಿ ಎಲ್ಲರಿಗೂ ಒಂದು ಆಶ್ಚರ್ಯಕರ ಸಂಗತಿಯೂ ನಡೆದುಬಿಡುತ್ತದೆ. ಅದೇನೆಂದರೆ ಕಾಡು ಇದ್ದ ಪ್ರದೇಶದಲ್ಲಿ ಈಗ ಸಂಪೂರ್ಣ ನಗರದ ಪ್ರದೇಶ ಅಭಿವೃದ್ಧಿಗಾಗಿ ಜನರು ಓಡಾಡುತ್ತಿರುತ್ತಾರೆ. ಅವಾಗ ರಾಜನನ್ನು ಕಾಡಿಗೆ ಕಳುಹಿಸಲು ಕರೆದುಕೊಂಡ ಬಂದ ಜನರು ಆಶ್ಚರ್ಯವಾಗಿ, ರಾಜ ಇದೇನು? ಇಲ್ಲಿಯ ಕಾಡು ಎಲ್ಲಿ ಹೋಯಿತು ? ಇಲ್ಲಿ ನಗರ ಪ್ರದೇಶ ಯಾವಾಗ ಉದ್ಭವವಾಯಿತು? ಎಂದು ರಾಜನನ್ನು ಕೇಳುತ್ತಾರೆ. ಅವಾಗ ರಾಜ ಮುಗುಳ್ನಗೆ ನಗುತ್ತಾ ಹೀಗೆ ಉತ್ತರಿಸುತ್ತಾನೆ , ನನ್ನ ಅಧಿಕಾರ ಅವಧಿ ಮುಗಿದ ನಂತರ ನೀವುಗಳೆಲ್ಲ ಸೇರಿ ನನ್ನನ್ನು ಕಾಡಿಗೆ ಕಳುಹಿಸುತ್ತೀರಿ ಅಂತ ನನಗೆ ಗೊತ್ತಾಗಿ, ನಾನು ಅಧಿಕಾರವನ್ನು ಸ್ವೀಕರಿಸಿದ ಮರುದಿನದಿಂದಲೇ ಹಗಲು ರಾತ್ರಿ ಎನ್ನದೆ, ಹಸಿವು ಬಾಯಾರಿಕೆ ಎನ್ನದೇ ಕೆಲಸವನ್ನು ಮಾಡಿಸಿ ಇಲ್ಲಿರುವ ಕಾಡನ್ನು ತೆಗೆಸಿ, ಕಾಡು ಪ್ರಾಣಿಗಳನ್ನು ಬೇರೆ ಕಾಡಿಗೆ ಓಡಿಸಿ, ಒಂದು ಸುಂದರ ನಗರವನ್ನು ಅಭಿವೃದ್ಧಿ ಮಾಡಿದ್ದೇನೆ ಹಾಗೂ ಈವತ್ತು ಈ ನೂತನ ನಗರದ ರಾಜನಾಗಿ ನಾನು ಅಧಿಕಾರವನ್ನು ಸ್ವೀಕರಿಸುತ್ತಿದ್ದೇನೆ ಅಂತ ಹೇಳುತ್ತಾನೆ. ಅಷ್ಟರಲ್ಲಿಯೇ ಆ ನೂತನ ನಗರದ ಗ್ರಾಮಸ್ಥರೆಲ್ಲರೂ ಬಂದು ಆ ರಾಜನಿಗೆ ಅದ್ಧೂರಿ ಸ್ವಾಗತವನ್ನು ಮಾಡುತ್ತಾರೆ. ನಂತರ ಆ ರಾಜನು ಎರಡೂ ಗ್ರಾಮದ ರಾಜನಾಗಿ ತಾನೇ ಆಳ್ವಿಕೆಯನ್ನು ಮುಂದುವರಿಸುತ್ತಾ ಅತ್ಯಂತ ಪ್ರೀತಿ ಪ್ರಾಮಾಣಿಕತೆಯಿಂದ ರಾಜ್ಯಭಾರವನ್ನು ಮಾಡುತ್ತಾನೆ.
ನಮಸ್ಕಾರ
ಆದ್ದರಿಂದ ನಾವು ನೀವುಗಳೆಲ್ಲ ನಮಗೆ ಸಿಕ್ಕ ಅವಕಾಶಗಳನ್ನು ಸರಿಯಾಗಿ ಸದುಪಯೋಗಪಡಿಸಿಕೊಳ್ಳಬೇಕು.
ಧನ್ಯವಾದಗಳು
ತಮ್ಮ ವಿಶ್ವಾಸಿ
