ಯಾವಾಗ ಬರುವಿರಿ
ಯಾವಾಗ ಬರುವಿರಿ
ಬನ್ನಿ ಬನ್ನಿ ನೀವೆಲ್ಲರೂ ಹೊರಬನ್ನಿ,
ಭ್ರಮೆಯ ಲೋಕದೊಳಗಿದ್ದದ್ದು ಸಾಕು ಬಯಲ ಆಕ್ರಂದನಕ್ಕೆ ಕಿವಿಯಾಗಬನ್ನಿ ನೆರವಿನ ಹಸ್ತ ಚಾಚಿ ಬನ್ನಿ
ಈಗ ಬರದಿದ್ದರೆ ಮತ್ತೆ ಯಾವಾಗ ಬರುವಿರಿ?
ಮಂತ್ರವಾದಿಗಳೇ,ತಾಂತ್ರಿಕ ಪಂಡಿತರೇ
ನಿಮ್ಮ ಕೈಚಳಕ ತೋರಬನ್ನಿ
ಮದರಸಾದ ಮಹಾನ್ ಭೋಧಕರೆ
ಚರ್ಚಿನ ಜಗದ ತಂದೆಯೇ ನೀವು ಬನ್ನಿ
ಈಗ ಬರದಿದ್ದರೆ ಮತ್ತೆ ಯಾವಾಗ ಬರುವಿರೀ.....?
ದೇವರ ಕೋರಿಕೆ ಹೇಳುವ ಕಾರಣೀಕರೆ
ಭವಿಷ್ಯ ಕಂಡ ಜ್ಯೋತಿಷಿಗಳೇ ಬನ್ನಿ
ಪ್ರಕಾಂಡ ಪಂಡಿತೋತ್ತಮರೆ, ಹಾಜೀ, ಕಾಜೀ,ಬಿಷಪ್ಪರೆ ನೀವು ಬನ್ನಿ
ಈಗ ಬರದಿದ್ದರೆ ಮತ್ತೆ ಯಾವಾಗ ಬರುವಿರಿ?
ಕಾಳಿ ,ದುರ್ಗೆ, ಏಸು,ಪೈಗಂಬರ,ಶಿವನ ತತ್ವ ಪ್ರಸಾರಕರೆ ಒಂದಾಗಿ ಬನ್ನಿ
ಗುರುನಾನಕ್,ಮಹಾವೀರ,ಬುದ್ಧರ ಅನುಯಾಯಿಗಳೇ
ಎಲ್ಲರೂ ಬನ್ನಿ ಬನ್ನಿ
ಈಗ ಬರದಿದ್ದರೆ ಮತ್ತೆ ಯಾವಾಗ ಬರುವಿರಿ?
ದುಡಿಯುವ ಕೈಗಳು ಕಟ್ಟಿಹಾಕಿವೆ ಬಾಯಿಗೆ ಮಣ್ಣು ಬಿದ್ದಿದೆ ಒಮ್ಮೆ ನೋಡಲಾದರು ಬನ್ನಿ
ಹೆಜ್ಜೆ ಸೋತು ಉಸಿರು ನಿಲ್ಲುತ್ತಿವೆ
ಗಮ್ಯ ಸೇರದೆ ನಿತ್ರಾಣ ಗೊಂಡಿವೆ ಆಸರೆಗೆ ಓಡಿ ಬನ್ನಿ
ಈಗ ಬರದಿದ್ದರೆ ಮತ್ತೆ ಯಾವಾಗ ಬರುವಿರಿ?
ಯುವಜನತೆ ನಿರುದ್ಯೋಗ ಭೀತಿಯಿಂದ ತಲ್ಲಣಿಸುತ್ತಿದೆ ಸ್ಥೈರ್ಯ ನೀಡ ಬನ್ನಿ
ನಿಸ್ಸಾಯಕ ಕೈಗಳು ಅಗತ್ಯ ವಸ್ತುಗಳಿಗಾಗಿ ಬಡಿದಾಡುತ್ತಿವೆ
ಅಂತಃಕರಣದ ಕಣ್ಣಿದ್ದರೆ ನೋಡಬನ್ನಿ
ಈಗ ಬರದಿದ್ದರೆ ಮತ್ತೆ ಯಾವಾಗ ಬರುವೀರಿ?
ಮಠ,ಮಂದಿರ ,ಚರ್ಚುಗಳು,ಆರೋಗ್ಯ ಕೇಂದ್ರಗಳಾಗಿಸಲು ಮುಂದೆ ಬನ್ನಿ
ಗುಡಿ, ಗುಂಡಾರಗಳು,ದರ್ಗಾಗಳು
ಅವುಗಳ ನಿರ್ಮಾತೃಗಳ ಪೀಳಿಗೆಯ
ಉಳಿಸಲು ಕೈಜೋಡಿಸ ಬನ್ನಿ
ಈಗ ಬರದಿದ್ದರೆ ಮತ್ತೆ ಯಾವಾಗ ಬರುವಿರಿ?
ಭಂಡಾರದ ಸಂಪತ್ತನ್ನು ಹೊರತನ್ನಿ ದೇವರೇ ಶೃಂಗರಿಸಿ ಕೊಂಡದ್ದು ಸಾಕು
ಮನುಜ ಕುಲ ಉಳಿದ ಮೇಲಲ್ಲವೇ ದೇವನ ಕುರುಹಿನ ಅರಿವು ಅದಕ್ಕಾದರೂ ಬನ್ನಿ
ಈಗ ಬರದಿದ್ದರೆ ಮತ್ತೆ ಯಾವಾಗ ಬರುವಿರೀ?
ಜಗತ್ತಿನ ಶ್ರೀಮಂತರ ಪಟ್ಟ ಪಡೆದವರೇ
ದುಡಿವ ಕೈಗಳಿಂದ ಮೇಲೇರಿ ಕೂತವರೆ ನೀವು ಬನ್ನಿ
ಬಂಡವಾಳ ಶಾಹಿಗಳೇ,ಬಹು ಕಾರ್ಖಾನೆಗಳ ಮಾಲೀಕರೇ ನಿಮ್ಮ ಸ್ವತ್ತು ನಿಮ್ಮನ್ನು ಕೊನೆಗೆ ಹಿಂಬಾಲಿಸದು
ಸಮಾಜಕ್ಕೆ ಕೊಟ್ಟು ಸಾರ್ಥಕ ಮಾಡಬನ್ನಿ
ಈಗ ಬರದಿದ್ದರೆ ಮತ್ತೆ ಯಾವಾಗ ಬರುವಿರಿ?
ಮನುಕುಲದ ಉಳಿವಿಗಾಗಿ ಕರೋನಾ ಸಾರಿದ ಯುದ್ಧವಿದು ಹೋರಾಡೋಣ ಬನ್ನಿ
ಪ್ರಜ್ಞೆಯ ಬೆಳಕಿನಲ್ಲಿ ಜಾಗೃತಿ ಮೂಡಿಸುತ್ತಾ ಕೈಲಾದ ಸಹಾಯ ಮಾಡ ಬನ್ನಿ
ಈಗ ಬರದಿದ್ದರೆ ಮತ್ತೆ ಎಂದೂ ಬರಲಾರಿರಿ
ಮಾನವೀಯತೆಯ ಮರೆತ ನೀವು ಮನುಷ್ಯರೂ ಆಗಲಾರಿರಿ