ನಿಮ್ಮೀ ಜಾನಕಿ ಪ್ರಭು
ನಿಮ್ಮೀ ಜಾನಕಿ ಪ್ರಭು
ನನ್ನೀ ಸ್ವಾಮಿಯ ಪಾದಗಳಿಗೆ ಈ ಭೂಜಾತೆಯ ಪ್ರಣಾಮಗಳು,
ರಘುಕುಲ ತಿಲಕರಿಂದ ಈ ಜಾನಕಿ ಮನದಿ ಅಡಗಿರುವ ಪ್ರಶ್ನೆಗೆ ಉತ್ತರ ಇಂದಾದರೂ ದೊರಕುವುದೇ ಪ್ರಭು ?
ತಾವು ಒಮ್ಮೆ ಆಜ್ಞೆ ನೀಡುವಿರಾ ಸ್ವಾಮೀ, ಅಂತರಂಗದ ಜ್ವಾಲಾಮುಖಿಗೆ ಮತ್ತಷ್ಟು ಸಮಯ ನೀಡಲು ಮನ ಒಪ್ಪುತ್ತಿಲ್ಲ.
ನನಗೆ ತಿಳಿದಿದೆ ಪ್ರಭು ನನ್ನ ಸ್ವಾಮಿಗೆ ನನ್ನ ಮೇಲೆ ಒಂದಷ್ಟು ಸಂಶಯವಿಲ್ಲವೆಂದು ಆದರೂ, ಅಗ್ನಿಯೊಳಗೆ ನನ್ನ ಪ್ರವೇಶವ ವಿರೋದಧಿಸಲಿಲ್ಲವೇಕೆ ತಾವು ಪ್ರಭು?
ದಶರಥ ಪುತ್ರರಾದ ತಮ್ಮೊಡನೆ, ಜನಕನ ಪುತ್ರಿ ಜಾನಕಿ ವನವಾಸದಿ ಹಿಂಬಾಲಿಸಿ ಬಂದಳು. ಆದರೆ ಅಂದು ಲಕ್ಷ್ಮಣನೊಡನೆ ಈ ಜಾನಕಿಯ ಕಳುಹಿಸಿದ್ದೀರಿ,
ನನ್ನೊಡನೆ ಬರುವ ಮನಸ್ಸು ಇರಲಿಲ್ಲವೇ ನಿಮ್ಮಲಿ ?
ಪ್ರಜೆಗಳ ನುಡಿಗೆ ತಪ್ಪದೆ ನಡೆವ ಆದರ್ಶ, ನಿಷ್ಠಾವಂತ ಪುರುಷರು ನನ್ನ ಸ್ವಾಮೀ, ನನ್ನೀ ನಿಷ್ಠೆಯ ಬಗ್ಗೆ ನಿಮ್ಮ ಮನಕ್ಕೆ ಅರಿವಿರಲಿಲ್ಲವೆ ಪ್ರಭು ?
ನೀವು ತ್ಯಜಿಸಿದ ಕ್ಷಣದಿಂದ ನಿಮ್ಮೀ ನಾಮವೇ ನನ್ನ ಉಸಿರ ಕಣದಿ ಬೆರೆತಿರಲು,
ಅದರಲ್ಲಿಯೇ ನನ್ನ ತೃಪ್ತಿ ಅಡಗಿ ಹೋಗಿತ್ತು ಸ್ವಾಮೀ.
ಆ ದಿನದಿ ಈ ಪ್ರಮೋದಿನಿಯ ಒಮ್ಮೆಯೂ ನೋಡಬೇಕು ಎಂದನಿಸಲಿಲ್ಲವೆ?
ಅನಿಸಿದರೂ ನಿಮ್ಮ ದರುಶನ ಭಾಗ್ಯ ಪಡೆಯುವ ಅದೃಷ್ಟಳು ನಾನಲ್ಲವೇನು, ಅಲ್ಲವೇ ಸ್ವಾಮೀ ?
ಪ್ರಭು ಜಗತ್ತು ನುಡಿಯುತ್ತಿದೆ ಇಂದು,
ಶ್ರಿ ರಾಮಚಂದ್ರ ಜಾನಕಿಯ ತೊರೆದ ಎಂದು. ನಿಮ್ಮೀ ಅಂತರಾಳ ಹೇಳುತ್ತಿದೆಯಲ್ಲವೇ ಸೀತೆಯೇ ಈ ರಾಮನನ್ನು ತೊರೆದು ನಡೆದಳೆಂದು.
ಉತ್ತರ ದೊರೆಯುವುದೇ ಜಾನಕಿ ಪ್ರಶ್ನೆಗೆ?